ಆರ್ಚ್ಬಿಷಪ್ ಎಡ್ಗರ್ ಪೆನಾ ಪರ್ರಾ ರವರು ರಾಜ್ಯ ಕಾರ್ಯಾಲಯದಲ್ಲಿ ಸಲ್ಲಿಸಿದ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ವ್ಯಾಟಿಕನ್ ವರದಿ
ಆರ್ಚ್ಬಿಷಪ್ ಎಡ್ಗರ್ ಪೆನಾ ಪರ್ರಾರವರು ಇದುವರೆಗೆ ರಾಜ್ಯ ಕಾರ್ಯಾಲಯದ ಸಾಮಾನ್ಯ ವ್ಯವಹಾರಗಳ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಈಗ ಜಗದ್ಗುರು XIVನೇ ಲಿಯೋರವರಿಂದ ಇಟಲಿ ಮತ್ತು ಸಾನ್ ಮರಿನೋಗೆ ಪ್ರೇಷಿತರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಮಾರ್ಚ್ 30 ಸೋಮವಾರ ಬೆಳಿಗ್ಗೆ, ಅವರು ತಮ್ಮ ಹೊಸ ಜವಾಬ್ದಾರಿಯನ್ನು ಸ್ವೀಕರಿಸುವ ಮೊದಲು, 2018ರಿಂದ ತಮ್ಮೊಂದಿಗೆ ಕೆಲಸ ಮಾಡಿದ ಮೇಲಧಿಕಾರಿಗಳು, ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ವಿದಾಯ ಸಭೆ ನಡೆಸಿದರು.
ತಮ್ಮ ಜೀವನ ಮತ್ತು ಸೇವೆಯನ್ನು ಅವರು ರೈಲು ಪ್ರಯಾಣಕ್ಕೆ ಹೋಲಿಸಿದರು. ಅಂತಿಮ ಗುರಿಯತ್ತ ಸಾಗುವ ಈ ಪ್ರಯಾಣದಲ್ಲಿ ವಿವಿಧ ನಿಲ್ದಾಣಗಳಲ್ಲಿ ನಿಲ್ಲುತ್ತಾ, ವಿಭಿನ್ನ ಜನರೊಂದಿಗೆ ಕಾರ್ಯನಿರ್ವಹಿಸುವ ಅನುಭವವನ್ನು ಅವರು ವಿವರಿಸಿದರು. ಕೆಲವೊಮ್ಮೆ ಧರ್ಮ ಸಭೆಯ ಜೀವನದ ವೇಗ ಫ್ರೆಸಿಯಾರೋಸಾ ರೈಲಿನಂತೆ ತೀವ್ರವಾಗಿರುವುದಾಗಿ ಅವರು ಹೇಳಿದರು. ಪ್ರತಿ ಹಂತದಲ್ಲೂ ದೇವರು ನಮಗೆ ಒಪ್ಪಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಬೇಕೆಂದು ಅವರು ಒತ್ತಿಹೇಳಿದರು.
ರಾಜ್ಯ ಕಾರ್ಯಾಲಯದಲ್ಲಿ ಕಳೆದ ಅವಧಿಯನ್ನು ಅವರು “ದೀರ್ಘ ಮತ್ತು ಮಹತ್ವದ ಹಂತ” ಎಂದು ವರ್ಣಿಸಿದರು. ಈ ಅವಧಿಯಲ್ಲಿ ಅವರು ಅನೇಕ ಸವಾಲುಗಳನ್ನು ಎದುರಿಸಿದರು. ವಿಶೇಷವಾಗಿ ಕೋವಿಡ್-19 ಮಹಾಮಾರಿ, ಜಗದ್ಗುರು XVIನೇ ಎಮೆರಿಟಸ್ ಬೆನೆಡಿಕ್ಟ್ ರವರ ನಿಧನ, ಜಗದ್ಗುರು ಫ್ರಾನ್ಸಿಸ್ ರವರ ಅನಾರೋಗ್ಯ ಮತ್ತು ನಿಧನ, ಹಾಗು ನಂತರ ನಡೆದ ಸಂಸ್ಮರಣೆಗಳು ಮತ್ತು ಕಾನ್ಕ್ಲೇವ್ ಪ್ರಕ್ರಿಯೆಗಳು ಪ್ರಮುಖವಾಗಿದ್ದವು. ಕೊನೆಗೆ ಜಗದ್ಗುರು XIVನೇ ಲಿಯೋರವರ ಆಯ್ಕೆ ಧರ್ಮ ಸಭೆಗೆ ಸಂತೋಷ ತಂದಿತು ಎಂದು ಹೇಳಿದರು.
