ಕಾರಿತಾಸ್ ಉಕ್ರೇನ್ ಕಾರಿತಾಸ್ ಉಕ್ರೇನ್ 

ಉಕ್ರೇನ್: ಬೆಲಾರಸ್ ಗಡಿಯಲ್ಲಿ ಸ್ಥಳಾಂತರಿತರಿಗೆ ಬೆಂಬಲ ನೀಡುತ್ತಿರುವ ಕಾರಿತಾಸ್

ಪ್ರಸ್ತುತ ಉಕ್ರೇನಿನ ನಾಗರಿಕರಿಗೆ ತೆರೆಯಲ್ಪಟ್ಟಿರುವ ಏಕೈಕ ಮಾನವೀಯ ದಾರಿಯೆಂದರೆ ಮೊಕ್ರಾನಿ–ಡೊಮಾನೋವೆ ಗಡಿ ತಪಾಸಣಾ ಕೇಂದ್ರ. ಕಳೆದ ಒಂದು ವರ್ಷದಲ್ಲಿ ಕಾರಿತಾಸ್ ಉಕ್ರೇನ್ ಮತ್ತು ಇತರ ಸಂಸ್ಥೆಗಳು ಇಲ್ಲಿ 2,500ಕ್ಕೂ ಹೆಚ್ಚು ಸ್ಥಳಾಂತರಿತರಿಗೆ ನೆರವು ನೀಡಿವೆ.

ಲೇಖಕರು: ಸ್ವಿತ್ಲಾನಾ ದುಖೊವಿಚ್

ರಷ್ಯಾ ಫೆಡರೇಷನ್ ಆಕ್ರಮಿಸಿಕೊಂಡ ಪ್ರದೇಶಗಳಿಂದ ಹೊರಬಂದು, ಕೀವ್ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ತಲುಪಲು ಉಕ್ರೇನಿಯನ್ನರು ಅನುಸರಿಸಬೇಕಾಗಿರುವ ಮಾರ್ಗದಲ್ಲಿ ಒಂದು ಕಹಿ ವ್ಯಂಗ್ಯ ಅಡಗಿದೆ. ಉಕ್ರೇನ್‌ಗೆ ನೇರವಾಗಿ ಪ್ರವೇಶಿಸುವ ಬದಲು, ಅವರು ರಷ್ಯಾ ಮತ್ತು ಬೆಲಾರಸ್ ಮೂಲಕ ಪ್ರಯಾಣಿಸಬೇಕಾಗುತ್ತದೆ. ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣ, ಅನೇಕ ತಪಾಸಣೆ ಕ್ರಮಗಳು ಮತ್ತು ಗಂಟೆಗಳ ಪರಿಶೀಲನೆಗಳ ನಂತರ, ಅವರು ಕೊನೆಗೆ ಬೆಲಾರಸ್ ಗಡಿಯಲ್ಲಿರುವ ವೋಲಿನ್ ಪ್ರದೇಶದ ಮೊಕ್ರಾನಿ–ಡೊಮಾನೋವೆ ಗಡಿ ತಪಾಸಣಾ ಕೇಂದ್ರಕ್ಕೆ ತಲುಪುತ್ತಾರೆ. ಇದೇ ಇಂದು ಉಕ್ರೇನಿನ ನಾಗರಿಕರಿಗಾಗಿ ತೆರೆಯಲ್ಪಟ್ಟಿರುವ ಏಕೈಕ ಸಕ್ರಿಯ ಮಾನವೀಯ ದಾರಿಯಾಗಿದೆ. ಉಕ್ರೇನ್ ತಲುಪುವ ಹೊತ್ತಿಗೆ, ಅವರಲ್ಲಿ ಅನೇಕರು ಸಂಪೂರ್ಣವಾಗಿ ದಣಿದಿರುತ್ತಾರೆ, ಮಾನಸಿಕ ಆಘಾತಕ್ಕೆ ಒಳಗಾಗಿರುತ್ತಾರೆ ಮತ್ತು ತುರ್ತು ಸಹಾಯದ ಅಗತ್ಯದಲ್ಲಿರುತ್ತಾರೆ.

