ವಂ. ಗುರು ಆಗಸ್ಟಿನ್ ಟೋಲ್ಟನ್ (ಚಿತ್ರಕೃಪೆ: ಇಲ್ಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರ) ವಂ. ಗುರು ಆಗಸ್ಟಿನ್ ಟೋಲ್ಟನ್ (ಚಿತ್ರಕೃಪೆ: ಇಲ್ಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರ)  (©Courtesy of the Diocese of Springfield, Illinois)

ಅಮೆರಿಕದ ಮೊದಲ ಕಪ್ಪು ವರ್ಣದ ಯಾಜಕರಾದ ವಂ. ಗುರು ಟೋಲ್ಟನ್‌ಗಾಗಿ ಧರ್ಮಕ್ಷೇತ್ರದಿಂದ ಪುಣ್ಯಕ್ಷೇತ್ರ ನಿರ್ಮಾಣ

ಅಮೆರಿಕದ ಇಲ್ಲಿನಾಯ್ಸ್ ರಾಜ್ಯದ ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರವು, 'ಪೂಜ್ಯ' ಗುರು ಆಗಸ್ಟಿನ್ ಟೋಲ್ಟನ್ ಅವರ ಗೌರವಾರ್ಥ ಪುಣ್ಯಕ್ಷೇತ್ರವನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದೆ. ತಮ್ಮ ಕಾಲದ ಜಾತೀಯ ಭೇದಭಾವ ಮತ್ತು ವಿಭಜನೆಗಳನ್ನು ಮೀರಿ ಬದುಕಿದ ಅವರ ಜೀವನ ಕಥೆ ಇಂದು ಕೂಡ ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುವ ಪ್ರೇರಣೆಯಾಗಿದೆ.

ಲೇಖಕರು: ಇಸಾಬೆಲ್ಲಾ ಹೆಚ್ ಡಿ ಕರ್ವಾಲ್ಹೋ

ಪೂಜ್ಯ ಗುರು ಆಗಸ್ಟಿನ್ ಟೋಲ್ಟನ್—ಅಮೆರಿಕದಲ್ಲಿ ಸಾರ್ವಜನಿಕವಾಗಿ ಗುರುತಿಸಲ್ಪಟ್ಟ ಮೊದಲ ಕಪ್ಪು ವರ್ಣದ ಯಾಜಕರು—19ನೇ ಶತಮಾನದಲ್ಲಿ ದೇಶವನ್ನು ಕಾಡಿದ್ದ ಜಾತೀಯ ಉದ್ವಿಗ್ನತೆ ಮತ್ತು ವಿಭಜನೆಗಳನ್ನು ಮೀರಿ, ಧರ್ಮಸಭೆ ಮತ್ತು ಭಕ್ತರ ಸೇವೆಯಲ್ಲಿ ಸಂಪೂರ್ಣ ಜೀವನವನ್ನು ಕಳೆದರು. ಅವರು ಅನೇಕರ ಪ್ರೀತಿಗೆ ಪಾತ್ರರಾಗಿದ್ದರು.

ಈಗ ಅವರ ಜೀವನ ಮತ್ತು ಸಾಕ್ಷ್ಯ ಇನ್ನೂ ಹೆಚ್ಚಿನ ಜನರನ್ನು ತಲುಪಲಿದ್ದು, ಅವರು ಬೆಳೆದು ಸೇವೆ ಸಲ್ಲಿಸಿದ್ದ ಇಲ್ಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರವು ಏಪ್ರಿಲ್ 29ರಂದು ಕ್ವಿನ್ಸಿ ನಗರದಲ್ಲಿರುವ ಸಂತ ಬೋನಿಫೇಸ್ ದೇವಾಲಯದಲ್ಲಿ ಅವರ ಗೌರವಾರ್ಥ ಪುಣ್ಯಕ್ಷೇತ್ರ ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದೆ.

