ಸಹೋದರಿ ರಾಫೆಲ್ಲಾ ಪೆಟ್ರಿನಿ ಅವರು ರೋಮ್‌ನ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ನಡೆದ ‘AI ಮತ್ತು ಕೆಲಸದ ಭವಿಷ್ಯ’ ಉನ್ನತ ಮಟ್ಟದ ಚರ್ಚೆಯಲ್ಲಿ ಮುಖ್ಯ ಭಾಷಣ ಮಾಡುತ್ತಿರುವ ದೃಶ್ಯ ಸಹೋದರಿ ರಾಫೆಲ್ಲಾ ಪೆಟ್ರಿನಿ ಅವರು ರೋಮ್‌ನ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ನಡೆದ ‘AI ಮತ್ತು ಕೆಲಸದ ಭವಿಷ್ಯ’ ಉನ್ನತ ಮಟ್ಟದ ಚರ್ಚೆಯಲ್ಲಿ ಮುಖ್ಯ ಭಾಷಣ ಮಾಡುತ್ತಿರುವ ದೃಶ್ಯ 

ಸಹೋದರಿ ಪೆಟ್ರಿನಿ: “ಉದ್ಯೋಗದ ಭವಿಷ್ಯ ಯಂತ್ರಗಳಲ್ಲಿ ಅಲ್ಲ, ಮಾನವೀಯ ನೈತಿಕ ನಿರ್ಧಾರಗಳಲ್ಲಿ ಇದೆ”

ರೋಮ್‌ನಲ್ಲಿ ನಡೆದ ‘AI ಮತ್ತು ಉದ್ಯೋಗದ ಭವಿಷ್ಯ’ ಎಂಬ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದ ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್ ಅಧ್ಯಕ್ಷರಾದ ಸಹೋದರಿ ರಾಫೆಲ್ಲಾ ಪೆಟ್ರಿನಿ ಅವರು, “ಉದ್ಯೋಗದ ಭವಿಷ್ಯ ಯಂತ್ರಗಳಲ್ಲಿ ಅಲ್ಲ, ಮಾನವಕುಲದ ನೈತಿಕ ನಿರ್ಧಾರಗಳಲ್ಲಿ ಇದೆ” ಎಂದು ಒತ್ತಿಹೇಳಿದರು. ಅವರು ಮುಂದುವರೆದು, ಕೃತಕ ಬುದ್ಧಿಮತ್ತೆಯ ಕುರಿತು ಭಯಪಡಬೇಕಾಗಿಲ್ಲ, ಆದರೆ ಅದನ್ನು ಅಂಧವಾಗಿ ಸ್ವೀಕರಿಸುವುದೂ ಸರಿಯಲ್ಲ ಎಂದು ಸೂಚಿಸಿದರು.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“ಅಂತಿಮವಾಗಿ, ಭವಿಷ್ಯವು ಯಂತ್ರಗಳಲ್ಲಿ ಅಲ್ಲ, ಮಾನವಕುಲದ ನೈತಿಕ ಆಯ್ಕೆಗಳಲ್ಲಿ ಇದೆ.”

ಈ ಮಹತ್ವದ ಹೇಳಿಕೆಯನ್ನು ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್ ಅಧ್ಯಕ್ಷರಾದ ಸಹೋದರಿ ರಾಫೆಲ್ಲಾ ಪೆಟ್ರಿನಿ ಅವರು ರೋಮ್‌ನ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ “AI ಮತ್ತು ಕೆಲಸದ ಭವಿಷ್ಯ” ಎಂಬ ಉನ್ನತ ಮಟ್ಟದ ಸಂವಾದದ ವೇಳೆ ವ್ಯಕ್ತಪಡಿಸಿದರು.

ಪವಿತ್ರ ಪೀಠದ ಅಮೆರಿಕದ ರಾಯಭಾರಿ ಕಚೇರಿ ಆಯೋಜಿಸಿ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಜಪಾನ್, ತೈವಾನ್ ಮತ್ತು ಅಮೆರಿಕದ ರಾಯಭಾರಿಗಳು, ಜೊತೆಗೆ ಜಾರ್ಜ್‌ಟೌನ್ ವಿಶ್ವವಿದ್ಯಾಲಯ, ಕ್ಯಾಥೋಲಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಲಿಯೋನಮ್ ಇನ್‌ಸ್ಟಿಟ್ಯೂಟ್ ಫಾರ್ AI & ಎಮರ್ಜಿಂಗ್ ಟೆಕ್ನಾಲಜಿ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಕೃತಕ ಬುದ್ಧಿಮತ್ತೆ ಮತ್ತು ಕೆಲಸದ ಭವಿಷ್ಯದ ಗಡಿಗಳನ್ನು ಅನ್ವೇಷಿಸಲು ಪ್ರಮುಖ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಯಿತು.

