ಪ್ರಭುವಿನ ದಿನದ ಧ್ಯಾನ: ದೇವರು ಸವಾಲುಗಳನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿ
ಲೇಖಕರು: ಜೆನ್ನಿ ಕ್ರಾಸ್ಕಾ
ವಾರದ ಮೊದಲ ದಿನದ ಸಂಜೆ, ಶಿಷ್ಯರು ಬಾಗಿಲುಗಳನ್ನು ಮುಚ್ಚಿಕೊಂಡು ಒಟ್ಟಾಗಿ ಸೇರಿಕೊಂಡಿದ್ದರು. ಭಯ ಮತ್ತು ಅನಿಶ್ಚಿತತೆಯ ನಡುವೆ, ತಮ್ಮ ಭವಿಷ್ಯ ಏನಾಗಬಹುದು ಎಂಬ ಚಿಂತೆಯಲ್ಲಿ ಅವರು ಇದ್ದರು.
ಅವರು ಯೇಸುವಿನ ನೋವು ಮತ್ತು ಮರಣವನ್ನು ಕಂಡಿದ್ದರು. ತಮ್ಮ ವೈಫಲ್ಯಗಳ ಅರಿವೂ ಅವರಿಗೆ ಚೆನ್ನಾಗಿಯೇ ಇತ್ತು — ಪೇತ್ರನ ನಿರಾಕರಣೆ, ಇತರರ ಪರಾರಿಯಾಗುವಿಕೆ, ತೋಮನ ಸಂದೇಹಗಳು. ಅವರು ಜಯಶಾಲಿ ವೀರರಲ್ಲ. ಅವರು ಭಯಗೊಂಡವರಾಗಿದ್ದರು, ಗಾಯಗೊಂಡವರಾಗಿದ್ದರು ಮತ್ತು ತಮ್ಮ ಅಯೋಗ್ಯತೆಯ ಬಗ್ಗೆ ಆಳವಾದ ಅರಿವು ಹೊಂದಿದ್ದರು.
ಆದರೂ, ಪುನರುತ್ಥಾನಗೊಂಡ ಕ್ರಿಸ್ತ ಅದೇ ಭಯ ತುಂಬಿದ ಕೊಠಡಿಯೊಳಗೆ ಪ್ರವೇಶಿಸಿ,ಅವರ ಮೇಕೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ” (ಯೊವಾನ್ನ 20:22) ಎಂದು ಹೇಳಿದರು.
ಪಂಚಾಶತ್ತಮ ಹಬ್ಬವು ನಮಗೆ ನೆನಪಿಸುವುದೇನೆಂದರೆ, ಪವಿತ್ರಾತ್ಮರ ವರವು ಪರಿಪೂರ್ಣರಿಗೆ ದೊರೆಯುವ ಬಹುಮಾನವಲ್ಲ. ಅದು ದುರ್ಬಲ ಮಾನವರಿಗಾಗಿ ದೇವರು ನೀಡಿದ ವಾಗ್ದಾನವಾಗಿದೆ — ಅವರ ವೈಫಲ್ಯಗಳು ಅಂತಿಮ ಮಾತಾಗುವುದಿಲ್ಲ ಎಂಬ ಭರವಸೆ.
ಶಿಷ್ಯರಿಗೆ ಅವರು ಸ್ವತಃ ಗಳಿಸಿಕೊಳ್ಳಲಾಗದ ಒಂದು ಮಹಾನ್ ವರ ದೊರೆಯಿತು: ಭವಿಷ್ಯ.
ಪವಿತ್ರಾತ್ಮರು ಭಯದಿಂದ ಅಡಗಿಕೊಂಡಿದ್ದವರನ್ನು ಶುಭಸಂದೇಶವನ್ನು ಭೂಮಿಯ ಅಂಚಿನವರೆಗೂ ಹೊತ್ತುಕೊಂಡು ಹೋಗುವ ಅಪೋಸ್ತಲರಾಗಿ ಪರಿವರ್ತಿಸಿದರು. ಅಂತ್ಯವೆಂದು ಕಂಡದ್ದು, ಹೊಸ ಆರಂಭವಾಯಿತು.
ಅದೇ ಸತ್ಯವು ಇಂದು ನಮ್ಮೊಂದಿಗೂ ಅತ್ಯಂತ ಶಕ್ತಿಯುತವಾಗಿ ಮಾತನಾಡುತ್ತದೆ. ಅನೇಕ ಬಾರಿ ನಾವು ನಮ್ಮ ಮಿತಿಗಳು, ಪಶ್ಚಾತ್ತಾಪಗಳು, ಪಾಪಗಳು ಮತ್ತು ನಿರಾಶೆಗಳ ಭಾರವನ್ನು ಹೊತ್ತುಕೊಂಡೇ ಬದುಕುತ್ತೇವೆ. ನಾವು ಪ್ರೀತಿಸಲು ವಿಫಲವಾದ ಕ್ಷಣಗಳನ್ನು, ದೇವರ ಮೇಲೆ ಭರವಸೆ ಇಡಲು ವಿಫಲವಾದ ಸಂದರ್ಭಗಳನ್ನು, ಅಥವಾ ನಾವು ಆಗಬೇಕೆಂದು ಬಯಸಿದ್ದ ವ್ಯಕ್ತಿಗಳಾಗಲು ಸಾಧ್ಯವಾಗದ ಸಮಯಗಳನ್ನು ನೆನಪಿಸಿಕೊಳ್ಳುತ್ತೇವೆ.
ಮುಚ್ಚಿದ ಬಾಗಿಲುಗಳ ಹಿಂದೆ ಇದ್ದ ಶಿಷ್ಯರಂತೆ, ನಾವು ಸಹ ಕೆಲವೊಮ್ಮೆ ಭಯದ ಬಂಧನದಲ್ಲಿ ಬದುಕುತ್ತೇವೆ — ಭವಿಷ್ಯದ ಭಯ, ತಿರಸ್ಕಾರದ ಭಯ, ಅಥವಾ ನಾವು ವಿಮೋಚನೆಗೆ ಅಯೋಗ್ಯರಾಗಿದ್ದೇವೆ ಮತ್ತು ಬದಲಾಗಲು ಅಸಮರ್ಥರಾಗಿದ್ದೇವೆ ಎಂಬ ಭಯ.
ಆದರೆ ಪಂಚಾಶತ್ತಮ ಒಂದು ಅದ್ಭುತ ಸತ್ಯವನ್ನು ಘೋಷಿಸುತ್ತದೆ: ದೇವರು ನಮ್ಮ ಜೀವನದ ಅತ್ಯಂತ ಕೆಟ್ಟ ಕ್ಷಣದಿಂದ ನಮ್ಮನ್ನು ವ್ಯಾಖ್ಯಾನಿಸುವುದಿಲ್ಲ. ಪವಿತ್ರಾತ್ಮರ ಮೂಲಕ, ನಾವು ಸಾಧ್ಯವಿಲ್ಲವೆಂದು ಭಾವಿಸಿದ್ದ ಸ್ಥಳದಲ್ಲಿಯೂ ದೇವರು ನಿರಂತರವಾಗಿ ಹೊಸ ಭವಿಷ್ಯವನ್ನು ತೆರೆಯುತ್ತಾರೆ.
ಪವಿತ್ರಾತ್ಮರು ದೈವಿಕ ಕರುಣೆಯ ಉಸಿರಾಗಿದ್ದು, ನಮ್ಮ ಜೀವನದ ಒಣಗಿದ ಎಲುಬುಗಳಿಗೆ ಮತ್ತೆ ಭರವಸೆಯನ್ನು ತುಂಬುತ್ತಾರೆ. ಯಾವುದೇ ಗಾಯ ಅತಿಯಾಗಿ ಆಳವಾದದ್ದಲ್ಲ, ಯಾವುದೇ ಪಾಪ ಅತಿಯಾಗಿ ದೊಡ್ಡದಲ್ಲ, ಮತ್ತು ದೇವರ ಪ್ರೀತಿಯ ಶಕ್ತಿಗೆ ಮೀರಿದ ಅಂತಿಮ ವೈಫಲ್ಯ ಯಾವುದೂ ಇಲ್ಲ ಎಂದು ಪವಿತ್ರಾತ್ಮರು ಮೃದುವಾಗಿ ತಿಳಿಸುತ್ತಾರೆ.
ಯೇಸು ಪವಿತ್ರಾತ್ಮರನ್ನು ಕ್ಷಮೆಯ ಸಂಸ್ಕಾರದೊಂದಿಗೆ ನೀಡುವುದು ಅತ್ಯಂತ ಮನಮುಟ್ಟುವ ಸಂಗತಿಯಾಗಿದೆ: “ನೀವು ಯಾರ ಪಾಪಗಳನ್ನು ಕ್ಷಮಿಸುವಿರೋ ಅವರಿಗೆ ಅವು ಕ್ಷಮಿಸಲ್ಪಡುವವು” (ಯೊವಾನ್ನ 20:23). ದೇವರು ನಮಗೆ ನೀಡುವ ಭವಿಷ್ಯವು, ನಮ್ಮ ಪಾಪಗಳು ಎಂದಿಗೂ ನಡೆದಿಲ್ಲವೆಂದು ನಟಿಸುವುದರ ಮೇಲೆ ನಿರ್ಮಿತವಾಗಿಲ್ಲ. ಬದಲಾಗಿ, ಅದು ಕರುಣೆಯ ಮೇಲೆ ನಿರ್ಮಿತವಾಗಿದೆ.