ಕಾರಿತಾಸ್‌ನ ಬೆಂಬಲ

ಸ್ಥಳಾಂತರಿತರಿಗೆ ನೆರವು ನೀಡುತ್ತಿರುವ ಮಾನವೀಯ ಸಂಸ್ಥೆಗಳಲ್ಲಿ ಒಂದಾದ ಕಾರಿತಾಸ್ ಉಕ್ರೇನ್, 2025ರ ಫೆಬ್ರವರಿಯಿಂದ ಈ ಗಡಿ ತಪಾಸಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. “ನಮ್ಮ ಕಾರ್ಯವು ಜನರ ಅಗತ್ಯಗಳು ಮತ್ತು ಅವರು ತಲುಪುವ ಸಂದರ್ಭಗಳಿಂದ ಆರಂಭವಾಗುತ್ತದೆ,” ಎಂದು ಕಾರಿತಾಸ್ ಉಕ್ರೇನ್‌ನ ಉಪಾಧ್ಯಕ್ಷ ಹ್ರಿಹೊರಿಯಿ ಸೆಲೆಶ್ಚುಕ್ ವಿವರಿಸಿದರು. “ಆರಂಭದಲ್ಲಿ, ಅಗತ್ಯಗಳು ಬಹಳ ಪ್ರಾಯೋಗಿಕವಾಗಿದ್ದವು. ಜನರು ತಮ್ಮ ಮುಂದಿನ ಪ್ರಯಾಣವನ್ನು ಮುಂದುವರಿಸಲು ಯಾವುದೇ ಸಾಧನಗಳಿಲ್ಲದೆ ಮತ್ತು ಸಾರಿಗೆ ಸೌಲಭ್ಯವಿಲ್ಲದೆ ಗಡಿ ತಲುಪುತ್ತಿದ್ದರು. ಆದ್ದರಿಂದ ನಾವು ಪ್ರಯಾಣ ವ್ಯವಸ್ಥೆಗಳನ್ನು ಕಲ್ಪಿಸಿದೆವು, ವಿಶೇಷವಾಗಿ ಒಬ್ಬರೇ ಪ್ರಯಾಣಿಸುತ್ತಿದ್ದ ವಯೋವೃದ್ಧರಿಗೆ ಮತ್ತು ಚಲನೆಯ ಅಸೌಕರ್ಯ ಹೊಂದಿದ್ದವರಿಗೆ, ಏಕೆಂದರೆ ಅವರು ಈ ಸಂಕೀರ್ಣ ಪ್ರಯಾಣವನ್ನು ಸ್ವತಃ ನಿರ್ವಹಿಸಲು ಬೇಕಾದ ಸಂಪನ್ಮೂಲಗಳನ್ನು ಹೊಂದಿರಲಿಲ್ಲ.” “ಆಕ್ರಮಿತ ಪ್ರದೇಶಗಳಿಂದ ಬರುವ ಈ ಪ್ರಯಾಣವು ಸಾಮಾನ್ಯವಾಗಿ ಮೂರು, ನಾಲ್ಕು ಅಥವಾ ಐದು ದಿನಗಳವರೆಗೂ ಮುಂದುವರಿಯುತ್ತದೆ, ಮತ್ತು ಅನೇಕ ಬಾರಿ ವಾಹನ ಬದಲಾವಣೆಗಳನ್ನು ಒಳಗೊಂಡಿರುತ್ತದೆ. ಇದು ದೀರ್ಘ ಮತ್ತು ಅತ್ಯಂತ ದಣಿವಿನ ಪ್ರಯಾಣವಾಗಿದೆ. ಅವರ ಮಾನವೀಯ ಗೌರವವನ್ನು ಕಾಪಾಡುತ್ತಾ, ಅವರು ಸ್ವಾಗತಿಸಲ್ಪಟ್ಟಿದ್ದಾರೆ ಮತ್ತು ಗುರುತಿಸಲ್ಪಟ್ಟಿದ್ದಾರೆ ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಈ ಅಗತ್ಯಗಳಿಗೆ ಸ್ಪಂದಿಸುವುದು ನಮಗೆ ಅತ್ಯಂತ ಮುಖ್ಯವಾಗಿತ್ತು,” ಎಂದು ಅವರು ಹೇಳಿದರು.

