CAFRICA-POLITICS CAFRICA-POLITICS  (AFP or licensors)

ಶಾಂತಿ ಒಂದು ಹಕ್ಕು – ಐಷಾರಾಮಿ ಅಲ್ಲ: ಮಧ್ಯ ಆಫ್ರಿಕಾ ಗಣರಾಜ್ಯದ ಧರ್ಮಾಧ್ಯಕ್ಷರುಗಳು

ವರ್ಷಗಳ ಹಿಂಸೆ, ಬಡತನ, ಸ್ಥಳಾಂತರ ಮತ್ತು ಸಮಾಜದ ಆಂತರಿಕ ವಿಭಜನೆಗಳಿಂದ ಸಂಕಷ್ಟ ಅನುಭವಿಸುತ್ತಿರುವ ಮಧ್ಯ ಆಫ್ರಿಕಾ ಗಣರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವುದು ಸರ್ಕಾರದ ಮೂಲಭೂತ ಹೊಣೆಗಾರಿಕೆ ಎಂದು ದೇಶದ ಧರ್ಮಾಧ್ಯಕ್ಷರುಗಳು ಸ್ಪಷ್ಟವಾಗಿ ಎಚ್ಚರಿಸಿದ್ದಾರೆ. ಸಿಸಿಲಿಯಾ ಸೆಪ್ಪಿಯಾ

ಜನವರಿ 11ರಂದು ತಮ್ಮ ಪೂರ್ಣಸಭೆಯ ಅಂತ್ಯದಲ್ಲಿ ಹೊರಡಿಸಿದ ಘೋಷಣೆಯಲ್ಲಿ, ಮಧ್ಯ ಆಫ್ರಿಕಾ ಧರ್ಮಾಧ್ಯಕ್ಷರ ಮಹಾಸಭೆ ನ್ಯಾಯಾಧಾರಿತ ಶಾಂತಿ, ರಾಜಕೀಯ ಹೊಣೆಗಾರಿಕೆ ಮತ್ತು ಎಲ್ಲ ರೂಪದ ಹಿಂಸಾಚಾರಗಳ ತಿರಸ್ಕಾರಕ್ಕೆ ಬಲವಾದ ಮನವಿ ಸಲ್ಲಿಸಿದೆ.

ಈ ಸಂದೇಶವು ಡಿಸೆಂಬರ್ 28ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ನಂತರ ಪ್ರಕಟವಾಗಿದ್ದು,  ಅಧ್ಯಕ್ಷ ಫಾಸ್ಟಿನ್–ಆರ್ಚಾಂಜ್ ಟೌಡೆರಾ ಮೂರನೇ ಸತತ ಅವಧಿಗೆ ಅಧಿಕಾರದಲ್ಲಿದ್ದಾರೆ.

ಸಂವಿಧಾನ ಪರಿಷ್ಕರಣೆ ಮತ್ತು ಆಡಳಿತ ಬಲವರ್ಧನೆ

ಅಧ್ಯಕ್ಷ ಟೌಡೆರಾ ಅವರ ಮರುನಿರ್ದೇಶನವು 2023ರಲ್ಲಿ ನಡೆದ ವಿವಾದಾತ್ಮಕ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ಸಂವಿಧಾನ ಪರಿಷ್ಕರಣೆಯ ಪರಿಣಾಮವಾಗಿದೆ. ಈ ಪರಿಷ್ಕರಣೆ ಎರಡು ಸತತ ಅವಧಿಗಳ ಮಿತಿಯನ್ನು ತೆಗೆದುಹಾಕಿ, ಅಧ್ಯಕ್ಷೀಯ ಅವಧಿಯನ್ನು ಐದು ವರ್ಷಗಳಿಂದ ಏಳು ವರ್ಷಗಳಿಗೆ ವಿಸ್ತರಿಸಿದೆ. ಇದರೊಂದಿಗೆ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಅಧ್ಯಕ್ಷೀಯ ಪ್ರಾಬಲ್ಯ ಮತ್ತಷ್ಟು ಬಲಗೊಂಡಿದೆ.

