ನೈಜೀರಿಯಾದಲ್ಲಿ ಭದ್ರತಾ ಆತಂಕ: ಪುನರುತ್ಥಾನ ಮಹೋತ್ಸವದ ಜಾಗರಣೆ ಬಲಿಪೂಜೆ ಸಮಯ ಬದಲಾವಣೆ
ಲೇಖಕರು: ಕೀಲ್ ಗಸ್ಸಿ
ಗರಿಗಳ ಭಾನುವಾರ ನಡೆದ ದಾಳಿಯಲ್ಲಿ ಮಧ್ಯ ನೈಜೀರಿಯಾದ ಜೋಸ್ ನಾರ್ತ್ ಜಿಲ್ಲೆಯ ಅಂಗ್ವಾನ್ ರುಕುಬಾ ಸಮುದಾಯದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ನೈಜೀರಿಯಾದ ಹಲವಾರು ಕಥೋಲಿಕ ಧರ್ಮಪ್ರಾಂತ್ಯಗಳು ಪುನರುತ್ಥಾನ ಮಹೋತ್ಸವದ ಜಾಗರಣೆ ಬಲಿಪೂಜೆಯನ್ನು ರಾತ್ರಿ ಸಮಯದಲ್ಲಿ ಆಚರಿಸದೇ, ಮುಂಚಿತವಾಗಿ ಸಂಜೆ ವೇಳೆಗೆ ನಡೆಸಲು ತೀರ್ಮಾನಿಸಿವೆ. ಭದ್ರತಾ ಕಾರಣಗಳಿಂದ ಈ ಬದಲಾವಣೆ ಕೈಗೊಳ್ಳಲಾಗಿದೆ.
ಧಾರ್ಮಿಕ ಸೇವೆಯ ವಿವೇಕದಿಂದ ತೆಗೆದುಕೊಂಡ ನಿರ್ಧಾರ
ಉದಾಹರಣೆಗೆ, ಓಂಡೋ ಧರ್ಮಪ್ರಾಂತ್ಯವು ಮಾರ್ಚ್ 30ರಂದು ಪ್ರಕಟಿಸಿದ ಪ್ರಕಟಣೆಯಲ್ಲಿ, ಪೂಜ್ಯ ಧರ್ಮಾಧ್ಯಕ್ಷರಾದ ಜೂಡ್ ಆಯೋಡೆಜಿ ಅರೊಗುಂಡಾಡೆ ಅವರು ಪವಿತ್ರ ಶನಿವಾರದ ಜಾಗರಣೆ ಬಲಿಪೂಜೆಯನ್ನು ಸಂಜೆ 5 ಗಂಟೆಗೆ ಆಚರಿಸಲು ತೀರ್ಮಾನಿಸಿರುವುದಾಗಿ ತಿಳಿಸಿದೆ. ಈ ಪ್ರಕಟಣೆಯನ್ನು ಧರ್ಮಪ್ರಾಂತ್ಯದ ಚಾನ್ಸಲರ್ ವಂ ಗುರು ಮೈಕಲ್ ಓ. ಎನಿಯಾಯೆಜು ಅವರು ಸಹಿ ಮಾಡಿದ್ದಾರೆ.
ಪ್ರಸ್ತುತ ಕಾಲಘಟ್ಟದ ವಾಸ್ತವತೆಗಳನ್ನು, ವಿಶೇಷವಾಗಿ ದೇಶ ಮತ್ತು ರಾಜ್ಯದಲ್ಲಿನ ಭದ್ರತಾ ಸವಾಲುಗಳನ್ನು ಪರಿಗಣಿಸಿ, ಹಾಗೂ ಧಾರ್ಮಿಕ ಸೇವೆಯ ವಿವೇಕ ಮತ್ತು ಸಂವೇದನಾಶೀಲತೆಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ವ್ಯಾಟಿಕನ್ನ ಫಿದೆಸ್ ಸುದ್ದಿಸಂಸ್ಥೆಯ ಪ್ರಕಾರ, ಈ ಸಂದೇಶವು ಗುರುಗಳು, ಸಹೋದರಿಯರು ಮತ್ತು ವಿಶ್ವಾಸಿಗಳನ್ನು “ನಮ್ಮ ಪ್ರಭುವಿನ ಪುನರುತ್ಥಾನದ ಕ್ರೈಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರಲು” ಆಹ್ವಾನಿಸುತ್ತದೆ — ಈ ಮಹತ್ವವನ್ನು ಜಾಗರಣೆ ಬಲಿಪೂಜೆ ವಿಶಿಷ್ಟವಾಗಿ ಆಚರಿಸುತ್ತದೆ.ಆದರೆ, “ಭದ್ರತೆ ಎಲ್ಲರ ಜವಾಬ್ದಾರಿಯಾಗಿದೆ” ಎಂಬ ಅರಿವಿನೊಂದಿಗೆ, ಎಲ್ಲರೂ ಜಾಗರೂಕರಾಗಿರಬೇಕು ಎಂಬುದನ್ನೂ ಒತ್ತಿಹೇಳುತ್ತದೆ.
