ಹುಡುಕಿ

ಕ್ಯಾಸ್ಟೆಲ್ ಗ್ಯಾಂಡೊಲ್ಫೊದಲ್ಲಿ ಬೋರ್ಗೊ ಲೌಡಾಟೊ ಸಿ'ಯನ್ನು ಉದ್ಘಾಟಿಸುವ ಮತ್ತು ಆಶೀರ್ವದಿಸುತ್ತಿರುವ ಜಗದ್ಗುರು ಲಿಯೋರವರ ಫೈಲ್ ಫೋಟೋ. ಕ್ಯಾಸ್ಟೆಲ್ ಗ್ಯಾಂಡೊಲ್ಫೊದಲ್ಲಿ ಬೋರ್ಗೊ ಲೌಡಾಟೊ ಸಿ'ಯನ್ನು ಉದ್ಘಾಟಿಸುವ ಮತ್ತು ಆಶೀರ್ವದಿಸುತ್ತಿರುವ ಜಗದ್ಗುರು ಲಿಯೋರವರ ಫೈಲ್ ಫೋಟೋ.  (ANSA)

ಕ್ಯಾಸ್ಟೆಲ್ ಗಾಂಡೋಲ್ಫೊ ಧರ್ಮ ಕೇಂದ್ರದ ಧರ್ಮಗುರು: "ಜಗದ್ಗುರು ಲಿಯೋರವರು ಇಲ್ಲಿ ನಿಜವಾದ ವಿಶ್ರಾಂತಿಯನ್ನು ಅನುಭವಿಸುತ್ತಾರೆ ಎಂಬುದು ನಮ್ಮ ಭರವಸೆಯಾಗಿದೆ."

ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಕ್ಯಾಸ್ಟೆಲ್ ಗಾಂಡೋಲ್ಫೊ ಧರ್ಮ ಕೇಂದ್ರದ ಧರ್ಮಗುರು ಹಾಗೂ ಪೋಲೆಂಡ್ ಮೂಲದ ಸೇಲೇಶಿಯನ್ ಧರ್ಮಗುರು ವಂ. ಸ್ವಾಮಿ ತದೇವುಷ್ ರೋಝ್ಮುಸ್, ಸರೋವರದ ತೀರದಲ್ಲಿರುವ ಕ್ಯಾಸ್ಟೆಲ್ ಗಾಂಡೋಲ್ಫೊ ಪಟ್ಟಣದಲ್ಲಿ ಜಗದ್ಗುರು XIVನೇ ಲಿಯೋರವರು ಉತ್ತಮ ಬೇಸಿಗೆ ರಜೆಯನ್ನು ಕಳೆಯಲು ಸಾಧ್ಯವಾಗಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ವರದಿ

"ಜಗದ್ಗುರುಗಳು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಸುಖವಾಗಿರಲಿ, ವಿಶ್ರಾಂತಿ ಪಡೆಯಲಿ ಮತ್ತು ತಾವು ಇಲ್ಲಿ ತಂಗುವ ಉದ್ದೇಶವೆಂದು ಹೇಳಿರುವ ಪ್ರಾರ್ಥನೆ, ವಿಶ್ರಾಂತಿ, ಓದು ಹಾಗೂ ಕ್ರೀಡೆಗಳನ್ನು ನೆರವೇರಿಸಲಿ ಎಂಬುದು ನಮ್ಮ ಆಶಯವಾಗಿದೆ."

ಈ ಆಶಯವನ್ನು ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿರುವ ಪಾಂಟಿಫಿಕಲ್ ಸಂತ ಥಾಮಸ್ ಧರ್ಮ ಕೇಂದ್ರದ ವಿಲ್ಲನೋವಾದ  ಧರ್ಮಗುರು, ಸೇಲೇಶಿಯನ್ ಸಭೆಯ ವಂ. ಸ್ವಾಮಿ ತದೇವುಷ್ ರೋಝ್ಮುಸ್ ಅವರು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

ಪೋಲೆಂಡ್ ಮೂಲದ ಈ ಸೇಲೇಶಿಯನ್ ಧರ್ಮಗುರು, ಜಗದ್ಗುರುಗಳ ಬೇಸಿಗೆ ವಾಸ್ತವ್ಯದ ಮೊದಲ ದಿನಗಳ ಕುರಿತು ಮಾತನಾಡುತ್ತಾ, ಕಳೆದ ವರ್ಷದ ಭೇಟಿಯನ್ನು ನೆನಪಿಸಿಕೊಂಡರು. ಅಲ್ಲದೆ, ಜಗದ್ಗುರುಗಳು ಮತ್ತೆ ಪ್ರೇಷಿತರ ಅರಮನೆಗೆ ಮರಳಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಉಂಟಾಗಿರುವ ಸಂತೋಷ ಮತ್ತು ಉತ್ಸಾಹವನ್ನು ವಿವರಿಸಿದರು.