ಈ ಸಂವಾದವು ತಂತ್ರಜ್ಞಾನ ನಿರ್ಮಾಪಕರು, ಧರ್ಮಶಾಸ್ತ್ರಜ್ಞರು, ನೈತಿಕ ತಜ್ಞರು, ನಿಯಂತ್ರಣ ಸಂಸ್ಥೆಗಳು, ನೀತಿ ರೂಪಿಸುವವರು, ಶೈಕ್ಷಣಿಕ ವಲಯ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, AI ಮತ್ತು ಕೆಲಸದ ಭವಿಷ್ಯ ಕುರಿತು ಹಾಗೂ ಆ ಭವಿಷ್ಯವನ್ನು ರೂಪಿಸುವ ನಮ್ಮ ಸಂಯುಕ್ತ ಜವಾಬ್ದಾರಿಯ ಬಗ್ಗೆ ಚರ್ಚೆ ನಡೆಸಿತು.

ಸಹೋದರಿ ಪೆಟ್ರಿನಿ: ‘ಮುಖ್ಯ ತಿರುವಿನ ಹಂತದಲ್ಲಿ ನಾವು’

ತಮ್ಮ ಮುಖ್ಯ ಭಾಷಣದಲ್ಲಿ, ಸಹೋದರಿ ರಾಫೆಲ್ಲಾ ಪೆಟ್ರಿನಿ ಅವರು ಕೃತಕ ಬುದ್ಧಿಮತ್ತೆ ಒಂದು ಪರಿವರ್ತಕ ಶಕ್ತಿ ಆಗಿದ್ದು, ಅದು ಸಂಯುಕ್ತ ಜವಾಬ್ದಾರಿಯನ್ನು ಅಗತ್ಯವಿರಿಸುತ್ತದೆ ಎಂದು ಗಮನಿಸಿದರು.

“ಇಂದಿನ ಆಳವಾದ ನವೀನತೆಯ ಯುಗದಲ್ಲಿ, AI ಅಪಾರ ಸಾಧ್ಯತೆಗಳನ್ನು ನೀಡುತ್ತದೆ, ಆದರೆ ಅದು ನಮ್ಮನ್ನು ಒಂದು ಪ್ರಮುಖ ತಿರುವಿನ ಹಂತಕ್ಕೆ ತರುತ್ತದೆ,” ಎಂದು ಅವರು ಹೇಳಿದರು. “ಈ ತಂತ್ರಜ್ಞಾನವು ಸಂಪೂರ್ಣ ಮಾನವಕುಲದ ಹಿತಾಸಕ್ತಿಗೆ ಸೇವೆ ಮಾಡುವಂತೆ ಮಾಡಲು ನಾವು ಆಯ್ಕೆಗಳನ್ನು ಮಾಡಬೇಕು—ಯಾವಾಗಲೂ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು.”

ವ್ಯಾಟಿಕನ್ ನಗರ ರಾಜ್ಯದ ಗವರ್ನರೇಟ್ ಅಧ್ಯಕ್ಷರಾದ ಅವರು, ಈ ಆಯ್ಕೆಗಳ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿ ಕೆಲಸವನ್ನು ಗುರುತಿಸಿದರು. “ಧರ್ಮಸಭೆ ಕೆಲಸವನ್ನು ಭೂಮಿಯ ಮೇಲೆ ಮಾನವನ ಅಸ್ತಿತ್ವದ ಮೂಲಭೂತ ಆಯಾಮವೆಂದು ನಂಬುವುದರಿಂದ ಮಾತ್ರವಲ್ಲ, ಅದರ ಸ್ವಭಾವದಿಂದ ಹೊರತುಪಡಿಸಿ, ಅದು ವ್ಯಕ್ತಿಗೆ ತನ್ನ ಮಾನವತ್ವವನ್ನು ಅರಿತುಕೊಳ್ಳಲು ಅವಕಾಶ ನೀಡುವ ಆಯಾಮವಾಗಿರುವುದರಿಂದವೂ ಅದು ಮುಖ್ಯವಾಗಿದೆ,” ಎಂದು ಹೇಳಿದರು.

“ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೆಲಸವು ವ್ಯಕ್ತಿಗೆ ಮಾನವನಾಗಿ ತನ್ನ ಕರೆಯನ್ನು ನೆರವೇರಿಸಲು ಸಹಾಯ ಮಾಡುತ್ತದೆ,” ಎಂದು ಅವರು ವಿವರಿಸಿದರು. ಜೊತೆಗೆ, ಕೃತಕ ಬುದ್ಧಿಮತ್ತೆ ಕೆಲಸ ಮತ್ತು ಸಂವಹನವನ್ನು ಮರುವ್ಯಾಖ್ಯಾನಿಸುತ್ತಿರುವ ಯುಗದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದನ್ನು ಅವರು ಒಪ್ಪಿಕೊಂಡರು.

ಉದ್ಯೋಗ ಮಾರುಕಟ್ಟೆಯ ರೂಪಾಂತರ: ಅವಕಾಶಗಳ ಸೃಷ್ಟಿ, ಆದರೆ ಹೊಸ ಹೊರತಳ್ಳುವಿಕೆಯ ರೂಪಗಳು

ದಿನೇ ದಿನೇ ಸ್ವಯಂಚಾಲಿತವಾಗುತ್ತಿರುವ ಈ ಜಗತ್ತಿನಲ್ಲಿ ಮಾನವನಾಗಿರುವುದರ ಅರ್ಥವೇನು? ಎಂಬುದು ಅವರ ಪ್ರಶ್ನೆಯಾಗಿತ್ತು

“ಕೃತಕ ಬುದ್ಧಿಮತ್ತೆ ಕೇವಲ ಒಂದು ಸಾಧನವಲ್ಲ. ಅದು ಒಂದು ಪರಿವರ್ತಕ ಶಕ್ತಿ,” ಎಂದು ಅವರು ಒತ್ತಿಹೇಳಿ, “ಸ್ವಯಂಚಾಲನೆ ಮತ್ತು ಬುದ್ಧಿವಂತ ವ್ಯವಸ್ಥೆಗಳ ಹೆಚ್ಚುತ್ತಿರುವ ಬಳಕೆ ಉದ್ಯೋಗ ಮಾರುಕಟ್ಟೆಯನ್ನು ಮರುರೂಪಗೊಳಿಸುತ್ತಿದೆ—ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೊಸ ರೀತಿಯ ಹೊರತಳ್ಳುವಿಕೆಯನ್ನೂ ಉಂಟುಮಾಡುತ್ತಿದೆ” ಎಂದು ಹೇಳಿದರು.

ವ್ಯಾಟಿಕನ್ ಅಧಿಕಾರಿ ಅವರು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಪ್ರಕಟಿಸಿದ “Revolutionizing health and safety: The role of AI and digitalization at work” ಎಂಬ ವರದಿಯಲ್ಲಿ ತೋರಿಸಲಾದ ಕೆಲವು ಸಕಾರಾತ್ಮಕ ಬೆಳವಣಿಗೆಗಳ ಕಡೆ ಗಮನ ಸೆಳೆದರು.

ಅವರ ಅಧ್ಯಯನವು “ಈ ಡಿಜಿಟಲೀಕರಣ ಮತ್ತು ಸ್ವಯಂಚಾಲನೆ ಅಪಾಯಗಳಿಗೆ ಇರುವ ನೇರ ಸಂಪರ್ಕವನ್ನು ಕಡಿಮೆ ಮಾಡಬಹುದು, ಕೆಲಸದ ಸ್ಥಳದ ಗಾಯಗಳನ್ನು ತಡೆಯಬಹುದು ಮತ್ತು ಒಟ್ಟಾರೆ ಕೆಲಸದ ಪರಿಸ್ಥಿತಿಯನ್ನು ಸುಧಾರಿಸಬಹುದು” ಎಂದು ತೋರಿಸಿದೆ. ಇದು “ಕೆಲಸದ ಸ್ಥಳದ ಸುರಕ್ಷತೆ ಮತ್ತು ಆರೋಗ್ಯವನ್ನು ಮಾತ್ರವಲ್ಲ, ಅದನ್ನು ಮೇಲ್ವಿಚಾರಣೆ ಮಾಡುವ ವಿಧಾನವನ್ನೂ ಸುಧಾರಿಸುತ್ತದೆ” ಎಂದು ಹೇಳಿದರು.