“ವಂ. ಗುರು ಆಗಸ್ಟಿನ್ ಟೋಲ್ಟನ್ ತಮ್ಮ ಕಾಲದ ಎಲ್ಲಾ ವಿಭಜನೆಗಳನ್ನು ಮೀರಿ ಜಯ ಸಾಧಿಸಿದರು, ಮತ್ತು ಅದನ್ನು ಅವರು ಶಾಂತಿ, ಭರವಸೆ ಮತ್ತು ಪ್ರೀತಿಯ ಮೂಲಕ ಮಾಡಿದರು,” ಎಂದು ವಂ. ಗುರು ಆಗಸ್ಟಿನ್ ಟೋಲ್ಟನ್ ಪುಣ್ಯಕ್ಷೇತ್ರ ಸಮಿತಿಯ ಅಧ್ಯಕ್ಷ ಹಾಗೂ asಕ್ವಿನ್ಸಿಯ ಸೇಂಟ್ ಫ್ರಾನ್ಸಿಸ್ ಸೋಲಾನಸ್ ಧರ್ಮಕೇಂದ್ರದ ಗುರುವಾದ ವಂ. ಗುರು ಸ್ಟೀವನ್ ಅರಿಸ್ಮನ್ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

“ಇಂದು ನಮ್ಮ ಜಗತ್ತಿನಲ್ಲಿ ಕಾಣುತ್ತಿರುವ ವಿಭಜನೆಗಳ ನಡುವೆ ನಾವು ಹೇಗೆ ಬದುಕಬೇಕು ಎಂಬುದನ್ನು ಅವರ ಕಥೆ ನಮಗೆ ಕಲಿಸುತ್ತದೆ,” ಎಂದು ಅವರು ಹೇಳಿದರು.

ವಂ. ಗುರು ಟೋಲ್ಟನ್ ಅವರ ಪವಿತ್ರೀಕರಣ ಪ್ರಕ್ರಿಯೆಯನ್ನು ಅಧಿಕೃತವಾಗಿ 2010ರಲ್ಲಿ ಆರಂಭಿಸಲಾಯಿತು. 2019ರಲ್ಲಿ, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಅವರನ್ನು ‘ಪೂಜ್ಯ’ ಎಂದು ಗುರುತಿಸಿದರು—ಇದು ಸಂತಪದವಿಯ ನಾಲ್ಕು ಹಂತಗಳಲ್ಲಿ ಎರಡನೇ ಹಂತವಾಗಿದೆ. ಅವರ ಮಧ್ಯಸ್ಥಿಕೆಯಿಂದ ಒಂದು ಅದ್ಭುತ ಸಂಭವಿಸಿದೆ ಎಂದು ಮಾನ್ಯತೆ ದೊರೆತರೆ, ಅವರನ್ನು “ಧನ್ಯ” ಎಂದು ಘೋಷಿಸಬಹುದು; ನಂತರ ಎರಡನೇ ಅದ್ಭುತವೂ ದೃಢಪಟ್ಟರೆ ಅವರನ್ನು ಸಂತರೆಂದು ಘೋಷಿಸಲಾಗುತ್ತದೆ.

ವಿಪರೀತ ಪರಿಸ್ಥಿತಿಗಳ ನಡುವೆಯೂ ಅಚಲ ನಂಬಿಕೆಯ ಉದಾಹರಣೆ

ವಂ. ಗುರು ಟೋಲ್ಟನ್ ಅವರು 1854ರಲ್ಲಿ ಮಿಸ್ಸೂರಿಯಲ್ಲಿ ದಾಸ್ಯದಲ್ಲಿದ್ದ ಕುಟುಂಬದಲ್ಲಿ ಜನಿಸಿದರು. ಅವರು ಇನ್ನೂ ಬಾಲಕರಾಗಿದ್ದಾಗಲೇ ತಮ್ಮ ತಾಯಿ ಮತ್ತು ಸಹೋದರ-ಸಹೋದರಿಯರೊಂದಿಗೆ ಇಲಿನಾಯ್ಸ್‌ಗೆ ತಪ್ಪಿಸಿಕೊಂಡು ಕ್ವಿನ್ಸಿ ನಗರದಲ್ಲಿ ನೆಲೆಸಿದರು. 1865ರಲ್ಲಿ ದಾಸ್ಯ ಅಧಿಕೃತವಾಗಿ ರದ್ದುಗೊಂಡಿದ್ದರೂ, ಆಫ್ರಿಕನ್ ಮೂಲದ ಅಮೆರಿಕನ್ನರು ಇನ್ನೂ ಭಾರೀ ಭೇದಭಾವವನ್ನು ಎದುರಿಸುತ್ತಿದ್ದರು. ಕ್ವಿನ್ಸಿಯಲ್ಲಿಯೂ ವಂ. ಗುರು ಟೋಲ್ಟನ್ ಶಿಕ್ಷಣ ಮುಂದುವರಿಸಲು ಎರಡು ಬಾರಿ ಶಾಲೆಯನ್ನು ಬದಲಾಯಿಸಬೇಕಾಯಿತು.

