“ಒಂದು ಮಹಾ ಕುಟುಂಬ”: ಕಾಂಬೋಡಿಯಾದ ಸಿಯಂ ರೀಪ್ನಲ್ಲಿ ಮೊದಲ ಧಾರ್ಮಿಕ ಪಾಲನಾ ಮಹಾಸಭೆ
ಲೇಖಕರು: ವಂ. ಗುರು ಮಾರ್ಕ್ ರಾಬಿನ್ ದೆಸ್ತುರಾ, RCJ
ಫೆಬ್ರವರಿ 5 ಮತ್ತು 6ರಂದು ಎರಡು ದಿನಗಳ ಕಾಲ ಸೋಖಾ ಸಿಯಂ ರೀಪ್ ಹೋಟೆಲ್ನಲ್ಲಿ ಈ ಮಹಾಸಭೆಯನ್ನು ಪೂಜ್ಯ ಧರ್ಮಾಧ್ಯಕ್ಷರಾದ ಓಲಿವಿಯರ್ ಶ್ಮಿತ್ತಹೌಸ್ಲರ್ ಹಾಗೂ ಸಹಾಯಕ ಧರ್ಮಾಧ್ಯಕ್ಷರಾದ ಪೀಟರ್ ಹ್ಯಾಂಗ್ಲಿ ಸುಯೋನ್ ಆಯೋಜಿಸಿದ್ದರು.
ಈ ಮಹಾಸಭೆಯಲ್ಲಿ ಗುರುಗಳು, ಸಂನ್ಯಾಸಿಗಳು, ಸಂನ್ಯಾಸಿನಿಯರು, ಧರ್ಮಕೇಂದ್ರ ಸಿಬ್ಬಂದಿ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಪ್ರತಿನಿಧಿಗಳು ಪಾಲ್ಗೊಂಡರು. ಫ್ನೋಂ ಪೆನ್ ಉತ್ತರ ಮತ್ತು ದಕ್ಷಿಣ ಪ್ರದೇಶಗಳು, ಫ್ನೋಂ ಪೆನ್ ತ್ಮೆಯ್, ಸಿಹಾನೂಕ್ವಿಲ್–ಕೋ ಕಾಂಗ್, ಕ್ಯಾಂಪೋಟ್–ಕೇಪ್, ಟಾಕಿಯೋ, ಹೋಲಿ ವೇ, ಮೆಕಾಂಗ್ ಮತ್ತು ಬಸ್ಸಾಕ್ ನದಿ ಪ್ರದೇಶಗಳು ಸೇರಿದಂತೆ ಒಟ್ಟು 10 ಧಾರ್ಮಿಕ ಕೇಂದ್ರಗಳಿಂದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಧರ್ಮಸಭೆಯ ವಿವಿಧ ಸೇವಾ ಘಟಕಗಳನ್ನು ಒಂದೇ ಕುಟುಂಬದ ಆತ್ಮದಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಈ ಮಹಾಸಭೆ ಆಯೋಜಿಸಲಾಯಿತು ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.
ಸಾಮೂಹಿಕ ಸಂಭ್ರಮಾಚರಣೆ
ಸಮ್ಮೇಳನದ ಅಂಗವಾಗಿ ಧನ್ಯವಾದಗಳ ಪವಿತ್ರ ಬಲಿಪೂಜೆಯನ್ನು ಪೂಜ್ಯ ಧರ್ಮಾಧ್ಯಕ್ಷರಾದ ಓಲಿವಿಯರ್ ಶ್ಮಿತ್ತಹೌಸ್ಲರ್ ಅಧ್ಯಕ್ಷತೆ ವಹಿಸಿ ನೆರವೇರಿಸಿದರು; ಸಹಾಯಕ ಧರ್ಮಾಧ್ಯಕ್ಷ ಪೀಟರ್ ಹ್ಯಾಂಗ್ಲಿ ಸುಯೋನ್ ಸಹ ಪೂಜೆಯಲ್ಲಿ ಪಾಲ್ಗೊಂಡರು. ತಮ್ಮ ಪ್ರವಚನದಲ್ಲಿ ಧರ್ಮಾಧ್ಯಕ್ಷರು ಧಾರ್ಮಿಕ ಪಾಲನಾ ಸೇವೆಯಲ್ಲಿ ತೊಡಗಿರುವ ಗುರುಗಳು, ಸಂನ್ಯಾಸಿಗಳು ಹಾಗೂ ಸಾಮಾನ್ಯ ಭಕ್ತರ ಮಹತ್ವದ ಪಾತ್ರವನ್ನು ಉಲ್ಲೇಖಿಸಿದರು. ಶಿಕ್ಷಣ, ಆರೋಗ್ಯ, ಕಲೆ, ಮಾನವ ಅಭಿವೃದ್ಧಿ, ಪರಿಸರ ಪ್ರವಾಸೋದ್ಯಮ ಮತ್ತು ಸಾಮಾಜಿಕ ಸಂವಹನ ಕ್ಷೇತ್ರಗಳಲ್ಲಿ ಧರ್ಮಸಭೆಯ ಸೇವೆ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದರು.
