ಹುಡುಕಿ

Il papa ad Acerra, messa in cattedrale

ಅಚೆರ್ರಾದಲ್ಲಿನ ಜಗದ್ಗುರುಗಳು: ನವೀಕರಣವನ್ನು ಅರಸುತ್ತಿರುವ ಗಾಯಗೊಂಡ ಭೂಮಿಗೆ ಒಂದು ಪಾಸ್ತೋರಲ್ ಅಪ್ಪುಗೆ.

ಇಟಲಿಯ ದಕ್ಷಿಣ ಭಾಗದಲ್ಲಿರುವ ಅಚೆರ್ರಾ ಪಟ್ಟಣದಲ್ಲಿ ಜಗದ್ಗುರು XIVನೇ ಲಿಯೋರವರು, ಪ್ರಾರ್ಥನೆ ಸೇವೆಯಾಗಿ ರೂಪಾಂತರಗೊಳ್ಳುವಂತೆ ಹಾಗೂ ಸಮಾಜದ ಗಾಯಗಳನ್ನು ಸ್ಪರ್ಶಿಸಲು ಧೈರ್ಯವಿರುವ ನಂಬಿಕೆಗೆ ಹೃದಯದಲ್ಲಿ ಸ್ಥಳ ಕಲ್ಪಿಸಬೇಕೆಂದು ವಿಶ್ವಾಸಿಗಳಿಗೆ ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಶನಿವಾರ ಜಗದ್ಗುರು XIVನೇ ಲಿಯೋರವರು ಅಚೆರ್ರಾಗೆ ಭೇಟಿ ನೀಡಿ, ದೀರ್ಘಕಾಲದಿಂದ ಪರಿಸರ ಹಾನಿ ಮತ್ತು ಸಂಘಟಿತ ಅಪರಾಧಗಳಿಂದ ಬಳಲುತ್ತಿರುವ ಸಮುದಾಯಕ್ಕೆ ಆತ್ಮೀಯ ಸಾನ್ನಿಧ್ಯ, ನೈತಿಕ ಸ್ಪಷ್ಟತೆಯ ಸಂದೇಶ ಮತ್ತು ಕಾರ್ಯಪ್ರಾಯ ಪ್ರೋತ್ಸಾಹವನ್ನು ನೀಡಿದರು.

ಇಟಲಿಯ ದಕ್ಷಿಣ ಭಾಗದ ಕ್ಯಾಂಪಾನಿಯಾ ಪ್ರದೇಶದಲ್ಲಿರುವ ಅಚೆರ್ರಾ, ಅಕ್ರಮ ಕಸದ ತ್ಯಾಜ್ಯ ವಿಸರ್ಜನೆ ಮತ್ತು ವಿಷಕಾರಿ ತ್ಯಾಜ್ಯವನ್ನು ನಿಯಂತ್ರಣವಿಲ್ಲದೆ ಸುಡುವುದರಿಂದ ಗಂಭೀರ ಪರಿಸರ ಹಾನಿಗೊಳಗಾದ ಪ್ರದೇಶದ ಒಂದು ಭಾಗವಾಗಿದೆ.

ಸುಮಾರು 65,000 ಜನಸಂಖ್ಯೆ ಹೊಂದಿರುವ ಈ ಪಟ್ಟಣವು “ಟೆರ್ರಾ ದೇಯ್ ಫುವೋಚಿ”  ಅಥವಾ “ಬೆಂಕಿಗಳ ನಾಡು” ಎಂದು ಕರೆಯಲ್ಪಡುವ ಪ್ರದೇಶದ ಹೃದಯಭಾಗದಲ್ಲಿದೆ. “ಮರಣದ ತ್ರಿಕೋನ” ಎಂದೂ ಪ್ರಸಿದ್ಧಿಯಾದ ಈ ಪ್ರದೇಶವು ಕಳೆದ ಇಪ್ಪತ್ತು ವರ್ಷಗಳಿಂದ ವಿಷಕಾರಿ ಬೆಂಕಿಗಳ ಹೊಗೆಯಿಂದ ಉಸಿರುಗಟ್ಟುತ್ತಿದೆ. ಇದರಿಂದಾಗಿ ಆರೋಗ್ಯ ಸಂಕಷ್ಟ ಉಂಟಾಗಿ, ಅನೇಕ ಮಕ್ಕಳನ್ನು ಒಳಗೊಂಡಂತೆ ನೂರಾರು ಜನರು ಅಪರೂಪದ ಕ್ಯಾನ್ಸರ್‌ಗಳಿಗೆ ತುತ್ತಾಗಿದ್ದಾರೆ. ಅಸಮರ್ಥತೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಸಂಸ್ಥೆಗಳು ಇವರಿಗೆ ಸಮರ್ಪಕ ನೆರವು ನೀಡಲು ವಿಫಲವಾಗಿವೆ.

