ಹುಡುಕಿ

VATICAN-RELIGION-POPE-ANGELUS

ಐಕ್ಯಮತೀಯ ಸಂಜೆ ಪ್ರಾರ್ಥನೆಯಲ್ಲಿ ಜಗದ್ಗುರುಗಳು: ನಾವು ಒಂದಾಗಿದ್ದೇವೆ, ಅದನ್ನು ತೋರ್ಪಡಿಸೋಣ

ಕ್ರಿಸ್ತೀಯ ಏಕತೆಗಾಗಿ ಪ್ರಾರ್ಥನಾ ವಾರದ ಅಂತ್ಯವನ್ನು ಸೂಚಿಸುವ ಸಂತ ಪೌಲನ ಪರಿವರ್ತನೆಯ ಹಬ್ಬದಂದು, ಜಗದ್ಗುರು ಲಿಯೋರವರು ಕ್ರೈಸ್ತರನ್ನು ಎಲ್ಲರಿಗೂ ಸುವಾರ್ತೆಯನ್ನು ಸಾರುವ ತಮ್ಮ ಸಾಮೂಹಿಕ ಗುರಿಯಲ್ಲಿ ಮುಂದುವರಿಯಲು ಆಹ್ವಾನಿಸುತ್ತಾರೆ.

ವ್ಯಾಟಿಕನ್ ವರದಿ

ಜಗದ್ಗುರು XIV ನೇ ಲಿಯೋರವರು 2026ರ ಜನವರಿ 25ರಂದು, ಕ್ರಿಸ್ತೀಯ ಏಕತೆಗಾಗಿ ಪ್ರಾರ್ಥನಾ ವಾರದ ಸಮಾರೋಪದ ಸಂದರ್ಭದಲ್ಲಿ, ವಿಭಿನ್ನ ಕ್ರಿಸ್ತೀಯ ಸಭೆಗಳು ಒಂದೇ ನಂಬಿಕೆಯನ್ನು ಹಂಚಿಕೊಂಡಿವೆ ಎಂಬುದನ್ನು ಒತ್ತಿ ಹೇಳಿದರು. ಜಗತ್ತಿನಾದ್ಯಂತ ಸುವಾರ್ತೆಯನ್ನು ಸಾರುವ ಸಾಮಾನ್ಯ ಗುರಿಯ ಎಲ್ಲಾ ಕ್ರೈಸ್ತರು ಒಟ್ಟಾಗಿ ಮುಂದುವರಿಯಬೇಕೆಂದು ಅವರು ಪ್ರೋತ್ಸಾಹಿಸಿದರು. ನಾವು ಒಂದಾಗಿದ್ದೇವೆ ಅದನ್ನು ಗುರುತಿಸಿ, ಅನುಭವಿಸಿ, ಜಗತ್ತಿಗೆ ಸ್ಪಷ್ಟವಾಗಿ ತೋರಿಸೋಣ ಎಂದು ಅವರು ಹೇಳಿದರು.

ಸಂತ ಪೌಲನ ಪರಿವರ್ತನೆಯ ಹಬ್ಬದಂದು ರೋಮಿನ ಸಂತ ಪೌಲರ ಬಸಿಲಿಕಾದಲ್ಲಿ ನಡೆದ ದ್ವಿತೀಯ ಸಂಜೆ ಆರಾಧನೆಯಲ್ಲಿ ಮಾತನಾಡಿದ ಜಗದ್ಗುರುಗಳು, ಕ್ರೈಸ್ತರ ನಡುವಿನ ವಿಭಜನೆಗಳು ಕ್ರಿಸ್ತನ ಬೆಳಕನ್ನು ನಾಶಮಾಡುವುದಿಲ್ಲವಾದರೂ, ಆ ಬೆಳಕನ್ನು ಜಗತ್ತಿಗೆ ಪ್ರತಿಬಿಂಬಿಸಬೇಕಾದ ಧರ್ಮ ಸಭೆಯ ಮುಖವನ್ನು ಮಂಕಾಗಿಸುತ್ತವೆ ಎಂದು ಹೇಳಿದರು. ಈ ವಾರ್ಷಿಕ ಆಚರಣೆ ಕ್ರೈಸ್ತರು ಸುವಾರ್ತೆಯನ್ನು ಸಾರುವ ಕರ್ತವ್ಯಕ್ಕೆ ಮರುಬದ್ಧರಾಗಲು ಆಹ್ವಾನಿಸುತ್ತದೆ ಎಂದು ಅವರು ಹೇಳಿದರು.

