ಫಿಲಿಪ್ಪೀನ್ಸ್ನ ಧರ್ಮಶಾಸ್ತ್ರಜ್ಞರಿಂದ ಕೃತಕ ಬುದ್ಧಿಮತ್ತೆಗೆ ಧರ್ಮಸಭೆ ನೀಡಬೇಕಾರ ಪ್ರತಿಕ್ರಿಯೆಯ ಅವಲೋಕನ
ಲೇಖಕರು: ವಂ. ಗುರು ಕಾಸ್ಮಿರ್ ನೇಮಾ, SVD ಮತ್ತು ಸಹೋದರಿ ಹೆಲೆನ್ ಆನ್ ಪಾಲಕೇ, FMIJ – ಮನಿಲಾ
Artificial Intelligence and the Catholic Church: Challenges, Discernment and Hope in a Digital Age ( ಕೃತಕ ಬುದ್ಧಿಮತ್ತೆ ಮತ್ತು ಕಥೋಲಿಕ ಧರ್ಮಸಭೆ: ಡಿಜಿಟಲ್ ಯುಗದಲ್ಲಿ ಸವಾಲುಗಳು, ವಿವೇಚನೆ ಮತ್ತು ಭರವಸೆ) ಎಂಬ ಹೊಸ ಪುಸ್ತಕವು ಸಮಾಜದಲ್ಲಿ ಹಾಗೂ ಧರ್ಮಸಭೆಯ ಜೀವನ ಮತ್ತು ಧ್ಯೇಯದಲ್ಲಿ ಕೃತಕ ಬುದ್ಧಿಮತ್ತೆಯ ವೇಗವಾದ ವಿಸ್ತರಣೆಯಿಂದ ಉದ್ಭವಿಸುತ್ತಿರುವ ನೈತಿಕ, ಧರ್ಮಶಾಸ್ತ್ರೀಯ ಮತ್ತು ಪಶುಪಾಲನಾ ಪ್ರಶ್ನೆಗಳನ್ನು ಪರಿಶೀಲಿಸುತ್ತದೆ.
ಕ್ಲಾರೆಟಿಯನ್ ಕಮ್ಯುನಿಕೇಷನ್ಸ್ನಿಂದ ಪ್ರಕಟವಾಗಿರುವ ಈ ಕೃತಿಯು, ಮನಿಲಾದ 'ಪಾಂಟಿಫಿಕಲ್ ಅಂಡ್ ರಾಯಲ್ ಯೂನಿವರ್ಸಿಟಿ ಆಫ್ ಸ್ಯಾಂಟೋ ಟೊಮಾಸ್'ನ ಧರ್ಮ ಅಧ್ಯಯನ ಸಂಸ್ಥೆ (Institute of Religion) ಹಾಗೂ ದೈವಶಾಸ್ತ್ರ, ಧಾರ್ಮಿಕ ಅಧ್ಯಯನ ಮತ್ತು ನೀತಿಶಾಸ್ತ್ರ ಕೇಂದ್ರದ (Center for Theology, Religious Studies and Ethics) ಬೋಧಕವರ್ಗದ ಸದಸ್ಯರು ಮತ್ತು ಸಂಶೋಧನಾ ಸಹಚರರೂ ಆಗಿರುವ ಲಿಯೋ-ಮಾರ್ಟಿನ್ ಆಂಜೆಲೊ ಆರ್. ಒಕಾಂಪೊ, OP ಮತ್ತು ಇವಾನ್ ಎಫ್ರೇಮ್ ಎ. ಗೊಝುಮ್, OP ರಚಿಸಿದ್ದಾರೆ.
ಲೇಖಕರು ಧರ್ಮಶಾಸ್ತ್ರ, ನೈತಿಕಶಾಸ್ತ್ರ ಮತ್ತು ಸಾಮಾಜಿಕ ವಿಜ್ಞಾನಗಳನ್ನು ಆಧರಿಸಿ, ಲೇಖಕರು ಕೃತಕ ಬುದ್ಧಿಮತ್ತೆಯನ್ನು ಕೇವಲ ತಾಂತ್ರಿಕ ಆವಿಷ್ಕಾರವಾಗಿ ನೋಡದೆ, ಮಾನವ ಸಂಬಂಧಗಳು, ಕೆಲಸ, ಶಿಕ್ಷಣ, ಸಂವಹನ, ಆಡಳಿತ ಮತ್ತು ಸಾಮಾಜಿಕ ಜೀವನವನ್ನು ಪರಿವರ್ತಿಸುತ್ತಿರುವ ಬೆಳವಣಿಗೆಯಾಗಿ ಪರಿಗಣಿಸುತ್ತಾರೆ.
