ಪ್ರಭುವಿನ ದಿನದ ಧ್ಯಾನ: ಯೇಸುವಿನಲ್ಲಿ ನಿತ್ಯ ಮಹಿಮೆಯ ವಾಗ್ದಾನ ಪ್ರಭುವಿನ ದಿನದ ಧ್ಯಾನ: ಯೇಸುವಿನಲ್ಲಿ ನಿತ್ಯ ಮಹಿಮೆಯ ವಾಗ್ದಾನ 

ಪ್ರಭುವಿನ ದಿನದ ಧ್ಯಾನ: ಯೇಸುವಿನಲ್ಲಿ ನಿತ್ಯ ಮಹಿಮೆಯ ವಾಗ್ದಾನ

ಧರ್ಮಸಭೆಯು ಪುನರುತ್ಥಾನ ಮಹೋತ್ಸವದ ಏಳನೇ ಭಾನುವಾರವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಫ್ರಾನ್ಸಿಸ್ಕನ್ ಸಭೆಯ ಧರ್ಮಗುರುಗಳಾದ ವಂದನೀಯ ಲೂಕ ಗ್ರೆಗೊರಿ ಅವರು “ಯೇಸುವಿನಲ್ಲಿ ನಿತ್ಯ ಮಹಿಮೆಯ ವಾಗ್ದಾನ” ಎಂಬ ವಿಷಯದ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು: ವಂ. ಗುರು ಲೂಕ್ ಗ್ರೆಗೊರಿ

ಅನಿಶ್ಚಿತತೆ ಮತ್ತು ಅಶಾಂತಿಯಿಂದ ತುಂಬಿರುವ ಇಂದಿನ ಯುಗದಲ್ಲಿ, ನಿತ್ಯಜೀವದ ನಿರೀಕ್ಷೆಯು ವಿಶ್ವದಾದ್ಯಂತದ ವಿಶ್ವಾಸಿಗಳಿಗೆ ಒಂದು ದೀಪಸ್ತಂಭದಂತಿದೆ. ಈ ವಾಗ್ದಾನವು, ತನ್ನ ಸಮಯ ಬಂದಿರುವುದನ್ನು ತಿಳಿದು ಸ್ವರ್ಗದತ್ತ ಕಣ್ಣುಗಳನ್ನು ಎತ್ತಿ ಪ್ರಾರ್ಥಿಸಿದ ಯೇಸುವಿನ ಮನಮುಟ್ಟುವ ಪ್ರಾರ್ಥನೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಅವರು ಉಚ್ಚರಿಸಿದ ಶಕ್ತಿಯುತ ವಾಕ್ಯಗಳು, ಪಿತ ದೇವರೊಂದಿಗೆ ಹೊಂದಿದ್ದ ಅವರ ಆಳವಾದ ಸಂಬಂಧವನ್ನು ಮಾತ್ರವಲ್ಲ, ಅವರ ಮೇಲೆ ವಿಶ್ವಾಸವಿಟ್ಟವರ ಕರೆಯನ್ನೂ ಗುರಿಯನ್ನೂ ಬಹಿರಂಗಪಡಿಸುತ್ತವೆ.

“ನೀವು ನನಗೆ ಮಾಡಲು ಕೊಟ್ಟ ಕಾರ್ಯವನ್ನು ಪೂರ್ಣಗೊಳಿಸುವ ಮೂಲಕ ನಾನು ಭೂಮಿಯ ಮೇಲೆ ನಿಮ್ಮನ್ನು ಮಹಿಮೆಪಡಿಸಿದ್ದೇನೆ,” ಎಂದು ಯೇಸು ಹೇಳುತ್ತಾರೆ. ಇದರಿಂದ ತಮಗೆ ಒಪ್ಪಿಸಲ್ಪಟ್ಟ ಧ್ಯೇಯವನ್ನು ಅವರು ಸ್ಪಷ್ಟಪಡಿಸುತ್ತಾರೆ. ಈ ಧ್ಯೇಯವೇ ಯುಗಯುಗಾಂತರಗಳಿಂದ ಪ್ರತಿಧ್ವನಿಸುತ್ತಾ, ನಿತ್ಯಜೀವದತ್ತ ಕರೆದೊಯ್ಯುವ ದೈವಿಕ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ನಮ್ಮ ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತದೆ.

