ಜಗದ್ಗುರುಗಳು: ಸಂಕಷ್ಟಗಳ ಮಧ್ಯೆಯೂ ಆಫ್ರಿಕಾದ ಧರ್ಮಸಭೆ ಜೀವಂತ, ಶಕ್ತಿಶಾಲಿ ಮತ್ತು ಚೈತನ್ಯಮಯ ವಾಸ್ತವ್ಯವಾಗಿದೆ.
ವ್ಯಾಟಿಕನ್ ವರದಿ
ಮಧ್ಯ ಆಫ್ರಿಕಾದ ಧರ್ಮಾಧ್ಯಕ್ಷರಿಗೆ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರು XIV ನೇ ಲಿಯೋರವರು ಧರ್ಮಾಧ್ಯಕ್ಷರುಗಳು ತಮ್ಮ ಧರ್ಮಾಧ್ಯಕ್ಷ ಸೇವೆಯಲ್ಲಿ ಅತ್ಯಂತ ತೀವ್ರವಾಗಿ ಎದುರಿಸುತ್ತಿರುವ ತುರ್ತು ಸಮಸ್ಯೆಗಳ ಬಗ್ಗೆ ಮಾತನಾಡಿದರು. ವ್ಯಾಟಿಕನ್ ರಾಜ್ಯದ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೊಲಿನ್ ರವರ ಮೂಲಕ ಕಳುಹಿಸಲಾದ ಈ ಸಂದೇಶವನ್ನು, ಚಾದ್ನಲ್ಲಿ ನಡೆಯುತ್ತಿರುವ ಮಧ್ಯ ಆಫ್ರಿಕಾ ಪ್ರಾದೇಶಿಕ ಧರ್ಮಾಧ್ಯಕ್ಷರ ಮಹಾಸಭೆಯ 13ನೇ ಸಾಮಾನ್ಯ ಸಭೆಯ ಆರಂಭದಲ್ಲಿ, ಚಾದ್ನ ಪ್ರೇಷಿತರ ರಾಯಭಾರಿ ಮಹಾಧರ್ಮಾಧ್ಯಕ್ಷ ಜ್ಯೂಸೆಪ್ಪೆ ಲಾಟೆರ್ಜಾ ರವರು ಓದಿ ಕೇಳಿಸಿದರು.
ಜನವರಿ 25ರಿಂದ ಫೆಬ್ರವರಿ 1ರವರೆಗೆ ಚಾದ್ನಲ್ಲಿ ನಡೆಯುತ್ತಿರುವ ಈ ಸಭೆ, ಎಕ್ಲೀಶಿಯಾ ಇನ್ ಆಫ್ರಿಕಾ ಪ್ರೇಷಿತರ ಉತ್ತೇಜನ ಪತ್ರದ ಪ್ರಕಟಣೆಯ ನಂತರದ ಮೂವತ್ತು ವರ್ಷಗಳ ಬಳಿಕ ಮಧ್ಯ ಆಫ್ರಿಕಾದಲ್ಲಿ ದೇವರ ಕುಟುಂಬವಾದ ಧರ್ಮ ಸಭೆ ಎದುರಿಸುತ್ತಿರುವ ಸವಾಲುಗಳು ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ. ಚಾದ್ನ ಎ ಸಿ ಇ ಆರ್ ಎಂ ಸಿ ಅಧ್ಯಕ್ಷರಾದ ಧರ್ಮಾಧ್ಯಕ್ಷ ಮಾರ್ಟಿನ್ ವಾಯಿಂಗೆ ಬಾನಿರವರಿಗೆ ಉದ್ದೇಶಿಸಿದ ಸಂದೇಶದಲ್ಲಿ, ಜಗದ್ಗುರುಗಳು ಧರ್ಮಾಧ್ಯಕ್ಷರ ದೈನಂದಿನ ಉತ್ಸಾಹಭರಿತ ಸೇವೆಯನ್ನು ಸಂಪೂರ್ಣವಾಗಿ ಅರಿತಿರುವುದಾಗಿ ಭರವಸೆ ನೀಡಿ, ಅವರೊಂದಿಗೆ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದರು.
ಜಗದ್ಗುರುXIV ನೇ ಲಿಯೋರವರು, ತಾವು ಸದಾ ಧರ್ಮಾಧ್ಯಕ್ಷರಿಗಾಗಿ ಪ್ರಾರ್ಥಿಸುತ್ತಿರುವುದಾಗಿ ಹಾಗೂ ಕ್ರಿಸ್ತನ ಸಾಕ್ಷಿಗಳಾಗಿ ಧರ್ಮ ಸಭೆಯ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು, ಸಹಕಾರಿಗಳು, ಡೀಕನರು, ಸಮರ್ಪಿತ ಪುರುಷರು ಮತ್ತು ಮಹಿಳೆಯರು ಹಾಗೂ ವಿಶ್ವಾಸಿಗಳೊಂದಿಗೆ ಅವರ ಸಂತೋಷ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಿರುವುದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರು. ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯನ್ನು ಬಲಪಡಿಸುವುದು, ಇತರ ಧರ್ಮಸಮುದಾಯಗಳು ಮತ್ತು ನಾಗರಿಕ ಅಧಿಕಾರಿಗಳೊಂದಿಗೆ ಸಂಬಂಧಗಳನ್ನು ಬೆಳೆಸುವುದು, ಸಂಸ್ಕೃತಿ ಮತ್ತು ಸಮಾಜದೊಳಗೆ ಸುವಾರ್ತೆಯನ್ನು ಜೀವಂತಗೊಳಿಸುವುದು, ಮಾನವ ಜೀವನವನ್ನು ರಕ್ಷಿಸುವುದು, ಶಾಂತಿ ಮತ್ತು ನ್ಯಾಯವನ್ನು ಉತ್ತೇಜಿಸುವುದು, ಸಂಘರ್ಷಗಳ ಬಲಿಯಾದ ದುರ್ಬಲರನ್ನು ಕಾಳಜಿ ವಹಿಸುವುದು ಮತ್ತು ಸೃಷ್ಟಿಯನ್ನು ಸಂರಕ್ಷಿಸುವುದರಲ್ಲಿ ಧರ್ಮಾಧ್ಯಕ್ಷರ ಪ್ರಯತ್ನಗಳನ್ನು ಜಗದ್ಗುರುಗಳು ಪ್ರಶಂಸಿಸಿದರು.
2026ರಲ್ಲಿ ಎಕ್ಲೀಶಿಯಾ ಇನ್ ಆಫ್ರಿಕಾ ಪ್ರಕಟಣೆಯ 31ನೇ ವಾರ್ಷಿಕೋತ್ಸವವನ್ನು ಧರ್ಮಸಭೆ ಆಚರಿಸುವುದನ್ನು ಸ್ಮರಿಸಿದ ಜಗದ್ಗುರುಗಳು, ಈ ದಾಖಲೆ ಇಂದು ಸಹ ಸಂಪೂರ್ಣವಾಗಿ ಪ್ರಸ್ತುತವಾಗಿದ್ದು, “ಆಫ್ರಿಕಾದಲ್ಲಿರುವ ತನ್ನ ಜನರನ್ನು ಪ್ರಭು ಭೇಟಿ ಮಾಡಿದರು” ಎಂಬ ಸಂದೇಶವನ್ನು ಸಾರುತ್ತದೆ ಎಂದರು. ಈ ಹಿನ್ನೆಲೆಯಲ್ಲಿ, ಆಫ್ರಿಕಾದ ಧರ್ಮಸಭೆ ನಿಜಕ್ಕೂ ಜೀವಂತ, ಶಕ್ತಿಶಾಲಿ ಮತ್ತು ಚೈತನ್ಯಮಯ ವಾಸ್ತವ್ಯವಾಗಿದೆ ಎಂದು ಜಗದ್ಗುರುಗಳು ಹೇಳಿದರು.
