ಜೆರುಸಲೇಮಿನ ಹಳೆಯ ನಗರ ಜೆರುಸಲೇಮಿನ ಹಳೆಯ ನಗರ 

ಜೆರುಸಲೇಮ್‌ನಲ್ಲಿ ಫ್ರೆಂಚ್ ಮೂಲದ ಧಾರ್ಮಿಕ ಸಹೋದರಿಯ ಮೇಲೆ ನಡೆದ ದಾಳಿಯ ಪ್ರಕರಣದಲ್ಲಿ ಶಂಕಿತನ ಬಂಧನ

ಇಸ್ರಾಯೇಲಿ ಪೊಲೀಸರು, ಜೆರುಸಲೆಮ್‌ನಲ್ಲಿರುವ ಫ್ರೆಂಚ್ ಬೈಬಲ್ ಅಧ್ಯಯನ ಶಾಲೆ ಮತ್ತು ಪುರಾತತ್ವ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕಿಯಾಗಿ ಕೆಲಸಮಾಡುತ್ತಿರುವ ಫ್ರೆಂಚ್ ಮೂಲದ ಧಾರ್ಮಿಕ ಸಹೋದರಿಯ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ವ್ಯಾಟಿಕನ್ ವರದಿ

“ದ್ವೇಷದ ಈ ಕಾಟವು ನಮ್ಮೆಲ್ಲರಿಗೂ ಸಾಮಾನ್ಯ ಸವಾಲಾಗಿದೆ,” ಎಂದು ಜೆರುಸಲೇಮ್‌ನ ಫ್ರೆಂಚ್ ಬೈಬಲ್ ಅಧ್ಯಯನ ಶಾಲೆ ಮತ್ತು ಪುರಾತತ್ವ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಆಲಿವಿಯರ್ ಪೋಕ್ವಿಲ್ಲನ್ ಅವರು ಗುರುವಾರ X ನಲ್ಲಿ ಬರೆದಿದ್ದಾರೆ.

ಅವರು ಏಪ್ರಿಲ್ 28 ಮಂಗಳವಾರ ಅರಸ ದಾವೀದನ ಸಮಾಧಿಯ ಸಮೀಪ ನಡೆದ ಈ ದಾಳಿಯನ್ನು ಉಲ್ಲೇಖಿಸಿದರು. 48 ವರ್ಷದ ಫ್ರೆಂಚ್ ಧಾರ್ಮಿಕ ಸಹೋದರಿ ಮತ್ತು ಸಂಶೋಧಕಿ ಒಬ್ಬರನ್ನು ಒಬ್ಬ ವ್ಯಕ್ತಿ ಬೆನ್ನಟ್ಟಿ ನೆಲಕ್ಕೆ ತಳ್ಳಿದ ಬಳಿಕ  ಒದ್ದಿದ್ದಾನೆ. ಪೊಲೀಸರು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಆ ಸಹೋದರಿಯ ಮುಖದ ಬಲಭಾಗದಲ್ಲಿ ಗಾಯದ ಗುರುತುಗಳು ಕಾಣಿಸುತ್ತವೆ.

ಧಾರ್ಮಿಕ ಸೇವಕ-ಸೇವಕಿಯರ ವಿರುದ್ಧ ಹಿಂಸಾಚಾರ

ಬುಧವಾರ, ಇಸ್ರಾಯೇಲಿ ಪೊಲೀಸರು ಧಾರ್ಮಿಕ ಸಹೋದರಿಯ ಮೇಲೆ ದಾಳಿ ನಡೆಸಿದ ಶಂಕಿತ 36 ವರ್ಷದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಘೋಷಿಸಿದರು. ಕಾನೂನು ಜಾರಿಗೊಳಿಸುವ ಸಂಸ್ಥೆಗಳು “ಜಾತ್ಯಾತೀತ ಉದ್ದೇಶದಿಂದ ಪ್ರೇರಿತವಾಗಿರಬಹುದಾದ ಮತ್ತು ಧಾರ್ಮಿಕ ಸೇವಕ-ಸೇವಕಿಯರನ್ನು ಗುರಿಯಾಗಿಸಿಕೊಂಡ ಹಿಂಸಾಚಾರದ ಯಾವುದೇ ಕೃತ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತವೆ” ಎಂದು ಅವರು ತಿಳಿಸಿದರು.

ದಾಳಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ, ಆಲಿವಿಯರ್ ಪೋಕ್ವಿಲ್ಲನ್ ಅವರು “ದಾಳಿಯ ವೇಳೆ ಸಹಾಯಕ್ಕೆ ಬಂದವರು, ಹಾಗೆಯೇ ಬೆಂಬಲ ನೀಡಿದ ರಾಜತಾಂತ್ರಿಕರು, ವಿದ್ಯಾವಂತರೂ ಹಾಗೂ ಎಲ್ಲರಿಗೂ” ಕೃತಜ್ಞತೆಗಳನ್ನು ಸಲ್ಲಿಸಿದರು.