ಅವರು ಧಾರ್ಮಿಕ ವಿಭಜನೆಗಳನ್ನೂ ಎದುರಿಸಿದರು. 24ನೇ ವಯಸ್ಸಿನಲ್ಲಿ ಕ್ವಿನ್ಸಿಯಲ್ಲಿ ಕಪ್ಪು ವರ್ಣದ ಮಕ್ಕಳಿಗಾಗಿ ಮೊದಲ ಶಾಲೆಯನ್ನು ಆರಂಭಿಸಿದಾಗ, ಅವರು ಕಥೋಲಿಕರಾಗಿದ್ದ ಕಾರಣ ಆಫ್ರಿಕನ್ ಅಮೆರಿಕನ್ ಪ್ರೊಟೆಸ್ಟಂಟ್ ಸಮುದಾಯವು ತಮ್ಮ ಮಕ್ಕಳನ್ನು ಅಲ್ಲಿ ಕಳುಹಿಸಲು ನಿರಾಕರಿಸಿತು.

ವೆನರಬಲ್ ಟೋಲ್ಟನ್ ಅವರು ಇದನ್ನು ಉದ್ವಿಗ್ನತೆಯ ಕಾರಣವಾಗಿಯೂ ಅಥವಾ “ತಮ್ಮನ್ನು ಕುಗ್ಗಿಸುವ ವಿಷಯವಾಗಿಯೂ” ಪರಿಗಣಿಸಲಿಲ್ಲ ಎಂದು ವಂ. ಗುರು ಅರಿಸ್ಮನ್ ಒತ್ತಿಹೇಳಿದರು. ಬದಲಾಗಿ, ಅದನ್ನು “ಎಲ್ಲಾ ಜನರನ್ನು ಸ್ವಾಗತಿಸಿ, ನಂಬಿಕೆಯ ಜೀವನದಲ್ಲಿ ಶಿಕ್ಷಣದ ವರವನ್ನು ತೋರಿಸುವ ಅವಕಾಶವಾಗಿ” ಬಳಸಿಕೊಂಡರು.

ವಯಸ್ಸು ಹೆಚ್ಚಾಗುತ್ತಿದ್ದಂತೆ, ವಂ. ಗುರು ಟೋಲ್ಟನ್ ಅವರು ಯಾಜಕತ್ವದ ಕರೆಯನ್ನು ಅರಿತುಕೊಂಡರು. ಆದರೆ ಕಪ್ಪು ವರ್ಣದ ವ್ಯಕ್ತಿಯಾಗಿದ್ದ ಕಾರಣ ಯಾವುದೇ ಅಮೆರಿಕನ್ ಸೆಮಿನರಿಯೂ ಅವರನ್ನು ಸೇರಿಸಿಕೊಳ್ಳಲಿಲ್ಲ. ಆದ್ದರಿಂದ 1880ರಲ್ಲಿ ಅವರನ್ನು ರೋಮ್‌ನ ಪಾಂಟಿಫಿಕಲ್ ಅರ್ಬನ್ ವಿಶ್ವವಿದ್ಯಾಲಯಕ್ಕೆ “ಜನಾಂಗಗಳ ಶುಭ ಸಂದೇಶ ಪ್ರಚಾರ ಸಂಘ”ದ(Propaganda Fidei) ಸೆಮಿನರಿಯನ್ ಆಗಿ ಸೇರಿಸಲಾಯಿತು. ಇದು ಮಿಷನರಿ ಕಾರ್ಯಗಳಿಗೆ ಜವಾಬ್ದಾರಿಯಾಗಿದ್ದ ರೋಮನ್ ಕ್ಯೂರಿಯಾದ ಘಟಕವಾಗಿದ್ದು, ಇಂದಿನ “ಶುಭ ಸಂದೇಶ ಪ್ರಚಾರ ಡಿಕಾಸ್ಟರಿ”ಯಾಗಿದೆ.

