ಜಗದ್ಗುರು XIVನೇ ಲಿಯೋರವರು ಯುರೋಪಿಯನ್ ಪಾರ್ಲಿಮೆಂಟ್‌ನ ಜನಸಂಖ್ಯಾಶಾಸ್ತ್ರದ ಇಂಟರ್‌ಗ್ರೂಪ್ ಸದಸ್ಯರನ್ನು ಪ್ರೇಕ್ಷಕರಾಗಿ ಸ್ವೀಕರಿಸಿದರು ಜಗದ್ಗುರು XIVನೇ ಲಿಯೋರವರು ಯುರೋಪಿಯನ್ ಪಾರ್ಲಿಮೆಂಟ್‌ನ ಜನಸಂಖ್ಯಾಶಾಸ್ತ್ರದ ಇಂಟರ್‌ಗ್ರೂಪ್ ಸದಸ್ಯರನ್ನು ಪ್ರೇಕ್ಷಕರಾಗಿ ಸ್ವೀಕರಿಸಿದರು  (ANSA)

ಜಗದ್ಗುರು XIVನೇ ಲಿಯೋರವರು ಯುರೋಪಿನ ಜನಸಂಖ್ಯಾ ಸಂಕಷ್ಟದ ನಡುವೆ ಕುಟುಂಬಗಳಿಗೆ ಬೆಂಬಲ ನೀಡುವಂತೆ ಕರೆ ನೀಡಿದರು.

ಜಗದ್ಗುರು XIVನೇ ಲಿಯೋರವರು ಯುರೋಪಿನಲ್ಲಿ ಕುಸಿಯುತ್ತಿರುವ ಜನಸಂಖ್ಯೆಯು ತಲೆಮಾರುಗಳ ನಡುವಿನ ಐಕ್ಯತೆಯನ್ನೂ ಸಮಾಜದ ಭವಿಷ್ಯವನ್ನೂ ಅಪಾಯಕ್ಕೆ ಒಳಪಡಿಸುತ್ತಿದೆ ಎಂದು ಎಚ್ಚರಿಸಿದರು. ಕುಟುಂಬಗಳು ಮತ್ತು ಮಾನವ ಗೌರವಕ್ಕೆ ಹೊಸ ಬೆಂಬಲ ಅಗತ್ಯವಿದೆ ಎಂದು ಅವರು ಯುರೋಪಿನ ಶಾಸಕರಿಗೆ ತಿಳಿಸಿದರು. ಕುಟುಂಬಗಳಿಗಾಗಿ ಉಂಟಾಗುವ “ಹೊಸ ವಸಂತ ಋತು” ಮಾತ್ರವೇ ಖಂಡದಲ್ಲಿ ಹೆಚ್ಚುತ್ತಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಬರಡುತನವನ್ನು ನಿವಾರಿಸಬಲ್ಲದು ಎಂದು ಜಗದ್ಗುರುಗಳು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಯುರೋಪಿನ ನಾಯಕರಿಗೆ, ಖಂಡದ ಜನಸಂಖ್ಯಾ ಸಂಕಷ್ಟವನ್ನು ಕುಟುಂಬಗಳಿಗೆ ಹೊಸ ಬೆಂಬಲ, ತಲೆಮಾರುಗಳ ನಡುವಿನ ಐಕ್ಯತೆ ಮತ್ತು ಮಾನವ ಜೀವದ ಗೌರವದ ಮೂಲಕ ಎದುರಿಸುವಂತೆ ಕರೆ ನೀಡಿದರು. ಇಲ್ಲವಾದರೆ ಯುರೋಪ್ ತನ್ನ ಇತಿಹಾಸದ ಕಾರಣದಿಂದ ಮಾತ್ರವಲ್ಲ, ವಯೋವೃದ್ಧ ಜನಸಂಖ್ಯೆಯ ಕಾರಣದಿಂದಲೂ “ಹಳೆಯ ಖಂಡ”ವಾಗಿ  ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ವ್ಯಾಟಿಕನ್‌ನಲ್ಲಿ ನಡೆದ ಸಭೆಯಲ್ಲಿ ಯುರೋಪಿಯನ್ ಸಂಸತ್ತಿನ ಜನಸಂಖ್ಯಾ ವಿಚಾರಗಳ ಇಂಟರ್‌ಗ್ರೂಪ್ ಸದಸ್ಯರು, ನಾಗರಿಕ ಹಾಗೂ ರಾಜಕೀಯ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಜನನ ಪ್ರಮಾಣದ ಕುಸಿತ ಮತ್ತು ಜನಸಂಖ್ಯೆಯ ವೃದ್ಧಾಪ್ಯವು “ಲಕ್ಷಾಂತರ ಜನರು ಮತ್ತು ಅವರ ಕುಟುಂಬಗಳಿಗೆ ನೇರ ಪರಿಣಾಮ ಬೀರುವ ತುರ್ತು ಸವಾಲು” ಎಂದು ಹೇಳಿದರು.

“ಜನಸಂಖ್ಯಾ ಅಂಕಿಅಂಶಗಳು ಕೇವಲ ಸಂಖ್ಯೆಗಳಲ್ಲ, ಅವು ತಂದೆತನ, ತಾಯಿತನ ಮತ್ತು ಮಕ್ಕಳ ಬಗ್ಗೆ ಮಾತನಾಡುತ್ತವೆ,” ಎಂದು ಜಗದ್ಗುರುಗಳು ಹೇಳಿದರು. “ಮಕ್ಕಳು ಭವಿಷ್ಯ” ಎಂದು ಅವರು ಒತ್ತಿಹೇಳಿದರು. ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಉಲ್ಲೇಖಿಸಿದ ಅವರು, ಯುರೋಪ್ ತನ್ನ “ಮುಂದುವರಿಯುತ್ತಿರುವ ವಯಸ್ಸಿನ” ಕಾರಣದಿಂದ “ಹಳೆಯ ಖಂಡ”ವಾಗುತ್ತಿದೆ ಎಂಬ ಆತಂಕವನ್ನು ನೆನಪಿಸಿದರು. ಜನಸಂಖ್ಯೆಯ ಕುಸಿತವು “ಏಕಾಂತದ ಮಹಾಮಾರಿ” ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದರು.

