ಹುಡುಕಿ

ಜೆರುಸಲೇಮ್‌ನಲ್ಲಿ ಗರಿಗಳ ಭಾನುವಾರ ಅಂಗವಾಗಿ ಪ್ರಾರ್ಥನಾ ಸೇವೆಯನ್ನು ನಡೆಸುತ್ತಿರುವ ಕಾರ್ಡಿನಲ್ ಪಿಜ್ಜಾಬಲ್ಲಾ ಜೆರುಸಲೇಮ್‌ನಲ್ಲಿ ಗರಿಗಳ ಭಾನುವಾರ ಅಂಗವಾಗಿ ಪ್ರಾರ್ಥನಾ ಸೇವೆಯನ್ನು ನಡೆಸುತ್ತಿರುವ ಕಾರ್ಡಿನಲ್ ಪಿಜ್ಜಾಬಲ್ಲಾ  (ANSA)

ಪ್ರಸ್ತುತ ಕಾಲಘಟ್ಟಕ್ಕೆ ಜೆರುಸಲೇಮ್ ಧರ್ಮಸಭೆಯ ಒಂದು ಕರೆ

ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನಧರ್ಮಪ್ರಾಂತ್ಯಕ್ಕೆ ಸೇರಿದ ಜೋರ್ಡಾನ್ ದೇಶದ ಗುರುಗಳಾದ ವಂ. ಗುರು ರಿಫತ್ ಬಾದರ್ ಅವರು, ಕಾರ್ಡಿನಲ್ ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು ಪ್ರಧಾನಧರ್ಮಪ್ರಾಂತ್ಯಕ್ಕೆ ಉದ್ದೇಶಿಸಿ ನೀಡಿದ ಪಾಲನಾ ಪತ್ರದ ಮಹತ್ವ ಮತ್ತು ಅದರ ಸೂಚನೆಗಳನ್ನು ಕುರಿತು ಚಿಂತನೆಯನ್ನು ಹಂಚಿಕೊಂಡಿದ್ದಾರೆ. ಈ ಪ್ರಧಾನಧರ್ಮಪ್ರಾಂತ್ಯ ಜೆರುಸಲೇಮ್ ಮಾತ್ರವಲ್ಲದೆ ಜೋರ್ಡಾನ್, ಪ್ಯಾಲೆಸ್ತೀನ್, ಇಸ್ರಾಯೇಲ್ ಮತ್ತು ಸೈಪ್ರಸ್ ಸೇರಿದಂತೆ ಅನೇಕ ಭೌಗೋಳಿಕ ಪ್ರದೇಶಗಳನ್ನು ಒಳಗೊಂಡಿದೆ.

ಲೇಖಕರು: ವಂ. ಗುರು ಡಾ. ರಿಫ್’ಅತ್ ಬಾದರ್

ಜೆರುಸಲೇಮ್‌ನ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪೂಜ್ಯ ಕಾರ್ಡಿನಲ್ ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು 27 ಏಪ್ರಿಲ್ 2026ರಂದು  ಒಂದು ಪಾಲನಾ ಪತ್ರವನ್ನು ಪ್ರಕಟಿಸಿದರು. ಇದು ಜೆರುಸಲೇಮ್ ಸೇವೆಯಲ್ಲಿ ಅವರ ದಶಕದ ಉಪಸ್ಥಿತಿಯನ್ನು ಗುರುತಿಸುವ ಸಮಯವಾಗಿದೆ.

ಈ ಪತ್ರದ ಆಳವೂ ಅದರ ಪವಿತ್ರ ನಗರವಾದ ಜೆರುಸಲೇಮ್‌ನೊಂದಿಗೆ ಇರುವ ಗಾಢ ಸಂಬಂಧವೂ, ಕಾರ್ಡಿನಲ್ ಪಿಜ್ಜಬಲ್ಲಾ ಅವರ ವೈಯಕ್ತಿಕ ಜೀವನಯಾತ್ರೆಯಿಂದಲೇ ಬರುತ್ತದೆ. ಅವರು 30 ವರ್ಷಗಳ ಹಿಂದೆ ಮೊದಲ ಬಾರಿಗೆ ಜೆರುಸಲೇಮ್‌ಗೆ ಬಂದಿದ್ದರು. ನಂತರ ಅವರು ಪ್ರೇಷಿತ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ, ಬಳಿಕ ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾಗಿ ನೇಮಕಗೊಂಡರು ಹಾಗೂ ಕಥೋಲಿಕ ಧರ್ಮಸಭೆಯ ಕಾರ್ಡಿನಲ್ ಆಗಿಯೂ ನೇಮಕಗೊಂಡರು.

