ಇಸ್ರಾಯೇಲ್ ಗಡಿಯಲ್ಲಿನ ಕೊನೆಯ ಕ್ರೈಸ್ತ ಗ್ರಾಮ: ‘ನಮಗೆ ಬದುಕಲು ಶಾಂತಿ ನೆಲೆಸಿರುವ ಲೆಬನಾನ್ ಬೇಕು’
ಲೇಖಕರು: ಗುಗ್ಲಿಯೆಲ್ಮೊ ಗಲ್ಲೋನೆ
“ನಮಗೆ ಶಾಂತಿ ಮತ್ತು ಸಮಾಧಾನದಲ್ಲಿ ಬದುಕುವ ಲೆಬನಾನ್ ಬೇಕು; ನಮ್ಮ ಯುವಜನರಿಗೆ ಉದ್ಯೋಗ ಸಿಗಬೇಕು; ಕುಟುಂಬಗಳು ತಮ್ಮ ಗ್ರಾಮವನ್ನು ತೊರೆಯಬೇಕಾದ ಅನಿವಾರ್ಯತೆ ಇರಬಾರದು.”
ಏಕೆಂದರೆ “ಪ್ರಭುವು ನಮಗೆ ಎಲ್ಲರನ್ನು ಪ್ರೀತಿಸಲು ಕಲಿಸಿದ್ದಾರೆ. ನಾವು ಎಲ್ಲರನ್ನು ಪ್ರೀತಿಸುತ್ತೇವೆ: ಶಿಯಾ, ಸುನ್ನಿ, ದ್ರೂಝ್—ಎಲ್ಲರನ್ನು. ಆದರೆ ಈಗ ನಮ್ಮ ಧ್ವನಿಯನ್ನು ಇನ್ನಷ್ಟು ಎತ್ತಬೇಕಾದ ಸಮಯ ಬಂದಿದೆ: ನಮಗೆ ಇನ್ನು ಯುದ್ಧ ಬೇಡ.” ಇರಾನ್, ಅಮೆರಿಕಾ ಮತ್ತು ಇಸ್ರಾಯೇಲ್ ರಾತ್ರಿ ಘೋಷಿಸಿದ ಯುದ್ಧ ವಿರಾಮ ಲೆಬನಾನ್ಗೆ ಅನ್ವಯಿಸುವುದಿಲ್ಲ ಎಂಬ ಸುದ್ದಿಗೆ, ಕ್ರೈಸ್ತ ಗ್ರಾಮವಾದ ರಮೇಶ್ನ(Rmeich) ಸಂತ ಜಾರ್ಜ್ ಧರ್ಮಕೇಂದ್ರದ ಮರೋನೈಟ್ ವಂ. ಗುರು ಟೋನಿ ಎಲಿಯಾಸ್ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಕ್ರೈಸ್ತ ಗ್ರಾಮವಾದ ರಮೇಶ್ನ ಸ್ಥೈರ್ಯ
“ಈ ರೀತಿಯ ಪ್ರಕಟಣೆಯನ್ನು ನಾವು ಹೇಗೂ ನಿರೀಕ್ಷಿಸಿದ್ದೆವು,” ಎಂದು ವಂ. ಗುರು ಎಲಿಯಾಸ್ ಹೇಳಿದರು. “ರಮೇಶ್ ಇಸ್ರಾಯೇಲ್ ಗಡಿಯ ಮುಂಚಿನ ಕೊನೆಯ ಕ್ರೈಸ್ತ ಗ್ರಾಮ. ನಾವು ಗಡಿಯ ಹತ್ತಿರವಲ್ಲ—ಗಡಿಯ ಮೇಲೆಯೇ ಇದ್ದೇವೆ. ಬಿಂತ್ ಜ್ಬೈಲ್ ಪ್ರದೇಶದಲ್ಲಿ ಇನ್ನೂ ಉಳಿದುಕೊಂಡಿರುವ ಎರಡು ಗ್ರಾಮಗಳೊಂದಿಗೆ ನಾವು ಮಾತ್ರ ಉಳಿದಿದ್ದೇವೆ. ಇಲ್ಲಿ ದಕ್ಷಿಣ ಲೆಬನಾನ್ನಲ್ಲಿ ಯುದ್ಧ ವಿರಾಮ ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಎಲ್ಲರೂ ತಕ್ಷಣ ಅರ್ಥ ಮಾಡಿಕೊಂಡರು, ಏಕೆಂದರೆ ಇಸ್ರಾಯೇಲ್ ಸೈನ್ಯ ಈಗಾಗಲೇ ನಮ್ಮನ್ನು ದಾಟಿಕೊಂಡು ಮುಂದೆ ಹೋಗಿದೆ ಮತ್ತು ಈ ಕಾರ್ಯಾಚರಣೆಯಲ್ಲಿ ಅದರ ಭಾಗವಹಿಸುವಿಕೆಯ ಪ್ರಮಾಣವೂ ಹೆಚ್ಚಿನದು.”