ಗಡಿಯಾಚೆಯ ಮಾನವೀಯ ದುರಂತಗಳು

ಕಾಲಕ್ರಮೇಣ, ಇನ್ನೂ ಅನೇಕ ತುರ್ತು ಅಗತ್ಯಗಳು ಸ್ಪಷ್ಟವಾಗಿ ಕಾಣಿಸತೊಡಗಿದವು ಎಂದು ಸೆಲೆಶ್ಚುಕ್ ಹೇಳಿದರು. ಅನೇಕ ಜನರ ಬಳಿ ಉಕ್ರೇನ್ ಒಳಗೆ ಮುಂದಿನ ಪ್ರಯಾಣವನ್ನು ಮುಂದುವರಿಸಲು ಟಿಕೆಟ್ ಖರೀದಿಸಲು ಹಣವೇ ಇರಲಿಲ್ಲ. ಆದ್ದರಿಂದ ಅವರಿಗಾಗಿ ಟಿಕೆಟ್‌ಗಳನ್ನು ಖರೀದಿಸಲಾಯಿತು. ಅದೇ ಸಮಯದಲ್ಲಿ, ರೈಲು ಅಥವಾ ಬಸ್‌ಗಾಗಿ ಕಾಯುವ ಸಮಯ ಮೂರು, ಐದು ಅಥವಾ ಏಳು ಗಂಟೆಗಳವರೆಗೆ ಮುಂದುವರಿಯುತ್ತಿತ್ತು. ಆ ಸಮಯದಲ್ಲಿ, ಬಿಸಿ ಊಟ ಅಥವಾ ತಿನ್ನಲು ಏನಾದರೂ ನೀಡುವುದು, ಕನಿಷ್ಠ ಸ್ವಲ್ಪ ಮಟ್ಟಿನ ಕಾಳಜಿ ಮತ್ತು ಆತಿಥ್ಯದ ಅನುಭವವನ್ನು ಜನರಿಗೆ ನೀಡುವ ಮಹತ್ವದ ಮಾರ್ಗವಾಗಿತ್ತು.

“ಒಬ್ಬ ಮಹಿಳೆ ತನ್ನ 14 ಮತ್ತು 16 ವರ್ಷದ ಇಬ್ಬರು ಮಕ್ಕಳೊಂದಿಗೆ ಆಕ್ರಮಿತ ಪ್ರದೇಶದಿಂದ ಹೊರಬರುವುದರಲ್ಲಿ ಯಶಸ್ವಿಯಾದರು,” ಎಂದು ಅವರು ನೆನಪಿಸಿಕೊಂಡರು. “ಅವರ ಪತಿ ಅಲ್ಲಿ ಸಾವನ್ನಪ್ಪಿದ್ದರು, ಮತ್ತು ಅವರ ಎಲ್ಲಾ ದಾಖಲೆಗಳು ನಾಶವಾಗಿದ್ದವು. ಮುಂದೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬುದರ ಅರಿವಿಲ್ಲದೆ, ದಾಖಲೆಗಳಿಲ್ಲದೆ, ಯಾವುದೂ ಇಲ್ಲದೆ ಅವರು ತಮ್ಮ ಮಕ್ಕಳೊಂದಿಗೆ ಮಾತ್ರ ಇಲ್ಲಿಗೆ ತಲುಪಿದರು.”