ಸಂಕಷ್ಟಗಳ ಮಧ್ಯೆಯೂ ಅವರು ಬಡವರ ಹಾಗೂ ಯುವಜನರ ಸಹಾಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಗಾಜಾ ಪ್ರದೇಶಕ್ಕೆ ಹಲವಾರು ಬಾರಿ ಭೇಟಿ ನೀಡುವ ಮೂಲಕ ಸೇವೆಯ ಶ್ರೇಷ್ಠ ಸಾನ್ನಿಧ್ಯವನ್ನು ಮುಂದುವರಿಸುತ್ತಿದ್ದಾರೆ.

ಈ ಪತ್ರದ ಶೀರ್ಷಿಕೆ “ಅವರು ಮಹಾ ಸಂತೋಷದಿಂದ ಜೆರುಸಲೇಮ್‌ಗೆ ಮರಳಿದರು”, ಉಪಶೀರ್ಷಿಕೆ “ಪವಿತ್ರ ಭೂಮಿಯಲ್ಲಿ ಧರ್ಮಸಭೆಯ ಕರೆಯನ್ನು ಜೀವನದಲ್ಲಿ ಬದುಕುವ ಒಂದು ಪ್ರಸ್ತಾವನೆ” ಎಂದು ಇದೆ.

ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನಧರ್ಮಪ್ರಾಂತ್ಯಕ್ಕೆ ಉದ್ದೇಶಿಸಿ ಬರೆಯಲಾದ ಈ ಪತ್ರವು, ಧರ್ಮಸಭೆಯ ಕರೆಯನ್ನು ಪವಿತ್ರ ಭೂಮಿಯಲ್ಲಿ ಮರುಸ್ಥಾಪಿಸುವ ಪ್ರಯತ್ನವನ್ನು ಮಾಡುತ್ತದೆ. ಈ ಕರೆಯ ಪ್ರಮುಖ ಆದ್ಯತೆಗಳು ಇವು: ನೆಲೆಸಿರುವುದು, ಸಾನ್ನಿಧ್ಯ, ಚೇತರಿಕೆ ಮತ್ತು ತೆರೆದ ಮನಸ್ಸು.

ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನಧರ್ಮಪ್ರಾಂತ್ಯಕ್ಕೆ ಜೋರ್ಡಾನ್, ಪ್ಯಾಲೆಸ್ತೀನ್, ಇಸ್ರಾಯೇಲ್ ಮತ್ತು ಸೈಪ್ರಸ್ ಸೇರಿದಂತೆ ಅನೇಕ ಭೌಗೋಳಿಕ ಪ್ರದೇಶಗಳನ್ನು ಒಳಗೊಂಡಿದೆ. ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ ಪೂಜ್ಯ ಪಿಜ್ಜಬಲ್ಲಾ ಅವರು ತಮ್ಮ ಪತ್ರವನ್ನು ಪವಿತ್ರ ಭೂಮಿಯ ಇಂದಿನ ಪರಿಸ್ಥಿತಿಯ ಪ್ರಾಮಾಣಿಕ ವಿಶ್ಲೇಷಣೆಯೊಂದಿಗೆ ಆರಂಭಿಸುತ್ತಾರೆ. ಈ ಪತ್ರವು ಪುನರಾವರ್ತಿತ ಯುದ್ಧಗಳು, ಸಾಮಾಜಿಕ ವಿಭಜನೆ, ಬಲವಂತದ ಸ್ಥಳಾಂತರಗಳ ಅಲೆಗಳು, ದಾರಿದ್ರ್ಯ ಮತ್ತು ಆಕ್ರಮಣದ ವಾಸ್ತವಿಕತೆಯಿಂದ ಉಂಟಾಗುವ ದಿನನಿತ್ಯದ ಕಷ್ಟಗಳನ್ನು ಅಂಗೀಕರಿಸುತ್ತದೆ.

ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವುದು

ಪತ್ರದ ಮೊದಲ ವಿಭಾಗವಾದ “ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವುದು” ಎಂಬ ಭಾಗದಲ್ಲಿ,   ಧರ್ಮಾಧ್ಯಕ್ಷರಾದ ಪೂಜ್ಯ ಪಿಜ್ಜಬಲ್ಲಾ ಅವರು ಈ ಸವಾಲುಗಳಿಗೆ ತಕ್ಷಣದ ತೀರ್ಪು ನೀಡುವುದಕ್ಕಿಂತ ಆಳವಾದ ಗ್ರಹಿಕೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅವರು ಒತ್ತಿಹೇಳುವುದು ಏನೆಂದರೆ, ನಡೆಯುತ್ತಿರುವುದು ಕ್ಷಣಿಕ ಘಟನೆಯಲ್ಲ; ಸರಿಯಾಗಿ ಪರಿಹರಿಸದಿದ್ದರೆ ಇದು ಪವಿತ್ರ ಭೂಮಿಯ ಸಂಸ್ಕೃತಿಯ ಭಾಗವಾಗುವಂತಹ ವಾಸ್ತವಿಕತೆ.

ಆದ್ದರಿಂದ ವಾಸ್ತವಿಕತೆಯನ್ನು ಓದುವುದು ನಿರಾಶಾವಾದವನ್ನು ಪೋಷಿಸುವುದಕ್ಕಾಗಿ ಅಲ್ಲ; ಬದಲಾಗಿ ಅದು ಪ್ರಾಯೋಗಿಕ ಪಾಲನಾ ಚಿಂತನೆಗೆ ಮೂಲಭೂತ ಆಧಾರವನ್ನು ರೂಪಿಸುವುದಕ್ಕಾಗಿ.

ಪೂಜ್ಯರು ಜೆರುಸಲೇಮನ್ನು ಸ್ವರ್ಗದಿಂದ ಇಳಿದು ಬಂದ ಪವಿತ್ರ ನಗರವಾಗಿ, ಒಂದು ಮಾದರಿಯಾಗಿ ಚಿತ್ರಿಸುತ್ತಾರೆ. ಇದರ ಮೂಲಕ, ದೇವರೊಂದಿಗೆ ಸಂಬಂಧದಲ್ಲಿ ನೆಲೆಗೊಂಡಿರುವ ಸಮುದಾಯವನ್ನು ಉಳಿಸಿಕೊಳ್ಳುವ ಬದ್ಧತೆ ನಮಗೆ ಬರುತ್ತದೆ; ಇದು ಮಾನವ ಗೌರವವನ್ನು ಪ್ರತಿಬಿಂಬಿಸುತ್ತದೆ.

“ದೇವರಿಂದ ಸ್ವರ್ಗದಿಂದ ಇಳಿಯುತ್ತಿರುವ ಪವಿತ್ರ ನಗರ” ಎಂಬ ನಿರಂತರ ದೈವ ಸಾನ್ನಿಧ್ಯವೇ ಧರ್ಮಸಭೆಯನ್ನು ಹೊರತಳ್ಳುವ ಕೋಟೆಯಾಗಿ ಮಾಡುವ ಬದಲು ಮುಖಾಮುಖಿ ಭೇಟಿಯ ಸ್ಥಳವನ್ನಾಗಿ ಮಾಡುತ್ತದೆ. ಅದರ ಬಾಗಿಲುಗಳನ್ನು ತೆರೆದಿಡುವುದು ಮತ್ತು "ನಮ್ಮ ಸಾಮೂಹಿಕ ಸ್ಮರಣೆಯನ್ನು ಗುಣಪಡಿಸುವುದು" ಸಂಘರ್ಷಕ್ಕಾಗಿ ವಿನ್ಯಾಸಗೊಳಿಸಲಾದ ಆಯುಧಗಳಿಗಿಂತ ಸಮನ್ವಯವನ್ನು ಮೌಲ್ಯೀಕರಿಸುವ ಆರಂಭಿಕ ಹಂತಗಳಾಗಿವೆ.