ಪವಿತ್ರಾತ್ಮರು ನಮಗೆ ಮತ್ತೆ ಹೊಸದಾಗಿ ಆರಂಭಿಸುವ ಅವಕಾಶವನ್ನು ನೀಡುತ್ತಾರೆ. ಪ್ರತಿಯೊಂದು ಪಾಪಸ್ವೀಕಾರದಲ್ಲೂ, ಪ್ರತಿಯೊಂದು ಸೌಹಾರ್ದತೆಯ ಕಾರ್ಯದಲ್ಲೂ, ಪ್ರತಿಯೊಂದು ಕೃಪೆಯ ಕ್ಷಣದಲ್ಲೂ, ದೇವರು ನಮ್ಮ ನಾಳೆಯ ಸಾಧ್ಯತೆಯನ್ನು ಮತ್ತೆ ಪುನಃಸ್ಥಾಪಿಸುತ್ತಾರೆ.
ಧರ್ಮಸಭೆಯೇ ಈ ವರದಿಂದ ಜನ್ಮತಾಳಿತು. ಅದು ಪರಿಪೂರ್ಣರ ಸಮುದಾಯವಲ್ಲ; ಕ್ಷಮಿಸಲ್ಪಟ್ಟ ಪಾಪಿಗಳು ಕೃಪೆಯ ಮೇಲೆ ಭರವಸೆ ಇಡಲು ಕಲಿಯುತ್ತಿರುವ ಸಮುದಾಯವಾಗಿದೆ.
ಪಂಚಾಶತ್ತಮ ಕೇವಲ ಅದ್ಭುತ ಅಗ್ನಿಜ್ವಾಲೆಗಳ ಅಥವಾ ಅಲೌಕಿಕ ಭಾಷಣಗಳ ಕುರಿತಲ್ಲ. ಅದು ದೇವರು ಮಾನವಕುಲವನ್ನು ನಿರಾಶೆಗೆ ಬಿಟ್ಟುಕೊಡಲು ನಿರಾಕರಿಸುವುದರ ಕುರಿತಾಗಿದೆ. ಅದು ಕ್ರಿಸ್ತರು ಭಯಭೀತ ಹೃದಯಗಳಲ್ಲಿ ಜೀವದ ಉಸಿರನ್ನು ತುಂಬಿ, ಸಾಮಾನ್ಯ ಜನರನ್ನು ಧೈರ್ಯ ಮತ್ತು ಭರವಸೆಯೊಂದಿಗೆ ಲೋಕದೊಳಗೆ ಕಳುಹಿಸುವುದರ ಕುರಿತಾಗಿದೆ.
ವಿಭಜನೆ, ಹಿಂಸಾಚಾರ, ನಿರಾಶಾವಾದ ಮತ್ತು ಅನಿಶ್ಚಿತತೆಯಿಂದ ಗುರುತಿಸಲ್ಪಟ್ಟಿರುವ ಇಂದಿನ ಜಗತ್ತಿನಲ್ಲಿ, ಪಂಚಾಶತ್ತಮ ನಮಗೆ ದೇವರು ಇನ್ನೂ ತನ್ನ ಜನರ ಮೇಲೆ ಉಸಿರೆಳೆಯುತ್ತಾನೆ ಎಂಬುದನ್ನು ನೆನಪಿಸುತ್ತದೆ. ನಾವು ಕೇವಲ ಮುಚ್ಚಿದ ದಾರಿಗಳನ್ನು ಮಾತ್ರ ಕಾಣುವ ಸ್ಥಳಗಳಲ್ಲಿ ಸಹ, ಪವಿತ್ರಾತ್ಮರು ಹೊಸ ಆರಂಭಗಳನ್ನು ಸೃಷ್ಟಿಸುತ್ತಲೇ ಇದ್ದಾರೆ.
ಮತ್ತು ಬಹುಶಃ ಅದುವೇ ಅತಿದೊಡ್ಡ ಅದ್ಭುತ: ನಮ್ಮ ಎಲ್ಲಾ ದುರ್ಬಲತೆಗಳ ನಡುವೆಯೂ ದೇವರು ನಮ್ಮನ್ನು ನೋಡಿ, ತನ್ನ ಧ್ಯೇಯವನ್ನೂ, ತನ್ನ ಕರುಣೆಯನ್ನೂ, ತನ್ನ ಭವಿಷ್ಯವನ್ನೂ ಇನ್ನೂ ನಮಗೆ ಒಪ್ಪಿಸುತ್ತಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).