ಹುಡುಕಿ

ವೇಲಾಂಗಣಿ ಮಾತೆ ದೇವಾಲಯ ವೇಲಾಂಗಣಿ ಮಾತೆ ದೇವಾಲಯ 

ಶ್ರೀಲಂಕಾದ ದ್ವೀಪದಲ್ಲಿರುವ ದೇವಾಲಯ ಮೈನ್‌ಗಳಿಂದ ಮುಕ್ತ; ಪುನರುತ್ಥಾನ ಮಹೋತ್ಸವದ ಸಂದರ್ಭದಲ್ಲಿ ಭರವಸೆಯ ಹೊಸ ಕಿರಣ

ಶ್ರೀಲಂಕಾದ ಗೃಹಯುದ್ಧವು ವಿಶೇಷವಾಗಿ ದೇಶದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಭೂಮಿಯಲ್ಲಿ ಹೂತ ಮೈನ್‌ಗಳು ಮತ್ತು ಸ್ಫೋಟಿಸದ ಶಸ್ತ್ರಾಸ್ತ್ರಗಳ ರೂಪದಲ್ಲಿ ಭೀಕರ ಅವಶೇಷವನ್ನು ಬಿಟ್ಟುಹೋಗಿತ್ತು. ಪುವರನ್ಸಂತಿವು ದ್ವೀಪದಲ್ಲಿರುವ ವೇಲಾಂಗಣಿ ಮಾತೆಯ ದೇವಾಲಯದ ಸುತ್ತಮುತ್ತ ಇರುವ ಮೈನ್‌ಗಳನ್ನು ತೆಗೆಯಲು HALO ಟ್ರಸ್ಟ್ ಸುಮಾರು ಇಪ್ಪತ್ತು ವರ್ಷಗಳ ಕಾಲ ಶ್ರಮಪಟ್ಟಿದೆ. ಇದರಿಂದ ಯುದ್ಧ ಮತ್ತು ಹಿಂಸೆಯಿಂದ ದೂರವಾಗಿದ್ದ ಆ ಪೂಜಾಸ್ಥಳಕ್ಕೆ ವಿಶ್ವಾಸಿಗಳು ಮತ್ತೆ ಮರಳಲು ಸಾಧ್ಯವಾಗಿದೆ.

ಲೇಖಕರು:ಫ್ಫ್ರಾನ್ಸೆಸ್ಕಾ ಮೆರ್ಲೋ

2026ರ ಮಾರ್ಚ್ 14ರಂದು ಬೆಳಗಿನ ಜಾವ, ಕುಟುಂಬಗಳೊಂದಿಗೆ ಬಂದ ದೋಣಿಗಳು ಜಾಫ್ನಾ ಸರೋವರದ ನೀರನ್ನು ದಾಟಿ ಪುವರನ್ಸಂತಿವು ದ್ವೀಪದತ್ತ ಸಾಗತೊಡಗಿದವು. ವರ್ಷಗಳ ಕಾಲ ತಲುಪಲು ಅಪಾಯಕರವಾಗಿದ್ದ ಆ ಸ್ಥಳದಲ್ಲಿ, ಬಿಸಿಲಿನ ತೀವ್ರತೆಯ ನಡುವೆ ಜನರು ಒಂದಾಗಿ ಸೇರುವ ದೃಶ್ಯ ಕಾಣಿಸಿತು.

ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಆ ಸಣ್ಣ ಕರಾವಳಿ ಧರ್ಮಕೇಂದ್ರವು, ದೇಶದ ಗೃಹಯುದ್ಧದ ಅಂತಿಮ ವರ್ಷಗಳಿಂದ ಅದರ ಸುತ್ತಲೂ ಹೂತಿದ್ದ ಮೈನ್‌ಗಳನ್ನು ಮಾನವೀಯ ಸೇವಕರಿಂದ ಸಂಪೂರ್ಣವಾಗಿ ತೆರವುಗೊಳಿಸಿದ ನಂತರ, ಎರಡು ದಶಕಗಳ ಬಳಿಕ ತನ್ನ ಮೊದಲ ಪೂರ್ಣ ಹಬ್ಬದ ದಿನವನ್ನು ಆಚರಿಸಲು ಸಿದ್ಧವಾಗಿತ್ತು. ಏಪ್ರಿಲ್ 4ರಂದು ಜಗತ್ತು ‘ಮೈನ್ ಜಾಗೃತಿ ಮತ್ತು ಮೈನ್ ನಿವಾರಣೆಗೆ ನೆರವು ದಿನ’ವನ್ನು ಆಚರಿಸುತ್ತಿರುವಾಗ, ಈ ಘಟನೆ ಸ್ಫೋಟಿಸದ ಶಸ್ತ್ರಾಸ್ತ್ರಗಳಿಂದ ಉಳಿದ ಗಾಯಗಳನ್ನೂ, ಭೂಮಿಯನ್ನು ಮತ್ತೆ ಸುರಕ್ಷಿತಗೊಳಿಸಲು ಬೇಕಾದ ದೀರ್ಘ ಮತ್ತು ಶ್ರಮದಾಯಕ ಕಾರ್ಯವನ್ನೂ ನೆನಪಿಸುತ್ತದೆ.

“ಅದು ತುಂಬಾ ಭಾವನಾತ್ಮಕ ಕ್ಷಣವಾಗಿತ್ತು,” ಎಂದು ವೇಲಾಂಗಣಿ ಮಾತೆಯ ಧರ್ಮಕೇಂದ್ರದಲ್ಲಿ ಹಬ್ಬದ ಪವಿತ್ರ ಬಲಿಯನ್ನು ಆಚರಿಸಿದ ಗುರು ಜೆರೋ ಸೆಲ್ವನಾಯಗಂ ಹೇಳಿದರು. “ಕರಾವಳಿ ಪ್ರದೇಶಗಳಿಂದ ಜನರು ತಮ್ಮ ಕುಟುಂಬಗಳೊಂದಿಗೆ ಬಂದಿದ್ದರು. ಸಾಮಾನ್ಯವಾಗಿ ಪುರುಷರು ಒಬ್ಬರೇ ಮೀನುಗಾರಿಕೆಗೆ ಹೋಗುತ್ತಾರೆ; ಆದರೆ ಈ ಬಾರಿ ಕುಟುಂಬಗಳು ಒಟ್ಟಾಗಿ ಬಂದವು,” ಎಂದು ಅವರು ಹೇಳಿದರು.

ದ್ವೀಪದ ಜೀವನ

ಅಪಾಯದ ಸ್ಥಳವಾಗುವ ಮೊದಲು, ಆ ದ್ವೀಪದ ಧರ್ಮಕೇಂದ್ರವು ಜನರ ದಿನನಿತ್ಯದ ಜೀವನದ ಒಂದು ಭಾಗವಾಗಿತ್ತು. “ಇದು ಮೀನುಗಾರರಿಗೆ ಆಶ್ರಯವಾಗಿಯೂ, ಪೂಜೆಯ ಸ್ಥಳವಾಗಿಯೂ ಬಳಸಲ್ಪಡುತ್ತಿತ್ತು,” ಎಂದು ಜಗತ್ತಿನ ಅತಿದೊಡ್ಡ ಮಾನವೀಯ ಮೈನ್ ನಿವಾರಣಾ ಸಂಸ್ಥೆಯಾದ HALO ಟ್ರಸ್ಟ್‌ನ ಹಿರಿಯ ಕಾರ್ಯಕ್ರಮಾಧಿಕಾರಿ ಮ್ಯಾಥ್ಯೂ ಗಿಲ್ಲಿಯರ್ ವಿವರಿಸುತ್ತಾರೆ. ಈ ದ್ವೀಪದಲ್ಲಿನ ಮೈನ್ ತೆರವು ಕಾರ್ಯವನ್ನು ಇದೇ ಸಂಸ್ಥೆ ನಡೆಸಿತು.