“ಆದಾಗ್ಯೂ,ಅತಿಯಾದ ಮೇಲ್ವಿಚಾರಣೆ, ಕೆಲಸದ ತೀವ್ರೀಕರಣ, ಹಾಗೆಯೇ ದೈಹಿಕ ಮತ್ತು ಮಾನಸಿಕ-ಸಾಮಾಜಿಕ ಸವಾಲುಗಳಂತಹ ಅಪಾಯಗಳೂ ಉಂಟಾಗಬಹುದು” ಎಂದು  ಎಚ್ಚರಿಸಿದರು. ಈ ಅಪಾಯಗಳನ್ನು ತಗ್ಗಿಸಲು ILO “ಮುಂಚಿತ, ಸಾಕ್ಷ್ಯಾಧಾರಿತ ಮತ್ತು ಭಾಗವಹಿಸುವಿಕೆಯ ವಿಧಾನವನ್ನು” ಅನುಸರಿಸುವಂತೆ ಕರೆ ನೀಡಿದೆ ಎಂದು ಸಹೋದರಿ ಪೆಟ್ರಿನಿ ನೆನಪಿಸಿದರು.

ತಂತ್ರಜ್ಞಾನ ಬದಲಾವಣೆಗಳ ಪರಿಣಾಮಗಳನ್ನು ಕೌಶಲ್ಯ ಹೊಂದಿದ ಮತ್ತು ಕೌಶಲ್ಯರಹಿತ ಕಾರ್ಮಿಕರ ಮೇಲೆ ಪರಿಶೀಲಿಸಿದಾಗ, ಸ್ವಯಂಚಾಲನೆಯ ಪರಿಣಾಮಗಳನ್ನು ಪೂರಕತೆ (complementarity) ಅಥವಾ ಬದಲಾವಣೆ (substitution) ರೂಪದಲ್ಲಿ ಕಾಣಬಹುದು ಎಂದು ಅವರು ಸೂಚಿಸಿದರು.

ತಂತ್ರಜ್ಞಾನ ಇರುವುದು ಮಾನವ ಸೇವೆಗೆ —ಬದಲಿಸಲು ಅಲ್ಲ

ಆದಾಗ್ಯೂ, ತಂತ್ರಜ್ಞಾನ ಬದಲಾವಣೆಗಳು ಸಂಸ್ಥಾತ್ಮಕ ನಿರ್ಧಾರಗಳಿಂದಲೂ ಬಹಳವಾಗಿ ಪ್ರಭಾವಿತವಾಗುತ್ತವೆ. ಅವರು ಗಮನಿಸಿದಂತೆ, ಅನೇಕ ತಜ್ಞರು ತಂತ್ರಜ್ಞಾನವು ಮಾನವರಿಗೆ ಸೇವೆ ಮಾಡಲು ಇರುವುದೇ ಹೊರತು ಅವರನ್ನು ಬದಲಿಸಲು ಅಲ್ಲ ಎಂದು ಒತ್ತಿಹೇಳುತ್ತಾರೆ. ಹಾಗೆಯೇ ಜವಾಬ್ದಾರಿ, ಸಹಕಾರ ಮತ್ತು ಶಿಕ್ಷಣದ ಮೇಲೆ ಆಧಾರಿತ ಮಾನವ-ತಂತ್ರಜ್ಞಾನ ಮೈತ್ರಿಗೆ ಕರೆ ನೀಡಿದ್ದಾರೆ.

“ಕೃತಕ ಬುದ್ಧಿಮತ್ತೆ ಒಂದು ಅತ್ಯಂತ ಉಪಯುಕ್ತವಾದ ಕಲಿಕೆಯ ವಿಧಾನವಾಗಬಹುದು, ಗ್ರಹಿಸುವ ಒಂದು ಮಾರ್ಗವಾಗಬಹುದು—ಆದರೆ ಅದು ಸರಿಯಾದ ದೃಷ್ಟಿಕೋನ ಅಥವಾ ಮಾರ್ಗದರ್ಶನದಡಿ ಇರಬೇಕು,” ಎಂದು ಅವರು ಹೇಳಿದರು.

ಮಾನವ ವ್ಯಕ್ತಿಯನ್ನು ಕೇಂದ್ರದಲ್ಲಿರಿಸುವ ದೃಷ್ಟಿಕೋನದ ಅಗತ್ಯವನ್ನು ಒತ್ತಿಹೇಳುತ್ತಾ, ಇದು ಸಂಯುಕ್ತ ಜವಾಬ್ದಾರಿಯನ್ನು ಸೂಚಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸರ್ಕಾರಗಳ ಪಾತ್ರದ ಕುರಿತು ಅವರು ಮಾತನಾಡಿದರು. “ಸರ್ಕಾರಗಳು ನಿಯಂತ್ರಣವನ್ನು ಒದಗಿಸಬೇಕು, ಜವಾಬ್ದಾರಿಯುತವಾಗಿ ನವೀನತೆ ತರಬೇಕು; ಶಿಕ್ಷಕರು ತಿಳಿದ ನಾಗರಿಕರನ್ನು ರೂಪಿಸಬೇಕು; ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ತಂತ್ರಜ್ಞಾನವನ್ನು ವಿಮರ್ಶಾತ್ಮಕವಾಗಿಯೂ ಜವಾಬ್ದಾರಿಯಿಂದಲೂ ಬಳಸಬೇಕು,” ಎಂದು ಹೇಳಿದರು.