ನಗರದ ಮಹಾಗಿರ್ಜೆಯಲ್ಲಿ ಸೇರಿದ್ದ ಧರ್ಮಗುರುಗಳು ಮತ್ತು ವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಲಿಯೋರವರು, ಕುಟುಂಬಗಳು, ಕಾರ್ಮಿಕರು, ಯುವಕರು ಮತ್ತು ನಾಗರಿಕ ನಾಯಕರು “ಒಟ್ಟಾಗಿ ನಡೆಯಬೇಕು” ಎಂದು ಕರೆ ನೀಡಿದರು. ಪ್ರತಿಯೊಂದು ನಿರ್ಧಾರದ ಕೇಂದ್ರದಲ್ಲಿ ಮಾನವ ಗೌರವವನ್ನು ಇರಿಸಿ, ಆಳವಾಗಿ ಬೇರೂರಿರುವ ಅನ್ಯಾಯಗಳ ಎದುರು ನಿರಾಶೆಗೆ ಶರಣಾಗದಿರಲು ಅವರು ಪ್ರೇರೇಪಿಸಿದರು.

ಪ್ರಾರ್ಥನೆ ಸೇವೆಯಾಗಿ ರೂಪಾಂತರಗೊಳ್ಳುವಂತೆ ಹಾಗೂ ಸಮಾಜದ ಗಾಯಗಳನ್ನು ಸ್ಪರ್ಶಿಸಲು ಧೈರ್ಯವಿರುವ ನಂಬಿಕೆಗೆ ಹೃದಯದಲ್ಲಿ ಸ್ಥಳ ಕಲ್ಪಿಸಬೇಕೆಂದು ಅವರು ವಿಶ್ವಾಸಿಗಳಿಗೆ ಮನವಿ ಮಾಡಿದರು.

ಕ್ಷೇತ್ರ ಆಸ್ಪತ್ರೆಯಾಗಿ ಧರ್ಮ ಸಭೆಯ ರೂಪಕ

ಈ ಭೇಟಿಯನ್ನು ಕೈಗೊಳ್ಳಬೇಕೆಂದು ಬಯಸಿದ್ದ ದಿವಂಗತ ಜಗದ್ಗುರು ಫ್ರಾನ್ಸಿಸ್ ರವರು ಧರ್ಮ ಸಭೆಯನ್ನು “ಕ್ಷೇತ್ರ ಆಸ್ಪತ್ರೆ” ಎಂದು ವರ್ಣಿಸಿದ್ದ ಚಿತ್ರಣವನ್ನು ಜಗದ್ಗುರು XIVನೇ ಲಿಯೋರವರು ಮತ್ತೆ ಸ್ಮರಿಸಿದರು. ಗಾಯಗಳನ್ನು ಸಹನೆಯಿಂದ ಮರುಕಟ್ಟುವ ಮತ್ತು ನಂಬಿಕೆಯನ್ನು ಪುನಃಸ್ಥಾಪಿಸುವ ಸಣ್ಣ ದಿನನಿತ್ಯದ ಕಾರ್ಯಗಳಲ್ಲಿ ಹಠದಿಂದ ಮುಂದುವರಿಯುವ ಧರ್ಮ ಸಭೆಯ ಕರ್ತವ್ಯವನ್ನು ಅವರು ಒತ್ತಿಹೇಳಿದರು  ಪ್ರಾಮಾಣಿಕ ಕೆಲಸ, ಶುದ್ಧ ಆಡಳಿತ ಮತ್ತು ಜೀವವನ್ನು ಅದರ ಆರಂಭದಿಂದ ಸಹಜ ಅಂತ್ಯದವರೆಗೆ ರಕ್ಷಿಸುವ ಸಂಸ್ಕೃತಿಯನ್ನು ಅವರು ಪ್ರಸ್ತಾಪಿಸಿದರು.

ಆರ್ಥಿಕ ಒತ್ತಡಗಳ ನಡುವೆಯೂ ಕುಟುಂಬಗಳನ್ನು ಒಗ್ಗೂಡಿಸಿ ಕಾಪಾಡುತ್ತಿರುವ ತಂದೆ-ತಾಯಂದಿರು ಮತ್ತು ಅಜ್ಜ-ಅಜ್ಜಿಯರ ಮೌನ ವೀರತ್ವವನ್ನು ಅವರು ಶ್ಲಾಘಿಸಿದರು. ತಮ್ಮ ತಾಯ್ನಾಡನ್ನು ನಿರಾಶೆಗೆ ಬಿಟ್ಟುಕೊಡದೆ, ಸಾಮೂಹಿಕ ಹಿತದ ಶಿಲ್ಪಿಗಳಾಗಬೇಕೆಂದು ಯುವಕರನ್ನು ಅವರು ಪ್ರೋತ್ಸಾಹಿಸಿದರು.

