SRILANKA-INDONESIA-WEATHER-CLIMATE SRILANKA-INDONESIA-WEATHER-CLIMATE  (AFP or licensors)

ಶ್ರೀಲಂಕಾ ಧರ್ಮಸಭೆ: ವಿನಾಶಕಾರಿ ಪ್ರವಾಹಗಳ ಬಳಿಕವೂ ‘ಭರವಸೆಯನ್ನು ಜೀವಂತವಾಗಿಡಲು’ ಶ್ರಮ

ಚಂಡಮಾರುತ ಡಿಟ್ವಾಹ್ ಕಾರಣದಿಂದ ಕಳೆದ ವರ್ಷದ ಕೊನೆಯಲ್ಲಿ ಸಂಭವಿಸಿದ ಭೀಕರ ಪ್ರವಾಹಗಳಲ್ಲಿ 600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಶ್ರೀಲಂಕಾದ ಕಥೋಲಿಕ ಧರ್ಮಸಭೆ ದೇಶವ್ಯಾಪಿ ಮಾನವೀಯ ಹಾಗೂ ಆತ್ಮೀಯ ನೆರವನ್ನು ಸಂಘಟಿಸಿ, ಸಮುದಾಯಗಳು ಪುನಶ್ಚೇತನವಾಗಲು ಕೈಜೋಡಿಸಿದೆ. LiCAS ವರದಿ

ಚಂಡಮಾರುತ ಡಿಟ್ವಾಹ್ ದಿಂದ ಮೃತಪಟ್ಟವರ ಸಂಖ್ಯೆ 600 ಮೀರಿದ್ದು, ಒಟ್ಟು 23 ಲಕ್ಷ ಜನರು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಕನಿಷ್ಠ 10 ಲಕ್ಷ ಜನರಿಗೆ ತುರ್ತು ನೆರವು ಅಗತ್ಯವಿದೆ.

ಕೊಲಂಬೋದಲ್ಲಿರುವ ಜಗದ್ಗುರುಗಳ ಸೇವಾ ಸಂಸ್ಥೆಯ (ಪಾಂಟಿಫಿಕಲ್ ಮಿಷನ್ ಸೊಸೈಟೀಸ್-PMS) ರಾಷ್ಟ್ರೀಯ ನಿರ್ದೇಶಕ ವಂ. ಗುರುಗಳಾದ ಬಸಿಲ್ ರೋಹನ್ ಫೆರ್ನಾಂಡೋ ಅವರು, ಫಿಡೆಸ್ ಸುದ್ದಿ ಸಂಸ್ಥೆಯ ವರದಿಯಲ್ಲಿ, “ಶ್ರೀಲಂಕಾದ ಕಥೋಲಿಕ ಧರ್ಮಸಭೆ ಭರವಸೆಯನ್ನು ಮರುಬೆಳಗಿಸಲು ಗಮನಾರ್ಹ ಕೊಡುಗೆ ನೀಡುತ್ತಿದೆ” ಎಂದು ತಿಳಿಸಿದ್ದಾರೆ.

ಈ ಉಷ್ಣವಲಯ ಚಂಡಮಾರುತದಿಂದ ದೇಶದ 20 ಶೇಕಡಕ್ಕಿಂತ ಹೆಚ್ಚು ಪ್ರದೇಶ ಹಾನಿಗೊಳಗಾಗಿದ್ದು, ಮನೆಗಳು, ವ್ಯಾಪಾರ ಸಂಸ್ಥೆಗಳು, ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಜಾಲಗಳು ತೀವ್ರವಾಗಿ ಧ್ವಂಸಗೊಂಡಿವೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 7,20,000 ಕಟ್ಟಡಗಳು ನಾಶವಾಗಿದ್ದು, ಜೊತೆಗೆ 16,000 ಕಿ.ಮೀ. ರಸ್ತೆಗಳು, 278 ಕಿ.ಮೀ. ರೈಲು ಹಳಿ, ಮತ್ತು 480 ಸೇತುವೆಗಳು ಹಾನಿಗೊಳಗಾಗಿವೆ.