‘AI ಕುರಿತು ಭಯ ಬೇಡ- ಅಂಧ ವಿಶ್ವಾಸವೂ ಬೇಡ'

ಮಾನವನು ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟವನು ಮತ್ತು ಯಾವುದೇ ಕೆಲಸದ ವಿಷಯದಲ್ಲಿಯೂ ಅವನೇ ಕೇಂದ್ರವಾಗಿದ್ದಾನೆ ಎಂಬುದನ್ನು ನಾವು ನಂಬಿದರೆ, ಕೇವಲ ತಾಂತ್ರಿಕ ಪ್ರಗತಿಗಲ್ಲ, ಶಾಶ್ವತ ಮೌಲ್ಯಗಳ ಪ್ರಗತಿಯನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಸಹಕಾರ ಅಗತ್ಯವಿದೆ ಎಂದು ಅವರು ಸೂಚಿಸಿದರು.

ಈ ಹಿನ್ನೆಲೆಯಲ್ಲಿ, ತಂತ್ರಜ್ಞಾನ ಅಭಿವೃದ್ಧಿಯು ಮಾನವೀಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ತ್ಯಜಿಸಬಾರದು ಎಂದು ಅವರು ಕರೆ ನೀಡಿದರು.

“‘AI ಕುರಿತು ಭಯ ಬೇಡ, ಆದರೆ ಅದನ್ನು ಅಂಧವಾಗಿ ಸ್ವೀಕರಿಸಬಾರದು,” ಎಂದು ಸಹೋದರಿ ಪೆಟ್ರಿನಿ ಹೇಳಿದರು. ಕೆಲ ಸಂಶೋಧಕರು ಯಂತ್ರಗಳಿಗೆ ನೈತಿಕ ಮಾನದಂಡಗಳನ್ನು ವಿಧಿಸಿ ಗೌರವಯುತ ಮತ್ತು ಸತ್ಪ್ರವೃತ್ತಿಯ AI ಅನ್ನು ರೂಪಿಸಬಹುದು ಎಂದು ಹೇಳುತ್ತಿದ್ದರೂ, ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದು ಅವರು ಒಪ್ಪಿಕೊಂಡರು.

“ಅಂತಿಮವಾಗಿ, ಭವಿಷ್ಯವು ಯಂತ್ರಗಳಲ್ಲಿ ಅಲ್ಲ, ಮಾನವಕುಲದ ನೈತಿಕ ಆಯ್ಕೆಗಳಲ್ಲಿ ಇದೆ, ಈ ಹೊಸ ತಂತ್ರಜ್ಞಾನ ಯುಗವು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ನ್ಯಾಯ ಮತ್ತು ಏಕತೆಯ ಯುಗವಾಗುವುದೋ ಅಥವಾ ಹೊಸ ಅಸಮಾನತೆಯನ್ನು ತರಬಹುದೋ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವೂ ಜವಾಬ್ದಾರಿಯೂ ನಮ್ಮಲ್ಲಿದೆ.”

ವ್ಯಾಟಿಕನ್ ಕೃತಕ ಬುದ್ಧಿಮತ್ತೆಯ ಕ್ಷೇತ್ರವನ್ನು ಗಂಭೀರವಾಗಿ ಹೇಗೆ ಪರಿಗಣಿಸುತ್ತಿದೆ ಎಂಬುದನ್ನೂ ವಿವರಿಸಿದ ನಂತರ,  “ಕೃತಕ ಬುದ್ಧಿಮತ್ತೆ ಮಾನವ ಕ್ರಿಯೆಗಳ ಮೇಲೆ—ಖಂಡಿತವಾಗಿಯೂ ವೃತ್ತಿಪರ ಮತ್ತು ಸಾಮಾಜಿಕ ದೃಷ್ಟಿಯಿಂದ ಕೆಲಸಗಳ ಮೇಲೂ—ಆಳವಾದ ಪರಿಣಾಮ ಬೀರುವ ವಾಸ್ತವವಾಗಿದೆ. ಆದರೆ ಅದರ ದಿಕ್ಕು ಪೂರ್ವನಿರ್ಧಾರಿತವಾಗಿಲ್ಲ; ಅದನ್ನು ವಿನ್ಯಾಸಗೊಳಿಸುವವರ ಮತ್ತು ಜಾರಿಗೆ ತರುವವರ ಆಯ್ಕೆಗಳು, ಮೌಲ್ಯಗಳು ಮತ್ತು ಆಸಕ್ತಿಗಳನ್ನೇ ಅದು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