ಆರಾಧನೆಯ ಸ್ವಾತಂತ್ರ್ಯದ ಸಂರಕ್ಷಣೆ

ಇತ್ತೀಚಿನ ದಿನಗಳಲ್ಲಿ, ಜೆರುಸಲೇಮ್‌ನ ಫ್ರೆಂಚ್ ಬೈಬಲ್ ಅಧ್ಯಯನ ಶಾಲೆ ಮತ್ತು ಪುರಾತತ್ವ ಸಂಶೋಧನಾ ಕೇಂದ್ರದ ನಿರ್ದೇಶಕರು ಧಾರ್ಮಿಕ ಸಹೋದರಿಯ ಮೇಲೆ ನಡೆದ “ಪ್ರಚೋದನೆ ಇಲ್ಲದ ದಾಳಿ”ಯನ್ನು ಖಂಡಿಸಿ, ನಡೆದ ಘಟನೆಯನ್ನು ತೀವ್ರವಾಗಿ ವಿರೋಧಿಸಿದರು.

ಇಸ್ರಾಯೇಲ್ ವಿದೇಶಾಂಗ ಸಚಿವಾಲಯವು X ನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಈ ಘಟನೆ “ನಾಚಿಕೆಗೇಡಿನ ಕೃತ್ಯ” ಎಂದು ಹೇಳಿ, ಇಸ್ರಾಯೇಲ್ ಎಲ್ಲಾ ಧರ್ಮಗಳಿಗಾಗಿ “ ಧಾರ್ಮಿಕ ಹಾಗೂ ಆರಾಧನಾ ಸ್ವಾತಂತ್ರ್ಯವನ್ನು ಕಾಪಾಡುವ ಬದ್ಧತೆಯನ್ನು” ಪುನರುಚ್ಚರಿಸಿತು.

ಶಂಕಿತ ವ್ಯಕ್ತಿ “ಇನ್ನೂ ಬಂಧನದಲ್ಲಿಯೇ ಇದ್ದಾನೆ” ಎಂದು ಸಚಿವಾಲಯ ತಿಳಿಸಿದ್ದು, “ಹಿಂಸಾಚಾರದ ವಿರುದ್ಧದ ದೃಢ ನೀತಿ ಮತ್ತು ಅಪರಾಧಿಗಳನ್ನು ಶೀಘ್ರವಾಗಿ ನ್ಯಾಯಕ್ಕೆ ಒಪ್ಪಿಸುವ ತನ್ನ ಸಂಕಲ್ಪ”ವನ್ನು ಒತ್ತಿಹೇಳಿತು. “ನಿರಪರಾಧಿಗಳ ಮೇಲೆ, ವಿಶೇಷವಾಗಿ ಧಾರ್ಮಿಕ ಸಮುದಾಯದ ಸದಸ್ಯರ ಮೇಲೆ ನಡೆಯುವ ಹಿಂಸಾಚಾರಕ್ಕೆ ನಮ್ಮ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ,” ಎಂದು ಪ್ರಕಟಣೆ ಸೇರಿಸಿದೆ.

ಹೆಚ್ಚುತ್ತಿರುವ ವೈಷಮ್ಯ

ಜೆರುಸಲೇಮ್‌ನ  ಹೀಬ್ರೂ ವಿಶ್ವವಿದ್ಯಾಲಯದ ಮಾನವೀಯ ಶಾಸ್ತ್ರ ವಿಭಾಗವು ಕೂಡ ಈ ದಾಳಿಯ ಬಗ್ಗೆ “ಗಾಢ ಆಘಾತ” ವ್ಯಕ್ತಪಡಿಸಿ ಪ್ರಕಟಣೆಯಲ್ಲಿ ಅದನ್ನು ಖಂಡಿಸಿದೆ. “ಇದು ಪ್ರತ್ಯೇಕ ಘಟನೆ ಅಲ್ಲ; ಕ್ರೈಸ್ತ ಸಮುದಾಯ ಮತ್ತು ಅದರ ಚಿಹ್ನೆಗಳ ವಿರುದ್ಧ ಹೆಚ್ಚುತ್ತಿರುವ ವೈಷಮ್ಯದ ಆತಂಕಕಾರಿ ಮಾದರಿಯ ಭಾಗವಾಗಿದೆ,” ಎಂದು ವಿಭಾಗ ತಿಳಿಸಿದೆ.

ಏಪ್ರಿಲ್ ಆರಂಭದಲ್ಲಿ, ದಕ್ಷಿಣ ಲೆಬನಾನ್‌ನ ದೇಬೆಲ್ ಗ್ರಾಮದಲ್ಲಿ ಯೇಸುವಿನ ಪ್ರತಿಮೆಯನ್ನು ಹಾನಿಗೊಳಿಸಿದ ಕಾರಣಕ್ಕೆ ಇಸ್ರಾಯೇಲಿ ಸೇನೆ ಇಬ್ಬರು ಸೈನಿಕರನ್ನು ವಜಾಗೊಳಿಸಿತ್ತು—ಈ ಘಟನೆ ವ್ಯಾಪಕ ಖಂಡನೆಯನ್ನು ಉಂಟುಮಾಡಿತ್ತು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

01 ಮೇ 2026, 18:46