1886ರ ಏಪ್ರಿಲ್ 24ರಂದು ರೋಮ್‌ನ ಸಂತ ಜಾನ್ ಲ್ಯಾಟರನ್ ಮಹಾಬಸಿಲಿಕಾದಲ್ಲಿ ಅವರು ಯಾಜಕರಾಗಿ ಅಭಿಷೇಕಗೊಂಡು, ತಮ್ಮ ಮೂಲ ಧರ್ಮಕ್ಷೇತ್ರಕ್ಕೆ ಮರಳಿ ಭಕ್ತರ ಸೇವೆಗೆ ಕಳುಹಿಸಲ್ಪಟ್ಟರು. ಉತ್ಸಾಹಭರಿತ ಬೋಧನೆ, ವಿನಯ ಮತ್ತು ಬಡವರು ಹಾಗೂ ಅಂಚಿನಲ್ಲಿರುವವರ ಕಡೆ ತೋರಿದ ಕಾಳಜಿಯಿಂದ ಅವರು ಪ್ರಸಿದ್ಧರಾದರು.

ವಂ. ಗುರು ಅರಿಸ್ಮನ್ ಅವರ ಪ್ರಕಾರ, ಇಂದು ವಂ. ಗುರು ಟೋಲ್ಟನ್ ಅವರ ಜೀವನದಿಂದ ನಾವು ಕಲಿಯಬೇಕಾದದ್ದು “ಮಹಾ ಪರೀಕ್ಷೆಗಳ ನಡುವೆಯೂ ಅಚಲತೆ, ಕಠಿಣ ಸಂದರ್ಭಗಳಲ್ಲಿಯೂ ಅಚಲತೆ, ಮತ್ತು ನಮ್ಮನ್ನು ರಕ್ಷಿಸುವವರು ಪ್ರಭು ಯೇಸು ಕ್ರಿಸ್ತರು ಎಂಬ ಭರವಸೆಯಲ್ಲಿ ಸ್ಥಿರವಾಗಿರುವುದು.”

ಅವರ ಕಥೆ “ನಮ್ಮ ರಕ್ಷಕರಾದ ಪ್ರಭು ಯೇಸು ಕ್ರಿಸ್ತರೊಂದಿಗೆ ಏಕತೆಯ ಕಥೆಯಾಗಿದ್ದು, ಜೊತೆಗೆ ಪರಸ್ಪರ ಸಾಮರಸ್ಯದಲ್ಲಿ ಬದುಕುವುದು ಹೇಗೆ, ವಿಭಜನೆಗಳು ಮತ್ತು ಉದ್ವಿಗ್ನತೆಗಳನ್ನು ಮೀರಿ ಸಾಮಾನ್ಯ ನೆಲೆಯನ್ನು ಹೇಗೆ ಕಂಡುಕೊಳ್ಳುವುದು ಎಂಬುದನ್ನೂ ಕಲಿಸುವ ಕಥೆಯಾಗಿದೆ.”

ಶಾಂತಿಯ ಮೂಲಕ ಕಷ್ಟದ ವಿರುದ್ಧ ಜಯ 

ಇದಲ್ಲದೆ, ವೆನರಬಲ್ ವಂ. ಗುರು ಟೋಲ್ಟನ್ ಅವರು “ಜಾತೀಯ ವಿಭಜನೆಯ ಕಷ್ಟವನ್ನಷ್ಟೇ ಅಲ್ಲ, ಗುರುಗಳ ಅಸೂಯೆಯನ್ನೂ ಎದುರಿಸಿದರು” ಎಂದು ವಂ. ಗುರು ಅರಿಸ್ಮನ್ ವಿವರಿಸಿದರು. “ಈ ಪ್ರದೇಶದಲ್ಲಿ ಅವರು ಬೋಧಕರಾಗಿಯೂ ಪಾಲಕರಾಗಿಯೂ, ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಅನೇಕ ಗುರುಗಳಿಗೆ ಅವರು ತಮಗಿಂತ ಹೆಚ್ಚು ಜನಪ್ರಿಯರಾಗಿರುವುದು ಇಷ್ಟವಾಗಿರಲಿಲ್ಲ.”