“ನಾವು ಅಕಸ್ಮಾತ್ತಾಗಿ ಮತ್ತೊಂದು ತೀವ್ರ ಸಂಕಷ್ಟಕ್ಕೆ ಒಳಗಾದೆವು. ತಕ್ಷಣದ ಪರಿಣಾಮಗಳ ಜೊತೆಗೆ ಮಧ್ಯಮ ಮತ್ತು ದೀರ್ಘಾವಧಿಯ ವೆಚ್ಚಗಳೂ ಎದುರಾಗಲಿವೆ. ಪುನರ್ ನಿರ್ಮಾಣಕ್ಕೆ ಸಮಯ ಬೇಕಾಗುತ್ತದೆ,” ಎಂದು ವಂ. ಗುರುಗಳಾದ ಫೆರ್ನಾಂಡೋ ಹೇಳಿದರು.

ಶ್ರೀಲಂಕಾದಾದ್ಯಂತ ಕಥೋಲಿಕ ಸಮುದಾಯಗಳು ತಕ್ಷಣದ ಅಗತ್ಯಗಳಿಗೆ ಮಾತ್ರವಲ್ಲದೆ, ದೀರ್ಘಕಾಲಿಕ ಪುನಶ್ಚೇತನ ಕಾರ್ಯಗಳಲ್ಲಿಯೂ ನಿರಂತರ ಪಾತ್ರ ವಹಿಸಿಕೊಂಡಿವೆ ಎಂದು ಅವರು ವಿವರಿಸಿದರು.

“ಈ ಪರಿಸ್ಥಿತಿಯಲ್ಲಿ ಶ್ರೀಲಂಕಾದ ಕಥೋಲಿಕ ಸಮುದಾಯ ಒಗ್ಗೂಡಿ ಒಂದೇ ಗುರಿಗೆ ಬದ್ಧವಾಗಿದೆ: ನಾವು ವಿಶೇಷ ಹೊಣೆಗಾರಿಕೆಯನ್ನು ಹೊತ್ತಿದ್ದೇವೆ—ಅದೇ ಭರವಸೆಯನ್ನು ಜೀವಂತವಾಗಿಡುವುದು,” ಎಂದು  ಹೇಳಿದರು.

“ಇದು ಅನೇಕ ಜನರಿಗೆ ವಸ್ತು ಹಾಗೂ ಆರ್ಥಿಕ ನೆರವಿನ ಜೊತೆಗೆ, ಆತ್ಮೀಯ, ಮಾನಸಿಕ ಮತ್ತು ಸಾಮಾಜಿಕ ಸಹಾಯವನ್ನು ಒದಗಿಸುವ ಮೂಲಕ ನೆರವೇರುತ್ತಿದೆ. ಕ್ರಿಸ್‌ಮಸ್ ಕಾಲದಲ್ಲಿಯೂ ಇದೇ ರೀತಿಯಲ್ಲಿ ನಡೆದಿತ್ತು; ಇಂದು ಕೂಡ ಅದೇ ಮುಂದುವರಿಯುತ್ತಿದೆ,” ಎಂದು ವಂ. ಗುರುಗಳಾದ ಫೆರ್ನಾಂಡೋ ಸೇರಿಸಿದರು.

ವಂ. ಗುರುಗಳಾದ ಫೆರ್ನಾಂಡೋ ಅವರ ಪ್ರಕಾರ, ಸರ್ಕಾರವು ಪುನರ್ ನಿರ್ಮಾಣ ಮತ್ತು ಸಾಮಾಜಿಕ ನೆರವಿನ ಕಾರ್ಯಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು, ರಸ್ತೆ, ಸೇತುವೆ, ರೈಲು ಮಾರ್ಗಗಳು ಹಾಗೂ ಶಾಲೆಗಳ ಮರು ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಬಾಧಿತರಾದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸಹಾಯ ನೀಡಲಾಗುತ್ತಿದ್ದು, ಸಮುದಾಯಗಳು ಈಗ ರಾಜ್ಯ ನೆರವಿನ ಸ್ಪಷ್ಟ ಸ್ಪರ್ಶವನ್ನು ಅನುಭವಿಸಲು ಆರಂಭಿಸಿದ್ದಾವೆಂದು ಅವರು ಹೇಳಿದರು.