ಆ ಸರೋವರದ ಅಲ್ಪಆಳದ ನೀರು ಮೀನುಗಳು ಮತ್ತು ಕನವಾ ಮೀನುಗಳಿಂದ ಸಮೃದ್ಧವಾಗಿದ್ದು, ಕರಾವಳಿ ಸಮುದಾಯಗಳ ಪೀಳಿಗೆಗಳನ್ನು ಪೋಷಿಸಿದೆ. ಮೀನುಗಾರರು ಸಮುದ್ರಕ್ಕೆ ತೆರಳಿ ಬಲೆಗಳನ್ನು ಬೀಸಿ, ನಂತರ ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ಸ್ಥಳದಲ್ಲಿ, 1970ರ ದಶಕದಲ್ಲಿ, ಅವರು ಈ ಸಣ್ಣ ಧರ್ಮಕೇಂದ್ರವನ್ನು ನಿರ್ಮಿಸಿದರು.

“ಮನೆಗಳಿಂದ ದೂರ ಮೀನುಗಾರಿಕೆಗೆ ಹೋಗುವಾಗ, ಅವರು ಒಂದು ಸಣ್ಣ ದೇವಾಲಯವನ್ನು ನಿರ್ಮಿಸುತ್ತಾರೆ. ವಿಶೇಷವಾಗಿ ಅಪಾಯಕರ ಪರಿಸರಕ್ಕೆ ಹೊರಡುವ ಮುನ್ನ ಪ್ರಾರ್ಥನೆ ಮಾಡಲೇಬೇಕು ಎಂದು ಅವರು ನಂಬುತ್ತಾರೆ,” ಎಂದು ಗುರು ಸೆಲ್ವನಾಯಗಂ ವಿವರಿಸುತ್ತಾರೆ.

ಆದರೆ ಯುದ್ಧದ ಸಮಯದಲ್ಲಿ, ಭೂಭಾಗ ಮತ್ತು ಜಾಫ್ನಾ ಉಪಖಂಡದ ಮಧ್ಯದಲ್ಲಿರುವ ಈ ದ್ವೀಪವು ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿತು. ಪ್ರವೇಶವನ್ನು ತಡೆಯಲು ಮೈನ್‌ಗಳನ್ನು ಹೂಡಲಾಯಿತು, ಇದರಿಂದ ಆ ಧರ್ಮಕೇಂದ್ರವು ವರ್ಷಗಳ ಕಾಲ ಸಂಪೂರ್ಣವಾಗಿ ಪ್ರತ್ಯೇಕಗೊಂಡಿತು. “ಯುದ್ಧದ ಅಂತ್ಯದಲ್ಲಿ, ಶ್ರೀಲಂಕಾ ದೇಶವೇ ಮೈನ್‌ಗಳಿಂದ ತುಂಬಿಕೊಂಡಿತ್ತು,” ಎಂದು ಗಿಲ್ಲಿಯರ್ ಹೇಳುತ್ತಾರೆ. “ಮೈನ್‌ಗಳು ಮಾತ್ರವಲ್ಲ — ಬಾಂಬ್‌ಗಳು, ಗ್ರನೇಡ್‌ಗಳು, ಮಾರ್ಟರ್‌ಗಳು ಮತ್ತು ತಾತ್ಕಾಲಿಕ ಸ್ಫೋಟಕ ಸಾಧನಗಳೂ ಇವೆ. ಅವು ನಿಷ್ಕ್ರಿಯಗೊಂಡಿದೆಯೋ ಇಲ್ಲವೋ ಎಂಬುದು ಎಲ್ಲ ಸಮಯದಲ್ಲೂ ತಿಳಿದಿರುವುದಿಲ್ಲ.”

ಸ್ಥಳೀಯ ಸಮುದಾಯಗಳಿಗೆ ಇದರ ಪರಿಣಾಮ ತಕ್ಷಣವೂ ದೀರ್ಘಕಾಲೀನವಾಗಿಯೂ ಕಂಡುಬಂತು. “ಭೂಮಿ ಮಾಲಿನ್ಯಗೊಂಡಿರುವವರೆಗೆ, ಅವರು ಮತ್ತೆ ಅಲ್ಲಿ ನೆಲೆಸಲು ಸಾಧ್ಯವಿಲ್ಲ,” ಎಂದು ಗಿಲ್ಲಿಯರ್ ವಿವರಿಸುತ್ತಾರೆ. ಆದರೂ ಬದುಕಿನ ಅಗತ್ಯವು ಅವರನ್ನು ಅಪಾಯವನ್ನು ಸ್ವೀಕರಿಸಲು ಒತ್ತಾಯಿಸಿತು. “ಮೀನುಗಾರರು ಆ ದ್ವೀಪವನ್ನು ಇನ್ನೂ ಮೈನ್‌ಗಳಿಂದ ಮಾಲಿನ್ಯಗೊಂಡಿದ್ದರೂ ಬಳಸುತ್ತಿದ್ದರು… ತಮ್ಮ ಜೀವ ಮತ್ತು ಅಂಗಗಳಿಗೆ ಅಪಾಯವಿದೆ ಎಂಬುದನ್ನು ತಿಳಿದೇ,” ಎಂದು ಅವರು ಹೇಳಿದರು.

