Pope Leo XIV meets Jubilee collaborators and volunteers in the Paul VI Hall at the Vatican

ಸಭೆಯಲ್ಲಿ ಪೋಪ್: ದ್ವಿತೀಯ ವ್ಯಾಟಿಕನ್ ಮಹಾಸಭೆ ಇನ್ನೂ ಧರ್ಮ ಸಭೆಯ ಪ್ರಯಾಣಕ್ಕೆ ಮಾರ್ಗದರ್ಶಕ ನಕ್ಷತ್ರವಾಗಿದೆ

ಜಗದ್ಗುರು XIV ನೇ ಲಿಯೋರವರು ದ್ವಿತೀಯ ವ್ಯಾಟಿಕನ್ ಮಹಾಸಭೆ ಹಾಗೂ ಅದರ ದಾಖಲೆಗಳ ಕುರಿತು ಹೊಸ ಧರ್ಮೋಪದೇಶ ಸರಣಿಯನ್ನು ಆರಂಭಿಸುತ್ತಿದ್ದಾರೆ. ಈ ಮಹಾಸಭೆಯ ಉಪದೇಶಗಳು ಇಂದಿಗೂ ಧರ್ಮ ಸಭೆಯ ಪ್ರಯಾಣಕ್ಕೆ ದಿಕ್ಕು ತೋರಿಸುವ ಮಾರ್ಗದರ್ಶಕ ನಕ್ಷತ್ರವಾಗಿವೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಜನವರಿ 7ರಂದು ವಾಟಿಕನ್‌ನಲ್ಲಿ ನಡೆದ ಬುಧವಾರದ ಸಾಮಾನ್ಯ ಸಭೆಯಲ್ಲಿ, ದ್ವಿತೀಯ ವ್ಯಾಟಿಕನ್ ಮಹಾಸಭೆಯ ಧರ್ಮೋಪದೇಶ  ಇಂದಿಗೂ ಧರ್ಮ ಸಭೆಯ ಪ್ರಯಾಣಕ್ಕೆ ಮಾರ್ಗದರ್ಶಕ ನಕ್ಷತ್ರವಾಗಿದೆ ಎಂದು ಹೇಳಿದರು. ಯೇಸುಕ್ರಿಸ್ತರ ಜೀವನದ ರಹಸ್ಯಗಳ ಮೇಲೆ ಜುಬಿಲಿ ವರ್ಷದ ಗಮನದ ಹಿನ್ನೆಲೆಯಲ್ಲಿ, ದ್ವಿತಿಯ ವ್ಯಾಟಿಕನ್  ಮಹಾಸಭೆ ಮತ್ತು ಅದರ ದಾಖಲೆಗಳ ಪುನರಚನೆಗೆ ಮೀಸಲಾದ ಹೊಸ ಧರ್ಮೋಪದೇಶ ಸರಣಿಯನ್ನು ಅವರು ಆರಂಭಿಸಿದರು. ಈ ಮಹಾಸಭೆಯನ್ನು ಪುನಃ ಅರಿತುಕೊಳ್ಳುವುದು ಧರ್ಮ ಸಭೆಯ ಸೌಂದರ್ಯ ಮತ್ತು ಮಹತ್ವವನ್ನು ಮರುಶೋಧಿಸುವ ಅಮೂಲ್ಯ ಅವಕಾಶವೆಂದು ಜಗದ್ಗುರುಗಳು ವಿವರಿಸಿದರು.

ಜಗದ್ಗುರು XIV ನೇ ಲಿಯೋರವರು, 2025ರಲ್ಲಿ ನೈಸಿಯಾ ಮಹಾಸಭೆಯ ವಾರ್ಷಿಕೋತ್ಸವದ ಜೊತೆಗೆ ದ್ವಿತಿಯ ವ್ಯಾಟಿಕನ್ ಮಹಾಸಭೆಯ 60ನೇ ವಾರ್ಷಿಕೋತ್ಸವವನ್ನೂ ಧರ್ಮ ಸಭೆಯು ಸ್ಮರಿಸಿಕೊಂಡಿತು ಎಂದು ನೆನಪಿಸಿದರು. ಕಾಲಾಂತರ ಹೆಚ್ಚು ಆಗಿಲ್ಲದಿದ್ದರೂ, ಆ ಮಹಾಸಭೆಯಲ್ಲಿ ಭಾಗವಹಿಸಿದ್ದ ಬಿಷಪ್‌ಗಳು ಮತ್ತು ಧರ್ಮಶಾಸ್ತ್ರಜ್ಞರ ಪೀಳಿಗೆ ಈಗ ನಮ್ಮ ನಡುವೆ ಇಲ್ಲ ಎಂದು ಅವರು ಹೇಳಿದರು. ಆದ್ದರಿಂದ, ಕೇವಲ ಕೇಳಿಬಂದ ವಿವರಣೆಗಳ ಮೂಲಕವಲ್ಲ, ಬದಲಾಗಿ ಮಹಾಸಭೆಯ ಮೂಲ ದಾಖಲೆಗಳನ್ನು ನೇರವಾಗಿ ಓದಿ ಅವುಗಳ ಅರ್ಥವನ್ನು ಆಳವಾಗಿ ಮನನ ಮಾಡುವುದು ಅತ್ಯಂತ ಅಗತ್ಯವೆಂದು ಅವರು ಒತ್ತಿ ಹೇಳಿದರು.