ಭಯ ಮತ್ತು ಆಕರ್ಷಣೆಯನ್ನು ಮೀರಿ
ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಅವಕಾಶಗಳು ಮತ್ತು ಸವಾಲುಗಳ ಕುರಿತು ಕಥೋಲಿಕ ಧರ್ಮಸಭೆ ತನ್ನ ಚಿಂತನೆಗಳನ್ನು ಇನ್ನಷ್ಟು ಆಳಗೊಳಿಸುತ್ತಿರುವ ಸಂದರ್ಭದಲ್ಲಿ ಈ ಪುಸ್ತಕ ಪ್ರಕಟವಾಗಿದೆ.
ತಮ್ಮ ಸಾರ್ವತ್ರಿಕ ಪತ್ರ ಭವ್ಯ ಮಾನವೀಯತೆಯಲ್ಲಿ ಪೂಜ್ಯ ಜಗದ್ಗುರು ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳನ್ನು ಇಂದಿನ ಯುಗವನ್ನು ನಿರ್ಧರಿಸುವ “ಹೊಸ ಸಂಗತಿಗಳ” ಭಾಗವೆಂದು ಗುರುತಿಸುತ್ತಾರೆ. ತಾಂತ್ರಿಕ ಅಭಿವೃದ್ಧಿಯು ಮಾನವ ಘನತೆ ಮತ್ತು ಸಾಮಾನ್ಯ ಹಿತದ ಕಡೆಗೆ ಸದಾ ಮುಖಮಾಡಿರುವಂತೆ ಮಾಡಲು ವಿವೇಕ ಮತ್ತು ಸಾಮೂಹಿಕ ವಿವೇಚನೆಗೆ ಕರೆ ನೀಡಿದ್ದಾರೆ. ತಂತ್ರಜ್ಞಾನದ ಕುರಿತು ವಿಮರ್ಶೆಯಿಲ್ಲದ ಉತ್ಸಾಹ ಹಾಗೂ ಆಧಾರರಹಿತ ಭಯ—ಇವೆರಡರ ವಿರುದ್ಧವೂ ಪೂಜ್ಯ ಜಗದ್ಗುರು ಎಚ್ಚರಿಸುತ್ತಾರೆ. ಬದಲಾಗಿ, ಮಾನವ ಘನತೆ, ಬಡವರಿಗೆ ಆದ್ಯತೆ, ಸೃಷ್ಟಿಯ ಕಾಳಜಿ ಮತ್ತು ಶಾಂತಿಯ ಅನ್ವೇಷಣೆಯಲ್ಲಿ ಬೇರೂರಿರುವ ದೃಷ್ಟಿಕೋನಕ್ಕೂ ನೀಡಿದ್ದಾರೆ.
ಈ ವಿವೇಚನೆಯ ಕೇಂದ್ರದಲ್ಲಿರುವ ಮೂಲಭೂತ ಪ್ರಶ್ನೆ ಹೀಗಿದೆ: ಹೆಚ್ಚೆಚ್ಚು ತಾಂತ್ರಿಕವಾಗುತ್ತಿರುವ ಜಗತ್ತಿನಲ್ಲಿ ಮಾನವಕುಲವು ಸಂಪೂರ್ಣವಾಗಿ ಮಾನವರಾಗಿಯೇ ಉಳಿಯುವುದು ಹೇಗೆ?
