ಹುಡುಕಿ

2026.02.14 Bogotà, Colombia 2026.02.14 Bogotà, Colombia 

ಕೊಲಂಬಿಯಾ ಧರ್ಮಾಧ್ಯಕ್ಷರ ಕರೆ: ದೇಶದಲ್ಲಿ ಶಾಂತಿ ಮತ್ತು ಸಮಾಧಾನಕ್ಕೆ ಮನವಿ

ಕೊಲಂಬಿಯಾದ ಧರ್ಮಾಧ್ಯಕ್ಷರು ತಮ್ಮ 120ನೇ ಮಹಾಸಭೆಯನ್ನು ಸಮಾಪ್ತಿಗೊಳಿಸಿ, ದೇಶದ ಜನತೆಗೆ ಪರಿವರ್ತನೆ, ಸಂವಾದ ಮತ್ತು ರಾಷ್ಟ್ರೀಯ ಸಮಾಧಾನದ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಧರ್ಮಾಧ್ಯಕ್ಷರು ನಾಗರಿಕರನ್ನು ತಮ್ಮ ಮತದಾನದ ಹಕ್ಕನ್ನು “ಪೂರ್ಣ ಸ್ವಾತಂತ್ರ್ಯ ಮತ್ತು ಮನಃಸಾಕ್ಷಿಯೊಂದಿಗೆ, ಯಾವುದೇ ಭ್ರಷ್ಟಾಚಾರವಿಲ್ಲದೆ” ಚಲಾಯಿಸಲು ಪ್ರೋತ್ಸಾಹಿಸಿದ್ದಾರೆ.

ಲೇಖಕರು: ದಾವಿದೆ ಡಿವೋನಿಸಿ

ಕೊಲಂಬಿಯಾದ 120ನೇ ಮಹಾಸಭೆಯ ಸಮಾರೋಪದ ಸಂದರ್ಭದಲ್ಲಿ, ದೇಶದ ಪಾಲಕಿಯಾದ ಚಿಕ್ವಿಂಕಿರಾ ಜಪಸರ ಮಾತೆಯ ಮಧ್ಯಸ್ಥಿಕೆಗೆ ಕೊಲಂಬಿಯಾವನ್ನು ಸಮರ್ಪಿಸಲಾಯಿತು. ಜನರೊಂದಿಗೆ ಸಮಾಧಾನ, ನ್ಯಾಯ ಮತ್ತು ಶಾಂತಿಯ ಹುಡುಕಾಟದಲ್ಲಿ ಮುಂದುವರಿಯುವ ಬದ್ಧತೆಯನ್ನು ಧರ್ಮಾಧ್ಯಕ್ಷರು ಪುನರುಚ್ಚರಿಸಿದರು. ಐದು ದಿನಗಳ ಗಂಭೀರ ಚರ್ಚೆ ಮತ್ತು ಪರಿಶ್ರಮದ ಬಳಿಕ, ಫೆಬ್ರವರಿ 13ರಂದು ಬೋಗೋಟಾದಲ್ಲಿ ಮಹಾಸಭೆ ಸಮಾಪ್ತಿಗೊಂಡಿತು.

ಧರ್ಮಾಧ್ಯಕ್ಷರು ಅಂಗೀಕರಿಸಿದ ಅಂತಿಮ ಪ್ರಕಟಣೆ ಜನರನ್ನು ಮನಃಪರಿವರ್ತನೆ, ಸಂವಾದ ಮತ್ತು ಪ್ರಜಾಪ್ರಭುತ್ವ ಜೀವನದಲ್ಲಿ ಜವಾಬ್ದಾರಿಯುತ ಭಾಗವಹಿಸುವಿಕೆಗೆ ಆಹ್ವಾನಿಸುತ್ತದೆ. ಜೊತೆಗೆ, ವಿಶೇಷವಾಗಿ ಚಳಿಗಾಲದ ಕಠಿಣ ಸಂದರ್ಭಗಳಲ್ಲಿ ಸಂಕಷ್ಟ ಅನುಭವಿಸುತ್ತಿರುವ ಅತೀ ದುರ್ಬಲ ವರ್ಗಗಳೊಂದಿಗೆ ತಮ್ಮ ಆತ್ಮೀಯತೆ ಮತ್ತು ಬೆಂಬಲವನ್ನು ಅವರು ಪುನಃ ದೃಢಪಡಿಸಿದರು.

