ಹಿಂಸೆಗೆ ವಿರುದ್ಧ ಶಾಂತಿ ಮತ್ತು ನ್ಯಾಯ:ಗ್ವಾಟೆಮಾಲಾ ಧರ್ಮಾಧ್ಯಕ್ಷರು
ಲೇಖಕರು: ಫೆಡೆರಿಕೋ ಪಿಯಾನಾ
ಗ್ವಾಟೆಮಾಲಾ ಸರ್ಕಾರವು ದೇಶವ್ಯಾಪಿಯಾಗಿ 30 ದಿನಗಳ ತುರ್ತು ಸ್ಥಿತಿಯನ್ನು ಘೋಷಿಸಿದ ಕೆಲವೇ ದಿನಗಳ ಬಳಿಕ, ಗ್ವಾಟೆಮಾಲಾ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ರೋಡೊಲ್ಫೊ ವಾಲೆನ್ಸುಯೆಲಾ ನೂನೆಸ್ ಅವರು ದೇಶದಲ್ಲಿ ವ್ಯಾಪಿಸಿರುವ “ಎಚ್ಚರಿಕೆ ಮತ್ತು ಭಯ”ದ ವಾತಾವರಣದ ಬಗ್ಗೆ ಮಾತನಾಡಿದರು.
“ಸಾಮಾನ್ಯ ನಾಗರಿಕರ ನಡುವೆ ಎಚ್ಚರಿಕೆಯೂ ಭಯವೂ ಪ್ರಬಲವಾಗಿದೆ. ಸರ್ಕಾರ ತ್ವರಿತವಾಗಿ ಪ್ರತಿಕ್ರಿಯಿಸಿದೆ ಎಂಬ ಭಾವನೆಯೂ ಇದೆ,” ಎಂದು ಅವರು ವಿವರಿಸಿದರು. ಮಧ್ಯ ಅಮೇರಿಕಾದ ಈ ದೇಶದ ರಾಜಧಾನಿ ಗ್ವಾಟೆಮಾಲಾ ನಗರದಲ್ಲಿ, ಅಪರಾಧ ಗುಂಪುಗಳ ಸದಸ್ಯರ ಹುಡುಕಾಟಕ್ಕಾಗಿ ಗಲಭೆ ನಿಯಂತ್ರಣ ಉಡುಪಿನಲ್ಲಿ ಪೊಲೀಸ್ರು ಮತ್ತು ಸೈನಿಕರು ಪ್ರದೇಶದಿಂದ ಪ್ರದೇಶಕ್ಕೆ ಪಟ್ರೋಲ್ ಮಾಡುತ್ತಿದ್ದರೂ, ಜನರು ಇನ್ನೂ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ.
ಕಳೆದ ಭಾನುವಾರ, ಮೂರು ವಿಭಿನ್ನ ಕಾರಾಗೃಹಗಳಲ್ಲಿ ಬಂಧಿತರಾಗಿದ್ದ ಅಪರಾಧ ಗುಂಪಿನ ಸದಸ್ಯರು ಗಲಭೆಗಳನ್ನು ಪ್ರಚೋದಿಸಿದ ಬಳಿಕ, ಕಾನೂನು ಜಾರಿಗೊಳಿಸುವ ಪಡೆಗಳು ಅವನ್ನು ನಿಯಂತ್ರಿಸಿದವು. ಆ ನಂತರ, ಅಪರಾಧ ಗುಂಪುಗಳು ಉಗ್ರ ಶೈಲಿಯ ದಾಳಿಗಳ ಮೂಲಕ ಹತ್ತು ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದವು.
