ಹುಡುಕಿ

 ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿರುವ ಹಡಗುಗಳ ಮತ್ತು ದೋಣಿಗಳ ದೃಶ್ಯ. ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿರುವ ಹಡಗುಗಳ ಮತ್ತು ದೋಣಿಗಳ ದೃಶ್ಯ. 

ಲಕ್ಷಾಂತರ ಜನರನ್ನು ಬಡತನದತ್ತ ತಳ್ಳಬಹುದಾದ ಹೋರ್ಮುಜ್ ಬಿಕ್ಕಟ್ಟು

ವಿಶ್ವಸಂಸ್ಥೆಯ ಮಹಾಸಚಿವ ಆಂಟೋನಿಯೊ ಗುಟೆರೆಸ್ ಅವರು ಎಚ್ಚರಿಸಿದ್ದು, ಹೋರ್ಮುಜ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಸಂಕಟವು ದಶಲಕ್ಷಾಂತರ ಜನರನ್ನು ಬಡತನದತ್ತ ತಳ್ಳಬಹುದು, ಜಾಗತಿಕ ಹಸಿವು ತೀವ್ರವಾಗಿ ಹೆಚ್ಚಿಸಬಹುದು ಮತ್ತು ವಿಶ್ವವನ್ನು ಜಾಗತಿಕ ಆರ್ಥಿಕ ಹಿಂಜರಿತದತ್ತ ಕೊಂಡೊಯ್ಯುವ ಸಾಧ್ಯತೆ ಇದೆ.

ಲೇಖಕರು: ನೇತನ್ ಮಾರ್ಲೆ

ಗುರುವಾರ ಮಾತನಾಡಿದ ಅವರು, ಈ ಪ್ರಮುಖ ಸಾಗರ ಮಾರ್ಗದಲ್ಲಿ ಸ್ವತಂತ್ರ ಸಂಚಾರಕ್ಕೆ ವಿಧಿಸಲಾದ ನಿರ್ಬಂಧಗಳು ತೈಲ, ಅನಿಲ, ರಾಸಾಯನಿಕ ಗೊಬ್ಬರ ಮತ್ತು ಇತರ ಅಗತ್ಯ ವಸ್ತುಗಳ ಸಾಗಣೆಯನ್ನು ಅಡ್ಡಿಪಡಿಸುತ್ತಿವೆ ಎಂದು ಹೇಳಿದರು. ಇದರಿಂದ ಈಗಾಗಲೇ ದುರ್ಬಲವಾಗಿರುವ ಜಾಗತಿಕ ಆರ್ಥಿಕತೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಸಾಗಣೆ ಮತ್ತು ವ್ಯಾಪಾರ ವ್ಯತ್ಯಯಗಳು ತಕ್ಷಣವೇ ಅಂತ್ಯವಾದರೂ, ಸರಬರಾಜು ಸರಪಳಿಗಳು ಹಲವಾರು ತಿಂಗಳುಗಳ ಕಾಲ ಹಿನ್ನಡೆಯನ್ನು ಅನುಭವಿಸಬಹುದು. ಜಾಗತಿಕ ಆರ್ಥಿಕ ಬೆಳವಣಿಗೆ 3.4%ರಿಂದ 3.1%ಕ್ಕೆ ಇಳಿಯಬಹುದು, ದರ ಏರಿಕೆ 4.4%ಕ್ಕೆ ಏರಬಹುದು ಮತ್ತು ವ್ಯಾಪಾರ ಗಂಭೀರವಾಗಿ ನಿಧಾನಗೊಳ್ಳಬಹುದು—ಇದು ಕೋವಿಡ್ ಮಹಾಮಾರಿ ಮತ್ತು ರಷ್ಯಾ-ಉಕ್ರೇನ್ ಯುದ್ಧದ ನಂತರ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟುಮಾಡುತ್ತದೆ.

ವಿಶ್ವಸಂಸ್ಥೆಯ ಸಂಸ್ಥೆಗಳು ಈ ಸಂಕಟವನ್ನು ತಗ್ಗಿಸಲು ಪ್ರಯತ್ನಿಸುತ್ತಿವೆ. UN ಪ್ರಾಜೆಕ್ಟ್ ಸೇವೆಗಳ ಮುಖ್ಯಸ್ಥರು ಮಾನವೀಯ ಸಾಗಣೆ ಮಾರ್ಗವನ್ನು (humanitarian corridor) ಪರಿಶೀಲಿಸಲು ಕಾರ್ಯಪಡೆಗೆ ನೇತೃತ್ವ ನೀಡುತ್ತಿದ್ದಾರೆ. ಜೊತೆಗೆ, ಅಂತಾರಾಷ್ಟ್ರೀಯ ಸಾಗರಯಾನ ಸಂಸ್ಥೆ ಸುರಕ್ಷಿತ ಸಂಚಾರ ಸಾಧ್ಯವಾದರೆ ಹಡಗುಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲು ಯೋಜನೆಗಳನ್ನು ರೂಪಿಸುತ್ತಿದೆ.

