ಜಗದ್ಗುರಗಳ ಅಧಿಕಾರ ಸ್ಥಳ–ಮಾಲ್ಟಾ ರಾಜತಾಂತ್ರಿಕ ಸಂಬಂಧಗಳ 60ನೇ ವಾರ್ಷಿಕೋತ್ಸವವನ್ನು ಕಾರ್ಡಿನಲ್ ಪ್ಯಾರೊಲಿನ್ ಆಚರಿಸಿದರು
ವ್ಯಾಟಿಕನ್ ವರದಿ
ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಮಾಲ್ಟಾ ನಡುವಿನ ಅಧಿಕೃತ ರಾಜತಾಂತ್ರಿಕ ಸಂಬಂಧಗಳ 60ನೇ ವಾರ್ಷಿಕೋತ್ಸವದ ಅಂಗವಾಗಿ, ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ರವರು ಈ ವಾರಾಂತ್ಯದಲ್ಲಿ ಮಾಲ್ಟಾ ಗಣರಾಜ್ಯಕ್ಕೆ ಭೇಟಿ ನೀಡಿದರು. ಭಾನುವಾರ ಅವರು ವಾಲೆಟ್ಟಾದ ಸಂತ ಜಾನ್ ಸಹ-ಕಥೀಡ್ರಲ್ನಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು. ಈ ದಿನವು ಮಾಲ್ಟಾದಲ್ಲಿ ಸಂತ ಪೌಲರ ನೌಕಾಭಂಗದ ಹಬ್ಬವಾಗಿಯೂ ಆಚರಿಸಲಾಗುತ್ತದೆ.
ತಮ್ಮ ಉಪದೇಶದಲ್ಲಿ ಕಾರ್ಡಿನಲ್ ಪ್ಯಾರೊಲಿನ್ ರವರು, ರೋಮಿಗೆ ಪ್ರಯಾಣಿಸುತ್ತಿದ್ದಾಗ ಸಂತ ಪೌಲರು ಅನುಭವಿಸಿದ ಘಟನೆಗಳನ್ನು ಸ್ಮರಿಸಿದರು. ಅವರು ಸಂತ ಪೌಲರನ್ನು ನಿಯಂತ್ರಣಕ್ಕೆ ಮೀರಿದ ಶಕ್ತಿಗಳ ಕೈಯಲ್ಲಿ ಸಿಲುಕಿದ ಕೈದಿ ಎಂದು ವಿವರಿಸಿದರೂ, ಭೀಕರ ಬಿರುಗಾಳಿಯ ಮಧ್ಯೆಯೂ ಅವರು ಸ್ಪಷ್ಟ ದೃಷ್ಟಿಯೊಂದಿಗೆ ಮಾತನಾಡಿ, ನಾವಿಕರು ಮತ್ತು ಪ್ರಯಾಣಿಕರಿಗೆ ಧೈರ್ಯ ತುಂಬಿದ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಅವರ ಅಧಿಕಾರ ಹುದ್ದೆ ಅಥವಾ ಶಕ್ತಿಯಿಂದಲ್ಲ, ದೇವರೊಂದಿಗಿನ ಸಂಬಂಧ ಮತ್ತು ಇತರರ ಮೇಲಿನ ಜವಾಬ್ದಾರಿಯಿಂದ ಉದ್ಭವಿಸಿತ್ತೆಂದು ಅವರು ಒತ್ತಿಹೇಳಿದರು.
ಕಾರ್ಡಿನಲ್ ಪ್ಯಾರೊಲಿನ್ ರವರ ಪ್ರಕಾರ, ಸಂತ ಪೌಲರ ಜೀವನವು ನಮಗೆ ಕಲಿಸುವ ಪಾಠವೆಂದರೆ ನಿಜವಾದ ಅಧಿಕಾರವು ನಿಯಂತ್ರಣದಿಂದಲ್ಲ, ನಿಷ್ಠೆಯಿಂದ ಹುಟ್ಟುತ್ತದೆ ಬಲವಂತದಿಂದಲ್ಲ, ಸಂಕಷ್ಟದ ವೇಳೆಯಲ್ಲಿ ವಿಶ್ವಾಸದಿಂದ ನಿಲ್ಲುವುದರಿಂದ ಬೆಳೆಯುತ್ತದೆ. ದುರ್ಬಲ ಸ್ಥಿತಿಯಲ್ಲಿದ್ದರೂ ಸಂತ ಪೌಲರು ಇತರರಿಗೆ ಮಾರ್ಗದರ್ಶಕ ಮತ್ತು ಶಕ್ತಿಯ ಮೂಲವಾಗಿದ್ದರು ಎಂದು ಅವರು ಹೇಳಿದರು.
