ಶಾಲೆಗಳು ಶಾಂತಿ ಮತ್ತು ನ್ಯಾಯದ ನೆಲೆಗಳಾಗಲಿ:ವೆನೆಜುವೆಲಾದ ಧರ್ಮಾಧ್ಯಕ್ಷರುಗಳು
ವೆನೆಜುವೆಲಾದ ಧರ್ಮಾಧ್ಯಕ್ಷರ ಸಮಾವೇಶದ ಶಿಕ್ಷಣ ಆಯೋಗದ ಅಧ್ಯಕ್ಷರಾದ ಪೂಜ್ಯ ಧರ್ಮಾಧ್ಯಕ್ಷ ಕಾರ್ಲೊಸ್ ಎನ್ರಿಕ್ವೆ ಕುರಿಯೆಲ್ ಹೆರೆರಾ ಅವರು, ಮಕ್ಕಳು, ಕಿಶೋರರು, ಯುವಕರು ಹಾಗೂ ಶೈಕ್ಷಣಿಕ ಸಮುದಾಯದ ಎಲ್ಲಾ ಸದಸ್ಯರು ಅಧ್ಯಯನ ಮತ್ತು ಕಲಿಕೆಯ ಸಾಧನಗಳನ್ನು ರಾಷ್ಟ್ರದಲ್ಲಿ ಸೌಹಾರ್ದತೆಯನ್ನು ಬೆಳೆಸಲು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
“ಹೊಸ ಶೈಕ್ಷಣಿಕ ವರ್ಷದಲ್ಲಿ ನಾವು ಮತ್ತೆ ನಮ್ಮ ಶಾಲೆಗಳತ್ತ ಮರಳುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಆಯೋಗವು ಪ್ರತಿಯೊಬ್ಬ ಶಿಕ್ಷಕನಿಗೂ, ಪ್ರತಿಯೊಬ್ಬ ವಿದ್ಯಾರ್ಥಿಗೂ, ಪ್ರತಿಯೊಂದು ಕುಟುಂಬಕ್ಕೂ ಮತ್ತು ದೇಶದ ಸಂಪೂರ್ಣ ಶೈಕ್ಷಣಿಕ ಸಮುದಾಯವನ್ನು ರೂಪಿಸುವ ಪ್ರತಿಯೊಬ್ಬ ಸದಸ್ಯನಿಗೂ ನಿರೀಕ್ಷೆಯ ಸಂದೇಶವನ್ನು ಕಳುಹಿಸಲು ಬಯಸುತ್ತದೆ,” ಎಂದು ಧರ್ಮಾಧ್ಯಕ್ಷರು ಹೇಳಿದರು.
ಶಿಕ್ಷಣವು ಶಾಂತಿ ಮತ್ತು ನ್ಯಾಯವನ್ನು ಬಲಪಡಿಸುವ ಒಂದು “ಪವಿತ್ರ ವಾತಾವರಣ”ವಾಗಿರಬೇಕು ಎಂಬ ಆಶಯವನ್ನು ವೆನೆಜುವೆಲಾದ ಧರ್ಮಾಧ್ಯಕ್ಷರು ವ್ಯಕ್ತಪಡಿಸಿದರು. ಸವಾಲುಗಳು ಎಷ್ಟೇ ಇದ್ದರೂ, ಶಿಕ್ಷಣ ಕ್ಷೇತ್ರವು ನಂಬಿಕೆಯ ಬೀಜ ಬಿತ್ತಲು, ನ್ಯಾಯದ ಮೌಲ್ಯಗಳ ಮೇಲಿನ ಬದ್ಧತೆಯನ್ನು ಬೆಳೆಸಲು ಮತ್ತು ಮಾನವ ಜೀವನಕ್ಕೆ ದಿಕ್ಕು ನೀಡುವ ಸ್ವಾತಂತ್ರ್ಯವನ್ನು ಬೆಂಬಲಿಸಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮಾಧ್ಯಕ್ಷ ಕುರಿಯೆಲ್ ಹೆರೆರಾ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಪ್ರಾರ್ಥಿಸಿ, “ನೀವು ಕೈಗೊಳ್ಳುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಪ್ರಭು ನಿಮ್ಮೊಂದಿಗೆ ಇರಲಿ; ಇತ್ತೀಚೆಗೆ ಆಚರಿಸಲಾದ ದೈವ ದರ್ಶನದ ಹಬ್ಬದಲ್ಲಿ ಪ್ರಕಟವಾದ ಆತನ ಬೆಳಕು ನಿಮ್ಮ ಹೃದಯಗಳಲ್ಲಿ ಪ್ರಕಾಶಿಸಲಿ; ಮತ್ತು ಈ ದೈವಿಕ ಭೇಟಿಯಿಂದ ಉಂಟಾಗುವ ಆನಂದವು, ಸುವಾರ್ತೆಯ ನಿಷ್ಠೆಯೊಂದಿಗೆ ಸೇವೆ ಸಲ್ಲಿಸಲು ನಿಮ್ಮ ಶಕ್ತಿಯನ್ನು ಪುನರುಜ್ಜೀವನಗೊಳಿಸಲಿ,” ಎಂದು ಹೇಳಿದರು.