ಈ ಹಿನ್ನೆಲೆಯಲ್ಲಿ, ಫೆಬ್ರವರಿ 15ರಂದು “ಕ್ರೈಸ್ತ ಸೌಹಾರ್ದ ಹಂಚಿಕೆ ಅಭಿಯಾನ” ಆರಂಭವಾಗಲಿದೆ. ಪ್ರವಾಹದಿಂದ ಬಳಲಿದ ಕುಟುಂಬಗಳನ್ನು ಒಳಗೊಂಡು ದುರ್ಬಲರ ನೆರವಿಗಾಗಿ ಈ ಅಭಿಯಾನವು ಕಾರ್ಯನಿರ್ವಹಿಸುತ್ತದೆ. ಸಾಮಾನ್ಯವಾಗಿ ತಪಸ್ಸು ಕಾಲದ ಮೊದಲ ಭಾನುವಾರ ಆರಂಭವಾಗುವ ಈ ವಾರ್ಷಿಕ ಸಂಗ್ರಹ ಅಭಿಯಾನವನ್ನು ಧರ್ಮಸಭೆ ಅತಿ ದುರ್ಬಲರ ಪರವಾಗಿ ಪ್ರೋತ್ಸಾಹಿಸುತ್ತದೆ. 

ಮನಃಪರಿವರ್ತನೆ ಮತ್ತು ಸೌಹಾರ್ದದ ಕರೆ

ತಪಸ್ಸು ಕಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಕೊಲಂಬಿಯಾ ಧರ್ಮಾಧ್ಯಕ್ಷರ ಸಭೆ ಜನರನ್ನು “ನಿಜವಾದ ಮನಃಪರಿವರ್ತನೆಯ ಹೆಜ್ಜೆಗಳನ್ನು” ಇಡುವಂತೆ ಆಹ್ವಾನಿಸಿದೆ. ಕ್ರಿಸ್ತನ ಕರೆಯನ್ನು ಸ್ವೀಕರಿಸಿ “ಮತ್ತೆ ಸ್ನೇಹದತ್ತ ಮರಳಲು, ಕೈಹಿಡಿದು ನಡೆಯಲು ಹಾಗೂ ಏಕತೆಯನ್ನು ಹುಡುಕಲು” ಅವರು ಮನವಿ ಮಾಡಿದ್ದಾರೆ. ಈ ದೃಷ್ಟಿಕೋನದಲ್ಲಿ ಸೌಹಾರ್ದವು ಕೇವಲ ತಾತ್ವಿಕ ಕಲ್ಪನೆ ಅಲ್ಲ; ಅದು ವೈಯಕ್ತಿಕ ಹಾಗೂ ಸಾಮಾಜಿಕ ಗಾಯಗಳಿಗೆ ನೈಜ ಚಿಕಿತ್ಸೆಯ ಮಾರ್ಗವಾಗಿದೆ.

ಧರ್ಮಾಧ್ಯಕ್ಷರು ತಮ್ಮ ಭಾಗವಾಗಿ “ಕ್ಷಮೆ, ಸೌಹಾರ್ದ ಮತ್ತು ದೇಶದ ಶಾಂತಿಯಿಗಾಗಿ” ತಮ್ಮ ಕೊಡುಗೆಯನ್ನು ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಭಿನ್ನಾಭಿಪ್ರಾಯಗಳು ಮತ್ತು ವಿರುದ್ಧ ಮನೋಭಾವಗಳಿಂದ ವಿಭಜಿತವಾಗಿರುವ ಸಮಾಜದಲ್ಲಿ ಸೇತುವೆಗಳನ್ನು ನಿರ್ಮಿಸಲು ಅವರು ಎಲ್ಲ ಕೊಲಂಬಿಯನ್ನರನ್ನೂ ಆಹ್ವಾನಿಸಿದರು. ಸಂವಾದ, ಆಲಿಕೆ ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ಒಂದೇ ಕುಟುಂಬದ ಸದಸ್ಯರಂತೆ ಬದುಕಲು ಅವರು ಕರೆ ನೀಡಿದರು.

