PHILIPPINES-RELIGION PHILIPPINES-RELIGION  (AFP or licensors)

ಮಯನ್ಮಾರ್: ಸಂಕಷ್ಟದ ನಡುವೆಯೇ ತಪಸ್ಸುಕಾಲ ಆರಂಭ-ಪ್ರಾರ್ಥನೆ ಹಾಗೂ ಐಕ್ಯತೆಗೆ ಕರೆ

ಬೂದಿ ಬುಧವಾರದೊಂದಿಗೆ ತಪಸ್ಸುಕಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ, ಏಷ್ಯಾದ ಜೆಸುಯಿಟ್ ಧರ್ಮಗುರುಗಳು ಯುದ್ಧ ಹಾಗೂ ಹಿಂಸೆಯಿಂದ ಸಂಕಷ್ಟ ಅನುಭವಿಸುತ್ತಿರುವ ಮಯನ್ಮಾರ್ ಜನರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಲು ವಿಶ್ವಾಸಿಗಳನ್ನು ಆಹ್ವಾನಿಸಿದ್ದಾರೆ.

ಲೇಖಕರು: ಚೈನರೊಂಗ್ ಮೊಂತಿಎಂವಿಚಿಯೆಂಚೈ,LiCAS ವರದಿ

ಬೂದಿ ಬುಧವಾರದೊಂದಿಗೆ ವಿಶ್ವದ ಕ್ರೈಸ್ತ ಸಮುದಾಯ ತಪಸ್ಸುಕಾಲ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ, ಏಷ್ಯಾದ ಧರ್ಮಗುರುಗಳು ಸಂಘರ್ಷದಿಂದ ಬಳಲುತ್ತಿರುವ ಜನರೊಂದಿಗೆ ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮಗಳ ಮೂಲಕ ಐಕ್ಯತೆಯನ್ನು ವ್ಯಕ್ತಪಡಿಸಲು ವಿಶ್ವಾಸಿಗಳನ್ನು ಆಹ್ವಾನಿಸಿದ್ದಾರೆ.

ವಿಶೇಷವಾಗಿ ಮಯನ್ಮಾರನ್ನು ಉಲ್ಲೇಖಿಸಿದ ಅವರು, 2021 ಫೆಬ್ರವರಿ 1ರಂದು ನಡೆದ ಸೈನಿಕ ದಂಗೆಯಿಂದಾಗಿ ದೇಶವು ರಾಜಕೀಯ ಅಸ್ಥಿರತೆ, ಮಾನವೀಯ ಸಂಕಷ್ಟ ಹಾಗೂ ಸಾಮಾಜಿಕ ವಿಭಜನೆಗಳನ್ನು ಎದುರಿಸುತ್ತಿರುವುದನ್ನು ನೆನಪಿಸಿದರು. ಮಯನ್ಮಾರಿನ ಜೆಸುಯಿಟ್ ಪ್ರಾದೇಶಿಕ ವರಿಷ್ಠ ಗುರುಗಳಾದ ವಂ. ಗುರು ಗಿರೀಶ್ ಸ್ಯಾಂಟಿಯಾಗೋ ಅವರ ಪ್ರಕಾರ, ಈ ಘಟನೆ ಪ್ರಜಾಸತ್ತಾತ್ಮಕ ನಿರೀಕ್ಷೆಗಳನ್ನು ಮಾತ್ರ ಕುಸಿತಗೊಳಿಸದೇ, ಸ್ಥಳಾಂತರ, ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ನೋವಿನ ಹೊಸ ಅಧ್ಯಾಯವನ್ನು ಆರಂಭಿಸಿತು.

ಅವರ ಅಭಿಪ್ರಾಯದಲ್ಲಿ, ಈ ದಿನ ಅನೇಕ ಸಮುದಾಯಗಳಿಗೆ ಕೇವಲ ರಾಜಕೀಯ ಘಟನೆಯಲ್ಲ; ಭಯ ಮತ್ತು ಮನಸ್ಸಿನ ಧ್ವನಿಯ ನಡುವಿನ ಆಯ್ಕೆ, ಸತ್ಯ ಮತ್ತು ಮಾನವ ಗೌರವಕ್ಕಾಗಿ ತೆತ್ತ ಬೆಲೆ, ಹಾಗೂ ನ್ಯಾಯವಿಲ್ಲದ ಶಾಂತಿ ಎಷ್ಟು ದುರ್ಬಲವೆಂಬುದನ್ನು ನೆನಪಿಸುವ ಸಂಕೇತವಾಗಿದೆ.

ವಿಯೆಟ್ನಾಂನ ವುಂಗ್ ತಾವು ನಗರದಲ್ಲಿ ನಡೆದ ಏಷ್ಯಾ–ಪೆಸಿಫಿಕ್ ಜೆಸುಯಿಟ್ ಮಹಾಧರ್ಮಾಧ್ಯಕ್ಷರ ವಾರ್ಷಿಕ ಸಭೆಯ ಸಂದರ್ಭದಲ್ಲಿ ಈ ಚಿಂತನೆಯನ್ನು ಹಂಚಿಕೊಳ್ಳಲಾಯಿತು. ಸಭೆಯಲ್ಲಿ ತರಬೇತಿ ಕಾರ್ಯಕ್ರಮಗಳು, ಸೇವಾ ಸಹಕಾರ, ಆರೋಗ್ಯ ನೆರವು ಮತ್ತು ಯುವ ಕಾರ್ಯಚಟುವಟಿಕೆಗಳ ಕುರಿತು ಚರ್ಚೆಯಾದರೂ, ಮಯನ್ಮಾರಿನ ಜನರ ನೋವು ಸಾಮೂಹಿಕ ಪ್ರಾರ್ಥನೆ ಮತ್ತು ಮನನದ ಕೇಂದ್ರಬಿಂದುವಾಗಿತ್ತು.

