ಜೀವನ, ಗೌರವ ಮತ್ತು ನ್ಯಾಯದ ಮಾನವೀಯ ಆಶಯವನ್ನು ನಿರಾಕರಿಸಲು ಸಾಧ್ಯವಿಲ್ಲ:ಕಾರ್ಡಿನಲ್ ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ
“ಜೀವನ, ಮಾನವೀಯ ಗೌರವ ಮತ್ತು ನ್ಯಾಯದ ಬಯಕೆ ಪ್ರತಿಯೊಬ್ಬ ಮಾನವನ ಹೃದಯದ ಒಳಗೇ ಅಡಗಿದೆ. ಅದನ್ನು ನಿರಾಕರಿಸುವುದಕ್ಕೂ, ನಿರ್ಲಕ್ಷಿಸುವುದಕ್ಕೂ ಯಾರಿಗೂ ಹಕ್ಕಿಲ್ಲ,” ಎಂದು ಜೆರೂಸಲೇಮಿನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಕಾರ್ಡಿನಲ್ ಪಿಯರ್ಬತ್ತಿಸ್ತಾ ಪಿಜ್ಜಬಲ್ಲಾ ಹೇಳಿದರು.
ಜನವರಿ 13ರಂದು ಜೋರ್ಡಾನ್ನಲ್ಲಿ ವಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಇರಾನ್ನಲ್ಲಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳ ಹಿನ್ನೆಲೆ ಕುರಿತು ಮಾತನಾಡುತ್ತಿದ್ದಾಗ, ಇಂತಹ ಮಾನವೀಯ ಆಶಯಗಳು ಯಾವುದೇ ಸಮಾಜದ ಗುರುತಿನ ಭಾಗವೇ ಆಗಿವೆ ಎಂದು ಕಾರ್ಡಿನಲ್ ಸ್ಪಷ್ಟಪಡಿಸಿದರು.
ಡಿಸೆಂಬರ್ ಅಂತ್ಯದಿಂದ ಇರಾನ್ನಲ್ಲಿ ಆರ್ಥಿಕ ಸಂಕಷ್ಟದ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರ್ಡಿನಲ್, ಪರಿಸ್ಥಿತಿ ಇನ್ನಷ್ಟು ಹಿಂಸಾಚಾರ ಮತ್ತು ರಕ್ತಪಾತದತ್ತ ಸಾಗಬಾರದೆಂದು ತಮ್ಮ ಆಶಯ ವ್ಯಕ್ತಪಡಿಸಿದರು. “ಜನರು ಬಹುಕಾಲದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನೋವು ಮತ್ತಷ್ಟು ಹಿಂಸೆಗೆ ಕಾರಣವಾಗಬಾರದು,” ಎಂದರು.
ವಿವಿಧ ದೇಶಗಳನ್ನು ಒಳಗೊಂಡ ಧರ್ಮಕ್ಷೇತ್ರ
ಕಾರ್ಡಿನಲ್ ಪಿಜ್ಜಬಲ್ಲಾ ಅವರು ಹ್ಯಾಶೆಮೈಟ್ ಸಾಮ್ರಾಜ್ಯದ ಜೋರ್ಡಾನ್ನಲ್ಲಿ, ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಸುಮಾರು ಅರವತ್ತು ಯಾಜಕರು ಮತ್ತು ಧರ್ಮಾಧ್ಯಕ್ಷರೊಂದಿಗೆ ನಡೆಯುತ್ತಿರುವ ಹಲವು ದಿನಗಳ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಸಾಮಾನ್ಯವಾಗಿ ಎರಡು ಅಥವಾ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಸಭೆಗಳು ವಿವಿಧ ಧರ್ಮಕೇಂದ್ರಗಳ ಪರಿಸ್ಥಿತಿಗಳ ಕುರಿತು ಪರಸ್ಪರ ಮಾಹಿತಿ ವಿನಿಮಯಕ್ಕೆ ವೇದಿಕೆಯಾಗುತ್ತವೆ.
“ನಮ್ಮ ಧರ್ಮಕ್ಷೇತ್ರ ಸ್ವಭಾವತಃ ಸಂಕೀರ್ಣವಾಗಿದೆ,” ಎಂದು ಅವರು ಹೇಳಿದರು. “ಇದು ಹಲವು ದೇಶಗಳನ್ನು ಒಳಗೊಂಡಿದೆ. ಪ್ರತಿಯೊಂದು ದೇಶದಲ್ಲಿಯೂ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ.”