“ನಮಗೆ ಒಪ್ಪಿಸಲ್ಪಟ್ಟಿರುವ ಜನರ ಆತ್ಮ ಮತ್ತು ಹೃದಯಗಳನ್ನು ಮಾರ್ಗದರ್ಶಿಸಿ ಬೆಳೆಸುವುದು ನಮ್ಮ ವಿಶೇಷ ಕರ್ತವ್ಯ, ಸತ್ಯದೊಂದಿಗೆ ಪ್ರೀತಿ ಮತ್ತು ಅನುಕಂಪ ತೋರಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನದ ಹೊಣೆಗಾರಿಕೆಯನ್ನು ಸ್ವೀಕರಿಸಲಿ ಎಂಬುದು ನಮ್ಮ ಆಶಯ,” ಎಂದು ಅವರು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ಪ್ರತಿನಿಧಿಗಳು ವಿಶ್ವ ಪರಂಪರೆ ತಾಣವಾದ ಅಂಕೋರ್ ವಾಟ್ಗೆ ಭೇಟಿ ನೀಡಿದರು. ದಿನದ ಅಂತ್ಯದಲ್ಲಿ 10 ಧಾರ್ಮಿಕ ಕೇಂದ್ರಗಳ ಪ್ರಸ್ತುತಿಗಳು ನಡೆದವು. ಶಿಕ್ಷಣ, ಮಾನವ ಸಂಪನ್ಮೂಲ ಅಭಿವೃದ್ಧಿ, ದಾನಕಾರ್ಯಗಳು, ಯುವ ಸೇವೆ, ಕಥೋಲಿಕ ಮಾಧ್ಯಮ, ನಂಬಿಕೆ ರೂಪಿಕರಣ ಮತ್ತು ಕಲೆ ಕ್ಷೇತ್ರಗಳಲ್ಲಿ ಧರ್ಮಸಭೆಯ ಸಕ್ರಿಯ ಹಾಜರಾತಿಯನ್ನು ಅವು ಪ್ರತಿಬಿಂಬಿಸಿದವು.
ಉತ್ತೇಜನದ ಸಂದೇಶ
ಸಭೆಯನ್ನು “ಒಂದು ದೊಡ್ಡ ಕುಟುಂಬ”ವೆಂದು ಪೂಜ್ಯ ಧರ್ಮಾಧ್ಯಕ್ಷರಾದ ಓಲಿವಿಯರ್ ಶ್ಮಿತ್ತಹೌಸ್ಲರ್ ವರ್ಣಿಸಿ, ತಮ್ಮ ವಿವಿಧ ಜೀವನ ಕ್ಷೇತ್ರಗಳಲ್ಲಿ ಭರವಸೆಯನ್ನು ಹಂಚುತ್ತಿರುವ ಗುರುಗಳು, ಸಂನ್ಯಾಸಿಗಳು ಹಾಗೂ ಸಾಮಾನ್ಯ ಸಹಕಾರಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿ, “ನೀವೆಲ್ಲರೂ ಧರ್ಮಸಭೆಯ ಜೀವಂತ ಶಕ್ತಿ,” ಎಂದು ಹೇಳಿದರು.
ಸಹಾಯಕ ಧರ್ಮಾಧ್ಯಕ್ಷರಾದ ಪೀಟರ್ ಹ್ಯಾಂಗ್ಲಿ ಸುಯೋನ್ ಧಾರ್ಮಿಕ ಪಾಲನಾ ಕಾರ್ಯಕರ್ತರಿಗೆ ಉತ್ತೇಜನ ನೀಡುತ್ತಾ, ಸಂಕಷ್ಟ, ಉದ್ವಿಗ್ನತೆ ಅಥವಾ ಪರಸ್ಪರ ಅರ್ಥಭ್ರಾಂತಿ ಉಂಟಾಗುವ ಸಂದರ್ಭಗಳಲ್ಲಿಯೂ “ಹೆಚ್ಚು ವಿಶಾಲ ಹೃದಯ” ಹೊಂದಿ ದೇವರ ಪ್ರೀತಿಯಲ್ಲಿ ಏಕತೆಯಿಂದ ಮತ್ತು ಭರವಸೆಯಿಂದ ಉಳಿಯಲು ಕರೆ ನೀಡಿದರು.