ಯೇಸುವಿಗೆ ದೊರೆತ ಮಹಿಮೆಯ ಭರವಸೆಯು, ಪಿತೃ ದೇವರೊಂದಿಗೆ ಅವರಿಗಿದ್ದ ವಿಶಿಷ್ಟ ಮತ್ತು ಆಳವಾದ ಸಂಬಂಧದ ಸಂಕೇತವಾಗಿದೆ. ಆ ಸಂಬಂಧದಲ್ಲಿ ಪಾಲ್ಗೊಳ್ಳುವಂತೆ ವಿಶ್ವಾಸಿಗಳಾದ ನಮಗೂ ಆಹ್ವಾನ ನೀಡಲಾಗಿದೆ. ತಮ್ಮ ಪ್ರಾರ್ಥನೆಯಲ್ಲಿ ಯೇಸು, ನಿತ್ಯಜೀವದ ಸಾರವನ್ನು ಹೀಗೆ ವಿವರಿಸುತ್ತಾರೆ:“ಏಕೈಕ ಸತ್ಯ ದೇವರಾದ ನಿಮ್ಮನ್ನೂ, ನೀವು ಕಳುಹಿಸಿದ ಯೇಸು ಕ್ರಿಸ್ತನನ್ನೂ ಅರಿಯುವುದೇ ನಿತ್ಯಜೀವ.”

ಇದು ಬದುಕಿನ ಅಸ್ತಿತ್ವವನ್ನು ಮೀರಿದ ಆಳವಾದ ಪ್ರಕಟಣೆಯಾಗಿದೆ. ಇದು ದೇವರನ್ನು ಆಂತರಿಕವಾಗಿ ಮತ್ತು ನಿಕಟವಾಗಿ ಅರಿಯುವ ಕರೆಯಾಗಿದೆ. ವಿಶ್ವಾಸಿಗಳಿಗೆ, ದೇವರನ್ನೂ ಯೇಸು ಕ್ರಿಸ್ತನನ್ನೂ ಅರಿಯುವುದು ಎಂದರೆ ಜೀವನವನ್ನು ಪರಿವರ್ತಿಸುವ, ಗುರಿಯ ಭಾವನೆ, ಭದ್ರತೆ ಮತ್ತು ಸೇರಿದ ಭಾವನೆಯನ್ನು ನೀಡುವ ಸಂಬಂಧದೊಳಗೆ ಪ್ರವೇಶಿಸುವುದಾಗಿದೆ.

ತಮ್ಮ ಪ್ರಾರ್ಥನೆಯಲ್ಲಿ ಯೇಸು, ಪಿತ ದೇವರು ಲೋಕದಿಂದ ತಮಗೆ ನೀಡಿದ ಶಿಷ್ಯರ ಕುರಿತು ಉಲ್ಲೇಖಿಸುತ್ತಾರೆ. ಅವರು ದೇವರಿಗೆ ಸೇರಿದವರಾಗಿದ್ದಾರೆ ಎಂದು ಹೇಳುತ್ತಾರೆ. ಇದು ದೇವರ ಆಯ್ಕೆ ಮತ್ತು ಪ್ರೀತಿಯ ಆಳವಾದ ಘೋಷಣೆಯಾಗಿದೆ. ಈ ಮಾತುಗಳು ವಿಶ್ವಾಸಿಗಳ ಹೃದಯದಲ್ಲಿ ಆಳವಾಗಿ ಪ್ರತಿಧ್ವನಿಸುತ್ತವೆ. ಏಕೆಂದರೆ ಅವು, ತಾವು ಸೃಷ್ಟಿಕರ್ತನಿಗೆ ಅಮೂಲ್ಯರು ಮತ್ತು ಪ್ರೀತಿಪಾತ್ರರು ಎಂಬ ಸತ್ಯವನ್ನು ನೆನಪಿಸುತ್ತವೆ.