ಜಗದ್ಗುರುಗಳ ಶುಭಾಶಯದ ಅಚ್ಚರಿ

ಪ್ರೇಷಿತರ ಅರಮನೆಯ ಬಾಲ್ಕನಿಯಿಂದ ತಮ್ಮ ಮೊದಲ ಶುಭಾಶಯ ಸಂದೇಶ ನೀಡಿದ ವೇಳೆ, ಜಗದ್ಗುರು XIVನೇ ಲಿಯೋರವರು ಧರ್ಮ ಕೇಂದ್ರದ ಧರ್ಮಗುರು ಹಾಗೂ ಇಡೀ ಧರ್ಮ ಕೇಂದ್ರದ ಸಮುದಾಯಕ್ಕೆ ವಿಶೇಷ ಶುಭಾಶಯ ಕೋರಿದ್ದಕ್ಕಾಗಿ ವಂ.ಸ್ವಾಮಿ ತದೇವುಷ್ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇದು ಅವರಿಗೆ ಸಂಪೂರ್ಣ ಅನಿರೀಕ್ಷಿತವಾಗಿತ್ತು.

"ಇದು ನನಗೆ ಅತ್ಯಂತ ದೊಡ್ಡ ಅಚ್ಚರಿಯಾಗಿತ್ತು. ನಮ್ಮ ಪಾಂಟಿಫಿಕಲ್ ಧರ್ಮ ಕೇಂದ್ರದ ಮಹತ್ವವನ್ನು ಗುರುತಿಸಿದಂತೆಯೇ ನಾನು ಇದನ್ನು ಕಂಡೆ. ಇಲ್ಲಿ ವ್ಯಾಟಿಕನ್‌ನ ವಿವಿಧ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕ್ಯಾನನ್ ಕಾನೂನಿನ ಪ್ರಕಾರ ಧರ್ಮ ಕೇಂದ್ರ ಮತ್ತು ಅದರ ಧರ್ಮಗುರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ನಮ್ಮ ಇಡೀ ಸಮುದಾಯದ ಕಡೆಗೆ ಜಗದ್ಗುರುಗಳು ತೋರಿದ ಇದು ಅತ್ಯಂತ ಸುಂದರವಾದ ಪ್ರೀತಿಯ ಸಂಕೇತವಾಗಿತ್ತು."

ವಿಶ್ರಾಂತಿಗಾಗಿ ಮೀಸಲಾದ ಸಮಯ

ಈ ವರ್ಷದ ಜಗದ್ಗುರುಗಳ ವಾಸ್ತವ್ಯವು ಕಳೆದ ವರ್ಷಕ್ಕಿಂತ ಭಿನ್ನ ಸ್ವರೂಪ ಹೊಂದಿದೆ ಎಂದು ಧರ್ಮ ಕೇಂದ್ರದ ಧರ್ಮಗುರು ಅಭಿಪ್ರಾಯಪಟ್ಟರು. ಈ ಅವಧಿಯನ್ನು ನಿಜವಾದ ವಿಶ್ರಾಂತಿಗಾಗಿ ಕಳೆಯಲು ತಾವು ಕ್ಯಾಸ್ಟೆಲ್ ಗಾಂಡೋಲ್ಫೊಗೆ ಬರುತ್ತಿರುವುದಾಗಿ ಜಗದ್ಗುರು ಲಿಯೋರವರು ಮೊದಲೇ ತಿಳಿಸಿದ್ದರು.