ಗುರುಗಳೊಂದಿಗೆ ಆತ್ಮೀಯತೆ

ದೇಶದಾದ್ಯಂತ ಸೇವೆ ಸಲ್ಲಿಸುತ್ತಿರುವ ಗುರುಗಳಿಗೆ ಧರ್ಮಾಧ್ಯಕ್ಷರು, “ತಮಗೆ ಒಪ್ಪಿಸಲ್ಪಟ್ಟ ಸಮುದಾಯಗಳ ನಂಬಿಕೆ, ಭರವಸೆ ಮತ್ತು ಪ್ರೀತಿಯನ್ನು ಪೋಷಿಸುವ ನಿಮ್ಮ ಅಮೂಲ್ಯ ಸೇವೆಗಾಗಿ ಧನ್ಯವಾದಗಳು” ಎಂದು ಅವರು ತಿಳಿಸಿದರು. ಗುರುಗಳ ತರಬೇತಿ ಮತ್ತು ಅನುಬಂಧವು ಧರ್ಮಸಭೆಯ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಈ ಕಾರಣದಿಂದ, ಗುರುಗಳು ತಮ್ಮ ಸೇವೆಯನ್ನು ನವೀಕೃತ ಸಮರ್ಪಣೆಯೊಂದಿಗೆ ಸತ್ಯದಲ್ಲಿ ನೆರವೇರಿಸಲು ಅವರ ಸಮಗ್ರ ಕಲ್ಯಾಣದ ಬಗ್ಗೆ ಕಾಳಜಿ ವಹಿಸುವುದಾಗಿ ಧರ್ಮಾಧ್ಯಕ್ಷರು ತಿಳಿಸಿದ್ದಾರೆ.

ಸಮಾಜದ ವಿವಿಧ ವರ್ಗಗಳಿಗೆ ನೇರ ಮನವಿ

ಧರ್ಮಾಧ್ಯಕ್ಷರು ಕೊಲಂಬಿಯಾ ನಾಗರಿಕರನ್ನು “ಶಾಂತಿಯ ನಿರ್ಮಾತೃಗಳಾಗಿಯೂ, ಭರವಸೆಯ ಸಾಕ್ಷಿಗಳಾಗಿಯೂ” ಬದುಕಲು ಆಹ್ವಾನಿಸಿದರು. ಮಕ್ಕಳಿಗೆ  ಮತ್ತು ಯುವಜನತೆಗೆ ಯೇಸು ಕ್ರಿಸ್ತನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವಂತೆ ಅವರು ಸಲಹೆ ನೀಡಿದರು. ಕ್ರಿಸ್ತನಂತೆ ಪ್ರೀತಿಸುವುದು, ಸೃಷ್ಟಿಯನ್ನು ಕಾಪಾಡುವುದು ಮತ್ತು ತಮ್ಮ ಕನಸಿನ ದೇಶವನ್ನು ಕಟ್ಟುವುದು ನಿಜವಾದ ಸಂತೋಷದ ಮಾರ್ಗವೆಂದು ಅವರು ಹೇಳಿದರು.

“ಸಾಮಾಜಿಕ ಗುಣಗಳ ಮೂಲ ಶಾಲೆ”ಗಳಾದ ಕುಟುಂಬಗಳಿಗೆ, ಜೀವನವನ್ನು ಪ್ರೀತಿಸುವುದರಲ್ಲಿ ಮತ್ತು ಸೇವಿಸುವುದರಲ್ಲಿ ದಣಿಯದಿರಲು ಅವರು ಮನವಿ ಮಾಡಿದರು. ರಾಜ್ಯ ಸಂಸ್ಥೆಗಳಲ್ಲಿ ಮಾನವ ಹಕ್ಕುಗಳ ಗೌರವ, ನಾಗರಿಕ ಕರ್ತವ್ಯಗಳ ಪಾಲನೆ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಅದನ್ನು ಬೆಂಬಲಿಸುವ ಸಂಸ್ಥೆಗಳ ಬಲವರ್ಧನೆ ಮುಂದುವರಿಯಬೇಕು ಎಂದು ಉತ್ತೇಜಿಸಿದರು. ಸರ್ಕಾರವು “ಎಲ್ಲರೊಂದಿಗೆ ಸಂವಾದವನ್ನು ಬಲಪಡಿಸಿ, ಸೌಹಾರ್ದವನ್ನು ಪರಿಣಾಮಕಾರಿಯಾಗಿ ಉತ್ತೇಜಿಸಿ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಕಂಡುಬರುವ ತೀವ್ರ ವಿಭಜನೆಗಳನ್ನು ನಿವಾರಿಸಬೇಕು” ಎಂದು ಅವರು ಕರೆ ನೀಡಿದರು.