ಗಾಜಾದಲ್ಲಿ ಸಂಪೂರ್ಣ ಧ್ವಂಸ
ಗಾಜಾದ ಪರಿಸ್ಥಿತಿಯನ್ನು ಕುರಿತು ಮಾತನಾಡಿದ ಕಾರ್ಡಿನಲ್, ಅಲ್ಲಿ “ಸಂಪೂರ್ಣ ಧ್ವಂಸ” ಮುಂದುವರಿದಿದೆ ಎಂದು ಹೇಳಿದರು. ಅಕ್ಟೋಬರ್ನಲ್ಲಿ ಯುದ್ಧವಿರಾಮ ಘೋಷಣೆಯಾದರೂ, ವ್ಯಾಪಕ ಬಾಂಬ್ ದಾಳಿಗಳು ನಿಂತಿದ್ದರೂ, ಗುರಿ ನಿಗದಿತ ದಾಳಿಗಳು ಇನ್ನೂ ಸಾವು–ನಾಶವನ್ನುಂಟು ಮಾಡುತ್ತಿವೆ.
ಚಳಿ ತೀವ್ರಗೊಂಡಿರುವುದರಿಂದಲೂ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. “ಜನರು ಚಳಿಯಿಂದ ಮಾತ್ರವಲ್ಲ, ಅಗತ್ಯ ಔಷಧಿಗಳ ಕೊರತೆಯಿಂದಲೂ ಸಾಯುತ್ತಿದ್ದಾರೆ,” ಎಂದರು. ಡಿಸೆಂಬರ್ನಲ್ಲಿ ಅವರು ಗಾಜಾಕ್ಕೆ ಭೇಟಿ ನೀಡಿದ್ದರು.
ಪಶ್ಚಿಮ ಕರಾವಳಿಯಲ್ಲಿಯೂ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ಅನುಮತಿಪತ್ರಗಳ ನಿರಾಕರಣೆ, ಸಂಚಾರದ ಅಡಚಣೆಗಳು ಮತ್ತು ವಸಾಹತುಸ್ಥರ ದಾಳಿಗಳು ಸಮುದಾಯದ ಅತ್ಯಂತ ಮೂಲಭೂತ ಜೀವನದ ಅಂಶಗಳನ್ನೇ ಹಾನಿಗೊಳಿಸುತ್ತಿವೆ.
ಪ್ಯಾಲೆಸ್ತೀನಿಯರಿಗೆ ಜೋರ್ಡಾನ್ನ ನೆರವು
ಈ ಎಲ್ಲಾ ಅಶಾಂತಿಯ ನಡುವೆಯೂ, ಗಾಜಾದಿಂದ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಪ್ಯಾಲೆಸ್ತೀನಿಯರಿಗೆ ಜೋರ್ಡಾನ್ ವೈದ್ಯಕೀಯ ನೆರವು ಒದಗಿಸುತ್ತಿದೆ. “ಜೋರ್ಡಾನ್ನಲ್ಲಿ ಪರಿಸ್ಥಿತಿ ಹೋಲಿಕೆಗೆ ಶಾಂತವಾಗಿದೆ,” ಎಂದ ಕಾರ್ಡಿನಲ್. “ಸಂಘರ್ಷ ನೇರವಾಗಿ ದೇಶವನ್ನು ತಾಕುವುದಿಲ್ಲ, ಆದರೆ ವ್ಯಾಪಾರ, ಗಡಿಗಳು ಮತ್ತು ಸಂಬಂಧಗಳ ಮೂಲಕ ಪರೋಕ್ಷವಾಗಿ ಪರಿಣಾಮ ಬೀರುತ್ತದೆ.”
ಇದಕ್ಕೆ ಜೊತೆಗೆ, ಭಾವನಾತ್ಮಕ ಹೊರೆ ಕೂಡ ಸ್ಪಷ್ಟವಾಗಿದ್ದು, “ಜನರು ಈ ಸಂಕಷ್ಟದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಅವರು ಉಲ್ಲೇಖಿಸಿದರು.
ಶಿಕ್ಷಣ ಮತ್ತು ಧರ್ಮಸಭೆಯ ಪಾತ್ರ
ಜೋರ್ಡಾನ್ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಪ್ರಮುಖ ಭಾಗವಾಗಿದ್ದು, ಮುಸ್ಲಿಂ ಬಹುಸಂಖ್ಯಾತ ದೇಶವಾದ ಇಲ್ಲಿ 30 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಕೆಲವು ದೂರದ ಪ್ರದೇಶಗಳಲ್ಲಿಯೂ ಇವೆ.
“ಇದು ನಮ್ಮ ಗುರುತಿನ ಭಾಗವೇ ಆಗಿದೆ,ಕ್ರೈಸ್ತ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು ಮಾತ್ರವಲ್ಲ, ವಿಶಾಲ ಮುಸ್ಲಿಂ ಸಮುದಾಯದೊಂದಿಗೆ ಗಾಢ ಸಂಬಂಧಗಳನ್ನು ನಿರ್ಮಿಸುವುದೂ ನಮ್ಮ ಕರ್ತವ್ಯ.”