ಅರೇಬಿಕ್ ಆವೃತ್ತಿಯಲ್ಲಿ, ಅನುವಾದಕರು ಒಂದು ಪ್ರಮುಖ ಟಿಪ್ಪಣಿಯನ್ನು ಸೇರಿಸುತ್ತಾರೆ. ಪತ್ರದಲ್ಲಿ ಬಳಸಲಾದ “ಉರಶಾಲಿಂ” ಎಂಬ ಪದಕ್ಕೆ ಯಾವುದೇ ರಾಜಕೀಯ ಅರ್ಥವಿಲ್ಲ ಮತ್ತು ಅದು ಇಂದಿನ ನಗರವನ್ನು ಸೂಚಿಸುವುದೂ ಅಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಬದಲಾಗಿ, ಇದು ಪವಿತ್ರ ಬೈಬಲ್‌ನಲ್ಲಿ, ವಿಶೇಷವಾಗಿ ಪ್ರಕಟನೆಯ ಪುಸ್ತಕದಲ್ಲಿ ಕಾಣುವಂತೆ ಜೆರುಸಲೇಮ್‌ನ ಪ್ರಾಚೀನ  ಹೆಸರನ್ನು ಸೂಚಿಸುತ್ತದೆ. ಇಂದಿನ ನಗರವನ್ನು ಸೂಚಿಸುವಾಗ, ಅದನ್ನು “ಅಲ್-ಕುಡ್ಸ್”(Al-Quds)ಎಂದು ಕರೆಯಲಾಗುತ್ತದೆ ಎಂದು ಅನುವಾದಕರು ಗಮನಿಸುತ್ತಾರೆ.

ಈ ಪತ್ರವು ಆರಾಧನೆಯನ್ನು ದೈನಂದಿನ ಜೀವನದೊಂದಿಗೆ ಗುರುತಿಸುತ್ತದೆ. ಬಲಿಪೂಜೆ ಮತ್ತು ಪ್ರಾರ್ಥನೆಗಳು ಬೇರೆ ಯಾವುದಾದರೂ ಗುರಿಯನ್ನು ಸಾಧಿಸುವ ಸಾಧನಗಳಲ್ಲ. ಬದಲಾಗಿ, ಅವು ಧರ್ಮಸಭೆಯ ಜೀವನದ ಹೃದಯವಾಗಿದ್ದು, ಪ್ರೀತಿಯ ಸೌಮ್ಯತೆಯಿಂದ ವಾಸ್ತವಿಕತೆಯನ್ನು ಸ್ಪರ್ಶಿಸಲು ಧರ್ಮಸಭೆಯನ್ನು ಸಮರ್ಥಗೊಳಿಸುವ ನವೀಕರಣದ ಮೂಲವಾಗಿವೆ.

ಪ್ರಾಯೋಗಿಕ ಮಾರ್ಗದರ್ಶನಗಳು

ಈ ಆಧಾರದ ಮೇಲೆ ಸ್ಪಷ್ಟವಾದ ಪ್ರಾಯೋಗಿಕ ಮಾರ್ಗದರ್ಶನಗಳು ಹೊರಹೊಮ್ಮುತ್ತವೆ. ಅವುಗಳಲ್ಲಿ ಸಾರ್ವಜನಿಕ ಮತ್ತು ವೈಯಕ್ತಿಕ ಪ್ರಾರ್ಥನೆಗಳನ್ನು ಉತ್ತೇಜಿಸುವುದು, ಕುಟುಂಬಗಳನ್ನು “ಗೃಹಧರ್ಮಸಭೆ”ಗಳಾಗಿ ಬೆಳೆಸುವುದು, ತೆರೆದ ಮನೋಭಾವವನ್ನು ರೂಪಿಸುವ ಶಾಲೆಗಳನ್ನು ಬೆಂಬಲಿಸುವುದು ಮತ್ತು ಆರೋಗ್ಯ ಹಾಗೂ ಸಾಮಾಜಿಕ ಕಲ್ಯಾಣ ಸಂಸ್ಥೆಗಳ ಸ್ವಭಾವವನ್ನು ಸಂವಾದ ಮತ್ತು ಚೇತರಿಕೆಯ ಸ್ಥಳಗಳಾಗಿ ಉಳಿಸುವುದು ಸೇರಿವೆ.