ಬಹು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯ ಜೊತೆಗೆ ಸ್ಥಳೀಯ ಆಡಳಿತ ಚುನಾವಣೆಗಳು ನಡೆದವು. ಸುಮಾರು ನಾಲ್ಕು ದಶಕಗಳಿಂದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯದೇ ಇದ್ದ ಹಿನ್ನೆಲೆಯಲ್ಲಿ, ಈ ಬೆಳವಣಿಗೆಗೆ ಐತಿಹಾಸಿಕ ಮಹತ್ವವಿದೆ.

ಶಾಂತಿ ಎಂದರೆ ಯುದ್ಧದ ಗೈರುಹಾಜರಿ ಮಾತ್ರವಲ್ಲ

ವಿರೋಧ ಪಕ್ಷಗಳು ಚುನಾವಣಾ ಅಕ್ರಮಗಳು ಹಾಗೂ ಭಿನ್ನಮತದ ದಮನವನ್ನು ಆರೋಪಿಸಿವೆ. ಇತ್ತ ಸರ್ಕಾರವು ದೇಶವನ್ನು ಸ್ಥಿರಗೊಳಿಸುವ ಉದ್ದೇಶದಿಂದ ಕೆಲವು ಸಶಸ್ತ್ರ ಗುಂಪುಗಳೊಂದಿಗೆ ನಿಷಸ್ತ್ರೀಕರಣ ಕುರಿತು ಮಾತುಕತೆ ನಡೆಸುತ್ತಿದೆ.

ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದಾಗಿ ಈ ಪ್ರಕ್ರಿಯೆ ನಿಧಾನವಾಗಿದೆ. ಅನೇಕ ಸಶಸ್ತ್ರ ಗುಂಪುಗಳು ಇನ್ನೂ ರಾಷ್ಟ್ರೀಯ ಸಶಸ್ತ್ರ ಪಡೆಗಳು (FACA) ಹಾಗೂ ಐಕ್ಯರಾಷ್ಟ್ರಗಳ ಶಾಂತಿ ಪಡೆ (MINUSCA) ವಿರುದ್ಧ ಹೋರಾಟ ಮುಂದುವರಿಸುತ್ತಿವೆ.

ನಿರಂತರ ಮಾನವೀಯ ಸಂಕಷ್ಟ, ಲಕ್ಷಾಂತರ ಆಂತರಿಕ ಸ್ಥಳಾಂತರಿತರಾದವರು ಮತ್ತು ಶರಣಾರ್ಥಿಗಳ ಸಮಸ್ಯೆ ಈ ಅಸ್ಥಿರತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹಿನ್ನಲೆಯಲ್ಲಿ ಧರ್ಮಾಧ್ಯಕ್ಷರು ತಮ್ಮ ಸಂದೇಶವನ್ನು “ದೇವರ ಕುಟುಂಬವಾದ ಧರ್ಮಸಭೆ”ಗೂ ಮತ್ತು ಎಲ್ಲ ಸತ್ಸಂಕಲ್ಪದ ನಾಗರಿಕರಿಗೂ ಉದ್ದೇಶಿಸಿದ್ದಾರೆ.

ಅವರು “ದೇವರ ಮಹಿಮೆ ಶಾಂತಿಯಲ್ಲಿದೆ” ಎಂದು ಹೇಳಿ, ಶಾಂತಿಯನ್ನು ಕೇವಲ ಯುದ್ಧ ಮತ್ತು ಸಂಘರ್ಷಗಳ ಕೊರತೆಯಾಗಿ ವ್ಯಾಖ್ಯಾನಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣೆಯಲ್ಲಿ ಶಾಂತಿಪೂರ್ಣವಾಗಿ ಭಾಗವಹಿಸಿ, ಕೆಲವು ಮತಗಟ್ಟೆಗಳಲ್ಲಿ ನಡೆದ ಅಕ್ರಮಗಳನ್ನು ಗುರುತಿಸಿದ ಜನರ ನಾಗರಿಕ ಪ್ರಜ್ಞೆಯನ್ನು ಅವರು ಮೆಚ್ಚಿದ್ದಾರೆ.