ತಜ್ಞರು, ನಾಯಕರು ಮತ್ತು ನೀತಿ ರೂಪಿಸುವವರ ಕಾರ್ಯಕ್ರಮ

ಚರ್ಚೆಯ ಕಾರ್ಯಕ್ರಮವನ್ನು ಪವಿತ್ರ ಪೀಠದ ಅಮೆರಿಕದ ರಾಯಭಾರಿ ಕಚೇರಿಯ ಲೌರಾ ಹೋಖ್ಲಾ ಅವರು ಆರಂಭಿಸಿದರು. ಬಳಿಕ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದ ರೆಕ್ಟರ್ ವಂ. ಗುರು ಮಾರ್ಕ್ ಲೂಯಿಸ್ ಅವರು ಸ್ವಾಗತ ಭಾಷಣ ಮಾಡುತ್ತಾ, ಈ ಚರ್ಚೆಯ ವಿಷಯವು ಗಂಭೀರ ಚಿಂತನೆ ಮತ್ತು ಪರಿಗಣನೆಗೆ ಅರ್ಹವಾಗಿದೆ ಎಂದು ಹೇಳಿದರು.

“ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಬೇಕು ಎಂಬುದರಲ್ಲಿ ನೈತಿಕ ಮೌಲ್ಯಗಳನ್ನು ಗಮನದಲ್ಲಿಡಬೇಕು” ಎಂದು ಒತ್ತಿಹೇಳಿದ ರೆಕ್ಟರ್, “ಇದೀಗ ಇದು ನಮ್ಮ ಹೊಣೆಗಾರಿಕೆ” ಎಂದರು—ವಿಶೇಷವಾಗಿ ಪಾಂಟಿಫಿಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಹೇಗೆ ಉತ್ತಮವಾಗಿ ಸಿದ್ಧಗೊಳಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ.

ಪವಿತ್ರ ಪೀಠದ ತೈವಾನ್‌ನ ರಾಯಭಾರಿ ಆಂಥನಿ ಸಿ.ವೈ. ಹೋ ಅವರು “ಜಾಗತಿಕ ಸಹಕಾರ ಮತ್ತು ತರಬೇತಿ ಚೌಕಟ್ಟು – ಬಹುಪಕ್ಷೀಯ ಚರ್ಚೆ” ಎಂಬ ವಿಷಯವನ್ನು ಪ್ರಸ್ತುತಪಡಿಸಿದರು. AI ನೈತಿಕತೆ, ಕೆಲಸ ಮತ್ತು ಮಾನವ ಗೌರವದ ಕುರಿತು ಮಹತ್ವದ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಅವರು ನೆನಪಿಸಿದರು. ಆದರೆ, “ಪೂಜ್ಯ ಜಗದ್ಗುರುಗಳಾದ ಲಿಯೋ ಹೇಳುವಂತೆ: AI ಮಾನವಕುಲಕ್ಕೆ ಸೇವೆ ಮಾಡಬೇಕು, ಅದರ ವಿರುದ್ಧವಾಗಬಾರದು” ಎಂದು ಅವರು ಒತ್ತಿಹೇಳಿದರು.

ಅವರು ತಮ್ಮ ಭಾಷಣವು AI ಮೂಲಕ ರಚಿಸಲ್ಪಟ್ಟದ್ದಲ್ಲ ಎಂಬುದಾಗಿ ಹಾಸ್ಯವಾಗಿ ಹೇಳಿದರು.