ಆ ವರ್ಷಗಳನ್ನು ಗುರು ಸೆಲ್ವನಾಯಗಂ ಇನ್ನೂ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ… “ನಾನು ವೈಯಕ್ತಿಕವಾಗಿ ಅನೇಕ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿದ್ದೇನೆ,” ಎಂದು ಅವರು ಹೇಳುತ್ತಾ, ಯುದ್ಧದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರನ್ನು ನೆನಪಿಸಿಕೊಳ್ಳುತ್ತಾರೆ. ಯುದ್ಧದ ನಂತರ ದ್ವೀಪಕ್ಕೆ ತೆರಳಿದ ಒಬ್ಬ ವಿಶ್ವಾಸಿ “ತನ್ನ ಅಂಗವೊಂದನ್ನು ಕಳೆದುಕೊಂಡ” ಘಟನೆಯನ್ನು ಕೂಡ ಅವರು ಸ್ಮರಿಸುತ್ತಾರೆ. ಈ ಘಟನೆ ದ್ವೀಪದಲ್ಲಿದ್ದ ಮೈನ್‌ಗಳು ಮತ್ತು ಸ್ಫೋಟಿಸದ ಶಸ್ತ್ರಾಸ್ತ್ರಗಳ ಅಡಗಿದ ಅಪಾಯವನ್ನು ಬಹಿರಂಗಪಡಿಸಿದ ಕ್ಷಣವಾಗಿತ್ತು ಎಂದು ಅವರು ವಿವರಿಸುತ್ತಾರೆ.

ಭದ್ರತೆಯನ್ನು ಮರುಸ್ಥಾಪಿಸುವ ಅಪಾಯಕಾರಿ ಕಾರ್ಯ

ಆ ಅಪಾಯಗಳನ್ನು ತೆರವುಗೊಳಿಸುವುದು ವೇಗವಾಗಿಯೂ ಸುಲಭವಾಗಿಯೂ ಇರಲಿಲ್ಲ. “ಮೈನ್‌ಗಳನ್ನು ದ್ವೀಪಕ್ಕೆ ಇಳಿಯುವುದನ್ನು ತಡೆಯುವ ಉದ್ದೇಶದಿಂದಲೇ ಹೂಡಲಾಗಿತ್ತು,” ಎಂದು ಗಿಲ್ಲಿಯರ್ ಮುಂದುವರಿಸುತ್ತಾರೆ. ತೆರವು ಕಾರ್ಯವನ್ನು ಆರಂಭಿಸಲು, ಮೈನ್ ನಿವಾರಣಾ ಸಿಬ್ಬಂದಿ ದೋಣಿಗಳಿಂದಲೇ ಕೆಲಸ ಮಾಡಬೇಕಾಯಿತು; ಕಾಲಿಡದೆ ದ್ವೀಪದ ಕರಾವಳಿಯ ನಕ್ಷೆ ರೂಪಿಸಿದರು. ನಂತರ ಮಾತ್ರ ಅವರು ಸಣ್ಣ ಸಣ್ಣ ಸುರಕ್ಷಿತ ಮಾರ್ಗಗಳನ್ನು ಸೃಷ್ಟಿಸಲು ಸಾಧ್ಯವಾಯಿತು. HALO ಸಂಸ್ಥೆ, ತಾವು ಕಾರ್ಯನಿರ್ವಹಿಸುವ ಎಲ್ಲಾ ಮೂವತ್ತು ದೇಶಗಳಂತೆ, ಸ್ಥಳೀಯ ಸಿಬ್ಬಂದಿಯನ್ನು ನೇಮಿಸಿತು. “ನಮ್ಮ ಪ್ರತಿಯೊಬ್ಬ ಸ್ಥಳೀಯ ಸಿಬ್ಬಂದಿಯೂ ಯುದ್ಧದಿಂದ ಸ್ಥಳಾಂತರಗೊಂಡವರೇ,” ಎಂದು ಗಿಲ್ಲಿಯರ್ ಹೇಳಿದ್ದಾರೆ.