ಇಂತಹ ಸಂದರ್ಭಗಳಲ್ಲಿ, ಕಾರಿತಾಸ್‌ನ ಪ್ರಕರಣ ನಿರ್ವಹಣಾಧಿಕಾರಿಗಳು ಮತ್ತು ಸಂಕಷ್ಟ ಸಲಹೆಗಾರರು ಗಡಿಗೆ ಬರುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸಹಾಯ ಮಾಡುತ್ತಾರೆ. ದಾಖಲೆಗಳನ್ನು ಮರುಪಡೆಯಲು, ಉಕ್ರೇನಿನ ದಾಖಲೆ ಸಂಗ್ರಹಾಲಯಗಳಲ್ಲಿ ಗುರುತು ದೃಢೀಕರಣಕ್ಕಾಗಿ ಮಾಹಿತಿ ಹುಡುಕಲು ಮತ್ತು ಜನರು ತಮ್ಮ ಜೀವನವನ್ನು ಮರುನಿರ್ಮಿಸಿಕೊಳ್ಳಲು ಸಾಧ್ಯವಾಗುವಂತೆ ಕಾನೂನು ಸಹಾಯವನ್ನೂ ಅವರು ಒದಗಿಸುತ್ತಾರೆ.

ಮಾನಸಿಕ ಬೆಂಬಲ

“ನಾವು ಮಾನಸಿಕ ಬೆಂಬಲವನ್ನೂ ಒದಗಿಸುತ್ತೇವೆ,” ಎಂದು ಕಾರಿತಾಸ್ ಉಕ್ರೇನ್‌ನ ಉಪಾಧ್ಯಕ್ಷರು ಒತ್ತಿಹೇಳಿದರು. “ಏಕೆಂದರೆ ಅನೇಕ ಜನರು ತೀವ್ರ ಆತಂಕದ ಸ್ಥಿತಿಯಲ್ಲಿ, ದಿಕ್ಕುತೋಚದೆ ಮತ್ತು ಗೊಂದಲದಲ್ಲಿಯೇ ಇಲ್ಲಿಗೆ ತಲುಪುತ್ತಾರೆ. ಕೆಲವರು 2022ರ ಮುಂಚೆಯೇ ಹಲವು ವರ್ಷಗಳಿಂದ ಉಕ್ರೇನ್ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಬಂದಿರಲಿಲ್ಲ.ಗಡಿಯನ್ನು ತಲುಪಲು ಅವರು ವಿವಿಧ ತಪಾಸಣೆಗಳು ಮತ್ತು ಶೋಧನಾ ಪ್ರಕ್ರಿಯೆಗಳನ್ನು ಎದುರಿಸಬೇಕಾಗಿತ್ತು ಎಂಬುದನ್ನೂ ನಾವು ತಿಳಿದಿದ್ದೇವೆ. ಅವರು ಆಳವಾದ ಭಯ ಮತ್ತು ಒತ್ತಡದ ಸ್ಥಿತಿಯಲ್ಲಿ ಬರುತ್ತಾರೆ. ಅದಕ್ಕಾಗಿಯೇ ಮಾನಸಿಕ ಬೆಂಬಲ ಅತ್ಯಂತ ಅಗತ್ಯವಾಗಿದೆ,” ಎಂದು ಅವರು ಹೇಳಿದರು.

ಮೊಕ್ರಾನಿ–ಡೊಮಾನೋವೆ ಗಡಿ ತಪಾಸಣಾ ಕೇಂದ್ರದಲ್ಲಿ, ಕಾರಿತಾಸ್ ಉಕ್ರೇನ್ ಒಂಬುಡ್ಸ್‌ಮನ್ ಕಚೇರಿಯೊಂದಿಗೆ ನಿಕಟವಾಗಿ ಸಹಕರಿಸುತ್ತದೆ. “ಈ ಜಾಲತಾಣದ ಮೂಲಕ, ನಾವು ಅತೀ ದುರ್ಬಲ ಪರಿಸ್ಥಿತಿಯಲ್ಲಿರುವ ಜನರು, ವೈದ್ಯಕೀಯ ನೆರವಿನ ಅಗತ್ಯವಿರುವವರು ಅಥವಾ ಚಲನೆಯ ಅಸೌಕರ್ಯ ಹೊಂದಿರುವವರ ಕುರಿತು ಅನೇಕ ವರದಿಗಳನ್ನು ಪಡೆಯುತ್ತೇವೆ,” ಎಂದು ಸೆಲೆಶ್ಚುಕ್ ವಿವರಿಸಿದರು. “ಈ ಪ್ರಕರಣಗಳ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳುತ್ತೇವೆ, ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸಹಾಯ ಮಾಡುತ್ತೇವೆ ಮತ್ತು ಉಕ್ರೇನ್‌ನಲ್ಲಿ ಅವರಿಗೆ ಅಗತ್ಯವಿರುವ ಸೇವೆಗಳನ್ನು ಪಡೆಯಲು ಬೆಂಬಲಿಸುತ್ತೇವೆ.”

