ಜಗದ್ಗರುಗಳ ಸಾಮಾನ್ಯ ಭೇಟಿಯಲ್ಲಿ: ವ್ಯಾಟಿಕನ್ II ಕ್ರಿಸ್ತನೊಂದಿಗೆ ಸ್ನೇಹಕ್ಕೆ ನಮ್ಮನ್ನು ಆಹ್ವಾನಿಸುತ್ತಾರೆ
ವ್ಯಾಟಿಕನ್ ವರದಿ
ಬುಧವಾರ, ಜನವರಿ 14 ರಂದು ನಡೆದ ಸಾಮಾನ್ಯ ಸಾರ್ವಜನಿಕ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು ಸಂತ ಜಾನ್ ಸುವಾರ್ತೆಯಲ್ಲಿನ ಯೇಸುವಿನ ಮಾತುಗಳನ್ನು ಸ್ಮರಿಸಿದರು ನಾನು ನಿಮಗೆ ಇನ್ನು ಸೇವಕರೆಂದು ಕರೆಯುವುದಿಲ್ಲ ನಿಮಗೆ ಸ್ನೇಹಿತರು ಎಂದು ಕರೆಯುತ್ತೇನೆ.ಈ ಮಾತುಗಳ ಮೂಲಕ ಅವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ದಾಖಲೆಗಳನ್ನು ಪುನರ್ವಾಚನ ಮಾಡುವ ಹೊಸ ಉಪದೇಶ ಸರಣಿಯನ್ನು ಮುಂದುವರಿಸಿದರು. ಈ ಉಪದೇಶದಲ್ಲಿ ಅವರು ದೈವಿಕ ಪ್ರಕಟಣೆಯ ಕುರಿತಾದ ಧಾರ್ಮಿಕ ಸಂವಿಧಾನವಾದ ದೇಯಿ ವೆರ್ಬುಮ್ ಮೇಲೆ ಗಮನ ಕೇಂದ್ರೀಕರಿಸಿದರು.
ಜಗದ್ಗರು XIVನೇ ಲಿಯೋರವರು ದೇಯಿ ವೆರ್ಬುಮ್ ಅನ್ನು ಮಹಾಸಭೆಯ ಅತ್ಯಂತ ಸುಂದರ ಮತ್ತು ಮಹತ್ವದ ದಾಖಲೆಗಳಲ್ಲಿ ಒಂದೆಂದು ವರ್ಣಿಸಿದರು. ಈ ದಸ್ತಾವೇಜು ಯೇಸು ನಮ್ಮನ್ನು ತನ್ನ ಸ್ನೇಹಿತರಾಗಲು ಆಹ್ವಾನಿಸುವುದನ್ನು ನೆನಪಿಸುತ್ತದೆ ಎಂದು ಅವರು ಹೇಳಿದರು. ಯೇಸು ಕ್ರಿಸ್ತನು ದೇವರು ಮತ್ತು ಮಾನವನ ನಡುವಿನ ಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸುತ್ತಾನೆ. ಅದು ಇನ್ನು ಭಯ ಅಥವಾ ಸೇವೆಯ ಸಂಬಂಧವಲ್ಲ, ಬದಲಾಗಿ ಸ್ನೇಹದ ಸಂಬಂಧ. ಹೊಸ ಒಡಂಬಡಿಕೆಯ ಏಕೈಕ ಷರತ್ತು ಪ್ರೀತಿ ಎಂದು ಜಗದ್ಗುರುಗಳು ಒತ್ತಿ ಹೇಳಿದರು.
ನಾವು ದೇವರಿಗೆ ಸಮಾನರಲ್ಲ, ಏಕೆಂದರೆ ದೇವರು ಸೃಷ್ಟಿಕರ್ತ ಮತ್ತು ನಾವು ಸೃಷ್ಟಿಗಳು—ಅವರ ಈ ಸಂಬಂಧ ಸದಾ ಅಸಮಾನವಾಗಿಯೇ ಇರುತ್ತದೆ ಎಂದು ಜಗದ್ಗರುಗಳು ಹೇಳಿದರು. ಆದರೂ ಮಾನವ ರೂಪದಲ್ಲಿ ದೇವಪುತ್ರನ ಆಗಮನದೊಂದಿಗೆ ದೇವರ ಒಡಂಬಡಿಕೆ ತನ್ನ ಪರಿಪೂರ್ಣ ಉದ್ದೇಶವನ್ನು ತಲುಪುತ್ತದೆ. ಯೇಸುವಿನ ಮೂಲಕ ದೇವರು ನಮ್ಮನ್ನು ತನ್ನ ಪುತ್ರರು ಮತ್ತು ಪುತ್ರಿಯರನ್ನಾಗಿ ಮಾಡುತ್ತಾರೆ ಮತ್ತು ನಮ್ಮ ಮಾನವೀಯ ದೌರ್ಬಲ್ಯಗಳ ನಡುವೆಯೂ ತನ್ನಂತಾಗಲು ಕರೆ ನೀಡುತ್ತಾರೆ.
