ಸಂಘರ್ಷಗಳಿಂದ ಕೂಡಿದ ಜಗತ್ತಿನಲ್ಲಿ ಶಾಂತಿಯನ್ನು ನಿರ್ಮಿಸುವ ಜಗದ್ಗುರುಗಳ ಧರ್ಮಾಧ್ಯಕ್ಷಕೀಯ ಅಕಾಡೆಮಿಯ ಧ್ಯೇಯ
ವ್ಯಾಟಿಕನ್ ವರದಿ
ಜಗದ್ಗರುಗಳ ಧರ್ಮಾಧ್ಯಕ್ಷಕೀಯ ಅಕಾಡೆಮಿಯ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ಸಲ್ವತೋರೇ ಪೆನ್ನಾಕ್ಕಿಯೋ ರವರು, ಇಂದಿನ ಸಂಘರ್ಷಗಳು ಮತ್ತು ವೇಗವಾದ ಬದಲಾವಣೆಗಳಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ ಜಗದ್ಗುರುಗಳ ರಾಜತಾಂತ್ರಿಕ ಧ್ಯೇಯವನ್ನು ವಿವರಿಸಿದರು. ಶಾಂತಿ ಮತ್ತು ನ್ಯಾಯದ ಸೇತುವೆಗಳನ್ನು ನಿರ್ಮಿಸುವುದು, ನಿಜವಾದ ಮಾನವ ಸಂಬಂಧಗಳನ್ನು ಪುನರ್ ಸ್ಥಾಪಿಸುವುದು, ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಗೌರವದ ಮೇಲಿನ ಪ್ರೀತಿ ಮತ್ತು ಗೌರವದಲ್ಲಿ ನೆಲೆಯೂರಿದ ನಾಗರಿಕತೆಯನ್ನು ಉತ್ತೇಜಿಸುವುದೇ ವ್ಯಾಟಿಕನ್ ರಾಜತಾಂತ್ರಿಕ ಸೇವೆಯ ಮುಖ್ಯ ಉದ್ದೇಶವೆಂದು ಅವರು ಹೇಳಿದರು.
ಈ ಧ್ಯೇಯವನ್ನು ಕೇಂದ್ರವಾಗಿಟ್ಟುಕೊಂಡು ಜನವರಿ 17ರಂದು ವ್ಯಾಟಿಕನ್ ಪ್ರೇಷಿತರ ಅರಮನೆದಲ್ಲಿ ಸಮ್ಮೇಳನ ಆಯೋಜಿಸಲಾಯಿತು. ಜಗದ್ಗುರು XIV ನೇ ಲಿಯೋರವರ ಸಂದೇಶದೊಂದಿಗೆ ಆರಂಭವಾದ ಈ ಸಮ್ಮೇಳನದಲ್ಲಿ, ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೋ ಪ್ಯಾರೊಲಿನ್ ರವರ ಲೆಕ್ಸಿಯೋ ಮ್ಯಾಜಿಸ್ಟ್ರಾಲಿಸ್, ಅಕಾಡೆಮಿಯ ಇತಿಹಾಸ ಮತ್ತು ಸುಧಾರಣೆಗಳ ಕುರಿತ ಚರ್ಚೆಗಳು ನಡೆದವು. ಈ ಕಾರ್ಯಕ್ರಮವು ಇಂದಿನ ಜಾಗತಿಕ ಸವಾಲುಗಳ ಬೆಳಕಿನಲ್ಲಿ ಜಗದ್ಗುರುಗಳ ರಾಜತಾಂತ್ರಿಕ ಕಾರ್ಯವನ್ನು ಮರುಪರಿಶೀಲಿಸುವುದಕ್ಕೆ ವೇದಿಕೆಯಾಯಿತು.