ಯೇಸು, ತಮ್ಮ ಅನುಯಾಯಿಗಳು ದೇವರ ವಾಕ್ಯವನ್ನು ಕಾಪಾಡಿಕೊಂಡಿದ್ದಾರೆ, ತಮ್ಮ ಬೋಧನೆಯನ್ನು ಅಂಗೀಕರಿಸಿದ್ದಾರೆ ಮತ್ತು ತಮ್ಮ ಧ್ಯೇಯವನ್ನು ನಿಜವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ದೃಢಪಡಿಸುತ್ತಾರೆ.ಇದು, ವಿಶ್ವಾಸ ಮತ್ತು ವಿಧೇಯತೆ ಅವರ ಜೀವನದಲ್ಲಿ ಹೇಗೆ ಪರಿಣಾಮ ಬೀರಿದೆ ಎಂಬುದನ್ನು c.  ಯೇಸು ಮತ್ತು ಅವರ ಶಿಷ್ಯರ ನಡುವಿನ ಸಂಬಂಧವು ಪವಿತ್ರವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

“ನೀವು ನನಗೆ ಕೊಟ್ಟಿರುವುದೆಲ್ಲವೂ ನಿಮ್ಮಿಂದಲೇ ಬಂದಿದೆ ಎಂಬುದನ್ನು ಈಗ ಅವರು ಅರಿತಿದ್ದಾರೆ,” ಎಂದು ಯೇಸು ಘೋಷಿಸುತ್ತಾರೆ. ಈ ಪ್ರಕಟಣೆಯು, ಸತ್ಯ ಮತ್ತು ಮಾರ್ಗದರ್ಶನವೆಲ್ಲವೂ ದೇವರಿಂದಲೇ ಉದ್ಭವಿಸುತ್ತವೆ ಎಂಬ ಸತ್ಯವನ್ನು ಮತ್ತಷ್ಟು ದೃಢಪಡಿಸುತ್ತದೆ.

ಯೇಸುವಿಗೆ ಒಪ್ಪಿಸಲ್ಪಟ್ಟ ವಾಕ್ಯಗಳು ಅವರ ಅನುಯಾಯಿಗಳಿಗೆ ಹಸ್ತಾಂತರಗೊಂಡಿವೆ. ಇದರಿಂದ ತಲೆಮಾರುಗಳಿಂದ ಮುಂದುವರಿಯುತ್ತಿರುವ ವಿಶ್ವಾಸ ಮತ್ತು ದೈವಿಕ ಪ್ರಕಟಣೆಯ ನಿರಂತರತೆ ಸ್ಪಷ್ಟವಾಗುತ್ತದೆ. ತಮ್ಮ ಶಿಷ್ಯರಿಗಾಗಿ ಪ್ರಾರ್ಥಿಸುವಾಗ, ಯೇಸು ಅವರನ್ನು ಲೋಕದಿಂದ ಪ್ರತ್ಯೇಕವಾಗಿ ಉಲ್ಲೇಖಿಸುತ್ತಾರೆ. “ನಾನು ಲೋಕಕ್ಕಾಗಿ ಪ್ರಾರ್ಥಿಸುವುದಿಲ್ಲ; ನೀವು ನನಗೆ ಕೊಟ್ಟವರಿಗಾಗಿ ಪ್ರಾರ್ಥಿಸುತ್ತೇನೆ. ಏಕೆಂದರೆ ಅವರು ನಿಮ್ಮವರೇ ಆಗಿದ್ದಾರೆ,” ಎಂದು ಅವರು ಹೇಳುತ್ತಾರೆ. ಈ ಮಧ್ಯಸ್ಥ ಪ್ರಾರ್ಥನೆ, ತಮ್ಮ ಅನುಯಾಯಿಗಳ ಬಗ್ಗೆ ಯೇಸುವಿಗಿದ್ದ ಆಪ್ತ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಜೊತೆಗೆ, ದೇವರೊಂದಿಗೆ ಅವರ ಸಂಬಂಧದ ಮಹತ್ವವನ್ನೂ ಒತ್ತಿಹೇಳುತ್ತದೆ.

