ಹುಡುಕಿ

ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ರೋಮ್‌ ನ ಯಾಜಕರನ್ನು ಆಹ್ವಾನಿಸುತ್ತಾರೆ ಜಗದ್ಗುರು ಲಿಯೋರವರು ವ್ಯಾಟಿಕನ್‌ನಲ್ಲಿ ರೋಮ್‌ ನ ಯಾಜಕರನ್ನು ಆಹ್ವಾನಿಸುತ್ತಾರೆ  (ANSA)

ಜಗದ್ಗುರು XIVನೇ ಲಿಯೋರವರಿಂದ ರೋಮ್‌ನ ಯಾಜಕರಿಗೆ ಕರೆ: ನಂಬಿಕೆಯನ್ನು ಮರುಜ್ವಲಿಸಿ ಕ್ರಿಸ್ತನ ವಾಗ್ದಾನಗಳನ್ನು ಘೋಷಿಸುವುದು ತುರ್ತು ಅಗತ್ಯ

ಜಗದ್ಗುರು XIVನೇ ಲಿಯೋರವರು ರೋಮ್ ಧರ್ಮಪ್ರಾಂತ್ಯದ ಯಾಜಕರನ್ನು ತಮ್ಮ ನಂಬಿಕೆಯ ವರವನ್ನು ಮರುಜ್ವಲಿಸಲು, ಸುವಾರ್ತೆಯನ್ನು ಧೈರ್ಯದಿಂದ ಘೋಷಿಸಲು, ಕುಟುಂಬಗಳು ಮತ್ತು ಯುವಕರಿಗೆ ಸಮೀಪವಾಗಿರಲು ಹಾಗೂ ಯಾಜಕ ಸಹೋದರತ್ವದಲ್ಲಿ ಪರಸ್ಪರ ಬೆಂಬಲಿಸಲು ಆಹ್ವಾನಿಸಿದರು. ವಿಶೇಷವಾಗಿ ಭಾರವಾಗಿರುವಂತೆ ಅನುಭವಿಸಬಹುದಾದ ಯುವ ಯಾಜಕರಿಗೆ ಆತ್ಮೀಯ ಹಾಗೂ ಸಹೋದರ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗುರುವಾರ ವ್ಯಾಟಿಕನ್‌ನಲ್ಲಿ ರೋಮ್ ಧರ್ಮಪ್ರಾಂತ್ಯದ ಯಾಜಕರನ್ನು ಭೇಟಿಯಾಗಿ, ದೇವರು ತಮ್ಮ ಕಾರ್ಯದಲ್ಲಿ ಸಹಕರಿಸುವ ವರವನ್ನು ನೀಡಿದಾಗ ಹಚ್ಚಿದ ನಂಬಿಕೆಯ ಜ್ವಾಲೆಯನ್ನು ಮತ್ತೆ ಮರುಜ್ವಲಿಸುವಂತೆ ಪ್ರೇರೇಪಿಸಿದರು. ತಪಸ್ಸು ಕಾಲ ಆರಂಭವಾದರೂ ಈ ಸಭೆ ಪಶ್ಚಾತ್ತಾಪದ ಕ್ರಿಯೆ ಅಲ್ಲ ಎಂದು ಹಾಸ್ಯಭರಿತವಾಗಿ ಹೇಳಿ, ಅವರೊಂದಿಗೆ ಭೇಟಿ ಸಾಧಿಸಿದ್ದಕ್ಕೆ ಮಹಾ ಸಂತೋಷ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು ಯಾಜಕರಿಗೆ ಸವಾಲುಗಳು ಮತ್ತು ಆದ್ಯತೆಗಳನ್ನು ಸೂಚಿಸಿದರು. ಈಗಾಗಲೇ ರೂಪುಗೊಂಡ ಧರ್ಮಾಧಿಕಾರಿಗಳ ಯೋಜನೆಯ ನಿಷ್ಕ್ರಿಯ ಕಾರ್ಯನಿರ್ವಹಕರಾಗಿ ಕಾಣಬಾರದು ಬದಲಾಗಿ ದೇವರ ಕಾರ್ಯದಲ್ಲಿ ಸೃಜನಶೀಲ ಸಹಭಾಗಿಗಳಾಗಬೇಕು ಎಂದು ಹೇಳಿದರು. ವೇಗವಾದ ಸಾಂಸ್ಕೃತಿಕ ಬದಲಾವಣೆಗಳು, ದೈನಂದಿನ ಕರ್ತವ್ಯಗಳ ದಣಿವು ಮತ್ತು ಧರ್ಮದ ಬಗ್ಗೆ ಹೆಚ್ಚುತ್ತಿರುವ ನಿರ್ಲಕ್ಷ್ಯ ಇತ್ಯಾದಿಗಳ ನಡುವೆ ನಂಬಿಕೆಯ ಅಗ್ನಿಯನ್ನು ಪುನಃ ಪೋಷಿಸುವ ಅಗತ್ಯವಿದೆ ಎಂದು ಅವರು ಒಪ್ಪಿಕೊಂಡರು.