ಗುರಿ ನೆಟ್ಟ ತಪಾಸಣೆ
ಸಂಸತ್ತಿನ ಅನುಮೋದನೆಯೊಂದಿಗೆ ಜಾರಿಗೊಳಿಸಲಾದ 30 ದಿನಗಳ ತುರ್ತು ಸ್ಥಿತಿಯ ಅಡಿಯಲ್ಲಿ ಬಂಧಿತರಾಗಿರುವ 200ಕ್ಕೂ ಹೆಚ್ಚು ಮಂದಿಯಲ್ಲಿ ಕನಿಷ್ಠ 20 ಮಂದಿ ‘ಬಾರಿಯೋ 18’ ಅಥವಾ ‘ಮಾರಾ ಸಲ್ವಾತ್ರುಚಾ’ ಎಂಬ ಅತ್ಯಂತ ಶಕ್ತಿಶಾಲಿ ಅಪರಾಧ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ ಎಂದು ಇತ್ತೀಚಿನ ವರದಿಗಳು ಸೂಚಿಸುತ್ತವೆ. ಈ ಎರಡು ಗ್ಯಾಂಗ್ಗಳು ಗ್ವಾಟೆಮಾಲಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರೂರವಾಗಿ ಪ್ರಾಬಲ್ಯ ಸಾಧಿಸುತ್ತಿವೆ.
ಕಾರಾಗೃಹ ಗಲಭೆಗಳು ತಮ್ಮ ಸದಸ್ಯರಿಗೆ ಸಡಿಲ ಬಂಧನ ಪರಿಸ್ಥಿತಿಗಳನ್ನು ಪಡೆಯಲು ಗ್ಯಾಂಗ್ಗಳು ಸಂಯೋಜಿತವಾಗಿ ನಡೆಸಿದ ಯತ್ನವೆಂದು ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರು ವಿವರಿಸಿದರು. “ಮುಖ್ಯವಾಗಿ ಕಾರಾಗೃಹಗಳು ಸಂಘಟಿತ ಅಪರಾಧದ ಹಿಡಿತದಲ್ಲಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಗ್ಯಾಂಗ್ ಸದಸ್ಯರು ಕಾರಾಗೃಹಗಳನ್ನು ನಿಯಂತ್ರಿಸುತ್ತಿದ್ದಾರೆ, ಭ್ರಷ್ಟ ಜೈಲು ಅಧಿಕಾರಿಗಳಿದ್ದಾರೆ, ಮತ್ತು ಅಲ್ಲಿ ಕಾನೂನು ಜಾರಿಗೊಳಿಸಲು ವಿಫಲವಾಗಿರುವ ದುರ್ಬಲ ನ್ಯಾಯಾಂಗ ವ್ಯವಸ್ಥೆಯೂ ಇದೆ,” ಎಂದು ಅವರು ಹೇಳಿದರು.
ಮರೆಯಾದ ಹಿತಾಸಕ್ತಿಗಳು
ಇದೇ ವೇಳೆ, ಪೊಲೀಸ್ ತಪಾಸಣೆಗಳು ಮತ್ತು ಕಾನೂನು ಜಾರಿಯ ಕ್ರಮಗಳು ಗ್ಯಾಂಗ್ಗಳನ್ನು ಕೋಪಗೊಳಿಸಿ, ಈ ವಾರದ ಆರಂಭದಲ್ಲಿ ಕಂಡಂತೆಯೇ, ರಾಜ್ಯದ ವಿರುದ್ಧ ಹಿಂಸಾತ್ಮಕ ದಾಳಿಗಳಿಗೆ ಕಾರಣವಾಗುತ್ತಿವೆ.
ಗ್ವಾಟೆಮಾಲಾ ಅಧ್ಯಕ್ಷರ ಹೇಳಿಕೆಯನ್ನು ಉಲ್ಲೇಖಿಸಿದ ಮಹಾಧರ್ಮಾಧ್ಯಕ್ಷ ವಾಲೆನ್ಸುಯೆಲಾ, “ಈ ಗುಂಪುಗಳು ದೇಶವು ಪಾರದರ್ಶಕತೆ ಮತ್ತು ನ್ಯಾಯದಲ್ಲಿ ಬದುಕುವುದನ್ನು ತಡೆಯಲು ಬಯಸುತ್ತಿವೆ” ಎಂದು ಹೇಳಿದರು. “ಅಂತಿಮವಾಗಿ, ಹೊಣೆಗಾರರು ಕೇವಲ ಅಪರಾಧ ಗುಂಪಿನ ಸದಸ್ಯರಷ್ಟೇ ಅಲ್ಲ; ಅವರ ಹಿಂದೆ ನಿಂತಿರುವ ಆರ್ಥಿಕ ಮತ್ತು ತತ್ವಾಧಾರಿತ ಶಕ್ತಿಗಳೂ ಈ ಹಿಂಸಾಚಾರಕ್ಕೆ ಹೊಣೆಗಾರರು ಎಂದು ಅವರು ಒತ್ತಿ ಹೇಳಿದರು.