ಈ ಹಿನ್ನೆಲೆದಲ್ಲಿ, ವಂ. ಗುರು ಟೋಲ್ಟನ್ ಅವರು ಸಮೀಪದ ಧರ್ಮಕೇಂದ್ರದ ಜರ್ಮನ್ ಗುರುವಿನಿಂದ ಕಿರುಕುಳ ಮತ್ತು ಭೇದಭಾವವನ್ನು ಎದುರಿಸಬೇಕಾಯಿತು. ಈ ಪರಿಸ್ಥಿತಿಯ ಪರಿಣಾಮವಾಗಿ ಅವರನ್ನು ಚಿಕಾಗೋಗೆ ವರ್ಗಾಯಿಸಲಾಯಿತು. ಅಲ್ಲಿ ಅವರು 1897ರಲ್ಲಿ ಉಷ್ಣಾಘಾತದಿಂದ ನಿಧನರಾಗುವವರೆಗೆ ನಗರದ ಕಪ್ಪು ವರ್ಣದ ಕಥೋಲಿಕರ ಸೇವೆಯಲ್ಲಿ ತೊಡಗಿದ್ದರು. ನಂತರ ಅವರನ್ನು ಕ್ವಿನ್ಸಿಯಲ್ಲಿ ಸಮಾಧಿ ಮಾಡಲಾಯಿತು.

“ಅವರು ತಮ್ಮ ಜೀವನದಲ್ಲಿನ ಪ್ರತಿಯೊಂದು ವಿಭಜನೆ ಮತ್ತು ಪ್ರತಿಯೊಂದು ಕಷ್ಟವನ್ನು ಶಾಂತಿ, ನೆಮ್ಮದಿ ಮತ್ತು ಅಚಲತೆಯೊಂದಿಗೆ ಎದುರಿಸಿದರು. ಇದು ನಾವು ಮಾಡುವ ಕಾರ್ಯಗಳಿಗೂ ನಮ್ಮ ಅಸ್ತಿತ್ವಕ್ಕೂ ಕ್ರಿಸ್ತನನ್ನೇ ಅಡಿಪಾಯವಾಗಿಟ್ಟುಕೊಳ್ಳಬೇಕು ಎಂಬುದನ್ನು ನಮಗೆ ನಿಜವಾಗಿ ಕಲಿಸುತ್ತದೆ,” ಎಂದು ವಂ. ಗುರು ಅರಿಸ್ಮನ್ ಹೇಳಿದರು.

ಜನರನ್ನು ಒಂದಾಗಿಸುವ ಪುಣ್ಯಕ್ಷೇತ್ರ

ಇಂದು ವಂ. ಗುರು ಟೋಲ್ಟನ್ ಅವರ ಜೀವನ ಕಥೆ ಮತ್ತು ಸಾಕ್ಷ್ಯ ಇನ್ನೂ ಜನರನ್ನು ಒಂದಾಗಿಸುತ್ತಿದೆ. ಕ್ವಿನ್ಸಿಯಲ್ಲಿ ನಡೆದ ಪುಣ್ಯಕ್ಷೇತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ರಾಜಕಾರಣಿಗಳು, ಪ್ರೊಟೆಸ್ಟಂಟ್ ಮತ್ತು ಕಥೋಲಿಕ ಪ್ರತಿನಿಧಿಗಳು ಸೇರಿದಂತೆ ವಿವಿಧ ಹಿನ್ನೆಲೆಯ ಜನರು ಭಾಗವಹಿಸಿದ್ದರು.