ಸುವಾರ್ತೆಯನ್ನು ಮರುಘೋಷಿಸುವುದು ತುರ್ತು ಅಗತ್ಯ ಮತ್ತು ಇದೇ ಪ್ರಮುಖ ಆದ್ಯತೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಜನರು ಯೇಸುವಿನ ವಾಗ್ದಾನಗಳೊಂದಿಗೆ ಮರುಸಂಪರ್ಕ ಸಾಧಿಸುವಂತೆ ಹೊಸ ಮಾರ್ಗಗಳನ್ನು ಹುಡುಕಬೇಕು ಎಂದು ಹೇಳಿದರು. ಯಾಜಕರು ಏಕಾಂಗಿಯಾಗಿ ಚಿಂತಿಸಬಾರದು ಅಥವಾ ಕಾರ್ಯನಿರ್ವಹಿಸಬಾರದು ಬದಲಾಗಿ ಸಹಭಾಗಿತ್ವ ಮತ್ತು ಐಕ್ಯತೆಯಲ್ಲಿ ಕೆಲಸ ಮಾಡಬೇಕು ಎಂದು ಅವರು ನೆನಪಿಸಿದರು.

ವಿಶೇಷವಾಗಿ ಮಕ್ಕಳ, ಯುವಕರ ಮತ್ತು ಕುಟುಂಬಗಳೊಂದಿಗೆ ನಂಬಿಕೆಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಹೊಸ ವಿಧಾನಗಳನ್ನು ಅನ್ವೇಷಿಸುವಂತೆ ಜಗದ್ಗುರುಗಳು ಸೂಚಿಸಿದರು. ಯುವಕರಲ್ಲಿ ನಂಬಿಕೆಯ ಅಂಶಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವಗಳೊಂದಿಗೆ ಮಿಶ್ರಿತವಾಗಿರುವುದರಿಂದ, ಅವರೊಳಗಿನ ಗೊಂದಲ ಮತ್ತು ಅಂತರಂಗದ ತೊಂದರೆಗಳನ್ನು ಮನಗಾಣಬೇಕು ಎಂದರು. ಧರ್ಮ ಕೇಂದ್ರಗಳು ಶಾಲೆಗಳು, ಶಿಕ್ಷಣ ತಜ್ಞರು ಮತ್ತು ಸಮಾಜದ ಸಂಸ್ಥೆಗಳೊಂದಿಗೆ ಸಂವಾದ ನಡೆಸಬೇಕೆಂದು ಅವರು ಸಲಹೆ ನೀಡಿದರು.

ಯುವ ಯಾಜಕರಿಗೆ ಸಂದೇಶ ನೀಡಿದ ಜಗದ್ಗುರುಗಳು, ದಣಿವು ಮತ್ತು ಸಂಕಟಗಳ ನಡುವೆಯೂ ನಿರಾಶರಾಗಬಾರದು ಎಂದು ಹೇಳಿದರು. ತಮ್ಮ ಸಮಸ್ಯೆಗಳ ಬಗ್ಗೆ ಸಹಯಾಜಕರೊಂದಿಗೆ ಮುಕ್ತ ಸಂವಾದ ನಡೆಸಲು ಹೆದರಬಾರದು ಎಂದು ಪ್ರೋತ್ಸಾಹಿಸಿದರು. ಕೊನೆಯಲ್ಲಿ, ಯಾಜಕ ಸಹೋದರತ್ವವನ್ನು ನೈಜವಾಗಿ ಬದುಕಿರಿ; ಪರಸ್ಪರ ಜೊತೆಗೂಡಿ, ಬೆಂಬಲಿಸೋಣ ಎಂದು ಅವರು ಸಮಾರೋಪಗೊಳಿಸಿದರು.

19 ಫೆಬ್ರವರಿ 2026, 16:48