ಮಾಲ್ಟಾದ ಜನರು ನೌಕಾಭಂಗಕ್ಕೊಳಗಾದವರಿಗೆ ತೋರಿದ ಅಸಾಧಾರಣ ದಯೆಯನ್ನು ಉಲ್ಲೇಖಿಸಿದ ಕಾರ್ಡಿನಲ್, ಮಾಲ್ಟಾದ ನೆಲದಲ್ಲಿ ನಡೆದ ಮೊದಲ ಕ್ರೈಸ್ತ ಕ್ರಿಯೆಯೇ ಆತಿಥ್ಯ ಎಂದು ಹೇಳಿದರು. ಅಪಾಯವನ್ನು ಭೇಟಿಯಾಗಿ, ಭಯವನ್ನು ಸಂಬಂಧವಾಗಿ ಪರಿವರ್ತಿಸುವ ಸಾಮರ್ಥ್ಯವೇ ಮಾಲ್ಟಾದ ಕ್ರೈಸ್ತ ಪರಂಪರೆಯ ವೈಶಿಷ್ಟ್ಯವಾಗಿದ್ದು, ಸಂತ ಪೌಲರು ಅತಿಥಿಯಾಗಿ ಬಂದರೂ, ವಿಶ್ವಾಸದ ತಂದೆಯಾಗಿ ಅಲ್ಲಿಂದ ಹೊರಟರು ಎಂದು ಹೇಳಿದರು.
ಇಂದಿನ ಜಗತ್ತಿನ ಸ್ಥಿತಿಯನ್ನು ಸ್ಮರಿಸಿದ ಕಾರ್ಡಿನಲ್ ಪ್ಯಾರೊಲಿನ್, ಯುದ್ಧ, ಸ್ಥಳಾಂತರ, ಸಾಮಾಜಿಕ ವಿಭಜನೆ ಮತ್ತು ಭವಿಷ್ಯದ ಭಯಗಳಿಂದ ತುಂಬಿರುವ ಇತಿಹಾಸದ ಸಾಗರವನ್ನು ಸಂತ ಪೌಲರ ಪ್ರಯಾಣದ ಸಾಗರಕ್ಕೆ ಹೋಲಿಸಿದರು. ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯನ್ನು ತ್ಯಜಿಸುವುದಕ್ಕಿಂತಲೂ, ಗಮನದಿಂದ ಕೇಳಿ, ಅಗತ್ಯವಿದ್ದಾಗ ಧೈರ್ಯವಾಗಿ ಮಾತನಾಡುವುದು ಮತ್ತು ಪ್ರತಿಯೊಬ್ಬರ ಜೀವನವೂ ಅಮೂಲ್ಯ ಎಂಬುದನ್ನು ನೆನಪಿಸುವುದೇ ಧರ್ಮ ಸಭೆ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ಕರ್ತವ್ಯ ಎಂದು ಅವರು ಹೇಳಿದರು.
ಅಂತಿಮವಾಗಿ, ಮಾಲ್ಟಾ ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದ ನಡುವಿನ 60 ವರ್ಷದ ರಾಜತಾಂತ್ರಿಕ ಸಂಬಂಧಗಳು ಎರಡು ಸಾವಿರ ವರ್ಷಗಳ ಹಳೆಯ ಕ್ರೈಸ್ತ ಬಾಂಧವ್ಯದ ಫಲವೆಂದು ಕಾರ್ಡಿನಲ್ ಹೇಳಿದರು. ಶಿಕ್ಷಣ, ವಿವಾಹ, ಧರ್ಮ ಸಭೆಯ ಆಸ್ತಿ ಮತ್ತು ರೂಪಣೆಯ ಕುರಿತು ನಡೆದ ಒಪ್ಪಂದಗಳು ಕಾನೂನು ದಾಖಲೆಗಳಷ್ಟೇ ಅಲ್ಲ, ಪರಸ್ಪರ ವಿಶ್ವಾಸದ ಚಿಹ್ನೆಗಳಾಗಿವೆ ಎಂದು ಅವರು ವಿವರಿಸಿದರು. ಪ್ರತಿಯೊಬ್ಬ ಮಾನವನ ಘನತೆಯೇ ಮೊದಲಾಗಿರಬೇಕು ಯಾವುದೇ ವ್ಯಕ್ತಿಯನ್ನು ಎಂದಿಗೂ ತ್ಯಜಿಸಬಾರದು ಎಂಬುದನ್ನು ಒತ್ತಿಹೇಳುತ್ತಾ ಕಾರ್ಡಿನಲ್ ಪ್ಯಾರೊಲಿನ್ ತಮ್ಮ ಸಂದೇಶವನ್ನು ಸಮಾಪ್ತಿಗೊಳಿಸಿದರು.