ಜಗದ್ಗುರು XIVನೇ ಲಿಯೋರವರು ಇಎಸ್ಎನ್ಇ ಟೆಲಿವಿಷನ್ ಸಂಸ್ಥೆಯ ಸ್ಥಾಪಕರನ್ನು ಭೇಟಿ ಮಾಡಿದರು.
ವ್ಯಾಟಿಕನ್ ವರದಿ
ನೋಯೆಲ್ ಡಿಯಾಜ್ ರವರಿಗೆ ಮೇ 8ರಂದು ಪೇತ್ರನ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಜಗದ್ಗುರು XIVನೇ ಲಿಯೋರವರನ್ನು ಭೇಟಿ ಮಾಡುವ ಅವಕಾಶ ಬಹುಕಾಲದ ನಿರೀಕ್ಷೆಯಾದದ್ದು. ಅಮೇರಿಕಾದಲ್ಲಿ ವಾಸಿಸುವ ಈ ಮೆಕ್ಸಿಕನ್ ವಲಸಿಗರು, ಜಗದ್ಗುರು ಫ್ರಾನ್ಸಿಸ್ ರವರೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಂಡಿದ್ದರು. ಹಲವು ಸಂದರ್ಭಗಳಲ್ಲಿ ಜಗದ್ಗುರು ಫ್ರಾನ್ಸಿಸ್ ರವರು, ನಂಬಿಗಸ್ತರ ಸಂಘವಾದ ಅಪೊಸ್ಟೊಲಾಡೊ ಎಲ್ ಸೆಂಬ್ರಾಡೋರ್ ನುವಾ ಇವಾಂಜೆಲಿಜಾಸಿಯಾನ್ ನ ಯೋಜನೆಗಳನ್ನು ಆಶೀರ್ವದಿಸಿ ಪ್ರೋತ್ಸಾಹಿಸಿದ್ದರು. ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿತವಾದ ಈ ಸಂಸ್ಥೆ ಲ್ಯಾಟಿನ್ ಅಮೆರಿಕಾ ಮತ್ತು ಸ್ಪೇನ್ನಾದ್ಯಂತ ಕಥೋಲಿಕ ದೂರದರ್ಶನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಜೊತೆಗೆ, ಅಮೇರಿಕಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ವ್ಯಾಪಕ ರೇಡಿಯೋ ಜಾಲವನ್ನೂ ನಡೆಸುತ್ತಿದೆ.
ಆದ್ದರಿಂದಲೇ ಅಮೇರಿಕ ಮತ್ತು ಪೆರುವಿನ ಮೂಲದ ಜಗದ್ಗುರು XIVನೇ ಲಿಯೋರವರಿಗೆ, ಸಾಮಾನ್ಯ ಕ್ರೈಸ್ತನಾಗಿ ತಾವು ನಡೆಸುತ್ತಿರುವ ಈ ಧರ್ಮಪ್ರಚಾರ ಮಿಷನ್ ಕುರಿತು ಇನ್ನಷ್ಟು ಪರಿಚಯವಾಗುವುದು ನೋಯೆಲ್ ಡಿಯಾಸ್ ರವರಿಗೆ ಮಹತ್ವದ್ದಾಗಿತ್ತು. ವಿಶೇಷವಾಗಿ, ಜಗದ್ಗುರುಗಳ ಧ್ವನಿಯನ್ನು ಇನ್ನಷ್ಟು ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ಭಾಷಾಭಿಮಾನಿಗಳಿಗೆ ತಲುಪಿಸುವುದು ಅವರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಶೂ ಪಾಲಿಷ್ ಪೆಟ್ಟಿಗೆ
ಇತ್ತೀಚೆಗೆ ಜಗದ್ಗುರು XIVನೇ ಲಿಯೋರವರು ತಮ್ಮ ವೈಯಕ್ತಿಕ ಕಚೇರಿಯಲ್ಲಿ ಡಿಯಾಸ್ ರವರನ್ನು ಸ್ವೀಕರಿಸಿದರು. ಲಾಸ್ ಏಂಜಲೀಸ್ ಮಹಾಧರ್ಮಪ್ರಾಂತ್ಯದ ಇಬ್ಬರು ಯಾಜಕರು ಮತ್ತು ಒಬ್ಬ ಸಾಮಾನ್ಯ ಕ್ರೈಸ್ತ ವ್ಯಕ್ತಿ ಅವರೊಂದಿಗೆ ಇದ್ದರು. ಅವರು ಐ ಆಮ್ ದಿ 73 ಯೋಜನೆಯ ಸಂಕೇತವೊಂದನ್ನು ಜಗದ್ಗುರುಗಳಿಗೆ ಉಡುಗೊರೆಯಾಗಿ ನೀಡಿದರು. ಇದು 33 ದಿನಗಳ ಪ್ರಭುವಿಗೆ ಸಮರ್ಪಣೆಯ ಅನುಭವದ ಮೂಲಕ ಯೇಸುವಿನ ಸಮೀಪದ ಜೀವನಕ್ಕೆ ಕರೆ ನೀಡುವ ಪರಿವರ್ತನೆಯ ಮಾರ್ಗವಾಗಿದೆ.
