ಹುಡುಕಿ

ಮಾನ್ಯ ಮೊನ್ಸಿನ್ಯೋರ್ ರೂಯಿಸ್ ರವರು ಮಾನ್ಯ ಮೊನ್ಸಿನ್ಯೋರ್ ರೂಯಿಸ್ ರವರು  (ANSA)

ಮಾನ್ಯ ಮೊನ್ಸಿನ್ಯೋರ್ ರೂಯಿಸ್ ರವರು ದಾನಧರ್ಮ ಸೇವೆಗಾಗಿ ಇರುವ ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ನೇಮಕಗೊಂಡರು.

2015ರಿಂದ ಸಂವಹನಕ್ಕಾಗಿ ಇರುವ ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅರ್ಜೆಂಟೀನಾದ ಯಾಜಕರಾದ ಮಾನ್ಯ ಮೊನ್ಸಿನ್ಯೋರ್ ರೂಯಿಸ್ ರವರನ್ನು, ಜಗದ್ಗುರುಗಳು ಸೋಮವಾರ ದಾನಧರ್ಮ ಸೇವೆಗಾಗಿ ಇರುವ ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ಡಿಕಾಸ್ಟರಿಯು ಸಾಮಾನ್ಯವಾಗಿ ಪ್ರೇಷಿತರ ಆಲ್ಮೊನರಿ ಎಂಬ ಹೆಸರಿನಿಂದಲೂ ಪರಿಚಿತವಾಗಿದೆ. ಅವರು 2026ರ ಸೆಪ್ಟೆಂಬರ್ 1ರಿಂದ ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು, ಇದುವರೆಗೆ ಸಂವಹನಕ್ಕಾಗಿ ಇರುವ ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ವಂ.ಸ್ವಾಮಿ ಲೂಚಿಯೊ ರೂಯಿಸ್ ರವರನ್ನು, ಜಗದ್ಗುರುಗಳ ದಾನಧರ್ಮದ ಕಾರ್ಯಗಳು ಹಾಗೂ ಮಾನವೀಯ ನೆರವು ಯೋಜನೆಗಳ ಜವಾಬ್ದಾರಿಯನ್ನು ಹೊತ್ತಿರುವ ದಾನಧರ್ಮ ಸೇವೆಗಾಗಿ ಇರುವ ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

ಜೂನ್ 30ರಂದು ಪ್ರಕಟಗೊಂಡ ಈ ನೇಮಕಾತಿಯು ರೋಮನ್ ಪ್ರಾಂತ್ಯದಲ್ಲಿನ ಇತ್ತೀಚಿನ ಹಲವು ಬದಲಾವಣೆಗಳ ಭಾಗವಾಗಿದೆ. ಸಂವಹನಕ್ಕಾಗಿ ಇರುವ ಡಿಕಾಸ್ಟರಿ ಹಾಗೂ ದಾನಧರ್ಮ ಸೇವೆಗಾಗಿ ಇರುವ ಡಿಕಾಸ್ಟರಿ ಎರಡಕ್ಕೂ ಇತ್ತೀಚೆಗೆ ಹೊಸ ಮುಖ್ಯಸ್ಥರನ್ನು ನೇಮಿಸಲಾಗಿದೆ. ಜೂನ್ 2ರಂದು ಮೋಂಟ್ಸೆರಾತ್ ಅಲ್ವಾರಾಡೊರವರನ್ನು ಸಂವಹನಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿ ನೇಮಿಸಲಾಗಿದ್ದು, ಅವರು ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದೇ ವೇಳೆ, ಸ್ಪೇನ್‌ನ ಆಗಸ್ಟಿನಿಯನ್ ಬಿಷಪ್ ಲೂಯಿಸ್ ಮರೀನ್ ದೆ ಸಾನ್ ಮಾರ್ಟಿನ್ ಅವರು ಮಾರ್ಚ್ ತಿಂಗಳಿನಿಂದ ಪ್ರೇಷಿತರ ಆಲ್ಮೊನರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಲ್ಯಾಟಿನ್ ಅಮೆರಿಕಾ ಮತ್ತು ರೋಮಿನಲ್ಲಿನ ಸಮೃದ್ಧ ಅನುಭವ