ಹೃದಯ ಪರಿವರ್ತನೆಗೆ ಕರೆ

ಅಚೆರ್ರಾ ಮತ್ತು ಕ್ಯಾಂಪಾನಿಯಾ ಪ್ರದೇಶದ ಜನರು ನಿರುದ್ಯೋಗ, ಅಸ್ಥಿರ ಅನೌಪಚಾರಿಕ ಆರ್ಥಿಕ ವ್ಯವಸ್ಥೆ ಮತ್ತು ತಮ್ಮ ಊರನ್ನು ತೊರೆಯುತ್ತಿರುವ ಯುವ ಪ್ರತಿಭೆಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಕುಟುಂಬಗಳು ತಾತ್ಕಾಲಿಕ ಒಪ್ಪಂದಗಳು ಮತ್ತು ಋತುಮಾನದ ಕೂಲಿಗಳ ಮೇಲೆ ಅವಲಂಬಿತವಾಗಿವೆ. ಸಣ್ಣ ವ್ಯಾಪಾರಗಳು ಹೆಚ್ಚುತ್ತಿರುವ ವೆಚ್ಚಗಳು ಮತ್ತು ಅಸಮತೋಲನದ ಹೂಡಿಕೆಗಳಿಂದ ಸಂಕಷ್ಟಕ್ಕೀಡಾಗಿವೆ, ಸೇವೆಗಳು ಕಡಿಮೆಯಾಗಿರುವಲ್ಲಿ ನಾಗರಿಕ ಸಮಾಜವೇ ಮುಂದಾಗಿ ನೆರವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಮತ್ತು ರಾಜಕೀಯ ಹೃದಯ ಪರಿವರ್ತನೆ ಅಗತ್ಯವೆಂದು ಜಗದ್ಗುರುಗಳು ಕರೆ ನೀಡಿದರು. ಭ್ರಷ್ಟಾಚಾರವನ್ನು ಎದುರಿಸಲು, ಸಾರ್ವಜನಿಕ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮತ್ತು ವಿಶೇಷವಾಗಿ ಮಕ್ಕಳ ಹಾಗೂ ವೃದ್ಧರಂತಹ ದುರ್ಬಲರನ್ನು ರಕ್ಷಿಸಲು ಅವರು ನಾಗರಿಕರನ್ನು ಆಹ್ವಾನಿಸಿದರು.

ಭೂಮಿಯ ಮತ್ತು ಬಡವರ ಕೂಗಿಗೆ ಸ್ಪಂದನೆ

ದಿವಂಗತ ಜಗದ್ಗುರು ಫ್ರಾನ್ಸಿಸ್ ರವರ ಐತಿಹಾಸಿಕ ಎನ್‌ಸೈಕ್ಲಿಕಲ್ ಲೌದಾತೋ ಸಿ ಯನ್ನು ಸ್ಮರಿಸಿದ ಜಗದ್ಗುರು XIVನೇ ಲಿಯೋರವರು, ಪ್ರದೇಶದ ಪರಿಸರ ತುರ್ತು ಪರಿಸ್ಥಿತಿಯನ್ನು ನೇರವಾಗಿ ಉಲ್ಲೇಖಿಸಿದರು. ಮೌನದ ವಲಯವನ್ನು ಮುರಿಯುವುದು, ಕಾನೂನುಬದ್ಧ ಉದ್ಯಮಗಳನ್ನು ಬಲಪಡಿಸುವುದು ಮತ್ತು ಸ್ವಚ್ಛತಾ ಕಾರ್ಯಗಳು ಸಮಗ್ರ, ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ವಿಶ್ವಾಸಾರ್ಹವಾಗಿರುವಂತೆ ಖಚಿತಪಡಿಸಿಕೊಳ್ಳುವುದು ನಮ್ಮ ಎಲ್ಲರ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.