ಯೇಸು, ತಮ್ಮ ಶಿಷ್ಯರು ಪಿತ ದೇವರಿಗೆ ಸೇರಿದವರು ಎಂದು ಹೇಳುವಂತೆಯೇ, ತಮ್ಮಲ್ಲಿರುವುದೆಲ್ಲವೂ ದೇವರದ್ದೇ ಎಂದು ಸಹ ದೃಢಪಡಿಸುತ್ತಾರೆ. ಈ ಆಳವಾದ ಏಕತೆಯು, ಪ್ರೀತಿ ಮತ್ತು ಧ್ಯೇಯದಲ್ಲಿ ಬೇರುಬಿಟ್ಟಿರುವ ಹಂಚಿಕೊಂಡ ಕರೆಯನ್ನೂ ಗುರುತನ್ನೂ ಸೂಚಿಸುತ್ತದೆ.

ಇಂದಿನ ನಮ್ಮ ಜಗತ್ತು ಅನೇಕ ಬಾರಿ ಗಮನಭಂಗ ಮತ್ತು ಭಿನ್ನಾಭಿಪ್ರಾಯಗಳಿಂದ ತುಂಬಿರುತ್ತದೆ. ಇದು ವಿಶ್ವಾಸಿಗಳ ಪವಿತ್ರ ಕರೆಯೊಂದಿಗೆ ತೀವ್ರ ವ್ಯತ್ಯಾಸವನ್ನು ತೋರಿಸುತ್ತದೆ.ಪಿತ ದೇವರ ಬಳಿಗೆ ಮರಳಲು ಸಿದ್ಧಗೊಳ್ಳುತ್ತಿರುವ ಯೇಸು, ಸವಾಲುಗಳಿಂದ ತುಂಬಿರುವ ಲೋಕದಲ್ಲಿ ಉಳಿದಿರುವ ತಮ್ಮ ಅನುಯಾಯಿಗಳ ಅಸ್ಥಿರ ಪರಿಸ್ಥಿತಿಯನ್ನು ಅರಿಯುತ್ತಾರೆ.

ಆ ಸಂದರ್ಭದಲ್ಲಿ ಅವರ ಪ್ರಾರ್ಥನೆ, ಸಂಕಷ್ಟಗಳ ಮಧ್ಯೆಯೂ ದೇವರ ರಕ್ಷಣೆ ಮತ್ತು ಸಾನ್ನಿಧ್ಯದ ಭರವಸೆಯನ್ನು ನೀಡುವ ಜೀವನಾಡಿಯಂತೆ ಪರಿಣಮಿಸುತ್ತದೆ. ಇದಲ್ಲದೆ, ಪ್ರಭುಯೇಸು ನೀಡುವ ಮಹಿಮೆಯ ವಾಗ್ದಾನವು ಕೇವಲ ಅವರಿಗಷ್ಟೇ ಸೀಮಿತವಲ್ಲ; ಅದು ಅವರ ಮೇಲೆ ವಿಶ್ವಾಸವಿಡುವ ಎಲ್ಲರಿಗೂ ವಿಸ್ತರಿಸುತ್ತದೆ. ಅವರ ಮಹಿಮೆಯಲ್ಲಿ ಪಾಲುಗೊಳ್ಳುವ ಆಹ್ವಾನವು ಶುಭಸಂದೇಶದ ಹೃದಯವನ್ನು ಅನಾವರಣಗೊಳಿಸುತ್ತದೆ — ಅಂದರೆ, ವಿಶ್ವಾಸಿಗಳು ತಮ್ಮ ಜೀವನದಲ್ಲಿ ದೇವರ ಪ್ರೀತಿ ಮತ್ತು ಶಕ್ತಿಯನ್ನು ಪ್ರತಿಬಿಂಬಿಸಲು ಕರೆಯಲ್ಪಟ್ಟಿದ್ದಾರೆ.