ಒಕಾಂಪೊ ಮತ್ತು ಗೊಝುಮ್ ತಮ್ಮ ಪುಸ್ತಕದಾದ್ಯಂತ ಈ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಕೃತಕ ಬುದ್ಧಿಮತ್ತೆಯನ್ನು ಸ್ವೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂದು ಮಾತ್ರ ಕೇಳುವ ಬದಲು, ಅದು ಜನರು ಮತ್ತು ಸಮುದಾಯಗಳಿಗೆ ಸೇವೆ ಸಲ್ಲಿಸುವ ರೀತಿಯಲ್ಲಿ ಹೇಗೆ ವಿನ್ಯಾಸಗೊಳಿಸಲ್ಪಡಬೇಕು, ನಿಯಂತ್ರಿಸಲ್ಪಡಬೇಕು ಮತ್ತು ಬಳಸಲ್ಪಡಬೇಕು ಎಂಬುದನ್ನು ಅವರು ಪರಿಶೀಲಿಸಿದ್ದಾರೆ.
ಅವರ ಚರ್ಚೆಯಲ್ಲಿ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆ, ಮಾನವ ಸಂಬಂಧಗಳು, ಶಿಕ್ಷಣ ಮತ್ತು ಉದ್ಯೋಗ, ಸಂವಹನ, ಆಡಳಿತ ಹಾಗೂ ಸಾಮಾನ್ಯ ಹಿತದ ಕುರಿತ ಪ್ರಶ್ನೆಗಳನ್ನು ಪರಿಗಣಿಸಲಾಗಿದೆ. ಧಾರ್ಮಿಕ ಶಿಕ್ಷಣ, ಪಶುಪಾಲನಾ ಸೇವೆ, ಶುಭಸಂದೇಶ ಸಾರುವ ಕಾರ್ಯ ಮತ್ತು ಧರ್ಮಶಾಸ್ತ್ರೀಯ ಚಿಂತನೆಗಳ ಮೇಲೆ ಕೃತಕ ಬುದ್ಧಿಮತ್ತೆಯ ಪರಿಣಾಮಗಳನ್ನೂ ಅವರು ಚರ್ಚಿಸಿದ್ದಾರೆ. ಆದ್ದರಿಂದ ಲೇಖಕರಿಗೆ ಕೃತಕ ಬುದ್ಧಿಮತ್ತೆ ಕೇವಲ ತಾಂತ್ರಿಕ ವಿಷಯವಲ್ಲ. ಅದರ ಅಭಿವೃದ್ಧಿಯು ಮಾನವನಾಗಿರುವುದರ ಅರ್ಥವೇನು ಮತ್ತು ಮಾನವಕುಲವು ಯಾವ ರೀತಿಯ ಸಮಾಜವನ್ನು ನಿರ್ಮಿಸಲು ಬಯಸುತ್ತದೆ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.
‘ವಿವೇಕ, ನೈತಿಕ ಸ್ಪಷ್ಟತೆ ಮತ್ತು ಶುಭಸಂದೇಶದ ಭರವಸೆ’
ಪುಸ್ತಕದ ಮುನ್ನುಡಿಯಲ್ಲಿ ಮನಿಲಾದ ಪ್ರಧಾನ ಗುರು, ಮಹಾಧರ್ಮಾಧ್ಯಕ್ಷರಾದ ಜೋಸೆ ಎಫ್. ಅಡ್ವಿಂಕುಲಾ ಅವರು ಕೃತಕ ಬುದ್ಧಿಮತ್ತೆಯನ್ನು “ನಮ್ಮ ಯುಗದ ಅತ್ಯಂತ ಪ್ರಮುಖ ಪರಿವರ್ತನೆಗಳಲ್ಲಿ ಒಂದು” ಎಂದು ವಿವರಿಸಿದ್ದಾರೆ.
ಕೃತಕ ಬುದ್ಧಿಮತ್ತೆಯು ಜನರು ಹೇಗೆ ಕೆಲಸ ಮಾಡುತ್ತಾರೆ, ಸಂವಹನ ನಡೆಸುತ್ತಾರೆ, ಆಡಳಿತ ನಡೆಸುತ್ತಾರೆ, ಕಲಿಯುತ್ತಾರೆ ಮತ್ತು ತಮ್ಮನ್ನು ತಾವು ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ವೇಗವಾಗಿ ಬದಲಾಯಿಸುತ್ತಿದೆ. ಧರ್ಮಸಭೆಗೆ ಈ ಪರಿವರ್ತನೆಯು ಹಿಂದೆ ಸರಿಯುವಂತೆ ಮಾಡುವ ಕರೆ ಅಲ್ಲ; ಬದಲಾಗಿ ಅದರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕರೆಯಾಗಿದೆ.
ಧರ್ಮಸಭೆಯು ಕೃತಕ ಬುದ್ಧಿಮತ್ತೆಯಿಂದ ಎದುರಾಗುವ ಸವಾಲುಗಳನ್ನು “ವಿವೇಕ, ನೈತಿಕ ಸ್ಪಷ್ಟತೆ ಮತ್ತು ಶುಭಸಂದೇಶದ ಭರವಸೆಯೊಂದಿಗೆ” ಎದುರಿಸಲು ಕರೆಯಲ್ಪಟ್ಟಿದೆ ಎಂದು ಪ್ರಧಾನ ಗುರು ಬರೆದಿದ್ದಾರೆ. ಕೃತಕ ಬುದ್ಧಿಮತ್ತೆ ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿರುವಾಗ, ಧರ್ಮಸಭೆಯು ಮಾನವಕುಲದೊಂದಿಗೆ ನಿಷ್ಠೆಯಿಂದ ಹೇಗೆ ಜೊತೆಯಾಗಿ ಸಾಗಬಹುದು ಎಂಬುದನ್ನು ತೋರಿಸಿರುವುದಕ್ಕಾಗಿ ಅವರು ಲೇಖಕರನ್ನು ಶ್ಲಾಘಿಸಿದ್ದಾರೆ. ಫಿಲಿಪ್ಪೀನ್ಸ್ನ ಹೊರಗಿನ ಧರ್ಮಶಾಸ್ತ್ರಜ್ಞರಿಂದಲೂ ಈ ಕೃತಿಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ.
ರೋಮ್ನ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ಮಿಷಿಯಾಲಜಿಯ ವಿಶೇಷೀಕರಣದ ಸಂಯೋಜಕರಾದ ವಂ. ಗುರು ಡೇನಿಯಲ್ ಪ್ಯಾಟ್ರಿಕ್ ಹುವಾಂಗ್, SJ, ಕೃತಕ ಬುದ್ಧಿಮತ್ತೆಯ ಪರಿಣಾಮವು ಮಾನವ ಜೀವನದಲ್ಲಿ ಹೆಚ್ಚೆಚ್ಚು ಸ್ಪಷ್ಟವಾಗುತ್ತಿರುವ ಸಂದರ್ಭದಲ್ಲಿ ಈ ಪುಸ್ತಕವನ್ನು ಕೃತಕ ಬುದ್ಧಿಮತ್ತೆಯ ಕುರಿತ “ಮೌಲ್ಯಯುತ ಪರಿಚಯ” ಎಂದು ವಿವರಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳು ಮತ್ತು ಅಪಾಯಗಳೆರಡರ ಮೇಲೂ ಲೇಖಕರು ನೀಡಿರುವ ಗಮನವನ್ನು ಅವರು ಎತ್ತಿಹಿಡಿಯುತ್ತಾರೆ. ಡೊಮಿನಿಕನ್ ಬೌದ್ಧಿಕ ಪರಂಪರೆಯೊಂದಿಗೆ ಅವರು ಸಂಪರ್ಕಿಸುವ “ವಾಸ್ತವಿಕ ಭರವಸೆ”ಯ ವಿಧಾನವನ್ನೂ ಅವರು ಪ್ರಶಂಸಿಸಿದ್ದಾರೆ.
