"ಜಗದ್ಗುರುಗಳು: ಯುದ್ಧದ ಬಿರುಗಾಳಿಗಳು ಭರವಸೆಯ ದೀಪವನ್ನು ನಂದಿಸದಿರಲಿ ಸಂವಾದಕ್ಕೆ ಮರಳೋಣ."
ವ್ಯಾಟಿಕನ್ ವರದಿ
ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ತಮ್ಮ ಬೇಸಿಗೆ ವಾಸ್ತವ್ಯದ ಮೊದಲ ಭಾನುವಾರದಂದು, ಪಿಯಾಝಾ ದೆಲ್ಲಾ ಲಿಬೆರ್ತಾ ಚೌಕದ ಎದುರಿನ ಪ್ರೇಷಿತರ ಅರಮನೆಯ ಮುಂಭಾಗದಲ್ಲಿ ತ್ರಿಕಾಲ ಪ್ರಾರ್ಥನೆ ಸಲ್ಲಿಸಿದ ಬಳಿಕ, ಜಗದ್ಗುರು XIVನೇ ಲಿಯೋರವರು ಸಶಸ್ತ್ರ ಸಂಘರ್ಷಗಳಿಂದ ತತ್ತರಿಸುತ್ತಿರುವ ವಿಶ್ವದ ವಿವಿಧ ಪ್ರದೇಶಗಳತ್ತ ತಮ್ಮ ಚಿಂತನೆ ಹರಿಸಿದರು. ಈ ಸಂಘರ್ಷಗಳಲ್ಲಿ ಸಾಮಾನ್ಯ ನಾಗರಿಕರೇ ಅತ್ಯಂತ ಹೆಚ್ಚಿನ ನೋವನ್ನು ಅನುಭವಿಸುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದದ ಭರವಸೆಗಳು ಭಗ್ನಗೊಂಡ ನಂತರ ಮತ್ತೆ ಉದ್ವಿಗ್ನಗೊಂಡಿರುವ ಮಧ್ಯಪ್ರಾಚ್ಯದ ಪರಿಸ್ಥಿತಿ, ಹಾಗೆಯೇ ಲೆಬನಾನ್ನಲ್ಲಿನ ಮುಂದುವರಿದಿರುವ ಬಿಕ್ಕಟ್ಟು ಕುರಿತು ಜಗದ್ಗುರುಗಳು ವಿಶೇಷವಾಗಿ ಉಲ್ಲೇಖಿಸಿದರು. ಇತ್ತೀಚಿನ ದಿನಗಳಲ್ಲಿ ಖಾರ್ಕಿವ್, ದ್ನಿಪ್ರೊ, ಕೀವ್ ಮತ್ತು ಒಡೆಸಾ ನಗರಗಳ ಮೇಲೆ ನಡೆದ ತೀವ್ರ ದಾಳಿಗಳಿಂದ ಗುರುತಿಸಲ್ಪಟ್ಟಿರುವ ರಷ್ಯಾ–ಉಕ್ರೇನ್ ಯುದ್ಧದ ಬಗ್ಗೆಯೂ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.
"ದುರದೃಷ್ಟವಶಾತ್, ಯುದ್ಧದ ಬಿರುಗಾಳಿಗಳು ಮತ್ತೊಮ್ಮೆ ಮಧ್ಯಪ್ರಾಚ್ಯದಲ್ಲಿ, ಉಕ್ರೇನ್ನಲ್ಲಿ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಬೀಸುತ್ತಿವೆ. ಅವು ಹಿಂಸೆ, ಭಯೋತ್ಪಾದನೆ ಮತ್ತು ಸಾವನ್ನು ಹರಡುತ್ತಿದ್ದು, ಮತ್ತೆ ಅನೇಕ ನಿರಪರಾಧ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿವೆ," ಎಂದು ಜಗದ್ಗುರುಗಳು ಹೇಳಿದರು.