ಶಾಂತಿಯ ಶತ್ರುಗಳು: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ

ಈ ನಾಗರಿಕ ಪ್ರಜ್ಞೆಯನ್ನು ಸಂರಕ್ಷಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸಬೇಕೆಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. ಅದೇ ವೇಳೆ, ಹಿಂಸೆ, ಬಡತನ ಮತ್ತು ಗುರುತಿನ ಆಧಾರಿತ ವಿಭಜನೆಗಳಿಂದ ಪೀಡಿತ ದೇಶದಲ್ಲಿ ಶಾಂತಿ ಇನ್ನೂ ಆಳವಾದ ಸಾರ್ವಜನಿಕ ಆಶಯವಾಗಿಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.

“ಶಾಂತಿ ಐಷಾರಾಮಿ ಅಲ್ಲ,” ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. “ಅದು ಪ್ರತಿಯೊಬ್ಬ ನಾಗರಿಕನ ಅವಿಭಾಜ್ಯ ಹಕ್ಕು; ಆಡಳಿತ ನಡೆಸುವವರ ಮೇಲಿರುವ ನೈತಿಕ ಕರ್ತವ್ಯ.”

ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಬಂಧುತ್ವ ರಾಜಕಾರಣ ಮತ್ತು ದಂಡನಾರ್ಹತೆಯ ಕೊರತೆಯನ್ನು ಅವರು ಶಾಂತಿಯ ಪ್ರಮುಖ ಶತ್ರುಗಳೆಂದು ಗುರುತಿಸಿದ್ದಾರೆ.

ಬಲಿಷ್ಠ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಸಂಸ್ಥೆಗಳಿಲ್ಲದೆ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ಚುನಾವಣೋತ್ತರ ಅವಧಿಯಲ್ಲಿ ಪರಸ್ಪರ ರಾಜಕೀಯ ಆಯ್ಕೆಗಳಿಗೆ ಗೌರವ ತೋರಬೇಕೆಂದು ಕರೆ ನೀಡಿದ್ದಾರೆ. “ರಾಜಕೀಯ ವಿರೋಧಿ ಎಂದರೆ ಶತ್ರುವಲ್ಲ,” ಎಂದು ಅವರು ಹೇಳಿದ್ದಾರೆ.

ಸಂವಾದ ಮತ್ತು ಸಾಮೂಹಿಕ ಹಿತವೇ ಮುಂದಿನ ದಾರಿ

ಮಧ್ಯ ಆಫ್ರಿಕಾ ಗಣರಾಜ್ಯದ ಭವಿಷ್ಯವನ್ನು ದ್ವೇಷ ಮತ್ತು ಹಿಂಸೆಯ ಮೇಲೆ ಕಟ್ಟಲಾಗುವುದಿಲ್ಲ ಎಂದು ಧರ್ಮಾಧ್ಯಕ್ಷರು ಹೇಳಿದ್ದಾರೆ. ಸಂವಾದ, ಸಹೋದರತ್ವ ಮತ್ತು ಸಾಮೂಹಿಕ ಹಿತದ ಮೇಲೆ ಮಾತ್ರ ಶಾಶ್ವತ ಶಾಂತಿ ಸಾಧ್ಯವೆಂದು ಅವರು ಒತ್ತಿ ಹೇಳಿದ್ದಾರೆ.

ಅಂತಿಮವಾಗಿ, ಎಲ್ಲ ಧಾರ್ಮಿಕ ಸಮುದಾಯಗಳು ಪ್ರಾರ್ಥನೆ, ಸಮನ್ವಯಾತ್ಮಕ ಹಾಗೂ ಅಂತರ್ಧಾರ್ಮಿಕ ಸಂವಾದವನ್ನು ಗಟ್ಟಿಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ. ಇವುಗಳೇ ನಿಜವಾದ ಸಮ್ಮಿಲನ ಮತ್ತು ಶಾಂತಿಯ ದಾರಿಗಳೆಂದು ಧರ್ಮಾಧ್ಯಕ್ಷರುಗಳು ತಿಳಿಸಿದ್ದಾರೆ.

13 ಜನವರಿ 2026, 17:35