ಅತ್ಯಂತ ದುರ್ಬಲ ವರ್ಗಗಳ ಮೇಲೆ ಸಾಮಾಜಿಕ ನೆರವು ಹೆಚ್ಚು ಕೇಂದ್ರೀಕೃತವಾಗಿದ್ದು, ಮನೆ ಅಥವಾ ಜೀವನೋಪಾಯವನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಸಹಾಯಧನ ನೀಡಲಾಗಿದೆ.

“ಶಾಲಾ ವಯಸ್ಸಿನ ಮಕ್ಕಳಿರುವ ಕುಟುಂಬಗಳಿಗೆ ಸಾರ್ವಜನಿಕ ಸಹಾಯಧನ ತಲುಪಿದೆ. ಅವರು ಹೊಸ ಶಾಲಾ ಸಾಮಗ್ರಿಗಳನ್ನು ಖರೀದಿಸಿ ಮತ್ತೆ ತರಗತಿಗಳನ್ನು ಆರಂಭಿಸಲು ಇದು ನೆರವಾಗುತ್ತಿದೆ,” ಎಂದು ಅವರು ಹೇಳಿದರು.

ವಂ. ಗುರುಗಳಾದ ಫೆರ್ನಾಂಡೋ ಅವರು, ಅನುರ ಕುಮಾರ ದಿಸ್ಸಾನಾಯಕೆ ನೇತೃತ್ವದ ಸರ್ಕಾರ ಪುನಶ್ಚೇತನ ಕಾರ್ಯಗಳಿಗೆ ಗಟ್ಟಿಯಾದ ಬದ್ಧತೆಯನ್ನು ತೋರಿಸಿದೆ ಎಂದು ಹೇಳಿ, ಕಾರಿಟಾಸ್ ಸಂಸ್ಥೆಗಳ ನೆರವು ಸೇರಿದಂತೆ ಅಂತರರಾಷ್ಟ್ರೀಯ ಆರ್ಥಿಕ ಸಹಾಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಬಾಧಿತ ಸಮುದಾಯಗಳು ತಮಗೆ ನಿರ್ಲಕ್ಷ್ಯವಾಗಿದೆ ಎಂಬ ಭಾವನೆ ಹೊಂದಿಲ್ಲ ಎಂದು ಕೂಡ ಅವರು ತಿಳಿಸಿದರು.

ಸರ್ಕಾರದ ಅಂದಾಜು ಪ್ರಕಾರ, ಪುನರ್ ನಿರ್ಮಾಣದ ಒಟ್ಟು ವೆಚ್ಚ ಸುಮಾರು 7 ಬಿಲಿಯನ್ ಡಾಲರ್. ಇದು ಶ್ರೀಲಂಕಾದ ಒಟ್ಟು ದೇಶೀಯ ಉತ್ಪನ್ನದ (GDP) ಸುಮಾರು 7 ಶೇಕಡಾ, ಮತ್ತು 2025ರ ಸರ್ಕಾರದ ಆದಾಯದ ಸುಮಾರು ಅರ್ಧ ಭಾಗಕ್ಕೆ ಸಮಾನವಾಗಿದೆ.

2022ರಲ್ಲಿ ಸಾಲ ಸಂಕಷ್ಟದಿಂದ ಉಂಟಾದ ಆರ್ಥಿಕ ಕುಸಿತದಿಂದ ದೇಶ ಹೊರಬರುತ್ತಿದ್ದ ಹೊತ್ತಿನಲ್ಲಿ ಈ ದುರಂತ ಸಂಭವಿಸಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನೆರವಿನಿಂದ ಸಾಲ ಪುನರ್‌ರಚನೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಈ ವಿಪತ್ತು ತಟ್ಟಿದೆ.

 

(ಈ ಲೇಖನವನ್ನು ಮೂಲತಃ https://www.licas.news/ ನಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಹಕ್ಕುಗಳು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನುಮತಿಯಿಲ್ಲದೆ ಮರುಪ್ರಕಟನೆ ನಿಷಿದ್ಧ.)

15 ಜನವರಿ 2026, 10:56