ಅತ್ಯಂತ ಅರ್ಥಪೂರ್ಣವಾದ ಉಡುಗೊರೆಯಾಗಿ, ಡಿಯಾಸ್ ರವರು ತಮ್ಮ ಬಾಲ್ಯದಲ್ಲಿ ಜೀವನೋಪಾಯಕ್ಕಾಗಿ ಬಳಸಿದ ಶೂ ಪಾಲಿಷ್ ಪೆಟ್ಟಿಗೆಯ ಪ್ರತಿರೂಪವನ್ನು ಜಗದ್ಗುರುಗಳಿಗೆ ನೀಡಿದರು. ಸಾಮಾಜಿಕ ಅಪಾಯದಲ್ಲಿದ್ದ ಬಾಲಕರಾಗಿದ್ದ ಅವರು, ಇದೇ ಕೆಲಸದ ಮೂಲಕ ತಮ್ಮ ಮೊದಲ ಪವಿತ್ರ ಸಮಾಗಮದ ಉಡುಪಿನ ವೆಚ್ಚವನ್ನು ಭರಿಸಿದ್ದರು. 2016ರಲ್ಲಿ ಮೆಕ್ಸಿಕೊಗೆ ತೆರಳುವ ವಿಮಾನಯಾನ ಸಂದರ್ಭದಲ್ಲಿ ಜಗದ್ಗುರು ಫ್ರಾನ್ಸಿಸ್ ರವರಿಗೆ ಇದೇ ರೀತಿಯ ಪೆಟ್ಟಿಗೆಯನ್ನು ನೀಡಿ ಅವರ ಶೂಗಳನ್ನು ಪಾಲಿಷ್ ಮಾಡಿದ್ದ ಘಟನೆ, ಅವರ ಸ್ನೇಹದ ಆರಂಭವಾಗಿತ್ತು. ಆ ಸಂಬಂಧವು ಎಲ್ ಸೆಂಬ್ರಾಡೋರ್ ಕುಟುಂಬಕ್ಕೆ ಅಪಾರ ಫಲಗಳನ್ನು ತಂದಿತು.
ವಲಸಿಗರು ಮತ್ತು ದೇವರ ವಾಕ್ಯ
ಸಭೆಯ ವೇಳೆ ಜಗದ್ಗುರು XIVನೇ ಲಿಯೋರವರು ಮತ್ತು ಡಿಯಾಸ್ ಅಮೇರಿಕಾ ಹಾಗೂ ವಿಶ್ವದ ವಲಸೆ ಸಮಸ್ಯೆಯ ಕುರಿತು ಚರ್ಚಿಸಿದರು. ಜೊತೆಗೆ ನಂಬಿಗಸ್ತರಲ್ಲಿ ದೇವರ ವಾಕ್ಯದ ಅರಿವನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವನ್ನೂ ಒತ್ತಿಹೇಳಿದರು.
ಜಗದ್ಗರುಗಳನ್ನು ಭೇಟಿಯಾದ ನಂತರ, ವ್ಯಾಟಿಕನ್ ನ್ಯೂಸ್ಗೆ ನೀಡಿದ ವಿಶಾಲ ಸಂದರ್ಶನದಲ್ಲಿ ಡಿಯಾಸ್ ರವರು ಜಗದ್ಗುರುಗಳ ಜೊತೆಗಿನ ಸಂವಾದದ ಕುರಿತು ಹಾಗೂ ಸಾಮಾನ್ಯ ಕ್ರೈಸ್ತ ಮತ್ತು ಸಮರ್ಪಿತ ಸದಸ್ಯರಿಂದ ರೂಪುಗೊಂಡಿರುವ ಎಲ್ ಸೆಂಬ್ರಾಡೋರ್ ಸಮುದಾಯದ ಧರ್ಮಪ್ರಚಾರ ಮಿಷನ್ನಲ್ಲಿ ಸ್ಥಿರವಾಗಿರಲು ಜಗದ್ಗುರುಗಳು ನೀಡಿದ ಸವಾಲುಗಳ ಕುರಿತು ವಿಶ್ಲೇಷಣೆ ಮಾಡಿದರು.