ಏಪ್ರಿಲ್ 8ರ ಬೆಳಗಿನ ಇಸ್ರಾಯೇಲ್ ದಾಳಿಗಳು ಯುದ್ಧ ವಿರಾಮ ಲೆಬನಾನ್ಗೆ ಅನ್ವಯಿಸುವುದಿಲ್ಲ ಎಂಬುದನ್ನು ದೃಢಪಡಿಸಿವೆ.ಹೆಜ್ಬೊಲ್ಲ ಹೆಚ್ಚು ಸಕ್ರಿಯವಾಗಿರುವ ಪ್ರದೇಶಗಳಾಗಿರುವ ದಕ್ಷಿಣ ಲೆಬನಾನ್ನ ಬೈರೂತ್ನ ದಕ್ಷಿಣ ಭಾಗಗಳು ಮತ್ತು ಪೂರ್ವದ ಬೆಕಾ ಕಣಿವೆ ವಾಯು ದಾಳಿಗೆ ಒಳಪಟ್ಟವು. ಇಸ್ರಾಯೇಲ್ ಹೇಳುವಂತೆ, ಇದು ಈ ಸಂಘರ್ಷದ ಅತ್ಯಂತ ದೊಡ್ಡ ವಾಯು ದಾಳಿಯ ಅಲೆ ಆಗಿದ್ದು, 10 ನಿಮಿಷಗಳಲ್ಲಿ 100ಕ್ಕೂ ಹೆಚ್ಚು ಹೆಜ್ಬೊಲ್ಲ ಕಮಾಂಡ್ ಕೇಂದ್ರಗಳು ಮತ್ತು ಸೇನಾ ತಾಣಗಳನ್ನು ಹೊಡೆದಿದೆ.
ಪುನರುತ್ಥಾನ ಮಹೋತ್ಸವದ ಆಚರಣೆ
ಇದರ ನಡುವೆಯೂ, ವಂ. ಗುರು ಎಲಿಯಾಸ್ ಅವರು ಇಲ್ಲಿನ ವಿಶ್ವಾಸಿಗಳು ಪುನರುತ್ಥಾನ ಮಹೋತ್ಸವವನ್ನು ಆಚರಿಸಲು ಸಾಧ್ಯವಾಯಿತು ಎಂದು ವಿವರಿಸಿದರು. “ಇದಕ್ಕಾಗಿ ನಾವು ಪ್ರಭುವಿಗೆ ಕೃತಜ್ಞತೆ ಸಲ್ಲಿಸುತ್ತೇವೆ, ಏಕೆಂದರೆ ಈ ವರ್ಷ ಜಾಗರಣ ಬಲಿಪೂಜೆಯನ್ನು ಕೈಬಿಡಬೇಕಾದರೂ, ಪವಿತ್ರ ವಾರವನ್ನು ಸಂಪೂರ್ಣ ಭಾಗವಹಿಸುವಿಕೆಯಿಂದ ಆಚರಿಸಲು ಸಾಧ್ಯವಾಯಿತು. ಇದೇ ನಮ್ಮ ಪ್ರತಿರೋಧದ ಮೂಲ: ವಿಶ್ವಾಸ, ಪ್ರಭುವಿನ ಮೇಲೆ ನಂಬಿಕೆ, ಮತ್ತು ಅವನಿಗೆ ಶರಣಾಗತಿ. ಭರವಸೆ ಕಳೆದುಕೊಳ್ಳದೆ—ವಿರೋಧವಾಗಿ, ಪ್ರಭುವಿನ ಮೇಲೆ ಭರವಸೆ ಇಡುವುದು—ಇದೇ ನಮ್ಮನ್ನು ಸುತ್ತುವರಿದಿರುವ ಯುದ್ಧ ಮತ್ತು ಸಂಘರ್ಷಗಳ ಮಧ್ಯೆ ನಮ್ಮನ್ನು ಸ್ಥಿರಗೊಳಿಸುತ್ತದೆ.”
ಧರ್ಮಸಭೆಯ ಸಾನ್ನಿಧ್ಯ ಮತ್ತು ಅಗತ್ಯ ಅವಶ್ಯಕತೆಗಳು
ಈ ಭರವಸೆ ಸಮುದಾಯಕ್ಕೆ ದೊರಕಿದ ಬೆಂಬಲದಲ್ಲಿಯೂ ಪ್ರತಿಬಿಂಬಿಸುತ್ತದೆ ಎಂದು ವಂ. ಗುರು ಎಲಿಯಾಸ್ ಮುಂದುವರೆದು ಹೇಳಿದರು. “ನಾವು ಧ್ವನಿ ಎತ್ತಿದ ನಂತರ ಧರ್ಮಸಭೆ ತನ್ನ ಸಾನ್ನಿಧ್ಯವನ್ನು ತೋರಿಸುವುದರಲ್ಲಿ ಎಂದಿಗೂ ವಿಫಲವಾಗಿಲ್ಲ. ಹಿಂದಿನ ಯುದ್ಧದಲ್ಲಿಯೂ, ಈ ಯುದ್ಧದಲ್ಲಿಯೂ, ದೊಡ್ಡ ಮಟ್ಟದ ಬೆಂಬಲ ದೊರಕಿದೆ.” ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಪ್ರಾರ್ಥನೆಗಳಿಗೆ ಸಮುದಾಯದ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
“ಇಂದು ಬೆಳಗ್ಗೆ ಜಗದ್ಗುರುಗಳ ಪ್ರೇಷಿತ ಪ್ರತಿನಿಧಿಯಾದ ಮಹಾಧರ್ಮಾಧ್ಯಕ್ಷ ಪೌಲೊ ಬೋರ್ಜಿಯಾ ಅವರು ನಮ್ಮ ಸ್ಥಿತಿ ಮತ್ತು ಅಗತ್ಯಗಳ ಬಗ್ಗೆ ಕೇಳಿದರು. ಈ ದಿನಗಳಲ್ಲಿ ನಾನು ಔಷಧಿಗಳ ಪಟ್ಟಿಯನ್ನು ತಯಾರಿಸುತ್ತಿದ್ದೇನೆ. ಕ್ಯಾನ್ಸರ್ ಅಥವಾ ಗಂಭೀರ ಚಿಕಿತ್ಸೆ ಪಡೆಯುತ್ತಿರುವವರು ಇದ್ದಾರೆ. ಕೆಲವರಿಗೆ ಬಹಳ ವಿಶೇಷವಾದ ಅಥವಾ ತುಂಬಾ ದುಬಾರಿ ಔಷಧಿಗಳು ಬೇಕಾಗಿವೆ—ಅವುಗಳು ದುಬಾರಿಯಾಗಿವೆ ಅಥವಾ ಲಭ್ಯವಿಲ್ಲ. ನಮಗೆ ಈ ಅಗತ್ಯ ವಸ್ತುಗಳು ಬೇಕು, ಮತ್ತು ಮುಖ್ಯವಾಗಿ ಮಾನವೀಯ ದಾರಿ ಬೇಕಾಗಿದೆ.”
ವಂ. ಗುರು ಎಲಿಯಾಸ್ ಅವರು ಈ ಪಟ್ಟಿಯನ್ನು ಆರ್ಡರ್ ಆಫ್ ಮಾಲ್ಟಾ ಸಂಸ್ಥೆಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ, ಅದು ಆ ಪ್ರದೇಶದಲ್ಲಿ ಕಾರಿಟಾಸ್ ಜೊತೆ ಸಮೀಪವಾಗಿ ಕಾರ್ಯನಿರ್ವಹಿಸುತ್ತಿದೆ. “ನಾವು ಇಲ್ಲಿನ ಧರ್ಮಕೇಂದ್ರಗಳ ಸಂಪೂರ್ಣ ಹೊಣೆ ಹೊರುತ್ತಿದ್ದೇವೆ, ಮತ್ತು ಸಹಾಯವನ್ನು ಹೇಗೆ ಪಡೆಯುವುದು ಎಂಬುದನ್ನು ಅರಿಯಲು ಪ್ರಯತ್ನಿಸುತ್ತಿದ್ದೇವೆ. ನಾವು ಶಾಂತಿಯುತ ಪ್ರತಿರೋಧದಲ್ಲಿ ಸ್ಥಿರವಾಗಿದ್ದೇವೆ,” ಎಂದು ವಂ. ಗುರು ಟೋನಿ ಎಲಿಯಾಸ್ ಅವರು ಸಮಾರೋಪಗೊಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).