ಸಾಮಾನ್ಯ ಪ್ರೇಕ್ಷಕರಲ್ಲಿ ಜಗದ್ಗುರುಗಳು: ಮೂಲಭೂತವಾಗಿ ತಪ್ಪಿಸಲು ದೇವರ ವಾಕ್ಯವನ್ನು ಐತಿಹಾಸಿಕ ಸನ್ನಿವೇಶದಲ್ಲಿ ಓದಬೇಕು
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಬುಧವಾರದ ಸಾಮಾನ್ಯ ಪ್ರೇಕ್ಷಕರನ್ನು ಮಾತನಾಡಿಸುತ್ತಾ, ಪವಿತ್ರ ಶಾಸ್ತ್ರವು ದೇವರು ತನ್ನ ಜನರೊಂದಿಗೆ ಸಮೀಪದಲ್ಲಿರಬೇಕೆಂಬ ಆಳವಾದ ಬಯಕೆಯನ್ನು ಪ್ರಕಟಿಸುತ್ತದೆ ಎಂದು ಹೇಳಿದರು. ದ್ವಿತೀಯ ವ್ಯಾಟಿಕನ್ ಮಹಾಸಭೆಯ ಕುರಿತ ತಮ್ಮ ಪ್ರಭೋಧನೆಯ ಸರಣಿಯನ್ನು ಮುಂದುವರೆಸಿದ ಅವರು, ದೈವಿಕ ಪ್ರಕಟನೆ ಕುರಿತು ಇರುವ ಡೆೈ ವರ್ಬಮ್ ಎಂಬ ಧರ್ಮ ತಾತ್ವಿಕ ಸಂವಿಧಾನಕ್ಕೆ ಮತ್ತೊಮ್ಮೆ ವಿಶೇಷ ಗಮನ ಹರಿಸಿದರು. ಇದನ್ನು ಅವರು ಮಹಾಸಭೆಯ ಅತ್ಯಂತ ಸುಂದರ ಹಾಗೂ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ ಎಂದು ವರ್ಣಿಸಿದರು.
ಡೆೈ ವರ್ಬಮ್ ಪ್ರಕಾರ, ಪವಿತ್ರ ಶಾಸ್ತ್ರದಲ್ಲಿ ವಿಶ್ವಾಸಿಗಳು ದೇವರೊಂದಿಗೆ ವಿಶೇಷವಾಗಿ ಭೇಟಿಯಾಗುವ ಸ್ಥಳವನ್ನು ಕಂಡುಕೊಳ್ಳುತ್ತಾರೆ ಎಂದು ಜಗದ್ಗುರುಗಳು ಸ್ಮರಿಸಿದರು. ಅಲ್ಲಿ ದೇವರು ಎಲ್ಲಾ ಕಾಲಗಳ ಪುರುಷರು ಮತ್ತು ಮಹಿಳೆಯರೊಂದಿಗೆ ಮಾತನಾಡುತ್ತಲೇ ಇರುತ್ತಾನೆ ಅವರು ಆತನ ವಾಕ್ಯವನ್ನು ಆಲಿಸುವ ಮೂಲಕ ಆತನನ್ನು ಅರಿತು ಪ್ರೀತಿಸಬಹುದು. ಇದು ದೇವರ ವಾಕ್ಯವು ಜೀವಂತವೂ ಕ್ರಿಯಾಶೀಲವೂ ಆಗಿರುವುದನ್ನು ತೋರಿಸುತ್ತದೆ.
ಜಗದ್ಗುರು XIVನೇ ಲಿಯೋರವರು, ಪವಿತ್ರ ಬೈಬಲ್ ಪಠ್ಯಗಳು ಯಾವುದೇ ಆಕಷ೯ಣೀಯ ಅಥವಾ ಅತಿಮಾನೂಷ ಭಾಷೆಯಲ್ಲಿ ಬರೆಯಲ್ಪಟ್ಟಿಲ್ಲವೆಂದು ವಿವರಿಸಿದರು. ದೇವರು ತನ್ನ ಅಪಾರ ಪ್ರೀತಿಯಿಂದ ಮಾನವ ಭಾಷೆಯನ್ನು ಆಯ್ದುಕೊಂಡು ಮಾತನಾಡುತ್ತಾನೆ ಅದಕ್ಕಾಗಿ ಪವಿತ್ರಾತ್ಮನ ಪ್ರೇರಣೆಯಿಂದ ವಿವಿಧ ಮಾನವ ಲೇಖಕರು ಶಾಸ್ತ್ರಗಳನ್ನು ರಚಿಸಿದ್ದಾರೆ ಎಂದು ಅವರು ಹೇಳಿದರು. ದೇವರ ವಾಕ್ಯವು ಮಾನವ ದುರ್ಬಲತೆಯನ್ನು ಧರಿಸಿದ ಯೇಸು ಕ್ರಿಸ್ತನಂತೆ ಮಾನವೀಯ ರೂಪವನ್ನು ಪಡೆದಿದೆ ಎಂದು ಡೆೈ ವರ್ಬಮ್ ಬೋಧಿಸುತ್ತದೆ.