ಜಗದ್ಗುರು XIV ನೇ ಲಿಯೋರವರು ನಂಬಿಕೆಯ ಸಂಸ್ಕೃತೀಕರಣದ ಕುರಿತು ಮಾತನಾಡುತ್ತಾ, ಸುವಾರ್ತೆಯನ್ನು ಜಗತ್ತಿಗೆ ಹೊಂದಿಸಿಕೊಳ್ಳುವುದು ಅದರ ಅರ್ಥವಲ್ಲ ಬದಲಾಗಿ ಪ್ರತಿಯೊಂದು ಸಂಸ್ಕೃತಿಯೊಳಗೆ ಜೀವ ನೀಡುವ ಮತ್ತು ಶಾಶ್ವತವಾದ ದೇವರ ವಾಕ್ಯವನ್ನು ಘೋಷಿಸಲು ಸೂಕ್ತ ರೂಪಗಳನ್ನು ಹುಡುಕುವುದೇ ಅದರ ಅರ್ಥ ಎಂದು ಸ್ಪಷ್ಟಪಡಿಸಿದರು. ಅಂತರಜಾತೀಯ ಸಂಘರ್ಷಗಳು, ಯುದ್ಧಗಳು ಮತ್ತು ಕುಟುಂಬ ವಿಭಜನೆಗಳಂತಹ ಸಮಾಜವನ್ನು ದುರ್ಬಲಗೊಳಿಸುವ ಕೆಡುಕುಗಳ ಎದುರಿನಲ್ಲಿ, ಸುವಾರ್ತೆ ಹೃದಯಗಳ ಸಂಧಾನ ಮತ್ತು ಶಾಂತಿಗೆ ಕರೆಯುತ್ತದೆ ಎಂದು ಅವರು ಒತ್ತಿಹೇಳಿದರು.
ಸ್ಮರಣಾರ್ಥಿಗಳು ಮತ್ತು ಸ್ಥಳಾಂತರಿತರ ಸಂಕಷ್ಟಗಳಿಂದ ಸಮುದಾಯಗಳು ತತ್ತರಿಸುತ್ತಿರುವುದನ್ನು ಉಲ್ಲೇಖಿಸಿ, ಜಗದ್ಗುರುಗಳು ಧರ್ಮಾಧ್ಯಕ್ಷರಿಗೆ, ನೋವಿನಲ್ಲಿರುವ ಜನರ ಬಳಿಗೆ ವಾಲಿ ಅವರನ್ನು ಗುಣಪಡಿಸುವ ಮತ್ತು ಸಾಂತ್ವನ ನೀಡುವ ಕ್ರಿಸ್ತನಂತೆ ಇರುವಂತೆ ಪ್ರೇರೇಪಿಸಿದರು. ಕೊನೆಯಲ್ಲಿ, ಮಧ್ಯ ಆಫ್ರಿಕಾ ಪ್ರದೇಶದ ಧರ್ಮಸಭೆಯ ಸೇವೆಯನ್ನು ಸುವಾರ್ತಾ ಪ್ರಚಾರದ ನಕ್ಷತ್ರವಾದ ಧನ್ಯ ಕನ್ಯಾ ಮರಿಯಮ್ಮನವರ ತಾಯಿಯ ರಕ್ಷಣೆಗೆ ಒಪ್ಪಿಸಿ, ಅಲ್ಲಿನ ಎಲ್ಲಾ ಸೇವಕರ ಮೇಲೆ ಪ್ರೇಷಿತರ ಆಶೀರ್ವಾದವನ್ನು ಜಗದ್ಗುರು XIVನೇ ಲಿಯೋರವರು ನೀಡಿದರು.
