ಪೇತ್ರರ ಕಾಣಿಕೆ ಸಂಗ್ರಹದ ಮೂಲಕ ತಮ್ಮ ಪೇತ್ರಸೇವೆಗೆ ಬೆಂಬಲ ನೀಡುತ್ತಿರುವ ಎಲ್ಲ ವಿಶ್ವಾಸಿಗಳಿಗೆ ಜಗದ್ಗುರುಗಳು ಧನ್ಯವಾದಗಳನ್ನು ಅರ್ಪಿಸಿದರು.
ವ್ಯಾಟಿಕನ್ ವರದಿ
ರೋಮ್ ನಗರದ ಪೋಷಕ ಸಂತರಾದ ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ಸಂತ ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಯ ಬಳಿಕ ವಿಶ್ವದಾದ್ಯಂತದ ವಿಶ್ವಾಸಿಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ಪೇತ್ರರ ಕಾಣಿಕೆ ಸಂಗ್ರಹದ ಮೂಲಕ ಪೇತ್ರರ ಉತ್ತರಾಧಿಕಾರಿಯಾಗಿ ತಮ್ಮ ಸೇವೆಯನ್ನು ಉದಾರವಾಗಿ ಬೆಂಬಲಿಸಿದ ಎಲ್ಲರಿಗೂ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. “ನಾವು ನಂಬಿಕೆ ಮತ್ತು ಐಕ್ಯತೆಯಲ್ಲಿ ಒಟ್ಟಾಗಿ ನಡೆಯುವುದನ್ನು ಮುಂದುವರಿಸೋಣ” ಎಂದು ಅವರು ಕರೆ ನೀಡಿದರು.
ಪ್ರತಿವರ್ಷ ನಡೆಯುವ ಪೇತ್ರರ ಕಾಣಿಕೆ ಸಂಗ್ರಹದ ಮೂಲಕ ಜಗದ್ಗುರುಗಳು ವಿಶ್ವದಾದ್ಯಂತ ದತ್ತಿ ಕಾರ್ಯಗಳನ್ನು ಕೈಗೊಳ್ಳಲು, ಪ್ರಕೃತಿ ವಿಕೋಪಗಳಿಂದ ಸಂಕಷ್ಟಕ್ಕೊಳಗಾದವರಿಗೆ ನೆರವು ನೀಡಲು ಹಾಗೂ ಬಡವರು ಮತ್ತು ದುರ್ಬಲ ಸಮುದಾಯಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಈ ಸೇವೆಗೆ ತಮ್ಮ ಕೈಜೋಡಿಸುವ ಎಲ್ಲ ದಾನಿಗಳ ಉದಾರತೆಯನ್ನು ಜಗದ್ಗುರುಗಳು ಕೃತಜ್ಞತೆಯಿಂದ ಸ್ಮರಿಸಿದರು.
ರೋಮ್ ನಗರದ ಪೋಷಕ ಸಂತರ ಹಬ್ಬದ ಸಂದರ್ಭದಲ್ಲಿ, ಜಗದ್ಗುರುಗಳು ನಗರದ ಎಲ್ಲ ನಿವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ವಿಶೇಷವಾಗಿ ರೋಗಿಗಳು, ಏಕಾಂಗಿಯಾಗಿ ಬದುಕುತ್ತಿರುವವರು ಹಾಗೂ ಕಾರಾಗೃಹದಲ್ಲಿರುವವರಿಗಾಗಿ ತಮ್ಮ ಪ್ರಾರ್ಥನೆ ಮತ್ತು ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದರು. ರೋಮಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಧರ್ಮಗುರುಗಳು, ಧಾರ್ಮಿಕ ಸಹೋದರಿಯರು ಮತ್ತು ಧಾರ್ಮಿಕ ಸಹೋದರರಿಗೆ ಧನ್ಯವಾದಗಳನ್ನು ಅರ್ಪಿಸಿ, ಅವರ ನಿತ್ಯದ ಸೇವೆಯೇ ನಗರದ ಕ್ರೈಸ್ತ ಹೃದಯವನ್ನು ಜೀವಂತವಾಗಿರಿಸುತ್ತದೆ ಎಂದು ಹೇಳಿದರು.
ಸಂತ ಪೇತ್ರರ ಚೌಕದಲ್ಲಿ ‘ಎಲ್’ಒಸ್ಸರ್ವಾತೊರೆ ದಿ ಸ್ಟ್ರಾದಾ’ ಪತ್ರಿಕೆಯ ವಿಶೇಷ ಸಂಚಿಕೆಯನ್ನು ವಿತರಿಸುತ್ತಿದ್ದ ನಿರಾಶ್ರಿತರಿಗೆ ಜಗದ್ಗುರುಗಳು ವಿಶೇಷ ಅಭಿನಂದನೆ ಸಲ್ಲಿಸಿದರು. ಸಮಾಜದ ಅಂಚಿನಲ್ಲಿರುವ ಹಾಗೂ ಅತ್ಯಂತ ದುರ್ಬಲ ಜನರ ಜೀವನಾನುಭವಗಳು, ಆಲೋಚನೆಗಳು ಮತ್ತು ಧ್ವನಿಗೆ ವೇದಿಕೆ ಕಲ್ಪಿಸುವ ಈ ಪ್ರಕಟಣೆಗೆ ಕೊಡುಗೆ ನೀಡುವ ಪ್ರತಿಯೊಬ್ಬರಿಗೂ ಅವರು ಶುಭಾಶಯಗಳನ್ನು ಕೋರಿದರು.
ಕೊನೆಗೆ, ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಅಂಗವಾಗಿ ರೋಮ್ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಆಯೋಜನೆಯಲ್ಲಿ ತೊಡಗಿರುವ ಎಲ್ಲರಿಗೂ ಜಗದ್ಗುರುಗಳು ಧನ್ಯವಾದಗಳನ್ನು ಅರ್ಪಿಸಿದರು. ವಿಶೇಷವಾಗಿ ‘ಪ್ರೊ-ಲೊಕೊ’ ಸ್ವಯಂಸೇವಕರು ವಿಯಾ ದೆಲ್ಲಾ ಕೊನ್ಚಿಲಿಯಾಜಿಯೋನೇ ರಸ್ತೆಯನ್ನು ಹೂವಿನ ರಂಗೋಲಿಗಳಿಂದ ಅಲಂಕರಿಸಿದ ಸೇವೆಯನ್ನು ಶ್ಲಾಘಿಸಿದರು. ಜೊತೆಗೆ, ಈ ವರ್ಷದ ‘ಕಾಸ್ಟೆಲ್ ಸಂತ್ಆಂಜೆಲೊ ಗಿರಾಂದೊಲಾ’ ಸಿಡಿಮದ್ದು ಪ್ರದರ್ಶನವನ್ನು ಆಯೋಜಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಈ ಎಲ್ಲ ಆಚರಣೆಗಳು ರೋಮಿನ ಕ್ರೈಸ್ತ ಪರಂಪರೆಯನ್ನು ಇನ್ನಷ್ಟು ಸಮೃದ್ಧಗೊಳಿಸುತ್ತವೆ ಎಂದು ಹೇಳಿದರು.