ರೋಮಿನ ಬಿಷಪ್ ಆಗಿರುವ ಅವರು, ಜನರು ತಮ್ಮ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಕರೆ ನೀಡಿ, ರಾಷ್ಟ್ರಗಳ ನಡುವೆ ಶಾಶ್ವತ ಸಮನ್ವಯವನ್ನು ಸಾಧಿಸಬಲ್ಲ ಏಕೈಕ ಮಾರ್ಗವೆಂದರೆ ಸಂವಾದ ಮತ್ತು ಮಾತುಕತೆಯ ಹಾದಿಗೆ ಮರಳುವುದೇ ಎಂದು ಒತ್ತಿ ಹೇಳಿದರು.
"ಈ ಯುದ್ಧದ ಬಿರುಗಾಳಿಗಳು ಭರವಸೆ ಮತ್ತು ಶಾಂತಿಯ ಜ್ವಾಲೆಯನ್ನು ನಂದಿಸಲು ನಾವು ಅವಕಾಶ ನೀಡಬಾರದು ಅದು ಎಷ್ಟೇ ದುರ್ಬಲವಾಗಿ ಮತ್ತು ಮಿಣುಕುಹುಳಿಯಂತೆ ಕಾಣುತ್ತಿದ್ದರೂ ಸಹ. ಸಂವಾದ, ಪರಸ್ಪರ ಭೇಟಿ ಮತ್ತು ರಾಜತಾಂತ್ರಿಕತೆಯ ಮಾರ್ಗದಲ್ಲಿ ನಾವು ದೃಢವಾಗಿ ಮುಂದುವರಿಯಬೇಕು ಎಂಬ ನನ್ನ ಭರವಸೆಯನ್ನು ನಾನು ಮತ್ತೊಮ್ಮೆ ವ್ಯಕ್ತಪಡಿಸುತ್ತೇನೆ. ನ್ಯಾಯಯುತ ಮತ್ತು ಶಾಶ್ವತ ಶಾಂತಿಯತ್ತ ಕೊಂಡೊಯ್ಯಬಲ್ಲ ಏಕೈಕ ಮಾರ್ಗ ಇದೇ. ಈ ಮಾರ್ಗದ ಮೂಲಕವೇ ಜನಾಂಗಗಳು ಸಮನ್ವಯ, ಪರಸ್ಪರ ಭದ್ರತೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಗೆ ಗೌರವ ನೀಡುತ್ತಾ ಬದುಕಲು ಸಾಧ್ಯವಾಗುತ್ತದೆ," ಎಂದು ಅವರು ಹೇಳಿದರು.
ಸಮುದ್ರಯಾನಿಕರಿಗಾಗಿ ಪ್ರಾರ್ಥನೆ
ಜುಲೈ ತಿಂಗಳ ಎರಡನೇ ಭಾನುವಾರ ಆಚರಿಸಲಾಗುವ ಸೀ ಸಂಡೇ (ಸಮುದ್ರ ಭಾನುವಾರ) ಅಂಗವಾಗಿ, ಸಮುದ್ರದಲ್ಲಿ ಬದುಕಿ ದುಡಿಯುವವರಿಗಾಗಿ ಪ್ರಾರ್ಥಿಸಲು ಹಾಗೂ ವಿಶ್ವದ ಸುಮಾರು 90 ಪ್ರತಿಶತ ಜಾಗತಿಕ ವ್ಯಾಪಾರಕ್ಕೆ ಆಧಾರವಾಗಿರುವ ಸಮುದ್ರ ಸಾರಿಗೆಯ ಮಹತ್ವವನ್ನು ನೆನಪಿಸಿಕೊಳ್ಳಲು ಕಥೋಲಿಕ ಧರ್ಮ ಸಭೆ ವಿಶ್ವಾಸಿಗಳನ್ನು ಆಹ್ವಾನಿಸುತ್ತದೆ.
ಈ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು, ಈಗಾಗಲೇ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಸಮುದ್ರಯಾನಿಕರ ಜೀವನವನ್ನು ಯುದ್ಧವು ಇನ್ನಷ್ಟು ದುಸ್ತರಗೊಳಿಸುತ್ತಿದೆ ಎಂಬ ಕಳವಳವನ್ನು ವ್ಯಕ್ತಪಡಿಸಿದರು.