ಆದರೆ ನಿರಂತರ ಆಂತರಿಕ ವಲಸೆ ಧರ್ಮಸಭೆಗೆ ಸವಾಲಾಗಿ ಪರಿಣಮಿಸಿದೆ. “ಜನರು ಎಲ್ಲಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆಂಬುದನ್ನು ಹತ್ತಿರದಿಂದ ಅನುಸರಿಸುವುದು ಮತ್ತು ಅಲ್ಲಿ ಧರ್ಮಪಾಲನಾ ಸೇವೆ ನೀಡುವುದು ಕಷ್ಟಕರವಾಗಿದೆ. ಇದು ನಮ್ಮ ಧಾರ್ಮಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ,” ಎಂದರು.
ಪವಿತ್ರ ಭೂಮಿಗೆ ತೀರ್ಥಯಾತ್ರೆಯ ಆಹ್ವಾನ
ಪ್ರಾಂತ್ಯದ ಸಂಕೀರ್ಣ ಪರಿಸ್ಥಿತಿಗಳ ನಡುವೆಯೂ, ಕಾರ್ಡಿನಲ್ ಪಿಜ್ಜಬಲ್ಲಾ ಭಕ್ತರನ್ನು ಪವಿತ್ರ ಭೂಮಿಗೆ ತೀರ್ಥಯಾತ್ರೆಗಳನ್ನು ಪುನರಾರಂಭಿಸಲು ಪ್ರೋತ್ಸಾಹಿಸಿದರು. “ಅವು ಸಂಪೂರ್ಣ ಸುರಕ್ಷಿತವಾಗಿವೆ,” ಎಂದು ಅವರು ಸ್ಪಷ್ಟಪಡಿಸಿದರು.
“ಪವಿತ್ರ ಭೂಮಿ ಐದನೇ ಸುವಾರ್ತೆ,” ಎಂದ ಅವರು. “ನಾನು ತೀರ್ಥಯಾತ್ರೆಗಳನ್ನು ಎಂಟನೇ ಪವಿತ್ರ ಸಂಸ್ಕಾರವೆಂದು ಕರೆಯಲು ಇಷ್ಟಪಡುತ್ತೇನೆ, ಏಕೆಂದರೆ ಅದು ಪ್ರಭುಯೇಸುವಿನೊಂದಿಗೆ ದೈಹಿಕ ಅನುಭವದ ಮೂಲಕ ಭೇಟಿಯಾಗುವ ಅವಕಾಶ ನೀಡುತ್ತದೆ.”
ಪವಿತ್ರ ಭೂಮಿಗೆ ಹೋಗದೆ ಇದ್ದರೂ ಒಬ್ಬರು ಉತ್ತಮ ಕ್ರೈಸ್ತರಾಗಬಹುದು ಎಂದು ಹೇಳಿದ ಅವರು, “ಆದರೆ ಅಲ್ಲಿಗೆ ಹೋಗುವುದರಿಂದ ನಿಮ್ಮ ನಂಬಿಕೆ ಇನ್ನಷ್ಟು ಬಲವಾಗುತ್ತದೆ ಮತ್ತು ಸ್ಪಷ್ಟವಾಗುತ್ತದೆ,” ಎಂದರು.
ಧರ್ಮಸಭೆಯ ಭವಿಷ್ಯ ಕುರಿತು ಚಿಂತನೆ
ರೋಮ್ನಲ್ಲಿ ಜನವರಿ 7 ಮತ್ತು 8ರಂದು ನಡೆದ ವಿಶೇಷ ಕಾರ್ಡಿನಲ್ ಸಭೆಯ ಕುರಿತು ಸಹ ಕಾರ್ಡಿನಲ್ ಪಿಜ್ಜಬಲ್ಲಾ ಸಂಕ್ಷಿಪ್ತವಾಗಿ ಮಾತನಾಡಿದರು. ಸಹಯಾತ್ರೆಯ ಮನೋಭಾವ (ಸೀನೊಡಾಲಿಟಿ) ಮತ್ತು ಸೇವಾ ವಿಷಯಗಳ ಕುರಿತು ಚರ್ಚೆಗಳು ನಡೆದಿದ್ದು, ಪರಸ್ಪರ ಪರಿಚಯವನ್ನು ಗಾಢಗೊಳಿಸುವುದರೊಂದಿಗೆ, ಧರ್ಮಸಭೆಯ ಭವಿಷ್ಯ ಕುರಿತು ಸಂಯುಕ್ತ ಚಿಂತನೆಗೆ ದಾರಿ ತೆರೆದಿವೆ ಎಂದು ಅವರು ಹೇಳಿದರು.
“ಇದು ಧರ್ಮಸಭೆಯೊಳಗಿನ ಪರಸ್ಪರ ಹಂಚಿಕೆ, ಸಂವಾದ ಮತ್ತು ಮುಂದಿನ ಪ್ರಯಾಣಕ್ಕೆ ಹೊಸ ಆರಂಭವಾಗಿದೆ,” ಎಂದು ಅವರು ಹೇಳಿದರು.