ಸಂತ ಹೋಸೆ ಗ್ರೆಗೋರಿಯೋ ಹೆರ್ನಾಂಡೆಸ್ ಅವರ ಮಧ್ಯಸ್ಥಿಕೆಯನ್ನು ಬೇಡಿ, “ಅವರು ತಮ್ಮ ಜ್ಞಾನ ಮತ್ತು ಸೇವಾಭಾವದ ವಿನಯವನ್ನು ನಮಗೆ ಅನುಗ್ರಹಿಸಲಿ,” ಎಂದು ಪ್ರಾರ್ಥಿಸಿದರು. ಜೊತೆಗೆ, ಮಾತೆ ಕಾರ್ಮೆನ್ ರೆಂಡಿಲೆಸ್ ಮಾರ್ಟಿನೆಸ್ ಅವರು “ಜೀವನಗಳನ್ನು ರೂಪಾಂತರಗೊಳಿಸುವ ಸೌಮ್ಯತೆಯೊಂದಿಗೆ ಶಿಕ್ಷಣ ನೀಡುವ ಮಾರ್ಗವನ್ನು ನಮಗೆ ಬೋಧಿಸಲಿ” ಎಂದು ಆಶಿಸಿದರು.
ಶಾಂತಿ ನಿರ್ಮಾಣಕ್ಕೆ ಆಹ್ವಾನ
ಮಕ್ಕಳು ಮತ್ತು ಶಿಕ್ಷಕರು ಅಧ್ಯಯನ ಮತ್ತು ಕಲಿಕೆಯನ್ನು ರಾಷ್ಟ್ರದಲ್ಲಿ ಶಾಂತಿ ನಿರ್ಮಾಣಕ್ಕೆ ಉಪಯುಕ್ತ ಸಾಧನಗಳಾಗಿ ಪರಿಗಣಿಸಬೇಕೆಂದು ಧರ್ಮಾಧ್ಯಕ್ಷರು ಆಹ್ವಾನಿಸಿದರು.
“ಪರಸ್ಪರ ಕೇಳಿಕೊಳ್ಳಲು, ದೇವರ ಇಚ್ಛೆಯನ್ನು ವಿವೇಚಿಸಲು, ವೆನೆಜುವೆಲಾಕ್ಕಾಗಿ ಸೌಹಾರ್ದತೆ ಮತ್ತು ಶಾಂತಿಯನ್ನು ಬೇಡಿಕೊಳ್ಳಲು ಹಾಗೂ ನಮ್ಮ ಶಾಲೆಗಳನ್ನು ನಾಗರಿಕತೆ, ಪ್ರಜಾಸತ್ತಾತ್ಮಕ ಮೌಲ್ಯಗಳು, ನ್ಯಾಯ ಮತ್ತು ಶಾಂತಿ ನಿರ್ಮಾಣಕ್ಕೆ ಸುರಕ್ಷಿತ ಸ್ಥಳಗಳಾಗಿ ಉಳಿಸಿಕೊಳ್ಳುವ ನಮ್ಮ ಬದ್ಧತೆಯನ್ನು ನವೀಕರಿಸಿಕೊಳ್ಳಲು ಈ ಶೈಕ್ಷಣಿಕ ವರ್ಷದ ಆರಂಭ ಒಂದು ಅಮೂಲ್ಯ ಅವಕಾಶವಾಗಿರಲಿ” ಎಂದು ಪೂಜ್ಯ ಧರ್ಮಾಧ್ಯಕ್ಷ ಕುರಿಯೆಲ್ ಹೆರೆರಾ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು