ಜಗದ್ಗುರುಗಳ ಆರಾಧನಾ ವಿಧಿಯ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ವ್ಯಾಟಿಕನ್ ಪ್ರಕಟಿಸಿದೆ
ಮುಂದಿನ ಎರಡು ತಿಂಗಳ ಅವಧಿಯಲ್ಲಿ ಜಗದ್ಗುರು XIVನೇ ಲಿಯೋರವರು ಮಹತ್ವದ ಹಲವು ಆರಾಧನಾ ವಿಧಿಯ ಆಚರಣೆಗಳಿಗೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಗದ್ಗುರುಗಳು ಆರಾಧನಾ ವಿಧಿಯ ಆಚರಣೆಗಳ ಕಚೇರಿಯಲ್ಲಿ ಪ್ರಕಟಿಸಿದ ಕ್ಯಾಲೆಂಡರ್ ತಿಳಿಸಿದೆ. ಈ ಅವಧಿಯಲ್ಲಿ ಸಂತ ಪೌಲರ ಪರಿವರ್ತನೆ ಹಬ್ಬ, ಪ್ರಭುವಿನ ಸಮರ್ಪಣೆ ಹಬ್ಬ ಹಾಗೂ ವಿಭೂತಿ ಬುಧವಾರದ ಆರಾಧನಾ ವಿಧಿಯ ಕಾರ್ಯಕ್ರಮಗಳು ಪ್ರಮುಖವಾಗಿವೆ. ಇದಲ್ಲದೆ, ಮಹಾಪವಿತ್ರ ಉಪವಾಸಕಾಲದ ಮೊದಲ ವಾರದಲ್ಲಿ ರೋಮನ್ ಧರ್ಮಾಧ್ಯಕ್ಷರು ಸಾಂಪ್ರದಾಯಿಕ ಆಧ್ಯಾತ್ಮಿಕ ಧ್ಯಾನಗಳಲ್ಲಿಯೂ ಭಾಗವಹಿಸಲಿದ್ದಾರೆ.
ಜನವರಿ 25ರಂದು ಸಂತ ಪೌಲರ ಮನಪರಿವರ್ತನೆಯ ಮಹೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ರೋಮ್ನ ಬಸಿಲಿಕಾ ಆಫ್ ಸೈಂಟ್ ಪಾಲ್ ಔಟ್ಸೈಡ್ ದ ವಾಲ್ಸ್’ ದೇವಾಲಯದಲ್ಲಿ ದ್ವಿತೀಯ ವೇಸ್ಪರ್ಗಳ ಆರಾಧನಾ ವಿಧಿಯನ್ನು ನಡೆಸಲಿದ್ದಾರೆ. ಈ ಆಚರಣೆ ಈ ವರ್ಷ ನಡೆಯುತ್ತಿರುವ 59ನೇ ಕ್ರೈಸ್ತ ಏಕತೆಯ ಪ್ರಾರ್ಥನಾ ವಾರದ ಸಮಾಪ್ತಿಯನ್ನು ಸೂಚಿಸುತ್ತದೆ. ಈ ಪ್ರಾರ್ಥನಾ ವಾರದ ಧ್ಯೇಯವಾಕ್ಯವು ಸಂತ ಪೌಲರು ಎಫೆಸಿಯರಿಗೆ ಬರೆದ ಪತ್ರದ ವಾಕ್ಯದಿಂದ ತೆಗೆದುಕೊಳ್ಳಲಾಗಿದೆ ಒಂದೇ ದೇಹ, ಒಂದೇ ಆತ್ಮ, ಒಂದೇ ನಿರೀಕ್ಷೆಗೆ ನೀವು ಕರೆಯಲ್ಪಟ್ಟಿದ್ದೀರಿ ಎಂಬುದಾಗಿದೆ.
ಫೆಬ್ರವರಿ 2ರಂದು ನಡೆಯುವ ಪ್ರಭುವಿನ ಸಮರ್ಪಣೆ ಹಬ್ಬದ ಸಂದರ್ಭದಲ್ಲಿ, ಜಗದ್ಗುರುಗಳು ಸಂತ ಪೀಟರ್ ಬಸಿಲಿಕಾದಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸಲಿದ್ದಾರೆ. ಈ ಹಬ್ಬವು ಯೇಸು ಕ್ರಿಸ್ತನು ಜನಿಸಿದ ನಲವತ್ತನೇ ದಿನ ದೇವಾಲಯಕ್ಕೆ ಸಮರ್ಪಿಸಲ್ಪಟ್ಟುದನ್ನು ಸ್ಮರಿಸುತ್ತದೆ. ಇದೇ ದಿನ 30ನೇ ವಿಶ್ವ ಅರ್ಪಿತ ಜೀವನ ದಿನವೂ ಆಚರಿಸಲ್ಪಡುತ್ತಿದ್ದು, ಸಮರ್ಪಿತ ಜೀವನವು ಧರ್ಮ ಸಭೆ ಮತ್ತು ಲೋಕಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿ ಮರುಪರಿಶೀಲನೆ ಮತ್ತು ಕೃತಜ್ಞತೆಯ ಅವಕಾಶವೆಂದು ಧರ್ಮಸಭೆ ವಿವರಿಸುತ್ತದೆ.
2026ರಲ್ಲಿ ಫೆಬ್ರವರಿ 18ರಂದು ವಿಭೂತಿ ಬುಧವಾರ ಆಚರಿಸಲ್ಪಡಲಿದ್ದು, ಇದು ಲ್ಯಾಟಿನ್ ವಿಧಿಯ ತಪಸ್ಸು ಕಾಲದ ಆರಂಭವಾಗಿದೆ. ಜಗದ್ಗುರು XIVನೇ ಲಿಯೋ ರವರು ಸಂತ ಅನ್ಸೆಲ್ಮೊ ದೇವಾಲಯದಿಂದ ಪ್ರಾಯಶ್ಚಿತ್ತ ಮೆರವಣಿಗೆಯೊಂದಿಗೆ ಸಂತ ಸಾಬಿನಾ ಬಸಿಲಿಕಾಕ್ಕೆ ತೆರಳಿ, ಅಲ್ಲಿ ವಿಭೂತಿ ಆಶೀರ್ವಾದ ಮತ್ತು ವಿಭೂತಿ ಲೇಪನದೊಂದಿಗೆ ಪವಿತ್ರ ಬಲಿ ಪೂಜೆಯನ್ನು ಆಚರಿಸಲಿದ್ದಾರೆ. ಈ ಪುರಾತನ ಪರಂಪರೆಯನ್ನು 20ನೇ ಶತಮಾನದಲ್ಲಿ ಸಂತ ಜಾನ್ XXIII ಪುನರುಜ್ಜೀವನಗೊಳಿಸಿದ್ದರು.
ತಪಸ್ಸು ಕಾಲದ ಮೊದಲ ವಾರದಲ್ಲಿ, ಫೆಬ್ರವರಿ 22ರಿಂದ 27ರವರೆಗೆ, ಜಗದ್ಗುರು ಮತ್ತು ರೋಮನ್ ಧರ್ಮ ಪ್ರಾಂತ್ಯದ ಆಧ್ಯಾತ್ಮಿಕ ಅಭ್ಯಾಸಗಳು ನಡೆಯಲಿದ್ದು, ಈ ವರ್ಷ ಅವು ಪ್ರೇಷಿತರ ಅರಮನೆಗಳಲ್ಲಿ ನಡೆಯುವ ನಿರೀಕ್ಷೆಯಿದೆ. ಜಗದ್ಗುರುಗಳ ಆರಾಧನಾ ವಿಧಿಯ ಆಚರಣೆಗಳ ಸುವ್ಯವಸ್ಥೆಗೆ ಜವಾಬ್ದಾರಿಯಿರುವ ಕಚೇರಿ ಈ ಎಲ್ಲಾ ಕಾರ್ಯಕ್ರಮಗಳನ್ನು ಆರಾಧನಾ ವಿಧಿಯ ನಿಯಮಾನುಸಾರ ಸಕಾಲಿಕವಾಗಿ ಸಿದ್ಧಪಡಿಸುತ್ತದೆ. ಪ್ರಸ್ತುತ ಜಗದ್ಗುರುಗಳ ಆರಾಧನಾ ವಿಧಿಯ ಆಚರಣೆಗಳ ಮುಖ್ಯಸ್ಥರಾಗಿರುವವರು ಮಹಾಧ್ಯಕ್ಷ ಡಿಯೆಗೊ ರವೆಲ್ಲಿಯವರಾಗಿದ್ದಾರೆ.
