ಜಗದ್ಗುರು XIVನೇ ಲಿಯೋರವರ ದ್ವಿತೀಯ ವ್ಯಾಟಿಕನ್ ಮಹಾಸಭೆಯ ಕುರಿತ ಉಪದೇಶ: ಧರ್ಮ ಸಭೆಗೆ ಮಾರ್ಗದರ್ಶಕವಾದ ‘ಧ್ರುವತಾರೆ’.
ವ್ಯಾಟಿಕನ್ ವರದಿ
ದ್ವಿತೀಯ ವ್ಯಾಟಿಕನ್ ಮಹಾಸಭೆ ಮುಕ್ತಾಯಗೊಂಡು 61 ವರ್ಷಗಳಾದರೂ, ಅದು ಇಂದಿಗೂ ವಿಶ್ವ ಧರ್ಮ ಸಭೆಗೆ ದಿಕ್ಕು ತೋರಿಸುವ ದಿಕ್ಸೂಚಿಯಂತಿದೆ ಎಂದು ಜಗದ್ಗುರು ಲಿಯೋರವರು ಹೇಳಿದ್ದಾರೆ. ಈ ನಂಬಿಕೆಯಿಂದಲೇ ಅವರು ಜನವರಿ 7ರಂದು ಮಹಾಸಭೆಯ ದಾಖಲೆಗಳ ಕುರಿತು ಹೊಸ ಉಪದೇಶ ಸರಣಿಯನ್ನು ಆರಂಭಿಸಿದರು. ದ್ವಿತೀಯ ವ್ಯಾಟಿಕನ್ ಅನುಭವಿಸಿದ ಪೀಳಿಗೆ ಈಗ ಇಲ್ಲದಿರುವುದರಿಂದ, ಅದರ ಸಂದೇಶ ಮತ್ತು ಪ್ರವಾದಿತ್ವವನ್ನು ಮುಂದಿನ ತಲೆಮಾರಿಗೆ ಜೀವಂತವಾಗಿಡಬೇಕೆಂಬ ಅಗತ್ಯವಿದೆ ಎಂದು ಅವರು ವಿವರಿಸಿದರು.
ಜಗದ್ಗುರು ಲಿಯೋರವರ ಪ್ರಕಾರ, ಮಹಾಸಭೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದರ ಬಗ್ಗೆ ಇತರರು ಹೇಳಿದ ಮಾತುಗಳನ್ನು ಮಾತ್ರ ಕೇಳುವುದರಿಂದ ಸಾಲದು, ಅದರ ಮೂಲ ದಾಖಲೆಗಳನ್ನು ಪುನಃ ಓದಿ, ಅವುಗಳ ಅರ್ಥವನ್ನು ಆಳವಾಗಿ ಚಿಂತಿಸಬೇಕು. 1965ರ ದಾಖಲೆಗಳನ್ನು ಮತ್ತೆ ಪರಿಶೀಲಿಸುವುದು, ಆಧುನಿಕ ಯುಗದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚು ನ್ಯಾಯಯುತ ಹಾಗೂ ಸಹೋದರತ್ವಪೂರ್ಣ ಸಮಾಜ ನಿರ್ಮಿಸಲು ಧರ್ಮ ಸಭೆಗೆ ಸಹಾಯ ಮಾಡುತ್ತದೆ ಎಂದರು.
ತಮ್ಮ ಉಪದೇಶಗಳಲ್ಲಿ ಜಗದ್ಗುರುಗಳು ವಿಶೇಷವಾಗಿ ಧೈ ವರ್ಬಮ್ ಮತ್ತು ಲುಮೆನ್ ಜೆಂಟಿಯಮ್ ಎಂಬ ಎರಡು ಪ್ರಮುಖ ದಾಖಲೆಗಳ ಕುರಿತು ಚಿಂತನೆ ನಡೆಸಿದ್ದಾರೆ. ಧೈ ವರ್ಬಮ್ ಕುರಿತು ಮಾತನಾಡುತ್ತಾ, ದೇವರು ಮಾನವರೊಂದಿಗೆ ಮಾತನಾಡುತ್ತಾರೆ ಮತ್ತು ಅವರನ್ನು ತನ್ನ ಸ್ನೇಹಕ್ಕೆ ಆಹ್ವಾನಿಸುತ್ತಾರೆ ಎಂಬುದನ್ನು ಈ ದಾಖಲೆ ನೆನಪಿಸುತ್ತದೆ ಎಂದು ಹೇಳಿದರು. ಯೇಸು ಕ್ರಿಸ್ತನು ದೇವರ ಮಾನವಮುಖವಾಗಿದ್ದು, ಅವರ ಜೀವನ, ಮರಣ ಮತ್ತು ಪುನರುತ್ಥಾನವು ದೇವರ ಪ್ರೀತಿಯನ್ನು ಸಂಪೂರ್ಣವಾಗಿ ಪ್ರಕಟಿಸುತ್ತದೆ ಎಂದು ಅವರು ವಿವರಿಸಿದರು.