“ನಾವು ಆರಂಭಿಕ ಹಣಕಾಸಿನ ಸಹಾಯವನ್ನೂ ನೀಡುತ್ತೇವೆ, ಹೀಗೆ ಜನರು ತಮ್ಮ ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಲು ಕನಿಷ್ಠ ಸ್ವಲ್ಪ ಸಂಪನ್ಮೂಲಗಳನ್ನು ಹೊಂದಿ, ಸ್ವಾವಲಂಬನೆಯ ಒಂದು ಮಟ್ಟವನ್ನು ಮರುಪಡೆಯಲು ಸಾಧ್ಯವಾಗುತ್ತದೆ,” ಎಂದು ಅವರು ಹೇಳಿದರು.

ಒಂದು ವರ್ಷದಲ್ಲಿ 2,500ಕ್ಕೂ ಹೆಚ್ಚು ಜನರಿಗೆ ನೆರವು

ಈ ಕಾರ್ಯದಲ್ಲಿ ಹಲವು ಸಂಸ್ಥೆಗಳು ತೊಡಗಿಸಿಕೊಂಡಿವೆ ಮತ್ತು ಈ ಸಹಕಾರ ಅತ್ಯಂತ ಅಗತ್ಯವಾಗಿದೆ, ಏಕೆಂದರೆ ಹಣಕಾಸಿನ ನೆರವು ಯಾವಾಗಲೂ ನಿರಂತರವಾಗಿಯೂ ಅಥವಾ ಒಂದೇ ಸಮಯದಲ್ಲಿ ಲಭ್ಯವಾಗಿಯೂ ಇರುವುದಿಲ್ಲ. ಒಂದು ಸಂಸ್ಥೆಯ ಬಳಿ ಸಂಪನ್ಮೂಲಗಳಿದ್ದು ಮತ್ತೊಂದು ಸಂಸ್ಥೆಯ ಬಳಿ ಇಲ್ಲದಾಗ, ಪರಸ್ಪರ ಬೆಂಬಲ ಮತ್ತು ಜವಾಬ್ದಾರಿ ಹಂಚಿಕೊಳ್ಳುವ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಈ ಸಹಭಾಗಿತ್ವಗಳ ಸಹಾಯದಿಂದ, ಕಾರಿತಾಸ್ ಒಂದು ವರ್ಷದ ಅವಧಿಯಲ್ಲಿ 2,500ಕ್ಕೂ ಹೆಚ್ಚು ಜನರಿಗೆ ನೆರವು ನೀಡಲು ಸಾಧ್ಯವಾಗಿದೆ. “ಕೇವಲ ನಾಲ್ವರು ಸದಸ್ಯರ ಸಣ್ಣ ತಂಡಕ್ಕೆ ಇದು ಅಪಾರ ಕಾರ್ಯವಾಗಿದೆ,” ಎಂದು ಸೆಲೆಶ್ಚುಕ್ ಹೇಳಿದರು.