ಈ ವರ್ಷದ ಪ್ರಾರ್ಥನಾ ವಾರದ ವಿಷಯವಾಗಿ ಆಯ್ಕೆಯಾದ ಎಫೆಸಿಯರಿಗೆ ಬರೆದ ಸಂತ ಪೌಲನ ಪತ್ರವನ್ನು ಉಲ್ಲೇಖಿಸಿ, ಒಂದು ದೇಹ, ಒಂದು ಆತ್ಮ, ಒಂದು ನಿರೀಕ್ಷೆ, ಒಬ್ಬರು ಪ್ರಭು, ಒಂದು ನಂಬಿಕೆ, ಒಂದು ದೀಕ್ಷಾಸ್ನಾನ, ಒಂದು ದೇವರು ಎಂಬ ಪದಗಳು ಕ್ರೈಸ್ತರ ಏಕತೆಯನ್ನು ಆಳವಾಗಿ ನೆನಪಿಸುತ್ತವೆ ಎಂದು ಜಗದ್ಗುರುಗಳು ವಿವರಿಸಿದರು. ದೇವರು, ಯೇಸು ಕ್ರಿಸ್ತ ಮತ್ತು ಪವಿತ್ರಾತ್ಮನಲ್ಲಿ ನಾವು ಒಂದೇ ನಂಬಿಕೆಯನ್ನು ಹಂಚಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಸಂತ ಪೌಲನ ಜೀವನವನ್ನು ಉದಾಹರಿಸಿದ ಜಗದ್ಗುರುಗಳು, ಧರ್ಮ ಸಭೆಯನ್ನು ಹಿಂಸಿಸಿದ್ದ ವ್ಯಕ್ತಿಯೇ ಕ್ರಿಸ್ತನ ಪ್ರೀತಿಯನ್ನು ಉರಿಯುವ ಉತ್ಸಾಹದಿಂದ ಸಾರಿದ ಪ್ರೇಷಿತನಾಗಿ ಪರಿವರ್ತನೆಯಾದದ್ದು ಎಲ್ಲ ಕ್ರೈಸ್ತರಿಗೆ ಮಾದರಿಯಾಗಿದೆ ಎಂದರು. ಪ್ರೇಷಿತರ ಸಮಾಧಿಯ ಮುಂದೆ ಸೇರಿದ್ದ ಕ್ರೈಸ್ತರಿಗೆ, ಕ್ರಿಸ್ತನನ್ನು ಘೋಷಿಸಿ ಎಲ್ಲರನ್ನು ಆತನಲ್ಲಿ ನಂಬಿಕೆ ಇಡಲು ಆಹ್ವಾನಿಸುವುದೇ ಕ್ರೈಸ್ತರ ಸಾಮಾನ್ಯ ಗುರಿ ಎಂದು ಅವರು ನೆನಪಿಸಿದರು.

ನಿಕಾಯ ಸಭೆಯ 1700ನೇ ವಾರ್ಷಿಕೋತ್ಸವದ ಸ್ಮರಣಾರ್ಥ 2025ರಲ್ಲಿ ಟರ್ಕಿಯ ಇಜ್ನಿಕ್‌ನಲ್ಲಿ ನಡೆದ ಐಕ್ಯಮತೀಯ ಪ್ರಾರ್ಥನಾ ಸಭೆಯನ್ನು ಸ್ಮರಿಸಿದ ಜಗದ್ಗುರುಗಳು, ಒಂದೇ ಸ್ಥಳದಲ್ಲಿ ನೈಸೀಯಾದ ವಿಶ್ವಾಸ ಸೂತ್ರ ಒಟ್ಟಾಗಿ ಪಠಿಸುವುದು ಕ್ರಿಸ್ತನಲ್ಲಿ ನಮ್ಮ ಏಕತೆಯ ಶಕ್ತಿಯುತ ಸಾಕ್ಷಿಯಾಗಿತ್ತು ಎಂದು ಹೇಳಿದರು. ಮುಂದಿನ ದಿನಗಳಲ್ಲಿ, ವಿಶೇಷವಾಗಿ 2033ರಲ್ಲಿ ಕ್ರಿಸ್ತನ ಪಾಡು, ಮರಣ ಮತ್ತು ಪುನರುತ್ಥಾನದ 2000ನೇ ವಾರ್ಷಿಕೋತ್ಸವದ ಹಿನ್ನೆಲೆದಲ್ಲಿ, ಕ್ರೈಸ್ತರು ಐಕ್ಯಮತೀಯ ಹಾಗೂ ಸೀನೋಡಲ್ ಪ್ರಯಾಣವನ್ನು ಇನ್ನಷ್ಟು ಗಾಢಗೊಳಿಸಬೇಕೆಂದು ಅವರು ಕರೆ ನೀಡಿದರು.

ಕೊನೆಗೆ, ಈ ವರ್ಷದ ಪ್ರಾರ್ಥನಾ ವಾರದ ವಸ್ತುಗಳನ್ನು ತಯಾರಿಸಿದ ಆರ್ಮೇನಿಯನ್ ಪ್ರೇಷಿತರು ಧರ್ಮ ಸಭೆಯ ಸಾಕ್ಷ್ಯವನ್ನು ಪ್ರಶಂಸಿಸಿದ ಜಗದ್ಗುರುಗಳು, ಶತಮಾನಗಳ ಕಾಲ ಶಹೀದತ್ವದ ಮೂಲಕ ನಂಬಿಕೆಯನ್ನು ಜೀವಂತವಾಗಿ ಉಳಿಸಿಕೊಂಡ ಆರ್ಮೇನಿಯನ್ ಜನರ ಕ್ರೈಸ್ತ ಸಾಕ್ಷ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಏಕತೆ, ನ್ಯಾಯ ಮತ್ತು ಪವಿತ್ರತೆಯಲ್ಲಿ ಸುವಾರ್ತೆಯ ಬೀಜಗಳು ಫಲ ನೀಡಲಿ ಮತ್ತು ಜಗತ್ತಿನ ಜನಾಂಗಗಳ ನಡುವೆ ಶಾಂತಿ ನೆಲೆಸಲಿ ಎಂದು ಅವರು ಪ್ರಾರ್ಥನೆ ಸಲ್ಲಿಸಿದರು.    

25 ಜನವರಿ 2026, 00:00