ವ್ಯಾಪಕವಾದ ದುಷ್ಟತೆ
ಶಾಂತಿ ಮತ್ತು ವಿವೇಕದ ಮನವಿಯೊಂದಿಗೆ, ಹತ್ಯೆಗೀಡಾದ ಪೊಲೀಸ್ ಅಧಿಕಾರಿಗಳ ಕುಟುಂಬಗಳಿಗೆ ಬೆಂಬಲ ವ್ಯಕ್ತಪಡಿಸಿದ ಧರ್ಮಾಧ್ಯಕ್ಷರು, ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದರು.
ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಪಾಲಿಸಬೇಕು ಮತ್ತು ಭ್ರಷ್ಟಾಚಾರ ಎಂಬ ವ್ಯಾಪಕ ದುಷ್ಟತೆಯ ವಿರುದ್ಧ ಸಂಪೂರ್ಣ ಶಕ್ತಿಯಿಂದ ಹೋರಾಡಬೇಕು ಎಂದು ಅವರು ಆಗ್ರಹಿಸಿದರು.
“ಸರ್ಕಾರದಲ್ಲಿ ದುರ್ಬಲತೆಗಳಿವೆ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಕತ್ತಲೆಯ ರಾಜಕೀಯ–ಆರ್ಥಿಕ ಶಕ್ತಿಗಳ ವಿರುದ್ಧದ ಈ ಅಸಮಾನ ಹೋರಾಟದಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವುದು ಅನಿವಾರ್ಯ,” ಎಂದು ಅವರು ಹೇಳಿದರು.
ಈ ಮಾತಿಗೆ ಬಲ ನೀಡುವಂತೆ, ಇತ್ತೀಚಿನಲ್ಲಿ ಹಿಂಸೆಗೆ ಬಲಿಯಾದ ಮೋನ್ಸಿನ್ಯೊರ್ ಜುವಾನ್ ಗೆರಾರ್ಡಿ, ಫಾ. ಹೆರ್ಮೋಜೆನೆಸ್ ಲೋಪೆಝ್, ಪವಿತ್ರ ಹೃದಯದ ಧರ್ಮಪ್ರಚಾರಕರು ಹಾಗೂ ಅನೇಕ ಧಾರ್ಮಿಕ ಮತ್ತು ಸಾಮಾನ್ಯ ಹುತಾತ್ಮರನ್ನು ಸ್ಮರಿಸಿದರು. “ಅವರ ಸಾಕ್ಷ್ಯ ನಮ್ಮನ್ನು ಪ್ರತಿರೋಧ ಮತ್ತು ಭರವಸೆಯ ದಾರಿಯಲ್ಲಿ ಮುಂದುವರಿಯಲು ಪ್ರೇರೇಪಿಸುತ್ತದೆ,” ಎಂದರು.