ಜಗದ್ಗುರು ಲಿಯೋರವರು, ಪವಿತ್ರ ಗ್ರಂಥಗಳನ್ನು ತಪ್ಪಾಗಿ ಅರ್ಥೈಸುವ ಎರಡು ಅಪಾಯಗಳ ಬಗ್ಗೆ ಎಚ್ಚರಿಸಿದರು. ಒಂದು ಕಡೆ, ಐತಿಹಾಸಿಕ ಹಿನ್ನೆಲೆ ಪರಿಗಣಿಸದೆ ಮೂಲಭೂತವಾದದ ರೀತಿಯಲ್ಲಿ ವ್ಯಾಖ್ಯಾನಿಸುವ ಅಪಾಯವಿದೆ, ಮತ್ತೊಂದು ಕಡೆ, ಪವಿತ್ರ ಗ್ರಂಥವನ್ನು ಕೇವಲ ಮಾನವ ಬರಹವೆಂದು ಕಡಿಮೆ ಮಾಡುವ ಅಪಾಯವಿದೆ. ಬದಲಾಗಿ, ಸುವಾರ್ತೆಯನ್ನು ದೇವರು ಪ್ರತಿಯೊಂದು ಯುಗದ ಜನರೊಂದಿಗೆ ಮಾತನಾಡುವ ಜೀವಂತ ಸ್ಥಳವೆಂದು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಲುಮೆನ್ ಜೆಂಟಿಯಮ್ ಕುರಿತು ಮಾತನಾಡುತ್ತಾ, ಧರ್ಮ ಸಭೆ ಜನರ ನಡುವೆ ಏಕತೆ ಮತ್ತು ಸೌಹಾರ್ದತೆಯ ಚಿಹ್ನೆಯಾಗಿರಬೇಕು ಎಂದು ಜಗದ್ಗುರುಗಳು ಒತ್ತಿಹೇಳಿದರು. ಬಡವರು, ಶೋಷಿತರು, ಪೀಡಿತರು ಮತ್ತು ನೋವು ಅನುಭವಿಸುವವರ ಪರವಾಗಿ ಧರ್ಮಸಭೆ ಧೈರ್ಯವಾಗಿ ನಿಲ್ಲಬೇಕು ಎಂದರು. ಜೊತೆಗೆ, ಧರ್ಮಸಭೆ ಮಾನವಕುಲಕ್ಕೆ ನಿರೀಕ್ಷೆ ಮತ್ತು ಬೆಳಕನ್ನು ನೀಡುವ ಸಮುದಾಯವಾಗಿರಬೇಕು ಎಂದು ಹೇಳಿದರು.
ಕೊನೆಗೆ, ಸಾಮಾನ್ಯ ವಿಶ್ವಾಸಿಗಳ ಕರ್ತವ್ಯದ ಕುರಿತು ಮಾತನಾಡಿದ ಜಗದ್ಗುರುಗಳು, ಅವರು ನ್ಯಾಯ ಮತ್ತು ಶಾಂತಿಯ ಸಾಕ್ಷಿಗಳಾಗಬೇಕು ಎಂದು ಹೇಳಿದರು. ಪವಿತ್ರತೆ ಕೆಲವರಿಗಷ್ಟೇ ಸೀಮಿತವಲ್ಲ, ಪ್ರೀತಿ ಮತ್ತು ಸೇವೆಯ ಮೂಲಕ ಎಲ್ಲಾ ಕ್ರೈಸ್ತರಿಗೂ ಅದು ಕರೆಯಾಗಿದೆ ಎಂದರು. ಲೋಕದ ಸಂಕಷ್ಟಗಳ ನಡುವೆಯೂ ವಿಶ್ವಾಸಿಗಳು ನಂಬಿಕೆ, ಪ್ರೀತಿ ಮತ್ತು ನ್ಯಾಯದ ಗುರುತುಗಳನ್ನು ಬಿಟ್ಟುಹೋಗುವಂತೆ ಅವರು ಪ್ರೇರೇಪಿಸಿದರು.