ಬರುವ ಚುನಾವಣೆಯ ಹಿನ್ನೆಲೆಯಲ್ಲಿ, ಉನ್ನತ ಸಾರ್ವಜನಿಕ ಹುದ್ದೆಗಳಿಗೆ ಸ್ಪರ್ಧಿಸುವವರು “ಮೌಖಿಕ ಹಿಂಸೆ,ದ್ವೇಷ ಭಾಷಣಗಳನ್ನು ತೊರೆದು, ಸತ್ಯಾಧಾರಿತ ಮಾರ್ಗಗಳನ್ನು ಪ್ರಸ್ತಾಪಿಸಬೇಕು” ಎಂದು ಧರ್ಮಾಧ್ಯಕ್ಷರು ಒತ್ತಾಯಿಸಿದರು. ದೇಶದ ನಿಜವಾದ ಅಭಿವೃದ್ಧಿ, ಸೌಹಾರ್ದ ಮತ್ತು ಶಾಂತಿಯತ್ತ ಮುನ್ನಡೆಯಲು ಇದು ಅಗತ್ಯವೆಂದು ಅವರು ತಿಳಿಸಿದರು. ಇದೇ ವೇಳೆ ಉದ್ಯಮಿಗಳಿಗೂ ಸಮುದಾಯದ ಭಾಗವಹಿಸುವಿಕೆ ಹಾಗೂ ಸಂಪತ್ತಿನ ನ್ಯಾಯಯುತ ಹಂಚಿಕೆಯನ್ನು ಉತ್ತೇಜಿಸಲು ಕರೆ ನೀಡಿದರು. ಮಾಧ್ಯಮ ವೃತ್ತಿಪರರು ಮತ್ತು ಡಿಜಿಟಲ್ ವಿಷಯ ಸೃಜನಶೀಲರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಅವರು ಮನವಿ ಮಾಡಿದರು.

ಮತದಾರರ ಭಾಗವಹಿಸುವಿಕೆ

ಅಂತಿಮವಾಗಿ, ಕೊಲಂಬಿಯಾ ಧರ್ಮಾಧ್ಯಕ್ಷರು ಎಲ್ಲ ನಾಗರಿಕರನ್ನು ಬರುವ ಚುನಾವಣೆಯಲ್ಲಿ ಸಕ್ರಿಯ ಹಾಗೂ ಶಾಂತಿಯುತವಾಗಿ ಭಾಗವಹಿಸಲು ಆಹ್ವಾನಿಸಿದ್ದಾರೆ. ಮಾರ್ಚ್‌ನಲ್ಲಿ ನಡೆಯುವ ಸಂಸತ್ ಚುನಾವಣೆಗಳು ಮತ್ತು ಮೇ ತಿಂಗಳ ರಾಷ್ಟ್ರಪತಿ ಚುನಾವಣೆಗಳಲ್ಲಿ, “ಪೂರ್ಣ ಸ್ವಾತಂತ್ರ್ಯ ಹಾಗೂ ಅಂತಃಕರಣದ ಧ್ವನಿಗೆ ಅನುಗುಣವಾಗಿ, ಯಾವುದೇ ಭ್ರಷ್ಟಾಚಾರವಿಲ್ಲದೆ” ತಮ್ಮ ಮತಹಕ್ಕನ್ನು ಚಲಾಯಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೊಲಂಬಿಯಾ ಅಧಿಕಾರಿಗಳ ಆಹ್ವಾನದ ಮೇರೆಗೆ, ಯುರೋಪಿಯನ್ ಒಕ್ಕೂಟದ ಚುನಾವಣಾ ವೀಕ್ಷಣಾ ಮಿಷನ್ (EOM) ಅನ್ನು ಶಾಸಕಾಂಗ ಮತ್ತು ರಾಷ್ಟ್ರಪತಿ ಎರಡೂ ಚುನಾವಣೆಗಳ ಮೇಲ್ವಿಚಾರಣೆಗಾಗಿ ನಿಯೋಜಿಸಲಾಗುತ್ತಿದೆ. ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿ ಕಾಜಾ ಕಾಲ್ಲಾಸ್ ಅವರು, ಯುರೋಪಿಯನ್ ಸಂಸತ್ತಿನ ಉಪಾಧ್ಯಕ್ಷ ಎಸ್ಟೆಬಾನ್ ಗೊನ್ಸಾಲೆಸ್ ಪೊನ್ಸ್ ಅವರನ್ನು ಮುಖ್ಯ ವೀಕ್ಷಕರಾಗಿ ನೇಮಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

14 ಫೆಬ್ರವರಿ 2026, 18:34