ಆದ್ದರಿಂದ, ವಿಷಯದಲ್ಲಷ್ಟೇ ಅಲ್ಲದೆ ಭಾಷೆಯಲ್ಲಿಯೂ ಪವಿತ್ರ ಶಾಸ್ತ್ರವು ಮಾನವರ ಮೇಲಿನ ದೇವರ ದಯಾಮಯ ಇಳಿಜಾರನ್ನು ಮತ್ತು ಅವರ ಸಮೀಪದಲ್ಲಿರಬೇಕೆಂಬ ಆತನ ಬಯಕೆಯನ್ನು ಪ್ರಕಟಿಸುತ್ತದೆ ಎಂದು ಜಗದ್ಗುರುಗಳು ಒತ್ತಿ ಹೇಳಿದರು. ದೇವರ ದೈವಿಕ ಲೇಖಕತ್ವ ಮತ್ತು ಮಾನವ ಲೇಖಕರ ಪಾತ್ರವನ್ನು ಧರ್ಮ ಸಭೆ ಇತಿಹಾಸದ ಪೂರ್ತಿಯಲ್ಲಿ ಅಧ್ಯಯನ ಮಾಡಲಾಗಿದೆ ಎಂದೂ ಅವರು ಹೇಳಿದರು.
ಪವಿತ್ರ ಶಾಸ್ತ್ರವನ್ನು ಸರಿಯಾಗಿ ಅರ್ಥೈಸಲು ಅದು ರೂಪುಗೊಂಡ ಐತಿಹಾಸಿಕ ಸನ್ನಿವೇಶ ಮತ್ತು ಬಳಸಲಾದ ಸಾಹಿತ್ಯ ಶೈಲಿಗಳನ್ನು ಗಮನಿಸಬೇಕು ಎಂದು ಜಗದ್ಗುರುಗಳು ಎಚ್ಚರಿಸಿದರು. ಇವುಗಳನ್ನು ಕಡೆಗಣಿಸಿದರೆ ಧರ್ಮಗ್ರಂಥದ ಅರ್ಥವನ್ನು ವಿಕೃತಗೊಳಿಸುವ ಮೂಲಭೂತವಾದಿ ಅಥವಾ ಅತಿಯಾದ ಆತ್ಮವಾದಿ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಿದರು. ಇದೇ ತತ್ವವು ದೇವರ ವಾಕ್ಯದ ಘೋಷಣೆಗೂ ಅನ್ವಯಿಸುತ್ತದೆ ಎಂದರು.
ಯಥಾರ್ಥ ಜೀವನ, ಮಾನವ ಭರವಸೆಗಳು ಮತ್ತು ದುಃಖಗಳಿಂದ ದೂರವಾದ ಭಾಷೆಯಲ್ಲಿ ದೇವರ ವಾಕ್ಯವನ್ನು ಪ್ರಕಟಿಸಿದರೆ ಅದು ಫಲಪ್ರದವಾಗುವುದಿಲ್ಲ ಎಂದು ಜಗದ್ಗುರು XIVನೇ ಲಿಯೋರವರು ಎಚ್ಚರಿಸಿದರು. ಪ್ರತಿಯೊಂದು ಯುಗದಲ್ಲೂ ಧರ್ಮ ಸಭೆ ದೇವರ ವಾಕ್ಯವನ್ನು ಇತಿಹಾಸದಲ್ಲಿ ನೆಲೆಯೂರಿ, ಮಾನವ ಹೃದಯಗಳನ್ನು ತಲುಪುವ ಭಾಷೆಯಲ್ಲಿ ಮರುಪ್ರಸ್ತಾಪಿಸಲು ಕರೆಯಲ್ಪಟ್ಟಿದೆ ಎಂದು ಅವರು ಪುನರುಚ್ಚರಿಸಿದರು. ವಿಶೇಷವಾಗಿ ದೈವಾರಾಧನೆ ವಿಧಿಯ ಸಂದರ್ಭದಲ್ಲಿ ಪವಿತ್ರ ಶಾಸ್ತ್ರವು ಇಂದಿನ ವಿಶ್ವಾಸಿಗಳ ಜೀವನವನ್ನು ಸ್ಪರ್ಶಿಸಿ, ಅವರ ನಿರ್ಧಾರಗಳಿಗೆ ಬೆಳಕು ನೀಡಬೇಕು ಎಂದು ಅವರು ಹೇಳಿದರು.
ಅಂತಿಮವಾಗಿ, ಜಗದ್ಗುರು XIVನೇ ಲಿಯೋರವರು ಪವಿತ್ರ ಶಾಸ್ತ್ರವು ಕೇವಲ ಸಾಮಾಜಿಕ ಅಥವಾ ದಾನಾತ್ಮಕ ಸಂದೇಶವಲ್ಲ, ಬದಲಾಗಿ ಯೇಸು ಕ್ರಿಸ್ತನಲ್ಲಿ ದೇವರು ನಮಗೆ ದಾನ ಮಾಡಿದ ಸಂಪೂರ್ಣ ಹಾಗೂ ಶಾಶ್ವತ ಜೀವನದ ಆನಂದದ ಘೋಷಣೆಯಾಗಿದೆ ಎಂದು ಒತ್ತಿ ಹೇಳಿದರು. ದೇವರು ತನ್ನ ವಾಕ್ಯದ ಮೂಲಕ ನಮ್ಮ ಜೀವನಕ್ಕೆ ಅಗತ್ಯವಾದ ಆಹಾರವನ್ನು ಸದಾ ಒದಗಿಸುತ್ತಿರುವುದಕ್ಕಾಗಿ ಆತನಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಹಾಗೂ ನಮ್ಮ ಮಾತುಗಳು ಮತ್ತು ಜೀವನಗಳು ದೇವರ ಪ್ರೀತಿಯನ್ನು ಮಸುಕಾಗಿಸದಿರಲಿ ಎಂದು ಪ್ರಾರ್ಥಿಸಬೇಕೆಂದು ಅವರು ವಿಶ್ವಾಸಿಗಳನ್ನು ಆಹ್ವಾನಿಸಿದರು.