"ಜಗದ್ಗುರುಗಳು ಸ್ಪಷ್ಟವಾಗಿ ಹೇಳಿದ್ದರು," ಎಂದು ವಂ.ಸ್ವಾಮಿ ರೋಝ್ಮುಸ್ ನೆನಪಿಸಿಕೊಂಡರು. "ತಾವು ಇಲ್ಲಿ ಪ್ರಾರ್ಥಿಸಲು, ವಿಶ್ರಾಂತಿ ಪಡೆಯಲು, ಓದಿನಲ್ಲಿ ತೊಡಗಿಕೊಳ್ಳಲು ಮತ್ತು ಕ್ರೀಡೆಯಲ್ಲಿ ಭಾಗವಹಿಸಲು ಬಂದಿದ್ದೇನೆ ಎಂದರು. ನಮಗೆ ಯಾವುದೇ ವಿಶೇಷ ನಿರೀಕ್ಷೆಗಳಿಲ್ಲ. ಅವರು ಇಲ್ಲಿ ತಮ್ಮ ಮನೆಯಲ್ಲಿರುವಂತೆಯೇ ಆತ್ಮೀಯತೆಯನ್ನು ಅನುಭವಿಸಲಿ ಮತ್ತು ತಮ್ಮ ಇಚ್ಛೆಯಂತೆ ಶಾಂತಿಯಿಂದ ಈ ಸಮಯವನ್ನು ಕಳೆಯಲಿ ಎಂಬುದಷ್ಟೇ ನಮ್ಮ ಬಯಕೆ."

ಅದೇ ರೀತಿ, ವಿಶ್ವಾಸಿಗಳೂ ಸಹ ವಿಶೇಷವಾಗಿ ಭಾನುವಾರದ ತ್ರಿಕಾಲ ಪ್ರಾರ್ಥನೆ ಹಾಗೂ ಜಗದ್ಗುರು ಲಿಯೋರವರು ಸೂಚಿಸುವ ಇತರ ಭೇಟಿಗಳಿಗಾಗಿ ಸಂತೋಷದಿಂದ ಕಾಯುತ್ತಿದ್ದಾರೆ ಎಂದು ಅವರು ಹೇಳಿದರು.

ಸಂಬಂಧವನ್ನು ಗಟ್ಟಿಗೊಳಿಸಿದ ಭೇಟಿಗಳು

ಕಳೆದ ಒಂದು ವರ್ಷದ ಅವಧಿಯಲ್ಲಿ ಕ್ಯಾಸ್ಟೆಲ್ ಗಾಂಡೋಲ್ಫೊಗೆ ಜಗದ್ಗುರುಗಳು ಆಗಾಗ್ಗೆ ಬಂದ ಸಂದರ್ಭಗಳಲ್ಲಿ ತಮಗೆ ಅವರನ್ನು ಹಲವಾರು ಬಾರಿ ಭೇಟಿಯಾಗುವ ಅವಕಾಶ ದೊರೆತಿದ್ದುದನ್ನು ವಂ.ಸ್ವಾಮಿ ತದೇವುಷ್ ನೆನಪಿಸಿಕೊಂಡರು. ಬಹುತೇಕ ಪ್ರತೀ ಸೋಮವಾರ ಮಧ್ಯಾಹ್ನ ಜಗದ್ಗುರುಗಳು ವಿಲ್ಲಾ ಬಾರ್ಬೆರಿನಿಗೆ ಆಗಮಿಸಿ, ಮಂಗಳವಾರ ಸಂಜೆವರೆಗೆ ಅಲ್ಲಿಯೇ ತಂಗುತ್ತಿದ್ದರು.

ನಂತರ ನಿವಾಸದಿಂದ ಹೊರಡುವಾಗ, ಹೊರಗೆ ಕಾಯುತ್ತಿದ್ದ ಯಾತ್ರಿಕರನ್ನು ಭೇಟಿಯಾಗಿ ಶುಭಾಶಯ ಕೋರುತ್ತಿದ್ದರು ಅಥವಾ ಪತ್ರಕರ್ತರೊಂದಿಗೆ ಕೆಲ ಕ್ಷಣ ಮಾತುಕತೆ ನಡೆಸುತ್ತಿದ್ದರು.

ಧರ್ಮ ಕೇಂದ್ರದ ಧರ್ಮಗುರುವಾಗಿ ತಮಗೂ ಜಗದ್ಗುರುಗಳೊಂದಿಗೆ ಕೆಲ ಮಾತುಗಳನ್ನು ವಿನಿಮಯ ಮಾಡಿಕೊಳ್ಳಲು, ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲು ಅಥವಾ ಸರಳವಾಗಿ ಶುಭಾಶಯ ತಿಳಿಸಲು ಅವಕಾಶ ದೊರೆಯುತ್ತಿತ್ತು ಎಂದು ಅವರು ಹೇಳಿದರು.