ಈ ಕೆಲಸ ಕಠಿಣ ಪರಿಸ್ಥಿತಿಗಳ ನಡುವೆ ಮುಂದುವರಿಯಿತು — ನೆರೆ, ಉಪ್ಪುನೀರಿನ ಪರಿಣಾಮದಿಂದ ಪತ್ತೆ ಸಾಧನಗಳ ಮೇಲೆ ಉಂಟಾದ ಅಡಚಣೆ, ಕತ್ತರಿಸಲಾಗದ ದಟ್ಟ ಮ್ಯಾಂಗ್ರೂವ್ ಗಿಡಗಳು, ವಿಷಕಾರಿ ಸಸ್ಯಗಳು ಮತ್ತು ಹುಳುಗಳು — ಇವೆಲ್ಲವೂ ಸಂರಕ್ಷಿಸಬೇಕಾದ ಪರಿಸರ ವ್ಯವಸ್ಥೆಯ ನಡುವೆ. “ಇದು ಅತ್ಯಂತ ಸವಾಲಿನ ಕಾರ್ಯ,” ಎಂದು ಗಿಲ್ಲಿಯರ್ ಹೇಳುತ್ತಾರೆ; ಆದರೆ ಸ್ಫೋಟಕಗಳನ್ನು ತೆರವುಗೊಳಿಸುವುದು ಜೀವನಗಳನ್ನು ಮರುಸ್ಥಾಪಿಸುತ್ತದೆ. “ಮೈನ್ ನಿವಾರಣೆ ಅಭಿವೃದ್ಧಿಗೆ ದಾರಿಯಾಗಿದೆ,” ಎಂದು ಅವರು ಹೇಳುತ್ತಾರೆ. ಇದರಿಂದ ಜನರು ಮರಳಿ ಬರುವುದು, ಕೆಲಸಮಾಡುವುದು ಮತ್ತು ಜೀವನವನ್ನು ಮರುನಿರ್ಮಿಸುವುದು ಸಾಧ್ಯವಾಗುತ್ತದೆ. ಈ ಶ್ರಮದ ಫಲವು ಮಾರ್ಚ್ 14ರಂದು ಸ್ಪಷ್ಟವಾಗಿ ಕಾಣಿಸಿತು.

ಸುಮಾರು ನೂರೈವತ್ತು ಜನರು ಮೀನುಗಾರರ ದೋಣಿಗಳಲ್ಲಿ ದ್ವೀಪಕ್ಕೆ ಪ್ರಯಾಣಿಸಿದರು. ಅವರು ಆಹಾರವನ್ನು ತಂದರು, ಒಟ್ಟಾಗಿ ಪ್ರಾರ್ಥಿಸಿದರು ಮತ್ತು ತೀವ್ರ ಬಿಸಿಲಿನ ನಡುವೆಯೂ ಅಲ್ಲೇ ಉಳಿದರು. ಗಿಲ್ಲಿಯರ್ ಸ್ವತಃ ಕೂಡ ಅಲ್ಲಿ ಹಾಜರಿದ್ದರು.