ಯೇಸುವಿನ ಮೇಲೆ ಭರವಸೆಯಿಡುವವರು ನಿತ್ಯಜೀವವನ್ನು ಹೊಂದುವರು ಎಂಬ ಭರವಸೆ, ಪರೀಕ್ಷೆಗಳ ಮಧ್ಯೆಯೂ ವಿಶ್ವಾಸವನ್ನು ಸ್ಥಿರವಾಗಿ ಉಳಿಸುವ ಆಶೆಯ ಅಡಿಪಾಯವಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ, ಈ ಪ್ರಾರ್ಥನೆಯಲ್ಲಿರುವ ಸಂದೇಶ ಇನ್ನಷ್ಟು ಶಕ್ತಿಯುತವಾಗಿ ಪ್ರತಿಧ್ವನಿಸುತ್ತದೆ. ವೈಯಕ್ತಿಕ ಹೋರಾಟಗಳಾಗಲಿ, ಸಾಮಾಜಿಕ ಸಮಸ್ಯೆಗಳಾಗಲಿ ಅಥವಾ ಜಾಗತಿಕ ಸಂಕಷ್ಟಗಳಾಗಲಿ — ಅನಿಶ್ಚಿತತೆಗಳೊಂದಿಗೆ ಹೋರಾಡುತ್ತಿರುವ ಜನರಿಗೆ, ನಿತ್ಯ ಮಹಿಮೆಯ ವಾಗ್ದಾನವು ಜೀವನದ ಸಂಕಷ್ಟಗಳ ಹಿಂದಿರುವ ಉನ್ನತ ಉದ್ದೇಶವನ್ನು ನೆನಪಿಸುವ ಬಲವಾದ ಸ್ಮರಣೆಯಾಗಿದೆ.

ದೇವರನ್ನೂ ಯೇಸು ಕ್ರಿಸ್ತನನ್ನೂ ಅರಿಯುವ ನಿರೀಕ್ಷೆಯು ವಿಶ್ವಾಸಿಯನ್ನು ದೃಢವಾಗಿ ನೆಲೆಗೊಳಿಸಿ, ಕಠಿಣ ಸಂದರ್ಭಗಳನ್ನು ಎದುರಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ. ಇದಲ್ಲದೆ, ಈ ಪ್ರಾರ್ಥನೆಯು ಸಕ್ರಿಯ ಶಿಷ್ಯತ್ವದ ಕರೆಯಾಗಿಯೂ ಪರಿಣಮಿಸುತ್ತದೆ.

ದೇವರನ್ನು ಅರಿಯುವಿಕೆಯ ಸಾರವು ಕೇವಲ ಬೌದ್ಧಿಕ ಒಪ್ಪಿಗೆಯನ್ನು ಮೀರಿದುದಾಗಿದೆ; ಅದು ದೇವರ ಚಿತ್ತಕ್ಕೆ ಅನುಗುಣವಾಗಿ ಜೀವಿಸುವ ಜೀವನದಲ್ಲಿ ವ್ಯಕ್ತವಾಗುತ್ತದೆ. ವಿಶ್ವಾಸಿಗಳಾದ ನಾವು, ಯೇಸುವಿನ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು, ಇತರರಿಗೆ ಸೇವೆ ಸಲ್ಲಿಸಲು ಮತ್ತು ಇನ್ನೂ ಅವರನ್ನು ಅರಿಯದವರೊಂದಿಗೆ ಶುಭಸಂದೇಶವನ್ನು ಹಂಚಿಕೊಳ್ಳಲು ಕರೆಯಲ್ಪಟ್ಟಿದ್ದೇವೆ. ಈ ಬದ್ಧತೆಯ ಮೂಲಕವೇ ವಿಶ್ವಾಸದ ಪರಿವರ್ತನಾ ಶಕ್ತಿ ವ್ಯಕ್ತವಾಗುತ್ತದೆ. ಆಗ ವಿಶ್ವಾಸಿಗಳು ಲೋಕದಲ್ಲಿ ದೇವರ ಮಹಿಮೆಯನ್ನು ಪ್ರತಿಬಿಂಬಿಸುವ ಪಾತ್ರೆಗಳಾಗುತ್ತಾರೆ.