ಈ ವರ್ಷಗಳಲ್ಲಿ ಕೆಲವು ಸಂಸ್ಥಾತ್ಮಕ ಸಂಕಷ್ಟಗಳನ್ನೂ ಅವರು ಉಲ್ಲೇಖಿಸಿದರು. ವಿಶೇಷವಾಗಿ ಲಂಡನ್ ಆಸ್ತಿ ವ್ಯವಹಾರದ ಕುರಿತು ನಡೆದ ದೀರ್ಘ ನ್ಯಾಯಾಂಗ ಪ್ರಕ್ರಿಯೆಗಳು ವಾಟಿಕನ್ ಹಾಗೂ ರಾಜ್ಯ ಕಾರ್ಯಾಲಯದ ಮೇಲೆ ಹೆಚ್ಚಿನ ಪರಿಶೀಲನೆ ತಂದವು. ಈ ಸಂದರ್ಭಗಳಲ್ಲಿ ಜವಾಬ್ದಾರಿ, ಪಾರದರ್ಶಕತೆ ಮತ್ತು ಶಿಸ್ತಿನ ಅಗತ್ಯತೆಯನ್ನು ಅವರು ಒತ್ತಿಹೇಳಿದರು.
ಒಟ್ಟಿನಲ್ಲಿ, ಈ ಎಲ್ಲಾ ಸಂದರ್ಭಗಳಲ್ಲಿ ಸಾಮಾನ್ಯ ವ್ಯವಹಾರಗಳ ವಿಭಾಗವು ಮೌನವಾಗಿ ಆದರೆ ಮಹತ್ವದ ಸೇವೆಯನ್ನು ಸಲ್ಲಿಸಿದೆ ಎಂದು ಅವರು ಹೇಳಿದರು. ವಿಶ್ವದ ವಿವಿಧ ರಾಷ್ಟ್ರಗಳು ಮತ್ತು ಸಂಸ್ಕೃತಿಗಳಲ್ಲಿ ಧರ್ಮ ಸಭೆಯ ಜೀವಂತ ಉಪಸ್ಥಿತಿಯನ್ನು ಅವರು ಅನುಭವಿಸಿದರು. ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುವುದರಿಂದ ಧರ್ಮ ಸಭೆಯ ವಿಶ್ವವ್ಯಾಪಕತೆಯನ್ನು ಅವರು ಆಳವಾಗಿ ಗ್ರಹಿಸಿದರು.
ಅಂತಿಮವಾಗಿ, ತಮ್ಮ ನಂತರ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಆರ್ಚ್ಬಿಷಪ್ ಪೌಲೊ ರುಡೆಲ್ಲಿ ರವರಿಗೆ ಶುಭಾಶಯಗಳನ್ನು ತಿಳಿಸಿ, ಈ ಸೇವೆಯನ್ನು ಕೃಪೆಯ ಕಾಲವಾಗಿ ಅನುಭವಿಸಲಿ ಎಂದು ಹಾರೈಸಿದರು. ತಮ್ಮ ವಿದಾಯ ಸಂದೇಶದಲ್ಲಿ, ಪರಸ್ಪರ ಗೌರವ, ಕೃತಜ್ಞತೆ ಮತ್ತು ಲೋಕದ ಹಿತಕ್ಕಾಗಿ ಒಂದಾಗಿ ಕೆಲಸ ಮಾಡುವ ಸಂಕಲ್ಪವನ್ನು ಮುಂದುವರಿಸಬೇಕೆಂದು ಅವರು ಹೇಳಿದರು.