"ಇಂದು 'ಸೀ ಸಂಡೇ'. ನನ್ನ ಚಿಂತನೆ ವಿಶ್ವದಾದ್ಯಂತದ ಎಲ್ಲ ಸಮುದ್ರಯಾನಿಕರು, ಮೀನುಗಾರರು ಮತ್ತು ಬಂದರು ಕಾರ್ಮಿಕರ ಕಡೆಗೆ ಹರಿಯುತ್ತದೆ. ತಮ್ಮ ಪ್ರೀತಿಪಾತ್ರರಿಂದ ದೂರವಿರುವ ನೋವು ಹಾಗೂ ಕೆಲವೊಮ್ಮೆ ಸಮುದ್ರದಲ್ಲಿ ನಡೆಯುವ ಸಂಘರ್ಷಗಳ ಭಯವನ್ನು ಅನುಭವಿಸುತ್ತಿದ್ದರೂ, ಅವರು ತಮ್ಮ ತಾಳ್ಮೆಯ ಮತ್ತು ಮೌನ ಸೇವೆಯ ಮೂಲಕ ಜಾಗತಿಕ ವ್ಯಾಪಾರವನ್ನು ಹಾಗೂ ಅನೇಕ ಜನರ ಜೀವನವನ್ನು ನಿರಂತರವಾಗಿ ಬೆಂಬಲಿಸುತ್ತಿದ್ದಾರೆ," ಎಂದು ಜಗದ್ಗುರುಗಳು ಹೇಳಿದರು.
ಜಸ್ನಾ ಗೋರಾ ತೀರ್ಥಯಾತ್ರೆಯ ಸ್ಮರಣೆ
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಚೆಸ್ತೊಖೋವಾ ನಗರಕ್ಕೆ ನಡೆಯುವ ಶತಮಾನಗಳಷ್ಟು ಹಳೆಯ ಮರಿಯಮ್ಮನವರ ತೀರ್ಥಯಾತ್ರೆಯನ್ನು ಸ್ಮರಿಸಿದರು. ಇದು ಪೋಲೆಂಡ್ ಮಾತ್ರವಲ್ಲದೆ ಯುರೋಪಿನಾದ್ಯಂತದ ಅತ್ಯಂತ ಮಹತ್ವದ ವಿಶ್ವಾಸದ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ.
ಪ್ರತಿ ವರ್ಷ, ಲಕ್ಷಾಂತರ ಭಕ್ತರು ಜಸ್ನಾ ಗೋರಾ ಮಠದ ಪುಣ್ಯಕ್ಷೇತ್ರಕ್ಕೆ ತೆರಳಿ, ಚೆಸ್ತೊಖೋವಾದ ಪವಿತ್ರ ಮರಿಯಮ್ಮನವರ ಪ್ರಸಿದ್ಧ "ಕಪ್ಪು ಮಾತೆ" (Black Madonna) ಚಿತ್ರದ ಮುಂದೆ ಭಕ್ತಿಯಿಂದ ವಂದನೆ ಸಲ್ಲಿಸುತ್ತಾರೆ.
"ಕೊನೆಯದಾಗಿ, ಜಸ್ನಾ ಗೋರಾದ ಪವಿತ್ರ ಚಿತ್ರದೊಂದಿಗೆ ನಡೆಯುವ ವಾರ್ಷಿಕ ತೀರ್ಥಯಾತ್ರೆಯಲ್ಲಿ ಭಾಗವಹಿಸಿರುವ ಪೋಲೆಂಡ್ನ ಅನೇಕ ವಿಶ್ವಾಸಿಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರು 'ಸುವಾರ್ತೆಯ ಧರ್ಮಪ್ರಚಾರಕ ಶಿಷ್ಯರಾಗಿ' ಸಂತೋಷಭರಿತ ಸಾಕ್ಷಿಗಳಾಗಿರಲಿ," ಎಂದು ಜಗದ್ಗುರು XIVನೇ ಲಿಯೋರವರು ಪ್ರಾರ್ಥಿಸಿದರು.