"ಅವು ಅತ್ಯಂತ ಸುಂದರ ಕ್ಷಣಗಳಾಗಿದ್ದವು. ಆ ಸಂದರ್ಭಗಳಲ್ಲಿ ಅವರ ತಂದೆಯಂತಹ ಆತ್ಮೀಯತೆಯನ್ನು ನಿಜವಾಗಿಯೂ ಅನುಭವಿಸಬಹುದಾಗಿತ್ತು," ಎಂದು ಅವರು ಹೇಳಿದರು. "ಬೇಸಿಗೆ ರಜೆಯ ನಂತರವೂ ಈ ಸಂಪ್ರದಾಯ ಮುಂದುವರಿಯಲಿ ಎಂಬುದು ನನ್ನ ಆಶಯವಾಗಿದೆ."

ಮರೆಯಲಾಗದ ಪವಿತ್ರ ಬಲಿಪೂಜೆ ಮತ್ತು ಜಗದ್ಗುರುಗಳ ಉಡುಗೊರೆ

ಕಳೆದ ವರ್ಷ ಜಗದ್ಗುರು ಲಿಯೋರವರ ಮೊದಲ ಬೇಸಿಗೆ ವಾಸ್ತವ್ಯದ ಸಂದರ್ಭವನ್ನು ನೆನಪಿಸಿಕೊಂಡ ವಂ. ಸ್ವಾಮಿ ರೋಝ್ಮುಸ್, ಜುಲೈ 13ರಂದು ಸಂತ ಥಾಮಸ್ ಆಫ್ ವಿಲ್ಲನೋವಾ ಧರ್ಮ ಕೇಂದ್ರದಲ್ಲಿ ನಡೆದ ಮೊದಲ ಪವಿತ್ರ ಬಲಿಪೂಜೆಯನ್ನು ಭಾವುಕರಾಗಿ ಸ್ಮರಿಸಿದರು. ಆ ಚಿಕ್ಕ ದೇವಾಲಯವು ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಎಲ್ಲ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗಿರಲಿಲ್ಲ.

ಆ ದಿನದ ಅತ್ಯಂತ ಅಮೂಲ್ಯ ಕ್ಷಣವೆಂದರೆ, ಜಗದ್ಗುರುಗಳು ಧರ್ಮ ಕೇಂದ್ರದ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ವಿಶೇಷ ಉಡುಗೊರೆಯೊಂದನ್ನು ನೀಡಿದ ಸಂದರ್ಭ ಎಂದು ಅವರು ಹೇಳಿದರು.

"ಅವರು ನಮಗೆ ಅತ್ಯಂತ ಸುಂದರವಾದ ಧಾರ್ಮಿಕ ಆರಾಧನಾ ಪಾತ್ರೆಯಾದ ಒಂದು ಚಾಲಿಸ್‌ನ್ನು ಉಡುಗೊರೆಯಾಗಿ ನೀಡಿದರು," ಎಂದು ಅವರು ನೆನಪಿಸಿಕೊಂಡರು. "ಇಡೀ ಸಮುದಾಯದ ಪರವಾಗಿ ಅದನ್ನು ಅವರ ಕೈಯಿಂದ ಸ್ವೀಕರಿಸುವ ಗೌರವ ನನಗೆ ದೊರೆಯಿತು. ಈ ಅಮೂಲ್ಯ ಉಡುಗೊರೆಗಾಗಿ ಅವರಿಗೆ ನಾನು ಧನ್ಯವಾದ ಸಲ್ಲಿಸಿದೆ. ಇದು ನನ್ನ ಯಾಜಕ ಜೀವನದ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಒಂದಾಗಿ ಸದಾ ಉಳಿಯಲಿದೆ."

ಸಂತ ದ್ವಿತೀಯ ಜಾನ್ ಪಾಲ್ ರವರ ನೆನಪುಗಳು

ಮುಂದುವರಿದು ಮಾತನಾಡಿದ ವಂ.ಸ್ವಾಮಿ ತದೇವುಷ್ ರೋಝ್ಮುಸ್, ಕ್ಯಾಸ್ಟೆಲ್ ಗಾಂಡೋಲ್ಫೊ ನಿವಾಸಿಗಳ ಹೃದಯದಲ್ಲಿ ಸಂತ  ದ್ವಿತೀಯ ಜಾನ್ ಪಾಲ್ ರವರಿಗೆ ವಿಶೇಷ ಸ್ಥಾನವಿದೆ ಎಂದು ಹೇಳಿದರು. ಧರ್ಮ ಕೇಂದ್ರದ ಸದಸ್ಯರು ಹಂಚಿಕೊಳ್ಳುವ ನೆನಪುಗಳಲ್ಲಿ ಅವರ ಹೆಸರು ಪದೇ ಪದೇ ಕೇಳಿಬರುತ್ತದೆ.

