ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ರೋಮಿನ 200 ಬಡವರೊಂದಿಗೆ ಜಗದ್ಗುರುಗಳು ಮಧ್ಯಾಹ್ನದ ಊಟ ಮಾಡಲಿದ್ದಾರೆ.
ವ್ಯಾಟಿಕನ್ ವರದಿ
ಜುಲೈ 11, ಶನಿವಾರ, ಜಗದ್ಗುರು ಲಿಯೋರವರು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಜಗದ್ಗುರುಗಳ ಉದ್ಯಾನವನದ ವ್ಯಾಪ್ತಿಯಲ್ಲಿರುವ ಬೊರ್ಗೊ ಲೌದಾತೋ ಸಿ' ಕೇಂದ್ರದಲ್ಲಿ ಸುಮಾರು 200 ಬಡವರೊಂದಿಗೆ ಮಧ್ಯಾಹ್ನದ ಊಟವನ್ನು ಹಂಚಿಕೊಳ್ಳಲಿದ್ದಾರೆ.
"ಜಗದ್ಗುರುಗಳೊಂದಿಗೆ ಮಧ್ಯಾಹ್ನದ ಊಟ" ಎಂಬ ಹೆಸರಿನ ಈ ಕಾರ್ಯಕ್ರಮವು ಸೃಷ್ಟಿಯ ಸಂರಕ್ಷಣೆಗಾಗಿ ರೂಪಿಸಲಾದ ವಿಶೇಷ ಆರಾಧನಾ ವಿಧಿಯೊಂದಿಗೆ ಪವಿತ್ರ ಬಲಿಪೂಜೆಯ ಆಚರಣೆಯಿಂದ ಆರಂಭವಾಗಲಿದೆ. ಬಳಿಕ ಆತ್ಮೀಯ ಸ್ವಾಗತ ಹಾಗೂ ಉಪಾಹಾರ, ಬೊರ್ಗೊ ಲೌದಾತೋ ಸಿ' ಕೇಂದ್ರದ ಮಾರ್ಗದರ್ಶಿತ ಭೇಟಿಯೊಂದಿಗೆ ಜಗದ್ಗುರುಗಳೊಂದಿಗೆ ಮಧ್ಯಾಹ್ನದ ಸಾಮೂಹಿಕ ಊಟ ನಡೆಯಲಿದೆ.
ಈ ಉಪಕ್ರಮವು 2025ರ ಆಗಸ್ಟ್ನಲ್ಲಿ ಆರಂಭಗೊಂಡ ಪರಂಪರೆಯನ್ನು ಮುಂದುವರಿಸುತ್ತದೆ. ಅಂದು ಜಗದ್ಗುರು ಲಿಯೋರವರು ಇಟಲಿಯ ಅಲ್ಬಾನೋ ಧರ್ಮಪ್ರಾಂತ್ಯದ ಬಡವರೊಂದಿಗೆ ಮಧ್ಯಾಹ್ನದ ಊಟವನ್ನು ಹಂಚಿಕೊಂಡಿದ್ದರು. ಆ ಭೇಟಿಯು ನಂತರ ವಾರ್ಷಿಕ ಕಾರ್ಯಕ್ರಮವಾಗಿ ರೂಪುಗೊಂಡಿದ್ದು, ಬೊರ್ಗೊ ಲೌದಾತೋ ಸಿ' ಯೋಜನೆಯ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ ಇದರ ಆಯೋಜನೆಯನ್ನು ಮುಂದುವರಿಸುತ್ತಿದೆ.
ಪ್ರತಿ ವರ್ಷ ಒಂದು ವಿಭಿನ್ನ ಧರ್ಮಪ್ರಾಂತ್ಯವು ಬಡವರು, ನಿರಾಶ್ರಿತರು, ವಲಸಿಗರು ಹಾಗೂ ಸಂಕಷ್ಟದಲ್ಲಿರುವ ಇತರರನ್ನು ಒಗ್ಗೂಡಿಸಿ, ಸೃಷ್ಟಿಯ ಸೌಂದರ್ಯದ ನಡುವೆ ಒಂದು ದಿನವನ್ನು ಕಳೆಯುವ ಅವಕಾಶವನ್ನು ಹಾಗೂ ಜಗದ್ಗುರುಗಳನ್ನು ಭೇಟಿಯಾಗುವ ಸೌಭಾಗ್ಯವನ್ನು ಒದಗಿಸಲಿದೆ.