ಪವಿತ್ರ ಪೀಠದ ಅಮೆರಿಕದ ರಾಯಭಾರಿ ಬ್ರಯಾನ್ ಬರ್ಚ್ ಅವರು “ನಾವು ಇಲ್ಲಿ ಏಕೆ ಇದ್ದೇವೆ – ವಿನಯಕ್ಕೆ ಕರೆ” ಎಂಬ ವಿಷಯದ ಮೇಲೆ ಚಿಂತನೆ ಹಂಚಿಕೊಂಡರು. ಅವರು ಕೃತಕ ಬುದ್ಧಿಮತ್ತೆಯನ್ನು “ನಮ್ಮ ಕಾಲದ ನಿರ್ಧಾರಾತ್ಮಕ ಪ್ರಶ್ನೆ” ಎಂದು ವಿವರಿಸಿ, ಅದು “ಸಂಯುಕ್ತ ಜವಾಬ್ದಾರಿಯನ್ನು” ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. AI ಮತ್ತು ಅದರ ಕೆಲಸದ ಮೇಲೆ ಇರುವ ಪರಿಣಾಮವನ್ನು ಚರ್ಚಿಸುವಾಗ, ಇದು “ಅಮೂರ್ತವಾದ ವಿಷಯವಲ್ಲ,” ಆದರೆ “ಪ್ರಾಯೋಗಿಕ ಮತ್ತು ತುರ್ತು” ವಿಷಯವಾಗಿದೆ ಎಂದು ಅವರು ಗಮನಿಸಿದರು.

ಇನ್ನಷ್ಟು ದೃಷ್ಟಿಕೋಣಗಳನ್ನು ಹ್ಯೂಮನ್ ಟೆಕ್ನಾಲಜಿ ಫೌಂಡೇಶನ್‌ನ ಎರಿಕ್ ಸಲೋಬಿರ್ ಅವರು “ಸಂಯೋಜಿತ ದೃಷ್ಟಿ: AI ಮತ್ತು ಕೆಲಸದ ಭವಿಷ್ಯ” ಎಂಬ ಪ್ರಸ್ತುತಿಯಲ್ಲಿ ಹಂಚಿಕೊಂಡರು.

2025ರ ಗಾರ್ಟ್ನರ್ HR ಸಮೀಕ್ಷೆಯ ಪ್ರಕಾರ 65 ಶೇಕಡಾ ಉದ್ಯೋಗಿಗಳು ಕೆಲಸದಲ್ಲಿ AI ಬಳಸುವುದಕ್ಕೆ ಉತ್ಸುಕರಾಗಿದ್ದಾರೆ ಎಂಬುದನ್ನು ನೆನಪಿಸಿದ ಅವರು, ಉದ್ಯೋಗ ಕಳೆದುಕೊಳ್ಳುವ ಭೀತಿ, ಅಸತ್ಯತೆಯ ಸಮಸ್ಯೆಗಳು, ಪಾರದರ್ಶಕತೆ, ಪ್ರತಿಷ್ಠೆ ಮತ್ತು ಡೇಟಾ ಭದ್ರತೆ ಬಗ್ಗೆ ಉದ್ಯೋಗಿಗಳಿಗೆ ಇರುವ ಆತಂಕಗಳನ್ನೂ ಉಲ್ಲೇಖಿಸಿದರು.

ಈ ವಿಷಯದ ತಜ್ಞರಾದ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದ ಫಾ. ಪಾವ್ಲೋ ಬೆನಾಂತಿ ಅವರು “ಧಾರ್ಮಿಕ ದೃಷ್ಟಿಕೋಣ: ಸಮೃದ್ಧವಾಗುವ ಕಾರ್ಮಿಕ ಮತ್ತು ಕೆಲಸದ ಗೌರವ” ಎಂಬ ವಿಷಯವನ್ನು ವಿವರಿಸಿದರು. ಕ್ರೈಸ್ತ ಮೌಲ್ಯಗಳ ಪ್ರಕಾರ ವ್ಯಕ್ತಿಯ ಗುರುತು ಅವನು ಏನು ಉತ್ಪಾದಿಸುತ್ತಾನೆ ಎಂಬುದರಿಂದ ಅಲ್ಲ, ಅವನು ಯಾರು ಎಂಬುದರಿಂದ ನಿರ್ಧಾರವಾಗುತ್ತದೆ ಎಂದು ಅವರು ನೆನಪಿಸಿದರು.