ಈ ಹಿನ್ನೆಲೆಯಲ್ಲಿ, ದೇವರ ವಾಕ್ಯವು ನಮ್ಮ ಮನಸ್ಸು ಮತ್ತು ಹೃದಯಗಳಲ್ಲಿ ಆಳವಾಗಿ ಪ್ರವೇಶಿಸಲೆಂದು ನಾವು ಕೇಳುವ ಅಭ್ಯಾಸ ಬೆಳೆಸಬೇಕು ಎಂದು ಜಗದ್ಗರುಗಳು ನೆನಪಿಸಿದರು. ಹಾಗೆಯೇ, ದೇವರಿಗೆ ಅವನಿಗೆ ಈಗಾಗಲೇ ತಿಳಿದಿರುವುದನ್ನು ಹೇಳಲು ಅಲ್ಲ, ಆದರೆ ನಮ್ಮನ್ನೇ ನಮಗೆ ಅರಿಯುವಂತೆ ಮಾಡಲು ದೇವರೊಂದಿಗೆ ಮಾತನಾಡಬೇಕು ಎಂದರು. ಇದಕ್ಕಾಗಿ ಪ್ರಾರ್ಥನೆ ಅತ್ಯಂತ ಅಗತ್ಯವೆಂದು ಅವರು ತಿಳಿಸಿದರು.
ಪ್ರಾರ್ಥನೆಯು ಮೊದಲು ಸಮೂಹ ಪ್ರಾರ್ಥನೆಯಲ್ಲಿ ಮತ್ತು ಆರಾಧನಾ ವಿಧಿಯಲ್ಲಿ ವ್ಯಕ್ತವಾಗುತ್ತದೆ. ಅಲ್ಲಿ ನಾವು ದೇವರ ವಾಕ್ಯವನ್ನು ಆಯ್ಕೆಮಾಡುವುದಿಲ್ಲ, ಬದಲಾಗಿ ದೇವರು ಧರ್ಮ ಸಭೆಯ ಮೂಲಕ ನಮ್ಮೊಂದಿಗೆ ಮಾತನಾಡುತ್ತಾನೆ. ಇದರ ಜೊತೆಗೆ, ಹೃದಯ ಮತ್ತು ಮನಸ್ಸಿನ ಆಂತರಿಕತೆಯಲ್ಲಿ ನಡೆಯುವ ವೈಯಕ್ತಿಕ ಪ್ರಾರ್ಥನೆಯೂ ಅಗತ್ಯ. ಪ್ರತಿದಿನ ಮತ್ತು ಪ್ರತಿವಾರ ಕ್ರೈಸ್ತನ ಜೀವನದಲ್ಲಿ ಪ್ರಾರ್ಥನೆ, ಧ್ಯಾನ ಮತ್ತು ಚಿಂತನೆಗೆ ಸಮಯ ಮೀಸಲಿರಬೇಕು ಎಂದು ಜಗದ್ಗರುಗಳು ಒತ್ತಿ ಹೇಳಿದರು. ಸ್ನೇಹಗಳು ನಿರ್ಲಕ್ಷ್ಯದಿಂದ ಅಥವಾ ವಿಚ್ಛೇದನದಿಂದ ಮುರಿದುಹೋಗುವಂತೆ, ದೇವರೊಂದಿಗೆ ಇರುವ ಸ್ನೇಹವೂ ನಿರ್ಲಕ್ಷ್ಯವಾಗಬಾರದು ದೇವರ ಸ್ನೇಹವೇ ನಮ್ಮ ರಕ್ಷಣೆಯೆಂದು ನಾವು ಅರಿಯಬೇಕು ಎಂದು ಅವರು ಅಂತಿಮವಾಗಿ ಹೇಳಿದರು.
