ಮಾನವ ಕಳ್ಳಸಾಗಣೆಯನ್ನು ‘ಮಾನವತೆಯ ವಿರುದ್ಧದ ಅಪರಾಧ’ ಎಂದು ಖಂಡಿಸಿದ ಜಗದ್ಗುರು ಲಿಯೋರವರು
ವ್ಯಾಟಿಕನ್ ವರದಿ
12ನೇ ಮಾನವ ಕಳ್ಳಸಾಗಣೆ ವಿರುದ್ಧದ ಪ್ರಾರ್ಥನೆ ಮತ್ತು ಜಾಗೃತಿ ವಿಶ್ವ ದಿನಕ್ಕೆ ಮುನ್ನ, ಜಗದ್ಗುರು XIVನೇ ಲಿಯೋರವರು ಆಧುನಿಕ ದಾಸ್ಯತೆಯ ಶಾಪವನ್ನು ತೀವ್ರವಾಗಿ ಖಂಡಿಸಿದರು. ವಿಶೇಷವಾಗಿ ನಮ್ಮ ಡಿಜಿಟಲ್ ಸಮಾಜಗಳಲ್ಲಿ ಮಾನವ ಸಾಗಣೆ ಇನ್ನಷ್ಟು ಆತಂಕಕಾರಿ ರೂಪಗಳನ್ನು ಪಡೆದುಕೊಳ್ಳುತ್ತಿರುವುದನ್ನು ಅವರು ಎಚ್ಚರಿಸಿದರು.
ಫೆಬ್ರವರಿ 8ರಂದು ಆಚರಿಸಲಾದ ಈ ವಿಶ್ವ ದಿನದ ಸಂದೇಶದಲ್ಲಿ, ಈ ಮಾನವತೆಯ ವಿರುದ್ಧದ ಗಂಭೀರ ಅಪರಾಧವನ್ನು ಎದುರಿಸಿ ಅಂತ್ಯ ತರಬೇಕೆಂಬ ಧರ್ಮ ಸಭೆಯ ತುರ್ತು ಕರೆಯನ್ನು ಜಗದ್ಗುರುಗಳು ಪುನರುಚ್ಚರಿಸಿದರು.
ಪುನರುತ್ಥಾನಗೊಂಡ ಕ್ರಿಸ್ತನು ಉಚ್ಚರಿಸಿದ “ನಿಮಗೆ ಶಾಂತಿ ಇರಲಿ” ಎಂಬ ವಾಕ್ಯವನ್ನು ಜಗದ್ಗುರುಗಳು ಉಲ್ಲೇಖಿಸಿ, ಆ ಮಾತುಗಳು ನವೀಕೃತ ಮಾನವತೆಯತ್ತ ದಾರಿ ತೋರಿಸುತ್ತವೆ ಎಂದು ಹೇಳಿದರು. ನಿಜವಾದ ಶಾಂತಿ ಪ್ರತಿಯೊಬ್ಬ ವ್ಯಕ್ತಿಯ ದೇವದತ್ತ ಘನತೆಯನ್ನು ಗುರುತಿಸಿ ರಕ್ಷಿಸುವುದರಿಂದ ಆರಂಭವಾಗುತ್ತದೆ ಎಂದೂ ಅವರು ತಿಳಿಸಿದರು.
ಆದರೆ ಹೆಚ್ಚುತ್ತಿರುವ ಹಿಂಸೆಯಿಂದ ಕೂಡಿದ ಯುಗದಲ್ಲಿ, ಅನೇಕರು ಶಸ್ತ್ರಾಸ್ತ್ರಗಳ ಮೂಲಕ ಶಾಂತಿಯನ್ನು ಸಾಧಿಸಲು ಯತ್ನಿಸುತ್ತಿರುವುದನ್ನು ಜಗದ್ಗುರುಗಳು ವಿಷಾದಿಸಿದರು. ಯುದ್ಧಗಳಲ್ಲಿ ಮಾನವರು ರಾಜಕೀಯ ಅಥವಾ ಆರ್ಥಿಕ ಹಿತಾಸಕ್ತಿಗಳಿಗಾಗಿ ಬಲಿ ಕೊಡಲ್ಪಡುವ ಪರಿಣಾಮಕಾರಿ ನಷ್ಟವಾಗಿ ಪರಿಗಣಿಸಲ್ಪಡುವುದು ದುಃಖಕರ ಸಂಗತಿ ಎಂದು ಅವರು ಹೇಳಿದರು.
ಈ ಮಾನವ ಜೀವದ ಮೇಲಿನ ನಿರ್ಲಕ್ಷ್ಯವೇ ಮಾನವ ಕಳ್ಳಸಾಗಣೆಯನ್ನೂ ಪೋಷಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ಶಸ್ತ್ರಸಂಘರ್ಷಗಳು ಮತ್ತು ಭೌಗೋಳಿಕ ಅಸ್ಥಿರತೆಗಳು ಜನರನ್ನು ದುರುಪಯೋಗಪಡಿಸಿಕೊಳ್ಳಲು ಸಾಗಣೆದಾರರಿಗೆ ಅವಕಾಶಗಳನ್ನು ಸೃಷ್ಟಿಸುತ್ತವೆ ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಅತ್ಯಧಿಕವಾಗಿ ಹಾನಿಗೊಳಗಾಗುತ್ತಾರೆ ಎಂದು ಅವರು ಹೇಳಿದರು.
