ಉಕ್ರೇನ್ ಅಧ್ಯಕ್ಷರಿಗೆ ಜಗದ್ಗುರುಗಳು: ಯುದ್ಧಕಾರ್ಯಗಳು ನಿಲ್ಲಲಿ ಮತ್ತು ನ್ಯಾಯಸಮ್ಮತ ಹಾಗೂ ಶಾಶ್ವತ ಶಾಂತಿ ಸಾಧಿಸಲಿ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಏಪ್ರಿಲ್ 3ರಂದು ಶುಕ್ರವಾರ ಬೆಳಿಗ್ಗೆ ಉಕ್ರೇನ್ ಅಧ್ಯಕ್ಷರಾದ ವೊಲೊಡಿಮಿರ್ ಜೆಲೆನ್ಸ್ಕಿ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಸೌಹಾರ್ದಪೂರ್ಣ ಸಂಭಾಷಣೆಯ ವೇಳೆ ಜಗದ್ಗುರುಗಳು ಪಾಸ್ಖ ಹಬ್ಬದ ಶುಭಾಶಯಗಳನ್ನು ತಿಳಿಸಿ, ಉಕ್ರೇನ್ ಜನರೊಂದಿಗೆ ತಮ್ಮ ಸಾನ್ನಿಧ್ಯವನ್ನು ಪುನರುಚ್ಚರಿಸಿದರು.
ಪ್ರಕಟಣೆಯು ಮುಂದುವರಿದು, ನಂತರ ಅವರು ಮಾನವೀಯ ಪರಿಸ್ಥಿತಿಯ ಕುರಿತು ಚರ್ಚಿಸಿ, ಸಂಘರ್ಷದಿಂದ ಬಳಲುತ್ತಿರುವ ಜನರಿಗೆ ಅಗತ್ಯ ಸಹಾಯವು ತಲುಪುವಂತೆ ಮಾಡುವ ತುರ್ತು ಅಗತ್ಯವನ್ನು ಒತ್ತಿಹೇಳಿದರು ಎಂದು ತಿಳಿಸಿತು.
ಮಾನವೀಯ ಉಪಕ್ರಮಗಳನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನಗಳಿಗೂ, ವಿಶೇಷವಾಗಿ ಕೈದಿಗಳ ಬಿಡುಗಡೆಗೆ ಸಂಬಂಧಿಸಿದ ವಿಷಯಗಳಿಗೂ ಉಲ್ಲೇಖ ಮಾಡಲಾಯಿತು.
ಕೊನೆಯಲ್ಲಿ ಪ್ರಕಟಣೆಯು ಹೀಗೆ ತಿಳಿಸಿದೆ ಅಂತರರಾಷ್ಟ್ರೀಯ ಸಮುದಾಯದ ಬದ್ಧತೆ ಮತ್ತು ಸಹಕಾರದೊಂದಿಗೆ ಸಾಧ್ಯವಾದಷ್ಟು ಬೇಗ ಶತ್ರುತ್ವಗಳು ನಿಲ್ಲಲಿ ಹಾಗೂ ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ ಸಾಧಿಸಲಿ ಎಂಬ ಭರವಸೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಲಾಯಿತು.
