ಮಡಗಾಸ್ಕರ್ನಲ್ಲಿ ಸಂಭವಿಸಿದ ಭೀಕರ ಚಂಡಮಾರುತಗಳಿಂದ ಪೀಡಿತರಿಗಾಗಿ ಜಗದ್ಗುರುಗಳ ಪ್ರಾರ್ಥನೆ
ವ್ಯಾಟಿಕನ್ ವರದಿ
ತ್ರಿಕಾಲ ಪ್ರಾರ್ಥನೆಯ ನಂತರ, ಜಗದ್ಗುರು XIVನೇ ಲಿಯೋರವರು ಸ್ವಲ್ಪ ಅವಧಿಯೊಳಗೆ ಸಂಭವಿಸಿದ ಎರಡು ಚಂಡಮಾರುತಗಳ ಪರಿಣಾಮದಿಂದ ಸಂಕಷ್ಟ ಅನುಭವಿಸುತ್ತಿರುವ ಮಡಗಾಸ್ಕರ್ ಜನರೊಂದಿಗೆ ತಮ್ಮ ಹತ್ತಿರತನವನ್ನು ವ್ಯಕ್ತಪಡಿಸಿದರು. ಬಲಿಯಾದವರಿಗಾಗಿ ಹಾಗೂ ಅವರ ಕುಟುಂಬಗಳಿಗಾಗಿ, ಮತ್ತು ಗಂಭೀರ ಹಾನಿಯನ್ನು ಅನುಭವಿಸಿದ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ, ಎಂದು ಅವರು ಹೇಳಿದರು.
ಈ ವರ್ಷ ದಕ್ಷಿಣ-ಪಶ್ಚಿಮ ಭಾರತೀಯ ಮಹಾಸಾಗರ ಪ್ರದೇಶದಲ್ಲಿ ಚಂಡಮಾರುತ ಕಾಲವು ತೀವ್ರವಾಗಿದ್ದು, ಗೆಜಾನಿ ಮತ್ತು ಫೈಟಿಯಾ ಎಂಬ ಚಂಡಮಾರುತಗಳ ನಂತರ ಮಡಗಾಸ್ಕರ್ ರಾಷ್ಟ್ರ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಅಂತರರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ.
ಫೆಬ್ರವರಿ 10ರಂದು ಗೆಜಾನಿ ಕರಾವಳಿಗೆ ಅಪ್ಪಳಿಸಿ ಸುಮಾರು 2,70,000 ಜನರಿಗೆ ಪರಿಣಾಮ ಬೀರಿದ್ದು, ಸಾವಿರಾರು ಜನರನ್ನು ವಾಸಸ್ಥಳ ಕಳೆದುಕೊಳ್ಳುವಂತೆ ಮಾಡಿದೆ. ರಾಷ್ಟ್ರೀಯ ಅಧಿಕಾರಿಗಳ ವರದಿಯ ಪ್ರಕಾರ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆ ಹಾಗೂ ಇತರ ಸಹಭಾಗಿಗಳೊಂದಿಗೆ ಸೇರಿ, ದೇಶದ ಸಂಪನ್ಮೂಲಗಳನ್ನು ಹುಡುಕಾಟ ಮತ್ತು ರಕ್ಷಣೆ, ಸ್ಥಳಾಂತರ, ಆಶ್ರಯ ಮತ್ತು ಆಹಾರ ಸಹಾಯ ಕಾರ್ಯಗಳಿಗೆ ಸಮರ್ಪಿಸಲಾಗಿದೆ.
ಚಂದ್ರ ಹೊಸ ವರ್ಷ
ಜಗದ್ಗರುಗಳು ಪೂರ್ವ ಏಷ್ಯಾ ಹಾಗೂ ವಿಶ್ವದ ಇತರ ಭಾಗಗಳಲ್ಲಿ ಕೋಟ್ಯಾಂತರ ಜನರು ಚಂದ್ರ ಹೊಸ ವರ್ಷವನ್ನು ಆಚರಿಸಲು ಸಿದ್ಧರಾಗುತ್ತಿರುವುದನ್ನು ಕೂಡ ಉಲ್ಲೇಖಿಸಿದರು. ಈ ಸಂತೋಷದ ಹಬ್ಬವು ಕುಟುಂಬ ಸಂಬಂಧಗಳು ಮತ್ತು ಸ್ನೇಹಗಳನ್ನು ಇನ್ನಷ್ಟು ಗಾಢಗೊಳಿಸಲಿ ಮನೆಗಳಿಗೆ ಮತ್ತು ಸಮಾಜಕ್ಕೆ ಶಾಂತಿಯನ್ನು ತರಲಿ ಮತ್ತು ಎಲ್ಲಾ ಜನಾಂಗಗಳಿಗೆ ಶಾಂತಿ ಹಾಗೂ ಸಮೃದ್ಧಿಯನ್ನು ನಿರ್ಮಿಸುವ ಉದ್ದೇಶದಿಂದ ಭವಿಷ್ಯವನ್ನು ಒಟ್ಟಾಗಿ ನೋಡುವ ಅವಕಾಶವಾಗಲಿ ಎಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಫೆಬ್ರವರಿ 17ರಂದು ಆಚರಿಸಲ್ಪಡುವ ಚಂದ್ರ ಹೊಸ ವರ್ಷದ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಎಲ್ಲರಿಗೂ ತಮ್ಮ ಶುಭಾಶಯಗಳು ಮತ್ತು ಸ್ನೇಹಭಾವವನ್ನು ತಿಳಿಸಿ, ಎಲ್ಲರ ಮೇಲೂ ದೇವರ ಆಶೀರ್ವಾದವನ್ನು ಕೋರಿದರು.