ಮಹಾಧರ್ಮಾಧ್ಯಕ್ಷ ಪೆನ್ನಾಕ್ಕಿಯೋ ರವರು, ಪ್ರೇಷಿತರ ರಾಯಭಾರಿಗಳ ಜಾಗತಿಕ ಜಾಲವು ಜಗದ್ಗುರುಗಳ ಸಮಗ್ರ ಧರ್ಮ ಸಭೆಗಾಗಿ ಇರುವ ಕಾಳಜಿಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ ಎಂದು ತಿಳಿಸಿದರು. ಸಂಘರ್ಷಗಳಿಂದ ತತ್ತರಿಸಿದ ಪ್ರದೇಶಗಳಲ್ಲಿಯೂ ಈ ಪ್ರತಿನಿಧಿಗಳ ಹಾಜರಾತಿ, ದೂರದಿಂದಲ್ಲದೆ ಸ್ಥಳೀಯ ವಾಸ್ತವಿಕತೆಯೊಳಗೆ ನೆಲೆಗೊಂಡ ಪಾಸ್ಟರಲ್ ಕಾಳಜಿಯನ್ನು ತೋರಿಸುತ್ತದೆ. ಇದರಿಂದ ಜಗದ್ಗುರುಗಳ ಶಾಂತಿ, ಸಂವಾದ ಮತ್ತು ಮಾನವ ಗೌರವದ ಪರವಾಗಿ ಮೌನ ಮತ್ತು ಸಹನಶೀಲ ಮಧ್ಯಸ್ಥಿಕೆಯ ಪಾತ್ರ ವಹಿಸಲು ಸಾಧ್ಯವಾಗುತ್ತದೆ.
ಅವರು ಜಗದ್ಗುರು ಫ್ರಾನ್ಸಿಸ್ ರವರು ಅಕಾಡೆಮಿಯ ತರಬೇತಿ ವ್ಯವಸ್ಥೆಯಲ್ಲಿ ಮಾಡಿದ ಸುಧಾರಣೆಗಳನ್ನೂ ಸ್ಮರಿಸಿದರು. ಈ ಹೊಸ ವ್ಯವಸ್ಥೆ, ಭವಿಷ್ಯದ ಜಗದ್ಗುರುಗಳ ಪ್ರತಿನಿಧಿಗಳಿಗೆ ಕಾನೂನು, ರಾಜತಾಂತ್ರಿಕ ಶಾಸ್ತ್ರ, ಅಂತಾರಾಷ್ಟ್ರೀಯ ಕಾನೂನು, ಭಾಷೆಗಳು ಮತ್ತು ಆಧ್ಯಾತ್ಮಿಕ ರೂಪಣೆಯನ್ನು ಒಟ್ಟುಗೂಡಿಸಿದ ಸಮಗ್ರ ಶಿಕ್ಷಣವನ್ನು ಒದಗಿಸುತ್ತದೆ. ಆದರೆ ಇದು ಕೇವಲ ತಾಂತ್ರಿಕ ತರಬೇತಿಯಾಗದೆ, ದೇವರೊಂದಿಗೆ ಆಳವಾದ ಸಂಬಂಧ ಹೊಂದಿದ, ಧರ್ಮ ಸಭೆಯ ಏಕತೆಯ ಸೇವಕರಾಗುವಂತಹ ವ್ಯಕ್ತಿಗಳನ್ನು ರೂಪಿಸುವುದೇ ಅದರ ಗುರಿಯಾಗಿದೆ.
ಕೊನೆಗೆ, ಜಗದ್ಗುರು XIVನೇ ಲಿಯೋರವರು ಸಂಘರ್ಷದ ಪರಿಸ್ಥಿತಿಗಳಲ್ಲಿಯೂ ಭರವಸೆಯನ್ನು ಹೊತ್ತುಕೊಂಡು ಹೋಗುವಂತೆ ಜಗದ್ಗುರುಗಳ ಪ್ರತಿನಿಧಿಗಳಿಗೆ ಕರೆ ನೀಡಿರುವುದನ್ನು ಪೆನ್ನಾಕ್ಕಿಯೋ ರವರು ನೆನಪಿಸಿದರು. ವ್ಯಾಟಿಕನ್ ರಾಜತಾಂತ್ರಿಕತೆ ಕೇವಲ ರಾಜಕೀಯ ಕಾರ್ಯವಲ್ಲ; ಅದು ಸುವಾರ್ತೆಯಿಂದ ಹುಟ್ಟಿದ ಸೇವೆಯಾಗಿದ್ದು, ಪ್ರಾರ್ಥನೆ, ದೇವರ ವಾಕ್ಯದ ಆಲಿಕೆ ಮತ್ತು ದುರ್ಬಲರ ಬಳಿಯಲ್ಲಿರುವ ಸಾನ್ನಿಧ್ಯದ ಮೂಲಕ ಶಾಂತಿಯ ಬೀಜಗಳನ್ನು ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಬಿತ್ತುತ್ತದೆ ಎಂದು ಅವರು ಹೇಳಿದರು.