ಬಲಿಪೂಜೆಗಳು ಸ್ಥಗಿತ
ಕಳೆದ ವಾರ ಗ್ವಾಟೆಮಾಲಾ ನಗರದ ಸ್ಯಾಂಟಿಯಾಗೊ ಮಹಾಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ, ಗ್ಯಾಂಗ್ಗಳ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ಒಬ್ಬ ಗರ್ಭಿಣಿ ಮತ್ತು ಇಬ್ಬರು ಮಕ್ಕಳ ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿದರು. ಈ ಹಿಂಸಾಚಾರದ ತೀವ್ರತೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ “ಬಲಿಪೂಜೆ ಆಚರಣೆಗಳು ಮತ್ತು ಸಂಜೆ ಸಭೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ಮಹಾಧರ್ಮಾಧ್ಯಕ್ಷ ವಾಲೆನ್ಸುಯೆಲಾ ತಿಳಿಸಿದರು. ದೇಶದ ಇತರ ಭಾಗಗಳಲ್ಲಿ, “ ಧಾರ್ಮಿಕ ಚಟುವಟಿಕೆಗಳು ಸಾಮಾನ್ಯವಾಗಿ ಮುಂದುವರಿಯುತ್ತಿವೆ, ಇದಕ್ಕಾಗಿ ದೇವರಿಗೆ ಕೃತಜ್ಞತೆಗಳು” ಎಂದರು.
ಭದ್ರತೆಯ ಸವಾಲನ್ನು ಮೀರಿದ ಸಮಸ್ಯೆಗಳು
ಕಾರಾಗೃಹ ಗಲಭೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಹತ್ಯೆಗಳು ಕೇವಲ ರಾಷ್ಟ್ರೀಯ ಭದ್ರತೆಯ ಕುರಿತು ಭಯ ಹುಟ್ಟಿಸುವುದಷ್ಟೇ ಅಲ್ಲ, ದೇಶದ ಸಂಪೂರ್ಣ ರಾಜಕೀಯ ಪ್ರಕ್ರಿಯೆಯ ಅಭಿವೃದ್ಧಿಗೆ ನೇರವಾದ ಆಘಾತವಾಗುವ ಸಾಧ್ಯತೆಯನ್ನೂ ಹೊಂದಿವೆ. “ಜನಸಾಮಾನ್ಯರಲ್ಲಿ ಗಂಭೀರ ಆತಂಕವಿದೆ, ಏಕೆಂದರೆ ಇದು ದೇಶದ ತಕ್ಷಣದ ಭವಿಷ್ಯವನ್ನೇ ಬದಲಾಯಿಸಬಹುದು,” ಎಂದು ಮಹಾಧರ್ಮಾಧ್ಯಕ್ಷ ವಾಲೆನ್ಸುಯೆಲಾ ಹೇಳಿದರು. “ಈ ವರ್ಷ ದ್ವಿತೀಯ ಹಂತದ ಚುನಾವಣೆಗಳು ನಡೆಯಲಿದ್ದು, ನ್ಯಾಯಾಲಯಗಳ ಹಾಗೂ ಸಂವಿಧಾನ ನ್ಯಾಯಾಲಯದ ನ್ಯಾಯಾಧೀಶರು, ಜೊತೆಗೆ ಉಚ್ಚ ಚುನಾವಣಾ ನ್ಯಾಯಾಲಯದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಂಸ್ಥೆಗಳಲ್ಲಿ ಭ್ರಷ್ಟಾಚಾರಕ್ಕೆ ಅಂತ್ಯ ತರಲಾಗದಿದ್ದರೆ, ಯಾವುದೇ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ಸಂಸ್ಥಾತ್ಮಕ ಬದಲಾವಣೆಗಳನ್ನು ಅಡ್ಡಗಟ್ಟಲು ಕೆಲ ಬಲಿಷ್ಠ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ.”
ಒಂದು ನಿರ್ಣಾಯಕ ಕ್ಷಣ
ಸಂಘಟಿತ ಅಪರಾಧವನ್ನು ಎದುರಿಸುವುದು ಸಾಧ್ಯವೆಂಬ ವಿಶ್ವಾಸವು ಈಗ ಧರ್ಮಾಧ್ಯಕ್ಷರಲ್ಲಿ ಇನ್ನಷ್ಟು ಗಟ್ಟಿಯಾಗುತ್ತಿದೆ. ಆದರೆ ಅದಕ್ಕೆ ಮಾರ್ಗವೆಂದರೆ ಅತಿವೇಗದ ಅಥವಾ ಸಂಕ್ಷಿಪ್ತ ನ್ಯಾಯವಲ್ಲ; ಬದಲಾಗಿ ರಾಜ್ಯದ ಗುಪ್ತಚರ ವ್ಯವಸ್ಥೆ ಹಾಗೂ ಸಶಸ್ತ್ರ ಪಡೆಗಳ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವನ್ನು ಬಲಪಡಿಸುವುದೇ ಅಗತ್ಯವೆಂದು ಅವರು ಒತ್ತಿಹೇಳುತ್ತಾರೆ.