ಈ ವರ್ಷದ ಕಾರ್ಯಕ್ರಮವನ್ನು ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರ, ಧರ್ಮಕಾರ್ಯ ಸೇವೆಗಳ ಡಿಕಾಸ್ಟರಿ, ಹಾಗೂ ರೋಮಿನ ಧರ್ಮಪ್ರಾಂತ್ಯ ಜಂಟಿಯಾಗಿ ಆಯೋಜಿಸುತ್ತಿವೆ. ಇದರ ಮೂಲಕ ಇಟಲಿಯ ರಾಜಧಾನಿಯಾದ ರೋಮಿನಲ್ಲಿ ಸಂಕಷ್ಟದಲ್ಲಿರುವ ಜನರೊಂದಿಗೆ ಕಾರ್ಯನಿರ್ವಹಿಸುವ ವಿವಿಧ ಧರ್ಮ ಸಭೆಯ ಸಂಸ್ಥೆಗಳು ಮತ್ತು ಸಂಘಟನೆಗಳು ಒಂದಾಗಿ ಸೇರಿವೆ.
ಒಂದೇ ಧ್ಯೇಯ
ಲೌದಾತೋ ಸಿ' ಉನ್ನತ ಶಿಕ್ಷಣ ಕೇಂದ್ರದ ಮಹಾನಿರ್ದೇಶಕರಾದ ಕಾರ್ಡಿನಲ್ ಫಾಬಿಯೊ ಬಾಜ್ಜಿಯೋ, ಬೊರ್ಗೊ ಲೌದಾತೋ ಸಿ'ಯ ಉದ್ದೇಶವು "ಸೃಷ್ಟಿಯ ಸಂರಕ್ಷಣೆ ಮತ್ತು ಮಾನವ ವ್ಯಕ್ತಿಯ ಆರೈಕೆ ಎಂಬುದು ಒಂದೇ ಧ್ಯೇಯ" ಎಂಬುದನ್ನು ಸ್ಪಷ್ಟಪಡಿಸುವುದಾಗಿದೆ ಎಂದು ಹೇಳಿದರು.
ಸಾಮಾಜಿಕವಾಗಿ ಅಂಚಿನಲ್ಲಿರುವ ಜನರ ಕಡೆಗೆ ಜಗದ್ಗುರು ಲಿಯೋರವರ ನಿರಂತರ ಕಾಳಜಿಯ ಮತ್ತೊಂದು ಹೆಜ್ಜೆಯಾಗಿ ಅವರು ಈ ಉಪಕ್ರಮವನ್ನು ಬಣ್ಣಿಸಿದರು. ಮಾನವ ಘನತೆಯು "ಆಲಿಸುವಿಕೆ, ಆತ್ಮೀಯತೆ ಮತ್ತು ಭರವಸೆ"ಯನ್ನು ಕೋರುವ ಎಲ್ಲೆಡೆ ಧರ್ಮ ಸಭೆಯು ಹಾಜರಿರಬೇಕೆಂಬ ತನ್ನ ಕರೆಯನ್ನು ಈ ಭೇಟಿ ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದರು.
ಅದೇ ಸಂದೇಶವನ್ನು ಪ್ರತಿಧ್ವನಿಸಿದ ಧರ್ಮಕಾರ್ಯ ಸೇವೆಗಳ ಡಿಕಾಸ್ಟರಿಯ ಪ್ರೀಫೆಕ್ಟ್ ಆರ್ಚ್ಬಿಷಪ್ ಲೂಯಿಸ್ ಮರೀನ್ ದೆ ಸಾನ್ ಮಾರ್ಟಿನ್, ಜಗದ್ಗುರುಗಳು ಈ ಆಯ್ಕೆಯು ನಿಜವಾದ ಪ್ರೀತಿಯ ಸೇವೆಯು "ಸಾಮೀಪ್ಯ, ಭೇಟಿಯಾಗುವುದು ಮತ್ತು ಹಂಚಿಕೊಳ್ಳುವುದು" ಎಂಬುದರ ಮೂಲಕ ವ್ಯಕ್ತವಾಗುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
"ಧರ್ಮ ಸಭೆ ಅತ್ಯಂತ ದುರ್ಬಲರನ್ನು ತನ್ನ ಕೇಂದ್ರದಲ್ಲಿ ಇರಿಸಿದಾಗ, ಅದು ಸುವಾರ್ತೆಯನ್ನು ಗೋಚರಿಸುವಂತೆ ಮಾಡುತ್ತದೆ ಮತ್ತು ದೇವರ ಹೃದಯದಿಂದ ಯಾರೂ ದೂರವಿಲ್ಲ ಎಂಬುದಕ್ಕೆ ಸಾಕ್ಷಿಯಾಗುತ್ತದೆ" ಎಂದು ಅವರು ಹೇಳಿದರು.
ರೋಮ್ ಧರ್ಮಪ್ರಾಂತ್ಯದ ಜಗದ್ಗುರುಗಳ ವಿಕಾರ್ ಜನರಲ್ ಕಾರ್ಡಿನಲ್ ಬಾಲ್ದಾಸ್ಸಾರೆ ರೈನಾರವರು, ಈ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿರುವವರು ನಗರದಾದ್ಯಂತ ಧರ್ಮ ಕೇಂದ್ರಗಳು, ದಾನ ಸಂಸ್ಥೆಗಳು ಹಾಗೂ ಅನೇಕ ಧರ್ಮ ಸಭೆ ಮತ್ತು ಸಾಮಾಜಿಕ ಸಂಸ್ಥೆಗಳ ಮೂಲಕ ಪ್ರತಿದಿನವೂ ನೆರವು ಪಡೆಯುತ್ತಿರುವ ಜನರು ಎಂದು ವಿವರಿಸಿದರು.
"ಜಗದ್ಗುರುಗಳೊಂದಿಗಿನ ಈ ಭೇಟಿಯು, ಸಮಾಜದ ಅಂಚಿನಲ್ಲಿ ಉಳಿಯುವವರಿಗೆ ಮತ್ತೆ ಗೌರವದ ಸ್ಥಾನವನ್ನು ನೀಡುತ್ತದೆ" ಎಂದು ಅವರು ಹೇಳಿದರು. ಜೊತೆಗೆ, ಎಲ್ಲರನ್ನು ಸ್ವಾಗತಿಸುವ ಜವಾಬ್ದಾರಿಯನ್ನು ಇಡೀ ಕ್ರೈಸ್ತ ಸಮುದಾಯವು ತನ್ನದಾಗಿಸಿಕೊಳ್ಳಬೇಕೆಂಬ ಕರೆಯೂ ಇದಾಗಿದೆ ಎಂದು ಅವರು ತಿಳಿಸಿದರು.
ಈ ಉಪಕ್ರಮವು ಬೊರ್ಗೊ ಲೌದಾತೋ ಸಿ'ಯ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ ಎಂದು ಆಯೋಜಕರು ಹೇಳಿದರು. ಇಲ್ಲಿ ಸೃಷ್ಟಿಯ ಸಂರಕ್ಷಣೆ, ಮಾನವ ಅಭಿವೃದ್ಧಿ ಮತ್ತು ಕ್ರೈಸ್ತ ರೂಪುಗೊಳಿಸುವಿಕೆ ಇವುಗಳು ಪರಸ್ಪರ ಭೇಟಿ, ಸಹಭಾಗಿತ್ವ ಮತ್ತು ನಂಬಿಕೆಯ ಸ್ಪಷ್ಟ ಅನುಭವಗಳ ಮೂಲಕ ಒಂದಾಗುತ್ತವೆ.
ರೋಮಿನಲ್ಲಿ ಸಂಕಷ್ಟದಲ್ಲಿರುವ ಜನರ ಸೇವೆಯಲ್ಲಿ ತೊಡಗಿರುವ ಅನೇಕ ಕಥೋಲಿಕ ದತ್ತಿ ಸಂಸ್ಥೆಗಳು, ಧರ್ಮ ಕೇಂದ್ರದ ಸಮುದಾಯಗಳು, ಸ್ವಯಂಸೇವಕ ಸಂಘಟನೆಗಳು ಹಾಗೂ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಉದಾರವಾಗಿ ದೇಣಿಗೆಯಾಗಿ ನೀಡಿದ ಸ್ಥಳೀಯ ಉದ್ಯಮಗಳ ಸಹಕಾರದಿಂದಲೂ ಈ ಕಾರ್ಯಕ್ರಮ ಸಾಧ್ಯವಾಗಿದೆ.