ಪೂಜ್ಯರು ಪ್ರಕಟನೆಯ ಪುಸ್ತಕದ ಭಾಷೆಯನ್ನು ಬಳಸುತ್ತಾರೆ. ಅವರು ಆಸ್ಪತ್ರೆಗಳು, ಕ್ಲಿನಿಕ್‌ಗಳು, ಕಾರಿತಾಸ್ ಮತ್ತು ಆರೈಕೆ ಗೃಹಗಳು ನೀಡುವ ಸೇವೆಗಳಲ್ಲಿ “ರಾಷ್ಟ್ರಗಳ ಚೇತರಿಕೆಗೆ ಬಳಸಲಾಗುವ ಮರದ ಎಲೆಗಳನ್ನು” ಕಾಣುತ್ತಾರೆ. ಇವು ಯಾವುದೇ ಧಾರ್ಮಿಕ ಅಥವಾ ಜಾತೀಯ ಭೇದವಿಲ್ಲದೆ ಸಮೂಹ ಚೇತರಿಕೆಯಲ್ಲಿ ಜೆರುಸಲೇಮ್‌ನ ಕರೆಯನ್ನು ನಿಜವಾಗಿ ಸಾಕಾರಗೊಳಿಸುವ ಪ್ರತೀಕಗಳಾಗಿವೆ. ಪಿಜ್ಜಬಲ್ಲಾ ಅವರ ಪ್ರಕಾರ, ಈ ಶಾಂತ ಸೇವೆಯೇ ಜನಾಂಗಗಳು ಮತ್ತು ಧರ್ಮಗಳ ನಡುವೆ ಭೇಟಿಗೆ ಸಾಮಾನ್ಯ ನೆಲೆಯನ್ನು ಸೃಷ್ಟಿಸುತ್ತದೆ.

ಈ ಪತ್ರವು ಪ್ರಮುಖ ನೈತಿಕ ವಿಷಯಗಳಿಗೆ ಸಮರ್ಪಿತವಾಗಿದೆ: ಹಿಂಸೆಯನ್ನು ಅಸಂಶೋಧನೀಯ ಮೌಲ್ಯವಾಗಿ ನಿರಾಕರಿಸುವುದು, ಐತಿಹಾಸಿಕ ಸ್ಮೃತಿಯನ್ನು ಆಧ್ಯಾತ್ಮಿಕವಾಗಿ ಮರುಓದುವ ಅಗತ್ಯ (ಅದನ್ನು ವಿಷಗಳಿಂದ ಮುಕ್ತಗೊಳಿಸುವುದು), ಮತ್ತು ಅಂತರ್ಧರ್ಮೀಯ ಸಂವಾದವು ಐಚ್ಛಿಕ ಸೌಕರ್ಯವಲ್ಲ, ಅನೇಕ ಗುರುತಿನ ಭೂಮಿಯಲ್ಲಿ ಅಸ್ತಿತ್ವಾತ್ಮಕ ಅಗತ್ಯವಾಗಿದೆ ಎಂಬುದನ್ನು ಒತ್ತಿಹೇಳುತ್ತದೆ.