"ಭಾನುವಾರ ನಾನು ಅನೇಕ ಜನರ ಕಣ್ಣಲ್ಲಿ ಕಣ್ಣೀರನ್ನು ಕಂಡೆ," ಎಂದು ಅವರು ಹೇಳಿದರು. "ಜಗದ್ಗುರುಗಳು ನಿಯಮಿತವಾಗಿ ಕ್ಯಾಸ್ಟೆಲ್ ಗಾಂಡೋಲ್ಫೊಗೆ ಬರುತ್ತಿದ್ದ ತಮ್ಮ ಬಾಲ್ಯದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ಸಂತ ದ್ವಿತೀಯ ಜಾನ್ ಪಾಲ್ ರವರ ಬಗ್ಗೆ ಜನರು ಆಗಾಗ್ಗೆ ಮಾತನಾಡುತ್ತಿದ್ದರು. ಇಲ್ಲಿನ ನಿವಾಸಿಗಳು ಸರಳವಾಗಿ, 'ಅವರು ನಮ್ಮ ಜಗದ್ಗುರುಗಳು' ಎಂದು ಹೇಳುತ್ತಾರೆ. ಅವರ ಬಗ್ಗೆ ಮಾತನಾಡುವಾಗ ಅವರ ಭಾವನೆಯನ್ನು ಸ್ಪಷ್ಟವಾಗಿ ಅನುಭವಿಸಬಹುದು. ಈಗ ಜಗದ್ಗುರು XIVನೇ ಲಿಯೋರವರ ಮರಳುವಿಕೆ ಆ ಸುಂದರ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ ಮತ್ತು ಈ ಅದ್ಭುತ ಪಾಪಲ್ ಸಂಪ್ರದಾಯ ಮುಂದುವರಿಯುತ್ತಿದೆ ಎಂಬ ಸಂತೋಷವನ್ನು ಜನರಿಗೆ ನೀಡಿದೆ."

ನಾಲ್ಕು ಶತಮಾನಗಳ ಪಾಪಲ್ ಸಂಪ್ರದಾಯ

ಈ ವರ್ಷದ ಜಗದ್ಗುರುಗಳ ಬೇಸಿಗೆ ವಾಸ್ತವ್ಯವು ಮತ್ತೊಂದು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ 2026ರಲ್ಲಿ, ಕ್ಯಾಸ್ಟೆಲ್ ಗಾಂಡೋಲ್ಫೊವನ್ನು ಜಗದ್ಗುರುಗಳ ಬೇಸಿಗೆ ನಿವಾಸವನ್ನಾಗಿ ಬಳಸುವ ಸಂಪ್ರದಾಯ ಆರಂಭವಾಗಿ 400 ವರ್ಷಗಳು ಪೂರ್ಣಗೊಳ್ಳುತ್ತವೆ.

ಈ ಸಂಪ್ರದಾಯವನ್ನು 1626ರಲ್ಲಿ ಜಗದ್ಗುರುಗಳ VIIIನೇ ಅರ್ಬನ್ ಆರಂಭಿಸಿದ್ದರು.

"ರೂಪಧರ್ಮಪ್ರಾಂತ್ಯ, ಸ್ಥಳೀಯ ಆಡಳಿತ ಹಾಗೂ ನಮ್ಮ ಧರ್ಮ ಕೇಂದ್ರದ ಜೊತೆಯಾಗಿ ಈ ಐತಿಹಾಸಿಕ ವಾರ್ಷಿಕೋತ್ಸವದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದೇವೆ," ಎಂದು ವಂ. ಸ್ವಾಮಿ ತದೇವುಷ್ ಹೇಳಿದರು. "ಕ್ಯಾಸ್ಟೆಲ್ ಗಾಂಡೋಲ್ಫೊದಲ್ಲಿ ಪೇತ್ರನ ಉತ್ತರಾಧಿಕಾರಿಗಳ ನಾಲ್ಕು ಶತಮಾನಗಳ ಉಪಸ್ಥಿತಿಯನ್ನು ಸ್ಮರಿಸಲು ಮತ್ತು ಚರ್ಚೆಯ ಇತಿಹಾಸದಲ್ಲಿ ಈ ಸ್ಥಳದ ಮಹತ್ವವನ್ನು ಜಗತ್ತಿಗೆ ಮತ್ತೊಮ್ಮೆ ನೆನಪಿಸಲು ಇದು ಅಪೂರ್ವ ಅವಕಾಶವಾಗಿದೆ."

07 ಜುಲೈ 2026, 19:11