ಪುನರುಜ್ಜೀವನದ ಕಾಲ

“ಅದು ತುಂಬಾ ಮನಮುಟ್ಟುವ ಆಚರಣೆಯಾಗಿತ್ತು,” ಎಂದು ಅವರು ಹೇಳಿದರು. “ಜನರು ಆಹಾರವನ್ನು ಹಂಚಿಕೊಂಡರು… ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.” ಪ್ರಯಾಣ ಸುಲಭವಾಗಿರಲಿಲ್ಲ — ದೋಣಿಯಲ್ಲಿ ದಾಟುವುದು, ತೀವ್ರ ಬಿಸಿಲು, ದೀರ್ಘ ಸಮಯ — ಆದರೆ ಇದನ್ನೆಲ್ಲಾ ಅವರು ಸ್ವಯಂಸಿದ್ಧವಾಗಿ ಸ್ವೀಕರಿಸಿದರು. ಗುರು ಸೆಲ್ವನಾಯಗಂ ಇದನ್ನು ಆಳವಾದ ಪರಂಪರೆಯ ಭಾಗವೆಂದು ವಿವರಿಸುತ್ತಾರೆ. “ಈ ಹಬ್ಬಗಳು ತಪಸ್ಸು ಕಾಲದ ಯಾತ್ರೆಗಳಂತಿವೆ,” ಎಂದು ಅವರು ಹೇಳಿದರು. “ಜನರು ತಮ್ಮ ಮನೆಗಳನ್ನು ಬಿಟ್ಟು, ಸಮುದ್ರ ಮಾರ್ಗವಾಗಿ ಪ್ರಯಾಣಿಸಿ, ಕಠಿಣ ಪರಿಸ್ಥಿತಿಗಳನ್ನು ಸಹಿಸುತ್ತಾರೆ… ಇದು ತ್ಯಾಗ ಮತ್ತು ಭಕ್ತಿಯ ಒಂದು ರೂಪ.”

ದಶಕಗಳ ಕಾಲ ಈ ದ್ವೀಪವು ಭಯದೊಂದಿಗೆ ಸಂಬಂಧಿಸಿಕೊಂಡಿತ್ತು. ಈಗ, ಪುನರುತ್ಥಾನ ಹಬ್ಬದ ಮುನ್ನ, ಇದು ಮತ್ತೆ ಒಂದಾಗಿ ಸೇರುವ ಮತ್ತು ಪ್ರಾರ್ಥಿಸುವ ಸ್ಥಳವಾಗಿ ರೂಪುಗೊಂಡಿದೆ. “ಇದೀಗ ಅವರಿಗೆ ಯಾವುದೇ ಅಪಾಯವಿಲ್ಲ ಎಂಬ ಭಾವನೆ ಇದೆ,” ಎಂದು ಗುರು ಸೆಲ್ವನಾಯಗಂ ಹೇಳಿದರು. ಶ್ರೀಲಂಕಾದ ಉತ್ತರ ಪ್ರದೇಶಗಳು ಇನ್ನೂ ಯುದ್ಧದ ಅವಶೇಷಗಳಿಂದ ಹೆಚ್ಚು ಪ್ರಭಾವಿತವಾಗಿರುವ ಭಾಗಗಳಾಗಿವೆ.

ಭೂಮಿಯನ್ನು ಶುದ್ಧಗೊಳಿಸುವುದು ಕೇವಲ ಭದ್ರತೆಯ ವಿಷಯವಲ್ಲ ಎಂದು ಅವರು ಸೇರಿಸಿದರು. ಇದು ಜೀವನೋಪಾಯಕ್ಕೆ ಪ್ರವೇಶವನ್ನು ಮರುಸ್ಥಾಪಿಸುತ್ತದೆ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಥಳಗಳಿಗೆ ಸಮುದಾಯಗಳು ಮರಳಲು ಅವಕಾಶ ನೀಡುತ್ತದೆ. ವೇಲಾಂಗಣಿ ಮಾತೆಯ ಧರ್ಮಕೇಂದ್ರವು ಕರಾವಳಿ ಕಥೋಲಿಕ ಧರ್ಮಸಭೆಯ ದೀರ್ಘ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಈ ದೃಷ್ಟಿಯಿಂದ ನೋಡಿದರೆ, ಪುವರನ್ಸಂತಿವು ದ್ವೀಪಕ್ಕೆ ಮರಳುವಿಕೆ ಕ್ರೈಸ್ತರು ಈಗಾಗಲೇ ಪಾಡು, ಸಹನೆ ಮತ್ತು ಪುನರುಜ್ಜೀವನದ ಬಗ್ಗೆ ಧ್ಯಾನಿಸುತ್ತಿರುವ ಸಮಯದಲ್ಲಿಯೇ ಸಂಭವಿಸಿದೆ.

