ಸ್ಪೇನ್ನ ರೈಲು ಅಪಘಾತದ ಬಲಿಗಳಿಗೆ ಜಗದ್ಗುರುಗಳ ಪ್ರಾರ್ಥನೆಗಳು ಮತ್ತು ಸಂತಾಪಗಳು
ವ್ಯಾಟಿಕನ್ ವರದಿ
2026ರ ಜನವರಿ 18ರಂದು ಭಾನುವಾರ ದಕ್ಷಿಣ ಸ್ಪೇನ್ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಕನಿಷ್ಠ 39 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡ ಹಿನ್ನೆಲೆಯಲ್ಲಿ, ಜಗದ್ಗುರು XIVನೇ ಲಿಯೋರವರು ಬಲಿಯಾದವರಿಗಾಗಿ ಪ್ರಾರ್ಥನೆ ಸಲ್ಲಿಸಿ, ದುಃಖಿತ ಕುಟುಂಬಗಳಿಗೆ ತಮ್ಮ ಹೃತ್ಪೂರ್ವಕ ಸಂತಾಪಗಳನ್ನು ಅರ್ಪಿಸಿದರು.
ಜನವರಿ 19ರಂದು ಪ್ರಕಟವಾದ ಸ್ಪ್ಯಾನಿಷ್ ಭಾಷೆಯಲ್ಲಿ ರಚಿಸಲ್ಪಟ್ಟು ಕಾರ್ಡಿನಲ್ ಕಾರ್ಯದರ್ಶಿ ಪಿಯೆಟ್ರೋ ಪ್ಯಾರೊಲಿನ್ ರವರ ಸಹಿಯೊಂದಿಗೆ ಹೊರಡಿಸಲಾದ ಈ ಸಂದೇಶದಲ್ಲಿ ಜಗದ್ಗುರು ಲಿಯೋ ರವರು ಅಪಘಾತದ ಸುದ್ದಿ ಕೇಳಿ ತೀವ್ರ ದುಃಖ ವ್ಯಕ್ತಪಡಿಸಿ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂಬ ಆಶಯದೊಂದಿಗೆ ಆತ್ಮಸಾಂತ್ವನ, ಆಳವಾದ ಕಾಳಜಿ ಮತ್ತು ಸಾಂತ್ವನದ ಸಂದೇಶಗಳನ್ನು ವ್ಯಕ್ತಪಡಿಸಿದರು.
ಜಗದ್ಗರುಗಳು ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವ ತಂಡಗಳಿಗೆ ತಮ್ಮ ನೆರವು ಮತ್ತು ಸಹಾಯ ಕಾರ್ಯವನ್ನು ನಿರಂತರವಾಗಿ ಮುಂದುವರಿಸುವಂತೆ ಪ್ರೋತ್ಸಾಹ ನೀಡಿದರು. ಅಲ್ಲದೆ, ನಮ್ಮ ಲೇಡಿ ಆಫ್ ದ ಪಿಲ್ಲರ್ ಅವರ ಮಧ್ಯಸ್ಥಿಕೆಯ ಮೂಲಕ, ಪುನರುತ್ಥಿತ ಕ್ರಿಸ್ತನಲ್ಲಿ ನಿರೀಕ್ಷೆಯ ಸಂಕೇತವಾಗಿ ಪ್ರೇಷಿತರ ಆಶೀರ್ವಾದವನ್ನು ನೀಡಿದರು.
ಭಾನುವಾರ ಸಂಜೆ ದಕ್ಷಿಣ ಸ್ಪೇನ್ನ ಆಡಮುಸ್ ಪ್ರದೇಶದಲ್ಲಿ, ರಾಜಧಾನಿ ಮ್ಯಾಡ್ರಿಡ್ಗೆ ತೆರಳುತ್ತಿದ್ದ ರೈಲಿನ ಕೆಲವು ಬೋಗಿಗಳು ಆಯಾ ತಪ್ಪಿ ಎದುರಿನಿಂದ ಬರುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದವು. ಬಿಬಿಸಿಯ ವರದಿ ಪ್ರಕಾರ, ಎರಡೂ ರೈಲುಗಳಲ್ಲಿ ಒಟ್ಟಾರೆ ಸುಮಾರು 400 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಇದ್ದರು.
ಸ್ಪೇನ್ ಅಧಿಕಾರಿಗಳ ಪ್ರಕಾರ, ಕನಿಷ್ಠ 39 ಮಂದಿ ಮೃತಪಟ್ಟಿದ್ದಾರೆ ಆದರೆ ಅಂತಿಮ ಸಂಖ್ಯೆಯನ್ನು ಇನ್ನೂ ದೃಢಪಡಿಸಿಲ್ಲ. ತುರ್ತು ಸೇವೆಗಳು 122 ಮಂದಿಗೆ ಚಿಕಿತ್ಸೆ ನೀಡಿದ್ದು, ಅವರಲ್ಲಿ 48 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂಬುದಾಗಿ ತಿಳಿಸಿದರು.