ಇಲ್ಲಿನಾಯ್ಸ್‌ನ ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಥಾಮಸ್ ಜಾನ್ ಪಾಪ್ರೊಕಿ ಅವರು ಕಾರ್ಯಕ್ರಮದ ವೇಳೆ ಸ್ಮಾರಕ ಫಲಕವನ್ನು ಆಶೀರ್ವದಿಸಿದರು. ಚಿಕಾಗೋದ ನಿವೃತ್ತ ಸಹಾಯಕ ಧರ್ಮಾಧ್ಯಕ್ಷರೂ ಹಾಗೂ ವಂ. ಗುರು ಟೋಲ್ಟನ್ ಅವರ ಪವಿತ್ರೀಕರಣ ಪ್ರಕ್ರಿಯೆಯ ಧರ್ಮಕ್ಷೇತ್ರದ ಪೋಸ್ಟುಲೇಟರ್ ಆಗಿರುವ ಧರ್ಮಾಧ್ಯಕ್ಷ ಅತಿ ವಂದನೀಯ ಜೋಸೆಫ್ ಪೆರಿ ಅವರೂ ಉಪಸ್ಥಿತರಿದ್ದರು.

ವಂ. ಗುರು ಅರಿಸ್ಮನ್ ಅವರು, ವಂ. ಗುರು ಟೋಲ್ಟನ್ “ನಮ್ಮನ್ನು ನಿಜವಾಗಿಯೂ ಒಂದಾಗಲು ಕಲಿಸುತ್ತಾರೆ” ಎಂದು ಒತ್ತಿಹೇಳಿ, ಪುಣ್ಯಕ್ಷೇತ್ರ ನಿರ್ಮಾಣ ಸಮಿತಿಯೇ ಬಹಳ ವೈವಿಧ್ಯಮಯವಾಗಿದೆ ಎಂದು ತಿಳಿಸಿದರು. “ಇತರ ಧರ್ಮದ ಹಿನ್ನೆಲೆಯವರೂ ಇದ್ದಾರೆ. ಯಾವುದೇ ಧರ್ಮಕ್ಕೆ ಸೇರಿದವರಲ್ಲದವರೂ ಇದ್ದಾರೆ. ಆದರೆ ಅವರಿಗೆ ಟೋಲ್ಟನ್ ಅವರ ಕಥೆ ಬಹಳ ಇಷ್ಟ.”

“ಜಗತ್ತಿನಾದ್ಯಂತ, ವಿಶೇಷವಾಗಿ ಅಮೆರಿಕಾದಲ್ಲಿ, ಕ್ರಿಸ್ತನ ಬಗ್ಗೆ ಮಾತನಾಡುವಾಗ ನಮ್ಮನ್ನು ಒಂದಾಗಿಸುವ ಟೋಲ್ಟನ್ ಅವರಂತಹ ಕಥೆ, ಸಾಮಾನ್ಯವಾಗಿ ಧರ್ಮಸಭೆಯೊಂದಿಗೆ ಸಂಬಂಧ ಹೊಂದದವರನ್ನೂ ತಲುಪಲು ಸಹಾಯ ಮಾಡುತ್ತದೆ,” ಎಂದು ಅವರು ಹೇಳಿದರು. “ಅತ್ಯಂತ ಮುಖ್ಯವಾದದ್ದು ಯೇಸು ಕ್ರಿಸ್ತನ ಕಥೆಯನ್ನು ಹೇಳುವುದು, ಏಕೆಂದರೆ ಟೋಲ್ಟನ್ ತಮ್ಮ ಸಂಪೂರ್ಣ ಜೀವನವನ್ನು ಪ್ರಭುವಿಗಾಗಿಯೇ ಬದುಕಿದರು,” ಎಂದು ಅವರು ಒತ್ತಿಹೇಳಿದರು.