KU Leuvenನ ಮೂಲಭೂತ ಧರ್ಮಶಾಸ್ತ್ರದ ಪ್ರಾಧ್ಯಾಪಕರೂ, ಆಸ್ಟ್ರೇಲಿಯನ್ ಕಥೋಲಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಹೋದ್ಯೋಗಿ ಆಗಿರುವ Stephan van Erp, OP, ಈ ಕೃತಿಯನ್ನು “ಸಕಾಲಿಕ ಮತ್ತು ಉತ್ತಮ ಮಾಹಿತಿಯನ್ನೊಳಗೊಂಡ ಕೃತಕ ಬುದ್ಧಿಮತ್ತೆಯ ಪರಿಚಯ” ಎಂದು ವಿವರಿಸಿದ್ದಾರೆ.ಶಿಕ್ಷಣ ಮತ್ತು ಆರ್ಥಿಕತೆಯ ಮೇಲೆ ಕೃತಕ ಬುದ್ಧಿಮತ್ತೆಯ ಪರಿಣಾಮಗಳನ್ನು ಪುಸ್ತಕವು ಪರಿಶೀಲಿಸಿರುವುದನ್ನೂ, ಸತ್ಯ, ನ್ಯಾಯ, ಮಾನವ ಘನತೆ ಮತ್ತು ಭರವಸೆಯ ಕುರಿತ ಪ್ರಶ್ನೆಗಳೊಂದಿಗೆ ಅದು ತೊಡಗಿಕೊಂಡಿರುವುದನ್ನೂ ಅವರು ವಿಶೇಷವಾಗಿ ಗುರುತಿಸಿದ್ದಾರೆ.
ಜಾಗತಿಕ ಸಂವಾದದಲ್ಲಿ ಫಿಲಿಪ್ಪೀನ್ಸ್ನ ಧ್ವನಿ
ಒಕಾಂಪೊ ಮತ್ತು ಗೊಝುಮ್ ಅವರ ಪ್ರಕಾರ, ಕೃತಕ ಬುದ್ಧಿಮತ್ತೆಯ ಕುರಿತ ಸಂವಾದವನ್ನು ಅಂತಿಮವಾಗಿ ಮಾನವ ಘನತೆಯನ್ನು ರಕ್ಷಿಸುವ ಮತ್ತು ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳ ನಡುವೆ ಜನರೊಂದಿಗೆ ಜೊತೆಯಾಗಿ ಸಾಗುವ ಧರ್ಮಸಭೆಯ ಧ್ಯೇಯದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಅವರ ಕೃತಿಯು ಫಿಲಿಪ್ಪೀನ್ಸ್ನ ಕಥೋಲಿಕ ಧರ್ಮಶಾಸ್ತ್ರಜ್ಞರು ಸಮಾಜದ ಡಿಜಿಟಲ್ ಪರಿವರ್ತನೆಯಿಂದ ಉದ್ಭವಿಸುತ್ತಿರುವ ಪ್ರಶ್ನೆಗಳೊಂದಿಗೆ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿರುವುದನ್ನೂ ಪ್ರತಿಬಿಂಬಿಸುತ್ತದೆ.
ಕೃತಕ ಬುದ್ಧಿಮತ್ತೆ ದೈನಂದಿನ ಜೀವನದಲ್ಲಿ ಹೆಚ್ಚೆಚ್ಚು ಅಳವಡಿಕೆಯಾಗುತ್ತಿರುವಂತೆ, ಸವಾಲು ಈಗ ತಂತ್ರಜ್ಞಾನ ಏನು ಮಾಡಬಲ್ಲದು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾನವರು ಅದನ್ನು ಏನು ಮಾಡಲು ಬಳಸಬೇಕು ಮತ್ತು ಆ ಆಯ್ಕೆಗಳನ್ನು ಯಾವ ಮೌಲ್ಯಗಳು ಮಾರ್ಗದರ್ಶಿಸಬೇಕು ಎಂಬುದನ್ನು ವಿವೇಚಿಸುವುದೂ ಅಗತ್ಯವಾಗಿದೆ.
ಈ ಹೊಸ ಕೃತಿಯು ಜಾಗತಿಕ ಸಂವಾದಕ್ಕೆ ಫಿಲಿಪ್ಪೀನ್ಸ್ನ ಧರ್ಮಶಾಸ್ತ್ರೀಯ ಧ್ವನಿಯನ್ನು ಸೇರಿಸುತ್ತದೆ. ತಾಂತ್ರಿಕ ಪ್ರಗತಿಯು ಮಾನವ ವ್ಯಕ್ತಿ, ಮಾನವ ಸಂಬಂಧಗಳು ಮತ್ತು ಸಾಮಾನ್ಯ ಹಿತಕ್ಕೆ ಸೇವೆ ಸಲ್ಲಿಸುವಂತಿರಬೇಕು ಎಂಬುದನ್ನು ಅದು ಒತ್ತಿಹೇಳುತ್ತದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).