ಸೃಷ್ಟಿಯು ನಮ್ಮ ಆರೈಕೆಗೆ ಒಪ್ಪಿಸಲಾದ ದೇವರ ಕೊಡುಗೆ ಎಂದು ಅವರು ಪುನರುಚ್ಚರಿಸಿದರು. ಧರ್ಮ ಸಭೆಯ ಸಮುದಾಯಗಳು, ಸಾರ್ವಜನಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪ್ರಾಮಾಣಿಕ ಉದ್ಯಮಗಳು ಒಟ್ಟಾಗಿ ಕಾರ್ಯನಿರ್ವಹಿಸಿ, ಈ ಭೂಮಿಯನ್ನು ಪುನಃ ಚೇತರಿಸಿಕೊಳ್ಳುವಂತೆ ಮಾಡಬೇಕು, ಕುಟುಂಬಗಳು ಗೌರವದೊಂದಿಗೆ ಇಲ್ಲಿ ನೆಲೆಸುವಂತಾಗಬೇಕು ಎಂದು ಅವರು ಕರೆ ನೀಡಿದರು.

ಪರಿವರ್ತನೆ ಮತ್ತು ನಾಗರಿಕ ಸ್ನೇಹದ ಮಾರ್ಗ

ಇಂದಿನ ಎಝೆಕಿಯೇಲನ ವಾಚನವನ್ನು ಆಧಾರವಾಗಿಸಿಕೊಂಡು, ಅಂತರಂಗ ಪರಿವರ್ತನೆ ಮತ್ತು ನಾಗರಿಕ ಸ್ನೇಹವನ್ನು ಒಂದಾಗಿಸುವ ಮಾರ್ಗವನ್ನು ಜಗದ್ಗುರುಗಳು ಪ್ರಸ್ತಾಪಿಸಿದರು. ಬಡವರನ್ನು ಕೇಂದ್ರದಲ್ಲಿರಿಸಿ, ಸಂಕಷ್ಟದಲ್ಲಿರುವ ಕುಟುಂಬಗಳು, ನಿರುದ್ಯೋಗಿಗಳು ಮತ್ತು ರೋಗಿಗಳ ನೆರವಿಗೆ ಧರ್ಮ ಕೇಂದ್ರದ ಹಾಗೂ ಧರ್ಮಪ್ರಾಂತ್ಯದ ಸಂಪನ್ಮೂಲಗಳನ್ನು ಬಳಸಬೇಕೆಂದು ಅವರು ಹೇಳಿದರು.

ಕಾನೂನುಬದ್ಧ ಕೆಲಸದ ಸಂಸ್ಕೃತಿಯನ್ನು ಬೆಳೆಸಬೇಕೆಂಬ ಅಗತ್ಯವನ್ನೂ ಅವರು ಉಲ್ಲೇಖಿಸಿದರು. ಶಿಕ್ಷಣ ಮತ್ತು ಸ್ಮರಣೆ ಅತ್ಯಂತ ಮುಖ್ಯವೆಂದು ಅವರು ಹೇಳಿ, ಆಯಾಸವು ಕಹಿತನವಾಗದಂತೆ, ಅದು ಸಹನಶೀಲ ಪ್ರೀತಿಯಾಗಿ ನವೀಕರಿಸಿಕೊಳ್ಳುವಂತೆ ಪ್ರಾರ್ಥಿಸಬೇಕೆಂದು ವಿಶ್ವಾಸಿಗಳನ್ನು ಆಹ್ವಾನಿಸಿದರು.

ಜನರ ಸಂಕಷ್ಟಗಳಲ್ಲಿ ಅವರೊಂದಿಗೆ ನಿಂತಿರುವ ಯಾಜಕರು, ಧಾರ್ಮಿಕರು ಮತ್ತು ಕ್ರೈಸ್ತ ಪ್ರಜೆಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಸ್ವಾರ್ಥವಿಲ್ಲದೆ ಸಾರ್ವಜನಿಕ ಸೇವೆ ಮಾಡುತ್ತಿರುವ ಅಧಿಕಾರಿಗಳನ್ನು ಕೂಡ ಅವರು ಪ್ರೋತ್ಸಾಹಿಸಿದರು.

“ಯಾರೂ ನಿಮ್ಮ ನಾಳೆಯನ್ನು ಕಸಿದುಕೊಳ್ಳದಿರಲಿ” ಎಂದು ಜಗದ್ಗುರುಗಳು ಯುವಕರಿಗೆ ಮನವಿ ಮಾಡಿದರು. ತಮ್ಮ ನಾಡಿನ ಸೌಂದರ್ಯವನ್ನು ಅದರ ಕುಟುಂಬಗಳು, ನಂಬಿಕೆ ಮತ್ತು ಸಂಸ್ಕೃತಿಯನ್ನು  ಪುನಃ ಕಂಡುಕೊಳ್ಳಿ ಮತ್ತು ಅದರ ಭವಿಷ್ಯದ ಹೊಸ ಅಧ್ಯಾಯದ ನಾಯಕರು ಆಗಿ ಎಂದು ಅವರು ಆಹ್ವಾನಿಸಿದರು.

23 ಮೇ 2026, 18:18