ಈ ಪುಣ್ಯಕ್ಷೇತ್ರವು ವಂ. ಗುರು ಟೋಲ್ಟನ್ ಅವರು ಕ್ವಿನ್ಸಿಯಲ್ಲಿ ತಮ್ಮ ಮೊದಲ ಸಾರ್ವಜನಿಕ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದ ಸ್ಥಳದಲ್ಲೇ ನಿರ್ಮಾಣವಾಗಲಿದೆ. ನಂತರ ಅಲ್ಲಿ ಸಂತ ಬೋನಿಫೇಸ್ ದೇವಾಲಯ ನಿರ್ಮಿಸಲಾಯಿತು. 2020ರಲ್ಲಿ ಈ ದೇವಾಲಯವನ್ನು ಮುಚ್ಚಲಾಗಿದ್ದು, ಬಳಿಕ ಅದು ಹಾಳಾಗತೊಡಗಿತು. ಈ ಉದ್ಘಾಟನಾ ಕಾರ್ಯಕ್ರಮವು ನಿಧಿ ಸಂಗ್ರಹಣೆಯ ಆರಂಭವಾಗಿಯೂ ಕಾರ್ಯನಿರ್ವಹಿಸಿತು, ಏಕೆಂದರೆ ಈ ಸ್ಥಳದ ಪುನರ್‌ನಿರ್ಮಾಣಕ್ಕೆ 5 ಮಿಲಿಯನ್ ಡಾಲರ್‌ಗಿಂತ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ವಂ. ಗುರು ಅರಿಸ್ಮನ್ ಅವರು, ಕ್ವಿನ್ಸಿಯಲ್ಲೇ ಈ ಪುಣ್ಯಕ್ಷೇತ್ರ ನಿರ್ಮಾಣವಾಗುತ್ತಿರುವುದರ ಮಹತ್ವವನ್ನೂ ಉಲ್ಲೇಖಿಸಿದರು. ಅವರ ಪ್ರಕಾರ, ವೆನರಬಲ್ ಟೋಲ್ಟನ್ ಅವರ ಹೃದಯ ಕ್ವಿನ್ಸಿಯಲ್ಲೇ ಇತ್ತು, ಏಕೆಂದರೆ ಅದು ಅವರಿಗೆ “ಸ್ವಾತಂತ್ರ್ಯದ” ಮತ್ತು “ಸ್ವಾಗತ ಹಾಗೂ ಆತಿಥ್ಯದ ಸ್ಥಳ”ವಾಗಿತ್ತು.

ವಂ. ಗುರು “ಗಸ್” ಅವರ ಬಗ್ಗೆ ತಿಳಿದುಕೊಳ್ಳಿ

ವಂ. ಗುರು ಅರಿಸ್ಮನ್ ಅವರ ಪ್ರಕಾರ, ಈ ಪುಣ್ಯಕ್ಷೇತ್ರದ ನಿರ್ಮಾಣವು ವೆನರಬಲ್ ಟೋಲ್ಟನ್ ಅವರ ಕಥೆ ಕ್ವಿನ್ಸಿ ಮತ್ತು ಅಮೆರಿಕದ ಗಡಿಗಳನ್ನು ಮೀರಿ ಇನ್ನಷ್ಟು ಜನರನ್ನು ತಲುಪುವ ಅವಕಾಶವಾಗಿದೆ. ಇದರಿಂದ ಹೆಚ್ಚಿನ ಜನರು ಅವರನ್ನು ಪರಿಚಯಿಸಿಕೊಂಡು, ಅವರ ಮಧ್ಯಸ್ಥಿಕೆಯನ್ನು ಬೇಡುವ ಪ್ರಾರ್ಥನೆಗೆ ಮುಖಮಾಡಬಹುದು.

“ನಾನು ಜನರಿಗೆ ಯಾವಾಗಲೂ ಹೇಳುವುದೇನೆಂದರೆ, ‘ಉತ್ತಮ ಫಾ. ಗಸ್’ ಎಂದು ಕರೆಯಲ್ಪಟ್ಟ ಅವರ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಉಳಿದ ಜೀವನಪೂರ್ತಿ ನಿಮಗೆ ಒಬ್ಬ ಒಳ್ಳೆಯ ಸ್ನೇಹಿತ ದೊರೆಯುತ್ತಾನೆ,” ಎಂದು ಅವರು ಹೇಳಿದರು. “ಅವರು ಅದ್ಭುತ ಸ್ನೇಹಿತರೂ ವಿಶ್ವಾಸಾರ್ಹ ಮಾರ್ಗದರ್ಶಕರೂ ಆಗಿದ್ದಾರೆ—ಮಧ್ಯಸ್ಥಿಕೆ, ಮಾರ್ಗದರ್ಶನ ಮತ್ತು ಪ್ರೇರಣೆಗೆ ನೀವು ಅವರ ಕಡೆ ತಿರುಗಬಹುದು. ಅವರ ಜೀವನ ಕಥೆಯೇ ಅದಕ್ಕೆ ಸಾಕ್ಷಿಯಾಗಿದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಮೇ 2026, 19:06