ಈ ಸಂದೇಶವು “ಎಲ್ಲಾ ಧರ್ಮಕೇಂದ್ರಗಳು ಮತ್ತು ಸಮುದಾಯಗಳು ತಮ್ಮ ಭದ್ರತಾ ಕ್ರಮಗಳನ್ನು ಬಲಪಡಿಸಬೇಕು” ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಜೊತೆಗೆ, “ನಮ್ಮ ದೇಶದಲ್ಲಿ ಶಾಂತಿ ಮತ್ತು ರಕ್ಷಣೆಗೆ ನಾವು ನಿರಂತರವಾಗಿ ಪ್ರಾರ್ಥಿಸೋಣ” ಎಂದು ಕರೆ ನೀಡುತ್ತದೆ.
ಹಿಂಸಾಚಾರಕ್ಕೆ ಏಕಕಂಠ ಖಂಡನೆ
ಧರ್ಮಪ್ರಾಂತ್ಯದ ಈ ಪ್ರಕಟಣೆ, ಗರಿಗಳ ಭಾನುವಾರ ನಡೆದ ದಾಳಿಯ ನಂತರದ ದಿನವೇ ಹೊರಬಂದಿದೆ. ಸಂಜೆ ಸುಮಾರು 7:30ರ ವೇಳೆಯಲ್ಲಿ, ಜನರು ತಮ್ಮ ದೈನಂದಿನ ಕಾರ್ಯಗಳನ್ನು ಮುಗಿಸುತ್ತಿದ್ದಾಗ ದಾಳಿಕೋರರು ಅಂಗ್ವಾನ್ ರುಕುಬಾ ಸಮುದಾಯದ ಮೇಲೆ ದಾಳಿ ನಡೆಸಿದರು. ಅನಿಯಂತ್ರಿತ ಗುಂಡಿನ ದಾಳಿ ಭೀತಿಯ ವಾತಾವರಣವನ್ನು ಉಂಟುಮಾಡಿತು.
ವಿವಿಧ ಧರ್ಮಗಳ ನಾಯಕರು ಈ ದಾಳಿಯನ್ನು ಏಕಕಂಠದಿಂದ ಖಂಡಿಸಿದ್ದಾರೆ. ಪ್ಲಾಟೋ ರಾಜ್ಯದ ಜಮಾಅತು ನಸ್ರಿಲ್ ಇಸ್ಲಾಂ (JNI) ಸಂಸ್ಥೆ ಇದನ್ನು ಕ್ರೂರ ಹಾಗೂ ಅರ್ಥಹೀನ ಕೃತ್ಯವೆಂದು ಹೇಳಿ, ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ. JNI ನೈಜೀರಿಯಾದ ಹಲವು ಮುಸ್ಲಿಂ ಸಂಘಟನೆಗಳ ಪ್ರಮುಖ ಸಂಸ್ಥೆಯಾಗಿದೆ.
JNI ಕಾರ್ಯದರ್ಶಿ ಸಹಿ ಮಾಡಿದ ಪ್ರಕಟಣೆಯಲ್ಲಿ, ಈ ದಾಳಿಯನ್ನು “ಶಾಂತಿ ಮತ್ತು ಸಹಬಾಳ್ವೆಗೆ ಗಂಭೀರ ಧಕ್ಕೆ” ಎಂದು ವಿವರಿಸಲಾಗಿದೆ. “ಮಾನವ ಜೀವದ ಪವಿತ್ರತೆಯನ್ನು ಯಾವುದೇ ಸಂದರ್ಭದಲ್ಲಿಯೂ ಉಲ್ಲಂಘಿಸಬಾರದು” ಎಂಬುದನ್ನೂ ಅದು ಸ್ಪಷ್ಟಪಡಿಸುತ್ತದೆ.
ನೈಜೀರಿಯಾದ ಕ್ರೈಸ್ತ ಸಂಘಟನೆಗಳ ಒಕ್ಕೂಟವಾದ CAN ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ಹೀಗೆ ತಿಳಿಸಿದ್ದಾರೆ: “ನಾವು ಶೋಕಿಸುತ್ತೇವೆ. ನಾವು ದುಃಖಿಸುತ್ತೇವೆ. ಆದರೆ ಸತ್ಯವನ್ನು ಹೇಳಲೇಬೇಕು. ನಾವು ಈ ಸ್ಥಿತಿಗೆ ಹೇಗೆ ಬಂದೆವು? ಜನರು ತಮ್ಮದೇ ಮನೆಗಳಲ್ಲಿ ಸುರಕ್ಷಿತವಾಗಿ ಇರುವ ಭಾವನೆ ಏಕೆ ಕಳೆದುಕೊಂಡಿದ್ದಾರೆ? ಪವಿತ್ರ ದಿನದಲ್ಲಿಯೂ ಸಮುದಾಯಗಳು ಇಂತಹ ಭೀತಿಗೆ ಒಳಗಾಗುವುದೇಕೆ?”
CAN ಅಧ್ಯಕ್ಷರು ಮತ್ತೊಂದು ಗಂಭೀರ ಅಂಶವನ್ನು ಉಲ್ಲೇಖಿಸಿದರು: ದಾಳಿಕೋರರು “ನಕಲಿ ಸೈನಿಕ ಉಡುಪುಗಳನ್ನು ಬಳಸಿರುವುದು” ಸಾರ್ವಜನಿಕ ನಂಬಿಕೆಗೆ ದೊಡ್ಡ ಹೊಡೆತವಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂಬುದನ್ನೂ ಅವರು ಒತ್ತಿಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).