ಕಾರ್ಯಕ್ರಮದ ಕುರಿತು ಕೃತಜ್ಞತೆ
ಫ್ನೊಮ್ ಪೆನ್ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಒಂದೇ ಕುಟುಂಬವಾಗಿ ಸೇವೆ ಸಲ್ಲಿಸುತ್ತಿರುವ ಅನುಭವವನ್ನು ನೇರವಾಗಿ ಹಂಚಿಕೊಳ್ಳಲು ಅವಕಾಶ ದೊರೆತಿದ್ದಕ್ಕಾಗಿ ಭಾಗವಹಿಸಿದವರು ಕೃತಜ್ಞತೆ ವ್ಯಕ್ತಪಡಿಸಿದರು.
ಸಿಹಾನುಕ್ವಿಲ್–ಕೋ ಕಾಂಗ್ ಧಾರ್ಮಿಕ ಪಾಲನಾ ಕೇಂದ್ರದ ಶ್ರೀ ಪ್ರಾಕ್ ಫೆರಾಕ್ ಮಾತನಾಡಿ, “ಇದುವರೆಗೆ ನಮ್ಮ ಸಂಪರ್ಕ ಟೆಲಿಗ್ರಾಮ್ ಅಥವಾ ದೂರವಾಣಿ ಕರೆಗಳ ಮಟ್ಟಿಗಷ್ಟೇ ಸೀಮಿತವಾಗಿತ್ತು. ಮುಖಾಮುಖಿಯಾಗಿ ಭೇಟಿಯಾದ ಬಳಿಕ ಪರಸ್ಪರ ಸಂಬಂಧಗಳನ್ನು ನಿರ್ಮಿಸಿಕೊಳ್ಳುವುದು ಬಹಳ ಸುಲಭವಾಯಿತು,” ಎಂದು ತಿಳಿಸಿದ್ದಾರೆ.
ಬೋಯುಂಗ್ ತುಂಪುನ್ ಧಾರ್ಮಿಕ ಪಾಲನಾ ಕೇಂದ್ರದ ಶ್ರೀಮತಿ ತೆರೆಸಾ ಚೆಮ್ ಸ್ರೇಮಿಚ್ ಕೂಡ ಸಂತೋಷ ವ್ಯಕ್ತಪಡಿಸಿ, “ಇತರ ಧರ್ಮಕೇಂದ್ರಗಳಿಂದ ಬಂದ ಅನೇಕ ಸಹೋದರ-ಸಹೋದರಿಯರನ್ನು ನಾನು ಮೊದಲೇ ಪರಿಚಯಿಸಿಕೊಂಡಿರಲಿಲ್ಲ. ಇಂದು ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವವರನ್ನೂ, ಹೊಸದಾಗಿ ಸೇರಿಕೊಂಡವರನ್ನೂ ಭೇಟಿಯಾದೆ. ಈ ಕಾರ್ಯಕ್ರಮವು ಪ್ರಧಾನ ಗುರು ಒಲಿವಿಯೆರ್ ಅವರ ನೇತೃತ್ವದಲ್ಲಿ ದೇವರು ನೀಡಿದ ವರವಾಗಿದೆ. ಇಂತಹ ಇನ್ನಷ್ಟು ಕೂಟಗಳು ಮುಂದುವರಿಯಲಿ ಎಂಬುದು ನನ್ನ ಆಶೆ,” ಎಂದು ಹೇಳಿದ್ದಾರೆ.
ಸಭೆಯ ಅಂತ್ಯದಲ್ಲಿ, ಫ್ನೋಮ್ ಪೆನ್ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಏಕತೆ ಮತ್ತು ಸೇವಾಭಾವವನ್ನು ಹಂಚಿಕೊಳ್ಳುತ್ತಾ, ಅವರು ಸಾಮೂಹಿಕ ಭೋಜನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.“ಒಂದು ದೊಡ್ಡ ಕುಟುಂಬ” ಎಂಬ ಆತ್ಮಸ್ಫೂರ್ತಿಯನ್ನು ಮತ್ತಷ್ಟು ಬಲಪಡಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).