ಯೇಸುವಿನಲ್ಲಿ ದೊರೆಯುವ ನಿತ್ಯ ಮಹಿಮೆಯ ಅದ್ಭುತ ವಾಗ್ದಾನವು, ದೇವರು ಮತ್ತು ಮಾನವನ ನಡುವಿನ ಆಳವಾದ ಸಂಬಂಧವನ್ನು ಬಿಂಬಿಸುತ್ತದೆ. ಪ್ರೀತಿ, ಧ್ಯೇಯ ಮತ್ತು ಮಧ್ಯಸ್ಥ ಪ್ರಾರ್ಥನೆಯ ವಿಷಯಗಳಿಂದ ಸಮೃದ್ಧವಾಗಿರುವ ಯೇಸುವಿನ ಪ್ರಾರ್ಥನೆ, ದೇವರ ದೈವಿಕ ಯೋಜನೆಯಲ್ಲಿ ನಮ್ಮ ಪಾತ್ರವನ್ನು ಸ್ವೀಕರಿಸಲು ಪ್ರತಿಯೊಬ್ಬರನ್ನೂ ಆಹ್ವಾನಿಸುತ್ತದೆ.

ಅವರ ಮೇಲೆ ಭರವಸೆಯಿಡುವಾಗ, ನಿತ್ಯಜೀವದ ಭರವಸೆಯಲ್ಲಿ ನಾವೂ ಪಾಲುಗೊಳ್ಳುತ್ತೇವೆ — ನಮ್ಮ ಇಂದಿನ ಜೀವನವನ್ನೇ ಪರಿವರ್ತಿಸಿ, ನಮ್ಮನ್ನು ಆಶೆಯಿಂದ ತುಂಬಿಸುವ ಮಹಿಮೆಯ ಭವಿಷ್ಯದಲ್ಲಿ. ಈ ಅಶಾಂತಿಯ ಕಾಲದಲ್ಲಿ, ನಮ್ಮ ವಿಶ್ವಾಸಯಾತ್ರೆಯಲ್ಲಿ ಈ ವಾಗ್ದಾನವೇ ನಮಗೆ ಶಕ್ತಿ ಮತ್ತು ಪ್ರೋತ್ಸಾಹದ ಮೂಲವಾಗಲಿ.

ದೇವರನ್ನು ಇನ್ನಷ್ಟು ಆಳವಾಗಿ ಅರಿಯಲು, ಅವರ ವಾಕ್ಯಕ್ಕೆ ನಿಷ್ಠೆಯಿಂದ ಜೀವಿಸಲು ಮತ್ತು ಈ ಲೋಕದಲ್ಲಿ ನಡೆಯುವಾಗ ಅವರ ಮಹಿಮೆಯನ್ನು ಪ್ರತಿಬಿಂಬಿಸಲು ನಾವು ಪ್ರಯತ್ನಿಸೋಣ. ಈ ವಾಗ್ದಾನದ ಸೌಂದರ್ಯವು ಕೆಲವೇ ಜನರಿಗೆ ಸೀಮಿತವಾಗಿಲ್ಲ; ಸತ್ಯವನ್ನು ಹುಡುಕುವ ಎಲ್ಲರಿಗೂ ಅದು ಮುಕ್ತವಾಗಿದೆ. ದೇವರನ್ನೂ ಯೇಸು ಕ್ರಿಸ್ತನನ್ನೂ ಅರಿಯುವ ಮೂಲಕ ದೊರೆಯುವ ಈ ನಿತ್ಯಜೀವದ ವರವು, ಯುಗಯುಗಾಂತರಗಳಿಂದ ಪ್ರತಿಧ್ವನಿಸುತ್ತಿರುವ ಆಹ್ವಾನವಾಗಿದೆ — ಇಂದಿನ ವಿಶ್ವಾಸಿಗಳಿಗೆ ಜೀವನಾಡಿಯಂತಿದ್ದು, ನಂಬಿಕೆ ಮತ್ತು ಪ್ರೀತಿಗೆ ತೀವ್ರವಾಗಿ ಹಂಬಲಿಸುವ ಜಗತ್ತಿಗೆ ಆ ಸಂದೇಶವನ್ನು ಸಾರುವ ಕರೆಯಾಗಿದೆ.

ವಂದನೀಯ ಗುರು ಲೂಕ್ ಗ್ರೆಗೊರಿ, OFM, ಪವಿತ್ರ ಭೂಮಿಯ ಪಾಲಕರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

15 ಮೇ 2026, 23:07