ಯುರೋಪಿನ ಕ್ರೈಸ್ತ ಮೌಲ್ಯಗಳು ಕಳೆದ ದಶಕಗಳಲ್ಲಿ ದುರ್ಬಲಗೊಂಡಿರುವುದರ ಬಗ್ಗೆ ಕೂಡ ಜಗದ್ಗುರುಗಳು ಚಿಂತನೆ ವ್ಯಕ್ತಪಡಿಸಿದರು. ಯುರೋಪಿನ ಸಂಸ್ಥಾಪಕರಿಗೆ ದಾರಿದೀಪವಾಗಿದ್ದ ಕ್ರೈಸ್ತ ಪ್ರೇರಣೆಯನ್ನು ತಿರಸ್ಕರಿಸಿದ ಪರಿಣಾಮವಾಗಿ “ತೀವ್ರ ಬಂಜೆತನದ ಕಾಲ” ಉಂಟಾಗಿದೆ ಎಂದು ಅವರು ಹೇಳಿದರು. ಅನೇಕ ಮಕ್ಕಳಿಗೆ ಜನಿಸುವ ಹಕ್ಕೇ ಕಸಿದುಕೊಳ್ಳಲಾಗಿದೆ, ಯುವಪೀಳಿಗೆಗೆ ಭವಿಷ್ಯವನ್ನು ಎದುರಿಸಲು ಬೇಕಾದ ಸಾಂಸ್ಕೃತಿಕ ಮತ್ತು ಭೌತಿಕ ನೆಲೆ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ಕುಟುಂಬಗಳಿಗೆ ಬೆಂಬಲ ನೀಡುತ್ತೇವೆ ಎಂದು ಹೇಳುವ ಕೆಲವು ನೀತಿಗಳು ಒಂದೆಡೆ ತಾಯಿತನದ ವಿರುದ್ಧ ಭೇದಭಾವವನ್ನು ಉತ್ತೇಜಿಸುತ್ತವೆ, ಗರ್ಭಪಾತವನ್ನು ಹಕ್ಕಾಗಿ ಸಮರ್ಥಿಸುತ್ತವೆ ಮತ್ತು ಕುಟುಂಬ ನಿರ್ಮಾಣದ ಆಸೆಯನ್ನೇ ದುರ್ಬಲಗೊಳಿಸುತ್ತವೆ ಎಂದು ಜಗದ್ಗುರುಗಳು ಟೀಕಿಸಿದರು. ಆದರೂ ಕುಟುಂಬಗಳು ಮತ್ತು ಜನಸಂಖ್ಯಾ ಪುನರುಜ್ಜೀವನಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳು ಮತ್ತು ಯೋಜನೆಗಳ ಬಗ್ಗೆ ಅವರು ಕೃತಜ್ಞತೆ ವ್ಯಕ್ತಪಡಿಸಿದರು.

ಜಗದ್ಗುರುಗಳ ಪ್ರಕಾರ, ಜನಸಂಖ್ಯಾ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ರಾಜಕೀಯ ಸಂಸ್ಥೆಗಳು, ಶಿಕ್ಷಣ ವಲಯ ಮತ್ತು ನಾಗರಿಕ ಸಮಾಜ ಒಟ್ಟಾಗಿ ಕೆಲಸ ಮಾಡಬೇಕು. “ಕುಟುಂಬವೇ ಸಮಾಜ ಜೀವನದ ಮೊದಲ ಮತ್ತು ಬದಲಾಗಲಾರದ ಶಾಲೆ” ಎಂದು ಜಗದ್ಗುರು ದ್ವಿತೀಯ ಜಾನ್ ಪಾಲ್ ಅವರ ಬೋಧನೆಯನ್ನು ಉಲ್ಲೇಖಿಸಿ ಅವರು ಹೇಳಿದರು. ಪುರುಷ ಮತ್ತು ಮಹಿಳೆಯ ವಿವಾಹದ ಮೇಲೆ ನಿರ್ಮಿತ ಕುಟುಂಬವನ್ನು ಬಲಪಡಿಸುವ ನೀತಿಗಳ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು, ಧರ್ಮ ಸಭೆಯ ದೃಷ್ಟಿಕೋನವು ಹಳೆಯ ಸಾಮಾಜಿಕ ಮಾದರಿಗಳಿಗೆ ಹಿಂತಿರುಗುವುದಲ್ಲ, ಬದಲಾಗಿ ಮಾನವ ಜೀವನ ಮತ್ತು ಭವಿಷ್ಯದ ತಲೆಮಾರುಗಳಿಗೆ ದಾರಿದೀಪವಾಗುವ ಶಾಶ್ವತ ಮೌಲ್ಯಗಳನ್ನು ನೀಡುವುದಾಗಿದೆ ಎಂದು ಹೇಳಿದರು. “ಕುಟುಂಬಕ್ಕಾಗಿ ಹೊಸ ವಸಂತ ಋತು ಮಾತ್ರವೇ ವಯೋವೃದ್ಧ ಜನಸಂಖ್ಯೆಯ ಚಳಿಗಾಲವನ್ನು ಪರಿವರ್ತಿಸಬಲ್ಲದು” ಎಂದು ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

25 ಮೇ 2026, 17:11