ಈ ಪತ್ರವು ಧೈರ್ಯ ಮತ್ತು ಸಹನೆಯ ಕರೆ ನೀಡುತ್ತದೆ. ಧರ್ಮಾಧ್ಯಕ್ಷರಾದ ಪಿಜ್ಜಬಲ್ಲಾ “ಜೀವನದ ಸಂವಾದ”ವನ್ನು ರೂಪಿಸಲು ಪ್ರೋತ್ಸಾಹಿಸುತ್ತಾರೆ—“ಅಭಿಜಾತರ ಸಂವಾದ”ಕ್ಕಿಂತ ವಿಭಿನ್ನವಾಗಿ—ಮತ್ತು ಪ್ರತ್ಯೇಕತೆ ಹಾಗೂ ಏಕಾಂಗಿತನದ ಬದಲು ದೈನಂದಿನ ಜೀವನದಲ್ಲಿ ಭೇಟಿಯನ್ನು ಮತ್ತು ತೆರೆದ ಮನೋಭಾವವನ್ನು ಕಲಿಸುವ ಅಭ್ಯಾಸಗಳಿಗೆ ನಾವು ಬದ್ಧರಾಗಬೇಕೆಂದು ಕರೆ ನೀಡುತ್ತಾರೆ.

ಯುದ್ಧದ ತರ್ಕದ ವಿರೋಧ

ಅವರ ನಿಲುವುಗಳು ಯುದ್ಧದ ತರ್ಕವನ್ನು ಧೈರ್ಯದಿಂದ ವಿರೋಧಿಸುತ್ತವೆ. ಪವಿತ್ರ ನಗರದಲ್ಲಿ, ಲ್ಯಾಟಿನ್ ಧರ್ಮಾಧ್ಯಕ್ಷರು ಗರಿಗಳ ಭಾನುವಾರವನ್ನು ಪವಿತ್ರ ಸಮಾಧಿಯ ದೇವಾಲಯದಲ್ಲಿ ಆಚರಿಸುವುದನ್ನು ನಿಷೇಧಿಸಲ್ಪಟ್ಟ ಅನುಭವವನ್ನೂ ಎದುರಿಸಿದ್ದಾರೆ. ಅವರ ಹುದ್ದೆಯ ಸಂಕೇತಾರ್ಥ ಹಾಗೂ ಹಿಂಸೆಯ ಮಧ್ಯೆಯಲ್ಲಿನ ಸೇವಾ ಅನುಭವವು ಈ ಪತ್ರಕ್ಕೆ ಪ್ರಾಮಾಣಿಕತೆಯನ್ನೂ ತುರ್ತುಭಾವವನ್ನೂ ನೀಡುತ್ತದೆ.

ಧರ್ಮಾಧ್ಯಕ್ಷ ಪಿಜ್ಜಬಲ್ಲಾ ಅವರ ಪಾಲನಾ ಪತ್ರವನ್ನು ಓದುವಾಗ, ನಾವು 1997ರಲ್ಲಿ ಜೆರುಸಲೇಮ್‌ನ ನಿವೃತ್ತ ಲ್ಯಾಟಿನ್ ಧರ್ಮಾಧ್ಯಕ್ಷರಾದ ಮಿಶೇಲ್ ಸಬ್ಬಾ ಅವರು ಬರೆದ ಪ್ರಭಾವಶಾಲಿ ಪಾಲನಾ ಪತ್ರವನ್ನೂ ನೆನಪಿಸಿಕೊಳ್ಳಬೇಕು. ಅದು “ಬೈಬಲ್‌ನ ಭೂಮಿಯಲ್ಲಿ ಇಂದಿನ ದಿನಗಳಲ್ಲಿ ಬೈಬಲ್ ಓದುವುದು” ಎಂಬ ವಿಷಯದ ಮೇಲೆ ಕೇಂದ್ರೀಕರಿಸಿತ್ತು.