ಆದ್ದರಿಂದ, ವಂ. ಗುರು ಬೆನಾಂತಿ ಅವರು ನಾವು ತಂತ್ರಜ್ಞಾನವನ್ನು ತಿರಸ್ಕರಿಸಬೇಕಾಗಿಲ್ಲ, ಆದರೆ ಅದನ್ನು ಪೂರಕವಾಗಿ ನೋಡಬೇಕು ಮತ್ತು ಕಾರ್ಮಿಕರನ್ನು ಕೇವಲ ವೆಚ್ಚದ ಅಂಶಗಳಾಗಿ ಇಳಿಸಬಾರದು ಎಂದು ಪುನರುಚ್ಚರಿಸಿದರು. ಅಂತಿಮವಾಗಿ, ವ್ಯಕ್ತಿಯ ಅಂತರ್ನಿಹಿತ ಗೌರವವನ್ನು ಕೇಂದ್ರದಲ್ಲೇ ಇಡಬೇಕು ಎಂದು ಅವರು ಹೇಳಿದರು.

AI ಯುಗದಲ್ಲಿ ಪರಿಣತಿ ಪಡೆಯುವುದು ಹೇಗೆ

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ನೋಮ್ ಯುಕ್ಟ್‌ಮನ್ ಅವರು “ಆರ್ಥಿಕ ದೃಷ್ಟಿಕೋನ: ಕಾರ್ಮಿಕರ ಭವಿಷ್ಯ ಮತ್ತು AI ಆರ್ಥಿಕತೆ” ಎಂಬ ವಿಷಯದ ಮೇಲೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. AI ಯಿಂದ ಪೂರಕವಾಗುವ ಕೆಲಸಗಳಲ್ಲಿ ಪರಿಣತಿ ಹೊಂದಿರುವವರು ಹಾಗೂ ಕಾನೂನು, ನೈತಿಕ ಅಥವಾ ಆರ್ಥಿಕ ಹೊಣೆಗಾರಿಕೆ ಹೊಂದಿರುವ ಸ್ಥಾನದಲ್ಲಿರುವವರು ಪ್ರಮುಖರಾಗುತ್ತಾರೆ ಎಂದು ಅವರು ಹೇಳಿದರು. ಆದರೆ ಇಂದಿನ ಸಂದರ್ಭದಲ್ಲಿ ಪರಿಣತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದೇ ದೊಡ್ಡ ಸವಾಲಾಗಿದೆ ಎಂದು ಅವರು ಸೂಚಿಸಿದರು.

“ನಾವು ವ್ಯಕ್ತಿಗಳಾಗಿ, ನಾಗರಿಕರಾಗಿ, ಶಿಕ್ಷಕರಾಗಿ, ನಿರ್ವಾಹಕರಾಗಿ ಮತ್ತು ನೀತಿ ರೂಪಿಸುವವರಾಗಿ ಎರಡು ಜವಾಬ್ದಾರಿಗಳನ್ನು ಹೊಂದಿದ್ದೇವೆ: ಮೊದಲನೆಯದು, AI ಅನ್ನು ಅಭಿವೃದ್ಧಿಪಡಿಸಲು ಮತ್ತು ಬಳಸಲು ನೆರವಾಗುವ ಕೌಶಲ್ಯಗಳನ್ನು ಬೆಳೆಸುವುದು; ಎರಡನೆಯದು, ಆಳವಾದ ಮಾನವೀಯ ಮತ್ತು ಸಾಮಾಜಿಕ ಕೌಶಲ್ಯಗಳಲ್ಲಿ ಮುಂದುವರಿದು ಹೂಡಿಕೆ ಮಾಡುವುದು,” ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಓಪನ್‌ಎಐನ ಜಾರ್ಜ್ ಆಸ್ಬೋರ್ನ್ ಅವರು ಸಮಾರೋಪ ಭಾಷಣ ಮಾಡಿದರು. ಕೃತಕ ಬುದ್ಧಿಮತ್ತೆಯಿಂದ ಸುಮಾರು 18 ಶೇಕಡಾ ಉದ್ಯೋಗಗಳು ನಿಜವಾದ ಅಪಾಯದಲ್ಲಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ ಎಂದು ಅವರು ಒಪ್ಪಿಕೊಂಡರು. ಆದರೆ ಮುಂಬರುವ ಭವಿಷ್ಯದಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಮಾನವರ ಪಾತ್ರ ಅಗತ್ಯವಾಗಿಯೇ ಉಳಿಯುತ್ತದೆ ಎಂದು ಹೇಳಿದರು.

“ಇನ್ನಷ್ಟು ಉತ್ತಮವಾದ ಪ್ರಶ್ನೆ, ಕೆಲಸಗಳು ಮತ್ತು ಉದ್ಯೋಗಗಳು ಹೇಗೆ ಬದಲಾಗುತ್ತವೆ ಎಂಬುದಾಗಿದೆ” ಎಂದು  ಹೇಳಿದರು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

05 ಮೇ 2026, 23:18