ಜಗದ್ಗುರು XIVನೇ ಲಿಯೋರವರು ಸುಡಾನ್ ಗಣರಾಜ್ಯದ ಪ್ರಧಾನಮಂತ್ರಿಯನ್ನು ಭೇಟಿಯಾದರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಸೋಮವಾರ ಬೆಳಿಗ್ಗೆ ವ್ಯಾಟಿಕನ್ನಲ್ಲಿ ಸುಡಾನ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ಕಾಮಿಲ್ ಎಲ್-ತಯ್ಯಿಬ್ ಇದ್ರಿಸ್ ಅಬ್ದೆಲ್ಹಫೀಸ್ ರವರನ್ನು ಭೇಟಿಯಾಗಿ ಸ್ವಾಗತಿಸಿದರು.
ನಂತರ ಪ್ರಧಾನಮಂತ್ರಿಗಳು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್ ಹಾಗೂ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಉಪಕಾರ್ಯದರ್ಶಿಯಾದ ಮೊನ್ಸಿನಿಯರ್ ಮಿಹಾಯಿತಾ ಬ್ಲಾಜ್ ರವರನ್ನು ರಾಜ್ಯ ಕಾರ್ಯಾಲಯದಲ್ಲಿ ಭೇಟಿಯಾದರು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಪ್ರಕಟಣೆಯ ಪ್ರಕಾರ, ರಾಜ್ಯ ಕಾರ್ಯಾಲಯದಲ್ಲಿ ನಡೆದ ಮಾತುಕತೆಗಳು ಆತ್ಮೀಯ ವಾತಾವರಣದಲ್ಲಿ ನಡೆದಿದ್ದು, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಸುಡಾನ್ ನಡುವಿನ ಉತ್ತಮ ಸಂಬಂಧಗಳನ್ನು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಚರ್ಚೆಗಳು ಮುಖ್ಯವಾಗಿ ದೇಶದ ಹಿತಕ್ಕಾಗಿ ಸ್ಥಳೀಯ ಧರ್ಮ ಸಭೆ ನೀಡುತ್ತಿರುವ ಮಹತ್ವದ ಕೊಡುಗೆ ಹಾಗೂ ಕಳೆದ ಮೂರು ವರ್ಷಗಳಿಂದ ಯುದ್ಧಪೀಡಿತ ಸುಡಾನ್ ಅನ್ನು ಕಾಡುತ್ತಿರುವ ಗಂಭೀರ ಸಂಕಷ್ಟದ ಕುರಿತು ಕೇಂದ್ರೀಕರಿಸಿದ್ದವು ಎಂದು ಪ್ರಕಟಣೆ ತಿಳಿಸಿದೆ.
ಈ ಸಂಬಂಧವಾಗಿ ಪ್ರಕಟಣೆ ಮುಂದುವರಿದು, “ತಕ್ಷಣ ಯುದ್ಧ ವಿರಾಮವನ್ನು ಸಾಧಿಸುವುದು, ಜನತೆಗೆ ಅಗತ್ಯ ಸಹಾಯವನ್ನು ಒದಗಿಸುವುದು ಮತ್ತು ಸುಡಾನ್ ರಾಷ್ಟ್ರದ ಎಲ್ಲಾ ಪಕ್ಷಗಳ ನಡುವೆ ಪ್ರಾಮಾಣಿಕ ಸಂವಾದವನ್ನು ಆರಂಭಿಸುವ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳಲಾಯಿತು. ಇದರ ಉದ್ದೇಶ ಸಂಘರ್ಷವನ್ನು ಅಂತ್ಯಗೊಳಿಸಿ, ಸಮೂಹಿಕವಾಗಿ ಶಾಂತಿಯನ್ನು ಸ್ಥಾಪಿಸುವುದಾಗಿದೆ” ಎಂದು ತಿಳಿಸಿದೆ.