ಜಗದ್ಗುರು XIVನೇ ಲಿಯೋರವರು ಸೈಬರ್ ದಾಸ್ಯದ ಹೆಚ್ಚಳವನ್ನೂ ಉಲ್ಲೇಖಿಸಿದರು. ಇದರಲ್ಲಿ ಜನರನ್ನು ಆನ್ಲೈನ್ ಮೋಸ ಮತ್ತು ಅಪರಾಧ ಚಟುವಟಿಕೆಗಳಾದ ಮಾದಕ ವಸ್ತು ಸಾಗಾಣಿಕೆ ಮತ್ತು ವಂಚನೆಗಳತ್ತ ಸೆಳೆಯಲಾಗುತ್ತದೆ. ಈ ಸಂದರ್ಭದಲ್ಲಿ ಬಲಿಯೇ ಅಪರಾಧಿಯಾಗಿ ವರ್ತಿಸಲು ಬಲವಂತಗೊಳ್ಳುತ್ತಾನೆ, ಇದರಿಂದ ಅವನ ಆಧ್ಯಾತ್ಮಿಕ ಗಾಯಗಳು ಇನ್ನಷ್ಟು ಗಂಭೀರವಾಗುತ್ತವೆ ಎಂದು ಅವರು ಹೇಳಿದರು.
ಈ ರೀತಿಯ ನೋವು ಮತ್ತು ಸಮಾಜದ ಸವಾಲುಗಳ ಎದುರಿನಲ್ಲಿ, ಕ್ರೈಸ್ತರು ಪ್ರಾರ್ಥನೆ ಮತ್ತು ಜಾಗೃತಿಯತ್ತ ತಿರುಗಬೇಕು ಎಂದು ಜಗದ್ಗುರುಗಳು ಹೇಳಿದರು. ಪ್ರಾರ್ಥನೆ ಅನ್ಯಾಯ ಮತ್ತು ನಿರ್ಲಕ್ಷ್ಯದ ವಿರುದ್ಧ ಪ್ರತಿರೋಧಿಸಲು ಶಕ್ತಿ ನೀಡುವ ಚಿಕ್ಕ ಜ್ವಾಲೆಯಾಗಿದ್ದು, ಜಾಗೃತಿ ನಮ್ಮ ಸಮುದಾಯಗಳು ಮತ್ತು ಡಿಜಿಟಲ್ ಜಗತ್ತಿನಲ್ಲಿರುವ ಶೋಷಕ ವ್ಯವಸ್ಥೆಗಳನ್ನು ಗುರುತಿಸಿ ಜಯಿಸಲು ಸಹಾಯ ಮಾಡುತ್ತದೆ ಎಂದರು.
ಅಂತಿಮವಾಗಿ, ಪ್ರತಿಯೊಬ್ಬ ವ್ಯಕ್ತಿಯನ್ನೂ ದೇವರ ಪ್ರಿಯ ಮಗುವಾಗಿ ನೋಡುವ ನವೀಕೃತ ದೃಷ್ಟಿಕೋನದಿಂದ ಮಾತ್ರ ಮಾನವ ಕಳ್ಳಸಾಗಣೆಯ ಹಿಂಸೆಯನ್ನು ಮೀರಿಸಬಹುದು ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಮಾನವ ಸಾಗಣೆಯ ಬಲಿಗಳಿಗೆ ಸಹಾಯ ಮಾಡುವ ಅನೇಕ ವ್ಯಕ್ತಿಗಳು ಮತ್ತು ಜಾಲಗಳಿಗೆ, ಅವರಲ್ಲಿ ಕೆಲವರು ತಾವೇ ಈ ದಾಸ್ಯತೆಯಿಂದ ಬದುಕುಳಿದವರಾಗಿರುವುದಕ್ಕೆ, ಅವರು ಕೃತಜ್ಞತೆ ವ್ಯಕ್ತಪಡಿಸಿದರು.
ಕೊನೆಯಲ್ಲಿ, ಮಾನವ ಸಾಗಣೆ ವಿರುದ್ಧದ ಪ್ರಾರ್ಥನೆ ಮತ್ತು ಜಾಗೃತಿ ವಿಶ್ವ ದಿನವನ್ನು ಸಂತ ಜೋಸೆಫೀನ್ ಬಖೀತ ರವರ ಮಧ್ಯಸ್ಥಿಕೆಗೆ ಜಗದ್ಗುರುಗಳು ಒಪ್ಪಿಸಿದರು. ಅವರ ಜೀವನವು ಅವಳನ್ನು ಅಂತ್ಯದವರೆಗೆ ಪ್ರೀತಿಸಿದ ಪ್ರಭುವಿನಲ್ಲಿ ಇರುವ ಭರವಸೆಯ ಶಕ್ತಿಶಾಲಿ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಯುದ್ಧದ ಅಭಾವ ಮಾತ್ರವಲ್ಲದೆ, ಎಲ್ಲರ ಘನತೆಯ ಪೂರ್ಣ ಗೌರವದಲ್ಲಿ ನೆಲೆಗೊಂಡಿರುವ, ಶಸ್ತ್ರರಹಿತ ಮತ್ತು ನಿಷಸ್ತ್ರೀಕರಣ ಮಾಡುವ ಶಾಂತಿಯುಳ್ಳ ಜಗತ್ತಿನತ್ತ ನಾವು ಎಲ್ಲರೂ ಒಟ್ಟಾಗಿ ಸಾಗೋಣ ಎಂದು ಜಗದ್ಗುರುಗಳು ಆಹ್ವಾನಿಸಿದರು.