ಸಬ್ಬಾ ಅವರ ಪತ್ರವು ಪವಿತ್ರ ಗ್ರಂಥವನ್ನು ಸ್ವಂತ ಭೂಮಿಯ ಜೀವನಸಂದರ್ಭದಲ್ಲಿ ವಿಭಿನ್ನವಾಗಿ ಅರ್ಥಮಾಡಿಕೊಳ್ಳಲಾಗುತ್ತದೆ ಎಂಬುದನ್ನು ನೆನಪಿಸಿತು. ಇಂದಿಗೆ, ಪಿಜ್ಜಬಲ್ಲಾ ಅವರು ಅದಕ್ಕೆ ಒಂದು ಮುಂದಿನ ಪಾಲನಾ ಹಂತವನ್ನು ಸೇರಿಸುತ್ತಾರೆ. ಕೇವಲ ಪಠ್ಯಾಧಾರಿತ ಓದಿನಿಂದ ಮುಂದೆ ಹೋಗಿ, ಈಗ ನಾವು ಜೀವಂತ ಸುವಾರ್ತೆಯ ದೃಷ್ಟಿಯನ್ನು ಅನ್ವಯಿಸಬೇಕು—ಇದು ಭೂಮಿಯ ಎಲ್ಲೆಡೆ ಧರ್ಮಸಭೆಯನ್ನು ಸಕ್ರಿಯವಾಗಿ ಹಾಜರಿರಿಸುತ್ತದೆ ಮತ್ತು ಪವಿತ್ರ ಗ್ರಂಥೀಯ ಪರಂಪರೆಯನ್ನು ಜೀವನ, ಆರೈಕೆ ಮತ್ತು ಸಹಯಾನದ ಕಾರ್ಯಕ್ರಮವಾಗಿ ಪರಿವರ್ತಿಸುತ್ತದೆ.

ಪಾಲನಾ ಮಾರ್ಗನಕ್ಷೆ

ಈ ಪಾಲನಾ ಪತ್ರದ ಮಹತ್ವ ಮತ್ತು ಅದರ ಕ್ರಿಯೆಗೆ ನೀಡುವ ಕರೆಯು ಕಾರ್ಡಿನಲ್ ಪಿಜ್ಜಬಲ್ಲಾ ಅವರ ವೈಯಕ್ತಿಕ ಚಿಂತನೆ ಮತ್ತು ಶುಭಸಂದೇಶಾತ್ಮಕ ಆಧ್ಯಾತ್ಮಿಕತೆಯ ಏಕೀಕರಣದಲ್ಲಿ ಅಡಗಿದೆ. ಇದು ಪವಿತ್ರ ಭೂಮಿಯಲ್ಲಿ ಕ್ರೈಸ್ತರ ಸಾನ್ನಿಧ್ಯವನ್ನು ರಕ್ಷಿಸುವುದು, ಬಡವರ ಮತ್ತು ಅಂಚಿನಲ್ಲಿರುವವರ ಆರೈಕೆ ಮಾಡುವುದು, ಹೊಸ ಪೀಳಿಗೆಗೆ ತೆರೆದ ಮನೋಭಾವಕ್ಕೆ ಶಿಕ್ಷಣ ನೀಡುವುದು, ಹಾಗೂ ಚೇತರಿಕೆ ಮತ್ತು ಸಂವಾದದ ಸಂಸ್ಕೃತಿಯನ್ನು ನಿರ್ಮಿಸುವುದು ಎಂಬ ಸ್ಪಷ್ಟವಾದ ಪಾಲನಾ ಮಾರ್ಗನಕ್ಷೆಯನ್ನು ಒದಗಿಸುತ್ತದೆ.

ಇದು ಜೆರುಸಲೇಮ್‌ಗೆ ಮರಳುವ ಒಂದು ಆಹ್ವಾನವಾಗಿದೆ—ಕೇವಲ ಭೌಗೋಳಿಕ ಮರಳುವಿಕೆಯಲ್ಲ, ಬದಲಾಗಿ ಆ ನಗರದ ಹೃದಯ, ಸ್ಮೃತಿ ಮತ್ತು ಕ್ರೈಸ್ತ ಬದ್ಧತೆಯನ್ನು ಪುನರ್ ನಿರ್ಮಿಸುವ ಕರೆಯಾಗಿದೆ. ಪಾಸ್ಕದ ಬೆಳಕಿನಿಂದ ಪ್ರಕಾಶಮಾನವಾದ, ಬಾಗಿಲುಗಳು ತೆರೆದಿರುವ ಒಂದು ನಗರ—ಅಲ್ಲಿ ಜನರು ರಾಷ್ಟ್ರಗಳನ್ನು ಚೇತರಿಸುವ ಶಾಂತಿಯ ಬೀಜಗಳನ್ನು ಬಿತ್ತುತ್ತಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

30 ಏಪ್ರಿಲ್ 2026, 16:00