ಗಿಲ್ಲಿಯರ್ ಅವರ ಅಭಿಪ್ರಾಯದಲ್ಲಿ, ಮೈನ್ ತೆರವು ಕಾರ್ಯಕ್ಕೂ ಇದೇ ರೀತಿಯ ಆಳವಾದ ಅರ್ಥವಿದೆ. ಮೈನ್‌ಗಳು ಕೇವಲ ಭೌತಿಕ ಅಪಾಯಗಳಲ್ಲ; ಅವು “ಹಿಂದಿನ ನೋವು, ವೈಷಮ್ಯ ಮತ್ತು ದ್ವೇಷದ ಸ್ಪಷ್ಟ ನೆನಪುಗಳು.” ಅವುಗಳನ್ನು ತೆರವುಗೊಳಿಸುವುದು ಸಮುದಾಯಗಳಿಗೆ “ಆ ಭೂತಕಾಲವನ್ನು ಹಿಂದಕ್ಕೆ ಬಿಟ್ಟು ಮುಂದೆ ಸಾಗಲು” ಅವಕಾಶ ನೀಡುತ್ತದೆ.

ಚಿಕಿತ್ಸೆಯ ಪ್ರಕ್ರಿಯೆ

ಆದರೂ ಭೂತಕಾಲ ಸಂಪೂರ್ಣವಾಗಿ ಹಿಂದೆ ಉಳಿದಿಲ್ಲ. ಪುನರುತ್ಥಾನ ಮಹೋತ್ಸವ ಸಮೀಪಿಸುತ್ತಿರುವಾಗ, ಶ್ರೀಲಂಕಾ 2019ರ ಪುನರುತ್ಥಾನ ಮಹೋತ್ಸವದ ದಿನದಂದಾದ ಸ್ಫೋಟಗಳ ವಾರ್ಷಿಕ ಸ್ಮರಣೆಯನ್ನೂ ಆಚರಿಸುತ್ತದೆ — ಅದರ ಗಾಯಗಳು ಇನ್ನೂ ಗುಣವಾಗಿಲ್ಲ.

“ಇನ್ನೂ ಸಂಪೂರ್ಣ ನ್ಯಾಯ ಸಾಧನೆಯಾಗಿಲ್ಲ,” ಎಂದು ಗುರು ಸೆಲ್ವನಾಯಗಂ ಹೇಳಿದರು. “ಜನರು ಇನ್ನೂ ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.” ಚಿಕಿತ್ಸೆಯ ಪ್ರಕ್ರಿಯೆ ಆ ಸ್ಫೋಟಗಳಿಗೆ ಮಾತ್ರ ಸೀಮಿತವಲ್ಲ ಎಂದು ಅವರು ಸೇರಿಸಿದರು. ದಶಕಗಳ ಗೃಹಯುದ್ಧದ ವೇಳೆ ಪ್ರಾಣ ಕಳೆದುಕೊಂಡ ಅನೇಕರನ್ನೂ — ಧರ್ಮಕೇಂದ್ರಗಳಲ್ಲಿ ಆಶ್ರಯವನ್ನು ಹುಡುಕಿದವರನ್ನೂ ಒಳಗೊಂಡಂತೆ — ಇದು ವ್ಯಾಪಿಸುತ್ತದೆ.

ಆದರೂ,ಭರವಸೆ ಇನ್ನೂ ಜೀವಂತವಾಗಿದೆ. “ನಾವು  ಭರವಸೆಯಿಲ್ಲದವರಲ್ಲ. ದೇವರು ತನ್ನ ಜನರನ್ನು ಎಂದಿಗೂ ತೊರೆಯುವುದಿಲ್ಲ,” ಎಂದು ದೃಢವಾಗಿ ಹೇಳಿದರು. ತಪಸ್ಸು ಕಾಲದ ಮತ್ತು ಪವಿತ್ರ ವಾರದ ಆಚರಣೆಗಳು ಸಮುದಾಯಗಳಿಗೆ “ನಿರಾಶೆಯ ಮಧ್ಯೆಯೂ ಭರವಸೆಯ ಶಕ್ತಿಯನ್ನು” ನೀಡುತ್ತವೆ ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

04 ಏಪ್ರಿಲ್ 2026, 16:34