“ನ್ಯಾಯಸಮ್ಮತ ಪ್ರಕ್ರಿಯೆಯಿಲ್ಲದೆ ಜನರ ಮೇಲೆ ಹಿಂಸಾಚಾರ ನಡೆಸಿದರೆಂದು ಯಾರನ್ನಾದರೂ ಯಾದೃಚ್ಛಿಕವಾಗಿ ಆರೋಪಿಸಿ ದಂಡಿಸುವ ಕ್ರಮಗಳನ್ನು ನಾವು ವಿರೋಧಿಸುತ್ತೇವೆ.” ಇದೇ ವೇಳೆ, ಕೇವಲ ಕೆಳಮಟ್ಟದ ಕಾರ್ಯಕರ್ತರನ್ನು ಬಂಧಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದೂ ಅವರು ಒತ್ತಿ ಹೇಳಿದರು. “ಅವರ ಹಿಂದೆ ಮರೆತು ಕುಳಿತಿರುವ ಕುತಂತ್ರಿ ಮನಸ್ಸುಗಳನ್ನೂ ತಡೆಯುವುದು ಅತ್ಯಾವಶ್ಯಕ.”
“ರಾಷ್ಟ್ರಪತಿ ಉಲ್ಲೇಖಿಸಿದ ಆಂತರಿಕ ಹಾಗೂ ಮರೆಮಾಚಿದ ಹಿತಾಸಕ್ತಿಗಳನ್ನು ಸ್ಪಷ್ಟವಾಗಿ ಗುರುತಿಸಿ, ಕಾನೂನಿನ ಸಂಪೂರ್ಣ ಬಲವನ್ನು ಸ್ಥಾಪಿಸಬೇಕು. ಈ ಕಾರಣದಿಂದಲೇ, ಈ ವರ್ಷ ನಡೆಯಲಿರುವ ನ್ಯಾಯಾಂಗ ಕ್ಷೇತ್ರಕ್ಕೆ ಪ್ರಾಮಾಣಿಕ ವ್ಯಕ್ತಿಗಳ ಆಯ್ಕೆ ಪ್ರಕ್ರಿಯೆಯತ್ತ ಕರೆದೊಯ್ಯುವ ಈ ರಾಜಕೀಯ ಕ್ಷಣವನ್ನು ನಾವು ಅತ್ಯಂತ ನಿರ್ಣಾಯಕವೆಂದು ಪರಿಗಣಿಸುತ್ತೇವೆ. ಧರ್ಮಸಭೆಯ ಉಪದೇಶಗಳಿಗೆ ಹೊಂದಿಕೊಂಡಂತೆ, ಕ್ರೈಸ್ತರು ರಾಜಕೀಯ ಮತ್ತು ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದನ್ನು ನಾವು ಧರ್ಮಾಧ್ಯಕ್ಷರು ಪುನಃ ಪುನಃ ಒತ್ತಿ ಹೇಳುತ್ತೇವೆ. ದುರದೃಷ್ಟವಶಾತ್, ಅಪರೂಪದ ಕೆಲವರನ್ನು ಹೊರತುಪಡಿಸಿದರೆ, ಅವರ ಗೈರುಹಾಜರಿಯೇ ಇಂದು ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂಬ ರಾಷ್ಟ್ರಪತಿಯ ಮಾತುಗಳೊಂದಿಗೆ ಪೂಜ್ಯರು ಮಾತುಗಳನ್ನು ಮುಕ್ತಾಯಗೊಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).