ಮೇ 19ರ ಮಂಗಳವಾರ, ಉಕ್ರೇನ್–ಬೆಲಾರಸ್ ಗಡಿಯಲ್ಲಿರುವ ಮೊಕ್ರಾನಿ–ಡೊಮಾನೋವೆ ಗಡಿ ತಪಾಸಣಾ ಕೇಂದ್ರಕ್ಕೆ ಸುಮಾರು 30 ರಾಯಭಾರ ಕಚೇರಿಗಳನ್ನು ಪ್ರತಿನಿಧಿಸುವ ನಿಯೋಗ ಭೇಟಿ ನೀಡಿತು. ಈ ನಿಯೋಗಕ್ಕೆ ಉಕ್ರೇನ್‌ನ ಮಾನವ ಹಕ್ಕುಗಳ ಆಯುಕ್ತ ದ್ಮಿತ್ರೊ ಲುಬಿನೆಟ್ಸ್ ನೇತೃತ್ವ ವಹಿಸಿದ್ದರು. UNHCR ಮತ್ತು UNICEF‌ನ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ವಿಶ್ವಸಂಸ್ಥೆಯ ಪ್ರತಿನಿಧಿಗಳೂ ಉಪಸ್ಥಿತರಿದ್ದರು.

“ಈ ಉಪಕ್ರಮದ ಉದ್ದೇಶ, ಈ ಪ್ರಯಾಣವನ್ನು ಮತ್ತು ಇದರಲ್ಲಿ ಭಾಗಿಯಾಗಿರುವ ಜನರು ಎದುರಿಸುವ ಕಠಿಣ ಪರಿಸ್ಥಿತಿಗಳನ್ನು ಜಗತ್ತಿಗೆ ತೋರಿಸುವುದಾಗಿತ್ತು. ವಿಶೇಷವಾಗಿ ಆಕ್ರಮಿತ ಪ್ರದೇಶಗಳಿಂದ ಬರುತ್ತಿರುವ ಮಕ್ಕಳು ಮತ್ತು ಯುವಜನರ ಸ್ಥಿತಿಗೆ ಹೆಚ್ಚಿನ ಗಮನ ನೀಡಲಾಯಿತು”ಎಂದು ಉಪಾಧ್ಯಕ್ಷರು ವಿವರಿಸಿದರು. “ಇದು ಅತ್ಯಂತ ಮಹತ್ವದ ವಿಷಯವಾಗಿದೆ, ಏಕೆಂದರೆ ಕಾರಿತಾಸ್‌ನ ನೆರವು ಪಡೆಯುತ್ತಿರುವವರಲ್ಲಿಯೇ ಸುಮಾರು 400 ಅಪ್ರಾಪ್ತ ವಯಸ್ಕರು ಇದ್ದಾರೆ,” ಎಂದು ಅವರು ಹೇಳಿದರು.

ಅವರು ಸುರಕ್ಷಿತವಾಗಿ ಉಕ್ರೇನ್‌ಗೆ ಮರಳಲು ಅವಕಾಶ ನೀಡುವ ವ್ಯವಸ್ಥೆಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿದೆ. Save Ukraine ಸಂಸ್ಥೆಯ ಸಹಯೋಗದಲ್ಲಿ, ಕಾರಿತಾಸ್ ಉಕ್ರೇನ್ ಮಕ್ಕಳು ಮತ್ತು ಯುವಕರಿಗಾಗಿ ವಿಶೇಷ ಯೋಜನೆಯನ್ನು ನಡೆಸುತ್ತಿದೆ. “ಅವರನ್ನು ಉಕ್ರೇನ್ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಸುರಕ್ಷಿತವಾಗಿ ಸ್ಥಳಾಂತರಿಸುವುದು ಮತ್ತು ದಾಖಲೆಗಳ ಮರುಪಡೆಯುವಿಕೆ ಹಾಗೂ ದೈನಂದಿನ ಜೀವನಕ್ಕೆ ಮರುಸೇರ್ಪಡೆ ಮೂಲಕ ಅವರ ಒಗ್ಗೂಡಿಕೆಗೆ ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶ,” ಎಂದು ಸೆಲೆಶ್ಚುಕ್ ವಿವರಿಸಿದರು. “ಅವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಅಥವಾ ಉಕ್ರೇನ್‌ನಲ್ಲಿ ತಮ್ಮ ಭವಿಷ್ಯವನ್ನು ನಿರ್ಮಿಸಲು ಬಯಸಿದರೆ, ಆ ಪಯಣದಲ್ಲಿ ನಾವು ಅವರ ಜೊತೆಗಿರುತ್ತೇವೆ,” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

26 ಮೇ 2026, 20:02