ಸಭೆಯಲ್ಲಿ   ಸಂತ ಪೌಲರ “ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು.”(1 ಕೊರಿಂಥಿಯರಿಗೆ 3:6) ಎಂಬ ವಾಕ್ಯವನ್ನು ನೆನೆದು, ಸೇವೆ ದೇವರ ಕೃಪೆಯ ಮೇಲೆ ನೆಲೆಗೊಂಡಿರುವುದನ್ನು ಧರ್ಮಗುರುಗಳು ಪುನರುಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಜೆಸುಯಿಟ್ ಸಮುದಾಯ ಮಯನ್ಮಾರಿನ ಜನರೊಂದಿಗೆ ಶಾಂತಿ, ಸಮಾಧಾನ ಮತ್ತು ಮಾನವ ಗೌರವ ಪುನಃಸ್ಥಾಪನೆಯ ಪ್ರಯಾಣದಲ್ಲಿ ಜೊತೆ ನಿಲ್ಲುವ ಬದ್ಧತೆಯನ್ನು ಮರುಸ್ಥಾಪಿಸಿತು. ವಂ. ಗುರು ಗಿರೀಶ್ ಅವರ ಮಾತಿನಲ್ಲಿ, ಮಯನ್ಮಾರಿನ ಇಂದಿನ ಪರಿಸ್ಥಿತಿ ಕೇವಲ ರಾಜಕೀಯ ಸಂಕಷ್ಟವಲ್ಲ, ಭರವಸೆಯೊಂದಿಗೆ ಹೊತ್ತಿರುವ ಆತ್ಮಿಕ ಗಾಯವಾಗಿದೆ.

ತಪಸ್ಸುಕಾಲವು ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮಗಳ ಮೂಲಕ ಹೃದಯ ಪರಿವರ್ತನೆಗೆ ಕರೆ ನೀಡುವ ಕಾಲವಾಗಿದ್ದು, ಯುದ್ಧ, ಸ್ಥಳಾಂತರ ಮತ್ತು ಪ್ರಕೃತಿ ವಿಕೋಪಗಳಿಂದ ಬಳಲುತ್ತಿರುವ ಏಷ್ಯಾದ ಅನೇಕ ಪ್ರದೇಶಗಳ ಮಧ್ಯೆ ಈ ಕರೆ ಇನ್ನಷ್ಟು ಅತ್ಯಾವಶ್ಯಕವಾಗಿದೆ ಎಂದು ಧರ್ಮಗುರುಗಳು ಹೇಳಿದ್ದಾರೆ.

ಶರಣಾರ್ಥಿಗಳಿಗೆ ನೆರವು, ಸ್ಥಳಾಂತರಿತ ಕುಟುಂಬಗಳಿಗೆ ಬೆಂಬಲ ಮತ್ತು ಶಾಂತಿಯ ಪರವಾದ ಧ್ವನಿ—ಇವುಗಳನ್ನೇ ನಂಬಿಕೆಯ ಜೀವಂತ ಅಭಿವ್ಯಕ್ತಿಗಳಾಗಿ ಅವರು ಗುರುತಿಸಿದ್ದಾರೆ. ಮಯನ್ಮಾರಿನ ಜನರಿಗಾಗಿ ಪ್ರಾರ್ಥನೆಯಷ್ಟೇ ಅಲ್ಲ, ಕರುಣೆ ಮತ್ತು ಐಕ್ಯತೆಯ ಸ್ಪಷ್ಟ ಕ್ರಮಗಳ ಮೂಲಕ ಅವರನ್ನು ನೆನಪಿಸಿಕೊಳ್ಳುವಂತೆ ವಿಶ್ವಾಸಿಗಳಿಗೆ ಆಹ್ವಾನ ನೀಡಲಾಗಿದೆ.

ಸಂಘರ್ಷ ಮತ್ತು ಅನಿಶ್ಚಿತತೆಯ ನಡುವೆಯೂ ಭರವಸೆಯ ಬೀಜ ಬಿತ್ತಬೇಕು ಎಂಬ ಸಂದೇಶದೊಂದಿಗೆ, ಗಾಯಗೊಂಡ ರಾಷ್ಟ್ರಗಳು ಮತ್ತು ಕುಗ್ಗಿದ ಸಮುದಾಯಗಳಿಗೆ ದೇವರು ಬೆಳವಣಿಗೆ ಮತ್ತು ಚೇತರಿಕೆ ನೀಡುವನೆಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಮ್ಯಾನ್ಮಾರ್ ಜನರಿಗೆ ಆ ಭರವಸೆಯೇ ಪ್ರಾರ್ಥನೆಯೂ ವಾಗ್ದಾನವೂ ಆಗಿದೆ.

ಈ ಲೇಖನವು ಮೂಲತಃ licas.news ನಲ್ಲಿ ಪ್ರಕಟವಾಗಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಮೂರನೇ ವ್ಯಕ್ತಿಗಳಿಂದ ಅನಧಿಕೃತ ಮರುಪ್ರಕಟಣೆ ಅನುಮತಿಸಲಾಗುವುದಿಲ್ಲ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

18 ಫೆಬ್ರವರಿ 2026, 11:59