ಆದರೆ ಇರಾನ್‌ನ ದಾಳಿಗಳು, ಬೆದರಿಕೆಗಳು ಮತ್ತು ಅಮೇರಿಕಾದಿಂದ ಇರಾನ್ ಬಂದರುಗಳ ಮೇಲೆ ವಿಧಿಸಲಾದ ನಿರ್ಬಂಧಗಳು ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 3.2 ಕೋಟಿ ಜನರು ಬಡತನಕ್ಕೆ ತಳ್ಳಲ್ಪಡಬಹುದು, ಗೊಬ್ಬರ ಕೊರತೆಯಿಂದ ಬೆಳೆ ಉತ್ಪಾದನೆ ಕುಸಿಯಬಹುದು, 4.5 ಕೋಟಿ ಜನರು ತೀವ್ರ ಹಸಿವನ್ನು ಎದುರಿಸಬಹುದು ಮತ್ತು ವರ್ಷಗಳ ಅಭಿವೃದ್ಧಿ ಸಾಧನೆಗಳು ಹಿನ್ನಡೆಯಾಗಬಹುದು.

ವರ್ಷಾಂತ್ಯದವರೆಗೆ ಇದೇ ರೀತಿಯ ಗಂಭೀರ ವ್ಯತ್ಯಯಗಳು ಮುಂದುವರಿದರೆ  ಜಾಗತಿಕ ಆರ್ಥಿಕ ಹಿಂಜರಿತ ಸಂಭವಿಸುವ ಅಪಾಯ ಹೆಚ್ಚುತ್ತದೆ, ಇದರಿಂದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ವ್ಯಾಪಕ ಪರಿಣಾಮಗಳು ಉಂಟಾಗಬಹುದು.

ವಿಶ್ವಸಂಸ್ಥೆಯ ಮಹಾಸಚಿವ ಆಂಟೋನಿಯೊ ಗುಟೆರೆಸ್ ಅವರು, ಈ ಸಂಕಟದ ಪರಿಣಾಮಗಳು ನಿಧಾನವಾಗಿ ಹೆಚ್ಚುತಿಲ್ಲ, ಬದಲಾಗಿ ವೇಗವಾಗಿ ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ದೀರ್ಘಕಾಲದ ನಿರ್ಬಂಧಗಳು ಹಾನಿಯನ್ನು ಹಿಂದಿರುಗಿಸಲಾಗದಂತಾಗಿಸಬಹುದು ಎಂದು ಎಚ್ಚರಿಸಿದರು. ಜಾಗತಿಕ ಸರಬರಾಜು ಸರಪಳಿಗಳನ್ನು ಸ್ಥಿರಗೊಳಿಸಲು ಎಲ್ಲಾ ಪಕ್ಷಗಳೂ ಸಾಗಣಾ ಹಕ್ಕುಗಳನ್ನು ಪುನಃಸ್ಥಾಪಿಸಿ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಬೇಕು ಎಂದು  ಮನವಿ ಮಾಡಿದರು.

ಆರ್ಥಿಕ ಆಘಾತ ಈಗಾಗಲೇ ವ್ಯಾಪಕವಾಗಿ ಹರಡುತ್ತಿದೆ. ಗುರುವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಸುಮಾರು $118ರ ಮಟ್ಟದಲ್ಲಿ ಇತ್ತು, ಇಂಧನ ಮತ್ತು ಅನಿಲ ಕೊರತೆಯ ಭೀತಿಯನ್ನು ಸರ್ಕಾರಗಳು ಎದುರಿಸುತ್ತಿವೆ. ದಕ್ಷಿಣ ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾ ಪ್ರದೇಶಗಳು ಮೊದಲಿಗೆ ಪರಿಣಾಮಕ್ಕೊಳಗಾಗಿದ್ದರೂ, ಯುರೋಪಿನ ವಾಹನ ಸವಾರರೂ ಈಗ ಇದರ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ವಿಶ್ವಸಂಸ್ಥೆಯ ಯುರೋಪ್‌ ಆರ್ಥಿಕ ಆಯೋಗ, ಈ ಸಂಕಟವು ಇಂಧನ ತೈಲಗಳ ಮೇಲೆ ಅವಲಂಬಿತವಾಗಿರುವ ಆರ್ಥಿಕತೆಗಳ ದುರ್ಬಲತೆಯನ್ನು ತೋರಿಸುತ್ತದೆ ಎಂದು ತಿಳಿಸಿದೆ. ಈ ಸಂಸ್ಥೆ ದೇಶಗಳನ್ನು ವ್ಯರ್ಥವನ್ನು ಕಡಿಮೆ ಮಾಡಲು, ವಿಶೇಷವಾಗಿ ತೈಲ ಮತ್ತು ಅನಿಲ ಸೌಲಭ್ಯಗಳಲ್ಲಿ ಮೀಥೇನ್ ಅನಿಲದ ದಹನವನ್ನು ನಿಯಂತ್ರಿಸಲು ಪ್ರೇರೇಪಿಸುತ್ತಿದೆ. ಜೊತೆಗೆ, ಪರಿಸರ ಮತ್ತು ಭದ್ರತಾ ಲಾಭಗಳನ್ನು ನೀಡುವ ನವೀಕರಿಸಬಹುದಾದ ಇಂಧನದತ್ತ ವೇಗವಾಗಿ ಸಾಗಲು ಒತ್ತಾಯಿಸುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

01 ಮೇ 2026, 18:33