2026ರ ಸೆಪ್ಟೆಂಬರ್ 1ರಿಂದ, ವಂ.ಸ್ವಾಮಿ ರೂಯಿಸ್ ರವರು ಬಿಷಪ್ ಮರೀನ್ ದೆ ಸಾನ್ ಮಾರ್ಟಿನ್ ರವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಸಂವಹನಕ್ಕಾಗಿ ಇರುವ ಡಿಕಾಸ್ಟರಿಯು ಸಂವಹನ ಕಾರ್ಯದರ್ಶಾಲಯ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರಂಭಿಕ ದಿನಗಳಿಂದಲೇ ಅವರು ಅದರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಸಂವಹನ ಮತ್ತು ಮಾಧ್ಯಮ ಕ್ಷೇತ್ರದಲ್ಲಿ, ವಿಶೇಷವಾಗಿ ಲ್ಯಾಟಿನ್ ಅಮೆರಿಕಾದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದ ಅವರನ್ನು, 2015ರ ಜೂನ್ 27ರಂದು ಜಗದ್ಗುರು ಫ್ರಾನ್ಸಿಸ್ ರವರು ಡಿಕಾಸ್ಟರಿಯ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಅವರು ಲ್ಯಾಟಿನ್ ಅಮೆರಿಕಾದ ಧರ್ಮ ಮಾಹಿತಿ ಜಾಲತಾಣದ ಸಲಹೆಗಾರರಾಗಿ ಹಾಗೂ ಲ್ಯಾಟಿನ್ ಅಮೆರಿಕಾದ ‘ಅವರ್ ಲೇಡಿ ಆಫ್ ಗ್ವಾದಲೂಪೆ’ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ರೋಮಿನಲ್ಲಿ ಅವರು ಪಾಂಟಿಫಿಕಲ್ ಯುನಿವರ್ಸಿಟಿ ಆಫ್ ದ ಹೋಲಿ ಕ್ರಾಸ್ನ ಸಂವಹನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಬೋಧನೆ ಮಾಡುತ್ತಿದ್ದಾರೆ. ಜೊತೆಗೆ, ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

2025ರ ಜನವರಿಯಲ್ಲಿ ನಡೆದ ಸಂವಹನ ಕ್ಷೇತ್ರದ ಜುಬಿಲಿ ಹಾಗೂ ಅದೇ ವರ್ಷದ ಜುಲೈನಲ್ಲಿ ನಡೆದ ಡಿಜಿಟಲ್ ಮಿಷನರಿಗಳು ಮತ್ತು ಕಥೊಲಿಕ ಪ್ರಭಾವಿಗಳ ಜುಬಿಲಿ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ಅವರು ಪ್ರಮುಖ ಕೊಡುಗೆ ನೀಡಿದ್ದರು.

ಹೊಸ ಧ್ಯೇಯ

ತಮ್ಮ ನೇಮಕಾತಿಯ ಘೋಷಣೆಯ ನಂತರ ಸಂವಹನಕ್ಕಾಗಿ ಇರುವ ಡಿಕಾಸ್ಟರಿಯ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ವಂ. ಸ್ವಾಮಿ ರೂಯಿಸ್, “ಪ್ರಭು ನಮ್ಮನ್ನು ಎಲ್ಲಿಗೆ ಕರೆಯುತ್ತಾನೋ ಅಲ್ಲಿಗೆ ಅವರನ್ನು ಅನುಸರಿಸಲು ನನಗೆ ಸಂತೋಷವಾಗಿದೆ” ಎಂದು ಹೇಳಿದರು.

ಅವರು ಎಲ್ಲರೊಂದಿಗೆ ಕಳೆದ ಸೇವಾ ವರ್ಷಗಳಿಗಾಗಿ ಕೃತಜ್ಞತೆ ವ್ಯಕ್ತಪಡಿಸಿ, ವಿಶೇಷವಾಗಿ ಡಿಕಾಸ್ಟರಿಯ ಆರಂಭಿಕ ನಿರ್ಮಾಣದ ಅವಧಿಯಲ್ಲಿ ಎದುರಾದ ಯಾವುದೇ ಕಷ್ಟಗಳಿಗೆ ಕ್ಷಮೆಯಾಚಿಸಿದರು.

ಇದಲ್ಲದೆ, “ಬಹಳ ಪರಿಶ್ರಮದಿಂದ ನಿರ್ಮಿಸಿ ಬೆಳೆಸಿದ ಈ ಕಾರ್ಯದೊಂದಿಗೆ ನನಗೆ ಆಳವಾದ ಬಾಂಧವ್ಯವಿದೆ. ಅಂತಹ ಬಾಂಧವ್ಯ ಎಂದಿಗೂ ಕೊನೆಗೊಳ್ಳುವುದಿಲ್ಲ” ಎಂದು ಹೇಳುತ್ತಾ, ತಮ್ಮ ಜವಾಬ್ದಾರಿಯ ಭಾವನೆಯನ್ನು ವ್ಯಕ್ತಪಡಿಸಿದರು.

ಹೊಸ ಉಪ-ಕಾರ್ಯದರ್ಶಿ

ಇದೇ ಸಂದರ್ಭದಲ್ಲಿ, ಜಗದ್ಗುರುಗಳು ಪ್ರಸ್ತುತ ದಾನಧರ್ಮ ಸೇವೆಗಾಗಿ ಇರುವ ಡಿಕಾಸ್ಟರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಸ್ಸಿಮೊ ರಾಲ್ಲಿರವರನ್ನು ಅದೇ ಡಿಕಾಸ್ಟರಿಯ ಉಪ-ಕಾರ್ಯದರ್ಶಿಯಾಗಿ  ನೇಮಕ ಮಾಡಿದ್ದಾರೆ. ಅವರೂ ಸಹ 2026ರ ಸೆಪ್ಟೆಂಬರ್ 1ರಿಂದ ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

30 ಜೂನ್ 2026, 00:00