ಜಗದ್ಗುರು XIV ನೇ ಲಿಯೋರವರು ದ್ವಿತಿಯ ವ್ಯಾಟಿಕನ್  ಮಹಾಸಭೆಯ ಪ್ರಮುಖ ಕೊಡುಗೆಗಳನ್ನು ವಿವರಿಸುತ್ತಾ, ಅದು ದೇವರನ್ನು ನಮ್ಮ ತಂದೆಯಾಗಿ ಮರುಶೋಧಿಸಿತು ಕ್ರಿಸ್ತನಲ್ಲಿ ನಮಗೆ ದೇವರ ಮಕ್ಕಳಾಗಲು ಕರೆಯುತ್ತದೆ ಧರ್ಮ ಸಭೆಯನ್ನು ದೇವರು ಮತ್ತು ಮಾನವಕುಲದ ನಡುವೆ ಏಕತೆಯ ಸಂಸ್ಕಾರ ಹಾಗೂ ಸಮಾಗಮದ ರಹಸ್ಯವಾಗಿ ನೋಡಿತು ಎಂದು ಹೇಳಿದರು. ಜೊತೆಗೆ, ಧರ್ಮಚರಣೆಯ ಮಹತ್ವದ ಸುಧಾರಣೆಯನ್ನು ಆರಂಭಿಸಿ, ಸಂಪೂರ್ಣ ದೇವಜನರ ಚೇತನ ಹಾಗೂ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಿತು. ಆಧುನಿಕ ಜಗತ್ತಿನ ಬದಲಾವಣೆಗಳು ಮತ್ತು ಸವಾಲುಗಳನ್ನು ಸಂವಾದದ ಮೂಲಕ ಎದುರಿಸಲು ಧರ್ಮ ಸಭೆಯನ್ನು ತೆರೆಯಿತು.

ಇದರಿಂದ ಪ್ರೇರಿತವಾಗಿ, ಧರ್ಮ ಸಭೆ ಇಂದು ಕೂಡ ಸಾರ್ವತ್ರಿಕ ಸಂವಾದ, ಅಂತರ್ಮತ ಸಂವಾದ ಮತ್ತು ಸದುದ್ದೇಶದ ಜನರೊಂದಿಗೆ ಸಂವಾದದ ಮೂಲಕ ಸತ್ಯವನ್ನು ಹುಡುಕುವ ಕಾರ್ಯವನ್ನು ಮುಂದುವರಿಸುತ್ತಿದೆ ಎಂದು ಜಗದ್ಗುರುಗಳು ಹೇಳಿದರು. ಈ ಮನೋಭಾವವೇ ಧರ್ಮ ಸಭೆಯ ಆಧ್ಯಾತ್ಮಿಕ ಜೀವನ ಮತ್ತು ಪಾಲಕರ  ಕಾರ್ಯವನ್ನು ರೂಪಿಸಬೇಕು ನಾವು ಕಾಲದ ಸೂಚನೆಗಳನ್ನು ವಿವೇಚಿಸುವ ಜಾಗರೂಕ ವ್ಯಾಖ್ಯಾನಕರಾಗಿಯೂ, ಸುವಾರ್ತೆಯ ಹರ್ಷಭರಿತ ಘೋಷಕರಾಗಿಯೂ, ನ್ಯಾಯ ಮತ್ತು ಶಾಂತಿಯ ಧೈರ್ಯಶಾಲಿ ಸಾಕ್ಷಿಗಳಾಗಿಯೂ ಇರಬೇಕೆಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ದಾಖಲೆಗಳನ್ನು ಹೊಸ ಉತ್ಸಾಹದಿಂದ ಪುನಃ ಓದುವಂತೆ ಆಹ್ವಾನಿಸಿದರು. ಅವುಗಳ ಪ್ರವಾದನಾತ್ಮಕ ಮತ್ತು ಸಮಕಾಲೀನ ಮಹತ್ವವನ್ನು ಮರುಶೋಧಿಸುವ ಮೂಲಕ, ಧರ್ಮ ಸಭೆಯ ಶ್ರೀಮಂತ ಪರಂಪರೆಯನ್ನು ಸ್ವೀಕರಿಸಿ, ಇಂದಿನ ಕಾಲದ ಸವಾಲುಗಳನ್ನು ಪ್ರಶ್ನಿಸಿ, ಪ್ರೀತಿ, ನ್ಯಾಯ ಮತ್ತು ಶಾಂತಿಯ ದೇವರಾಜ್ಯದ ಸುವಾರ್ತೆಯನ್ನು ಜಗತ್ತಿಗೆ ತಲುಪಿಸುವ ಸಂತೋಷವನ್ನು ಪುನರುಜ್ಜೀವನಗೊಳಿಸೋಣ ಎಂದು ಅವರು ಕರೆ ನೀಡಿದರು.

10 ಜನವರಿ 2026, 12:44